ಬುಧವಾರ, ಫೆಬ್ರವರಿ 23, 2011

ಕವಿಕಿರಣ - ಡಿಸೆಂಬರ್, 2008.

ಆತ್ಮೀಯರೇ,
'ಕವಿಕಿರಣ' ಡಿಸೆಂಬರ್, 2008ರ ಸಂಚಿಕೆ -ಇಗೋ ನಿಮಗಾಗಿ:
ನಿಮ್ಮ ಪ್ರತಿಕ್ರಿಯೆ, ಸಲಹೆ, ಸೂಚನೆಗಳಿಗೆ ಸ್ವಾಗತ!
ಮುಖಪುಟ
**********************
ಮೂಢ ಉವಾಚ
       ರಸಭರಿತ ಫಲಮೂಲ ಕೊಂಬೆ ತಾನಲ್ಲ| 
      ಫಲಸತ್ವ ಸಾಗಿಪ ಮಾರ್ಗ ತಾನಹುದು|| 
      ಮಾಡಿದೆನೆನಬೇಡ ನಿನ್ನದೆನಬೇಡ|  
     ಜಗವೃಕ್ಷರಸ ಹರಿದ ಕೊಂಬೆ ನೀನು ಮೂಢ|| 
**********
ಸಂಪಾದಕರು:
ಕ.ವೆಂ. ನಾಗರಾಜ್,
ನಂ. ೨೩೫೪, ನಾಗಾಭರಣ, ೭ನೆಯ ಅಡ್ಡರಸ್ತೆ, ೨ನೆಯ ಮುಖ್ಯ ರಸ್ತೆ, ಶಾಂತಿನಗರ,  ಹಾಸನ - ೫೭೩೨೦೧.
ಮೊಬೈಲ್ ದೂ: ೯೪೪೮೫ ೦೧೮೦೪
ಸಹ ಸಂಪಾದಕರು:
 ಕವಿ ವೆಂ. ಸುರೇಶ,
ಸೌಪರ್ಣಿಕಾ, ೩ನೆಯ ಮುಖ್ಯರಸ್ತೆ, ೩ನೆಯ ಅಡ್ಡರಸ್ತೆ, ಅಕ್ಕಮಹಾದೇವಿಪಾರ್ಕ್ ಹತ್ತಿರ, ಬಸವೇಶ್ವರನಗರ, ಶಿವಮೊಗ್ಗ - ೫೭೭೨೦೪. ಮೊಬೈಲ್ ದೂ: ೯೪೪೮೯ ೩೨೮೬೬.
ಪ್ರಕಾಶಕರು:
 ಕವಿ ಪ್ರಕಾಶನ, ಶಿವಮೊಗ್ಗ.
*********
ಪತ್ರಿಕೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಲೇಖಕರದ್ದೇ ಹೊರತು ಪತ್ರಿಕೆಯದಲ್ಲ.
ಮುದ್ರಕರು:
ರಾಯಲ್ ಪ್ರಿಂಟರ್ಸ್, ಶಿವಮೊಗ್ಗ.
*********
ವಂತಿಕೆ ನೀಡಿದ ಮಹನೀಯರು
 ಶ್ರೀ/ ಶ್ರೀಮತಿಯರಾದ:
 ೧.ಕೆ.ವಿ.ಅನಂತ, ನೋರಿಸ್‌ಟೌನ್,ಯು.ಎಸ್.ಎ. ೫೦೦೦.೦೦ 
 ೨. ಸಾ.ಕ. ಕೃಷ್ಣಮೂರ್ತಿಕುಟುಂಬ,ಬೆಂ. ೧೦೧೦.೦೦
.  ೩. ಕೆ. ಶ್ರೀಕಂಠ, ಬೆಂಗಳೂರು  ೧೦೦೦.೦೦ 
೩. ಕವಿ ವೆಂಕಟಸುಬ್ಬರಾವ್, ಶಿವಮೊಗ್ಗ ೫೦೦.೦೦ 
೪. ಕ. ವೆಂ. ನಾಗರಾಜ್, ಹಾಸನ ೫೦೦.೦೦ 
೫. ಕವಿ ವೆಂ. ಸುರೇಶ, ಶಿವಮೊಗ್ಗ ೫೦೦.೦೦ 
 ೬. ಎಂ.ಎಸ್. ನಾಗೇಂದ್ರ, ಬೆಂಗಳೂರು ೫೦೦.೦೦
  ೭. ಜಗದೀಶಚಂದ್ರ, ಬೆಂಗಳೂರು ೫೦೦.೦೦
  ೮.ಮಹಾಲಕ್ಷ್ಮಿಮಂಜುನಾಥ,ಬೆಂಗಳೂರು ೫೦೦.೦೦ 
 ೯. ಗಿರಿಜಾಲಕ್ಷ್ಮೀಪತಿ, ಬೆಂಗಳೂರು ೫೦೦.೦೦ 
ಒಟ್ಟು ೧೦೫೧೦.೦೦   
****************
ಜಮಾ ಖರ್ಚು ವಿವರ (೧೩-೧೧-೨೦೦೮ರವರೆಗೆ)
ಒಟ್ಟು ಸಂಗ್ರಹ ೧೦೫೧೦.೦೦
ವೆಚ್ಚ - -
ಆಖೈರು ಶಿಲ್ಕು ೧೦೫೧೦.೦೦
ದಿ.೧೩-೧೧-೨೦೦೮ರ ನಂತರದ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
******************
ಕವಿ ಪ್ರಕಾಶನದ ಪ್ರಕಟಣೆಗಳು
೧. ಹಳೇ ಬೇರು - ಹೊಸ ಚಿಗುರು - ಕವಿ ವಂಶಸ್ಥರ ಸ್ಥೂಲ ಪರಿಚಯ ಮತ್ತು ವಂಶಾವಳಿ - ಲೇ: ಕವಿ ವೆಂ. ಸುರೇಶ, ಪು: ೧೨೬. ಬೆಲೆ: ರೂ. ೧೨೫/-
೨. Karmayogi – kalavallabha S.K. LINGANNAIYA – a concise biography of Sri S.K. Lingannaiya – Author: Kavi Suresh. P:114. Price: Rs. 80/-
೩. ಉತ್ಕೃಷ್ಟದೆಡೆಗೆ - ಲೇಖನಗಳ ಸಂಗ್ರಹ - ಲೇ: ಕವಿ ವೆಂ. ಸುರೇಶ, ಪು:೯೮, ಬೆಲೆ: ರೂ. ೭೫/-
****************
ಮುಂದಿನ ಸಂಚಿಕೆ
      ಜೂನ್, ೨೦೦೯ರಲ್ಲಿ ಕವಿಕಿರಣದ ಮುಂದಿನ ಸಂಚಿಕೆ ಪ್ರಕಟ ವಾಗಲಿದೆ. ಈ ಸಂಚಿಕೆಗೆ ನೀಡಿರುವ ಪ್ರೋತ್ಸಾಹ, ಸಹಕಾರಗಳನ್ನು ಮುಂದಿನ ಸಂಚಿಕೆಗಳಿಗೂ ಮುಂದುವರೆಸುವಂತೆ ಎಲ್ಲರನ್ನೂ ಕೋರಲಾಗಿದೆ. -ಸಂ. 
****************
   ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ|
                                                      ಸತ್ಪಥದಿ ಸಾಗುವ ಸತ್ ಕ್ರಾಂತಿಯ ಕಾಲ||
                                                      ಶುಭಹರಸಿ ತಿಲಬೆಲ್ಲ ಕೊಡುಕೊಳುವ ಕಾಲ|
                                                      ಸಮರಸತೆ ಸಾರುವುದೆ ಸಂಕ್ರಾಂತಿ ಮೂಢ||
ಎಲ್ಲರಿಗೂ ಮುಂಬರಲಿರುವ ಸಂಕ್ರಾಂತಿಯ ಶುಭಾಶಯಗಳು!!!
************************
ರಕ್ಷಾಪುಟ -2.
***************************

ಸಂಪಾದಕೀಯ

                                                                           ಅಂತಃಕಿರಣ
      ಸುಪ್ತ ಜಾಗೃತವಾಗಿದೆ. ಅಮೂರ್ತ ಮೂರ್ತವಾಗಿದೆ. ಕೆಳದಿ ಕವಿ ಮನೆತನದ ಪತ್ರಿಕೆ ಕವಿಕಿರಣ ಪ್ರಭೆ ಬೀರಿ  ನಮ್ಮೆಲ್ಲರ ಅಂತಃಕರಣ ತಲುಪಲು ಸಜ್ಜಾಗಿದೆ. ನಮ್ಮದೇ ಆದ, ನಮ್ಮಿಂದಲೇ ಆದ, ನಾವೇ ನಮಗಾಗಿ ಮಾಡುತ್ತಿರುವ ಪ್ರಯತ್ನದ ಫಲ ನಮ್ಮ ಮುಂದಿದೆ. ಸ್ವಾಗತಿಸೋಣ, ಉಳಿಸೋಣ, ಬೆಳೆಸೋಣ.
      ಕೆಳದಿ ಅರಸರು ನಾಡಿನ ಅಭಿವೃದ್ಧಿಯೊಂದಿಗೆ ಕಲೆ, ಸಾಹಿತ್ಯ, ಧಾರ್ಮಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದ್ದು ಇತಿಹಾಸ. ನಮ್ಮ ಪೂರ್ವಜರು ಕೆಳದಿ ಸಂಸ್ಥಾನದ ಆಸ್ಥಾನ ಕವಿಗಳಾಗಿದ್ದು ಅವರ ಕೃತಿಗಳಿಂದಲೇ ಕೆಳದಿ ಇತಿಹಾಸ ದಾಖಲೆಯಾಗಿ ಉಳಿದಿರುವುದೂ ಸಹ ಇತಿಹಾಸ. ಕೆಳದಿ ಕವಿ ಮನೆತನಕ್ಕೆ ಸೇರಿದ ಕುಟುಂಬಗಳು ಹತ್ತು ಹಲವು ಕಾರಣಗಳಿಂದ ಹಲವೆಡೆ ಹರಡಿ ಹಂಚಿಹೋಗಿದ್ದವರನ್ನು ವರ್ಷಕ್ಕೊಮ್ಮೆಯಾದರೂ ಒಟ್ಟಿಗೆ ಸೇರಿಸಿ ಸಂಬಂಧಗಳನ್ನು ಉಳಿಸಿ ಬೆಳೆಸುವ ಕಾರ್ಯ ಕಳೆದ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಇದಕ್ಕೆ ಕಾರಣಕರ್ತರಾದ ಎಲ್ಲರನ್ನೂ ನೆನೆಸೋಣ.
      ೧೮ನೆಯ ಶತಮಾನದಲ್ಲಿ ಕೆಳದಿ ಸಂಸ್ಥಾನದ ಆಸ್ಥಾನಕವಿಯಾಗಿ ಕೆಳದಿ ನೃಪವಿಜಯವೆಂಬ ಕೃತಿಯಿಂದ ಕನ್ನಡನಾಡಿನ ಇತಿಹಾಸ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆ ನೀಡಿದ ಕವಿ ಲಿಂಗಣ್ಣನಿಂದ ಆರಂಭವಾಗಿ ಮುಂದು ವರೆಯುತ್ತಿರುವ ನಮ್ಮ ಮನೆತನದ ಹತ್ತು ತಲೆಮಾರುಗಳ ವಿವರಗಳಿರುವ ವಂಶವೃಕ್ಷ ಲಭ್ಯವಿದ್ದು ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಇದರ ಪ್ರತಿಯನ್ನು ಈಗ ಕುವೆಂಪು ವಿ.ವಿ.ಗೆ ಹಸ್ತಾಂತರವಾಗಿರುವ ಕೆಳದಿಯ ವಸ್ತು ಸಂಗ್ರಹಾಲಯಕ್ಕೂ ನೀಡಲಾಗಿದ್ದು ಅಲ್ಲಿ ಇದನ್ನು ಸಂರಕ್ಷಿಸಿ ಇಡಲಾಗಿದೆ. ನಮ್ಮ ಪೂರ್ವಜರು ಪ್ರತಿಭಾಸಂಪನ್ನರಾಗಿದ್ದು ಅವರ ಸಾಧನೆಗಳ ಪರಿಚಯ ಮಾಡಿಕೊಳ್ಳುವುದಲ್ಲದೆ ಉತ್ತಮ ಸಾಧನೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಹಿರಿಯ ಸಾಧಕರ ಪರಿಚಯ ಮಾಡಿಕೊಡುವ ಕವಿಕಿರಣದ ಪ್ರಯತ್ನಕ್ಕೆ ಸಹಕರಿಸೋಣ. ನಾವು ಉತ್ತಮವಾದ ಹಿನ್ನೆಲೆಯ ಕುಟುಂಬಗಳಿಗೆ ಸೇರಿದವರೆಂಬ ಹೆಮ್ಮೆಯೊಂದಿಗೆ ಹಿರಿಮೆ ಹೆಚ್ಚಿಸಲು ನಮ್ಮ ಕಾಣಿಕೆಯನ್ನೂ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಶೋಗಾಥೆ ಮುಂದುವರೆಸೋಣ.
     
     ಈ ಪತ್ರಿಕೆ ಮುಂದೆ ಕವಿಕುಟುಂಬಗಳ ಐತಿಹಾಸಿಕ ದಾಖಲೆಯಾಗಿ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಐತಿಹಾಸಿಕ ಸಂಗತಿಗಳಲ್ಲಿ ಆಸಕ್ತಿಯಳ್ಳ ವಿದ್ಯಾರ್ಥಿಗಳಿಗೂ ಇದು ಉಪಯಕ್ತವಾಗಲಿದೆ. ಓದಿ ಎಸೆಯುವ ಪತ್ರಿಕೆಗಳ ಸಾಲಿಗೆ ಸೇರದೆ ಸಂಗ್ರಹಯೋಗ್ಯ ಮೌಲಿಕ ಪತ್ರಿಕೆಯಾಗಿ ಬೆಳೆಯಲು ಭದ್ರ ಅಡಿಪಾಯ ಹಾಕುವ ಪ್ರಯತ್ನಕ್ಕೆ ಎಲ್ಲರೂ ಸಹಕರಿಸೋಣ.
      ಕವಿ ಕುಟುಂಬಗಳ ನಡುವೆ ಪರಸ್ಪರ ಉತ್ತಮ ಸಂಬಂಧ, ಸಂವಹನ, ಸಜ್ಜನ ಶಕ್ತಿಯ ಜಾಗರಣಕ್ಕೆ ಕವಿಕಿರಣ ಮಾಧ್ಯಮವಾಗಲಿದೆ. ಕುಟುಂಬದ ಸದಸ್ಯರಲ್ಲಿ ಅಡಗಿರುವ ಸುಪ್ತಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಲಿದೆ. ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಕವಾಗಲಿದೆ. ಪರಸ್ಪರ ಆರೋಗ್ಯಕರ ಸ್ಪರ್ಧೆಯಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಕವಿ ಕುಟುಂಬದ ಸದಸ್ಯರನ್ನು ಸಜ್ಜುಗೊಳಿಸುವ ಘನ ಉದ್ದೇಶ ಹೊಂದಿರುವ ಈ ಪತ್ರಿಕೆಗೆ ಕುಟುಂಬಗಳ ಎಲ್ಲಾ ಸದಸ್ಯರುಗಳೂ ಬೆಂಬಲಿಸಬೇಕಾಗಿದೆ. ಭಾವನೆಗಳು ಬರಡಾಗುತ್ತಿರುವ ಈ ಪುರುಸೊತ್ತಿಲ್ಲದ ಕಾಲದಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿದ್ದೀರಾ ಎಂದು ವಿಚಾರಿಸಿದರೆ ನಮ್ಮ ಕರ್ತವ್ಯ ಮುಗಿಯಿತು ಎನ್ನುವ ಪರಿಸ್ಥಿತಿಯಲ್ಲಿ ಭಾವನೆಗಳಿಗೆ ನೀರೆರೆದು ಪೋಷಿಸುವ ಉದ್ದೇಶಕ್ಕೆ ಆಸರೆಯಾಗೋಣ.
      ಕವಿಕಿರಣಕ್ಕೆ ಗುರುಹಿರಿಯರು ಆಶೀರ್ವದಿಸಿದ್ದಾರೆ; ಗಣ್ಯರು ಶುಭ ಹಾರೈಸಿದ್ದಾರೆ; ಕುಟುಂಬಗಳ ಹಿರಿಯರ ಮಾರ್ಗದರ್ಶನವಿದೆ. ಉತ್ತಮ ಸಹಕಾರಿಗಳಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಸಮಾಲೋಚಿಸಿ, ಚರ್ಚಿಸಿ ಪತ್ರಿಕೆಯ ರೂಪು ರೇಷೆಗಳನ್ನು ನಿರ್ಧರಿಸಲಾಗಿದೆ. ನಿರೀಕ್ಷಿತ ಸಹಕಾರ ಸಿಗುತ್ತಿದೆ. ಉದಾತ್ತ ಗುರಿಯಿದೆ. ದಾರಿ ನಿಚ್ಛಳವಿದೆ. ಮುನ್ನಡೆಯುವುದೊಂದೇ ಬಾಕಿ. ಬನ್ನಿ, ಒಟ್ಟಿಗೆ ಹೆಜ್ಜೆ ಹಾಕೋಣ.
      ಅಗಣಿತ ಅತ್ತಣ, ಇತ್ತಣ, ಸುತ್ತಣ, ಎತ್ತೆತ್ತಣದ ಕವಿಗಡಣದ ಸುಗುಣದಾಭರಣವಾಗಿ, ಗುಣವ ಪ್ರಧಾನವಾಗಿಸಿ, ಅವಗುಣವ ಗೌಣವಾಗಿಸಿ, ಬಣಗುಡುವ ದಣಿದ ಮನವ ತಣಿಪ ಹೊಂಗಿರಣವಾಗಿ, ಕವಿಮನೆತನದ ಆಶಾಕಿರಣವಾಗಿ ಕವಿಕಿರಣ ಚಿರಕಾಲ ಬೆಳಗಲಿ ಎಂಬ ಸದಾಶಯದೊಂದಿಗೆ, ಸದುದ್ದೇಶಕ್ಕೆ ಸದಾ ತಮ್ಮೊಂದಿಗೆ ಇರಬಯಸುವ,
                                                                                                           -ಕ.ವೆಂ.ನಾಗರಾಜ್.

                                                  -ಪುಟ-1.
**************************
ಶುಭ ಆಶೀರ್ವಾದ
ಸಂಪಾದಕರಿಗೆ,
     ನೀವು ದಿನಾಂಕ ೧೨-೦೯-೦೮ರಂದು ಬರೆದ ಪತ್ರವು ತಲುಪಿ, ಶ್ರೀ ಶ್ರೀ ಜಗದ್ಗುರು ಮಹಾಸ್ವಾಮಿಗಳವರ ಪಾದಾರವಿಂದಗಳಲ್ಲಿ ಸಾಷ್ಟಾಂಗ ಪ್ರಣಾಮಪೂರ್ವಕ ಸಮರ್ಪಿಸಲಾಯಿತು.
     ಕೆಳದಿ ಕವಿ ಮನೆತನಕ್ಕೆ ಸೇರಿದ ಕುಟುಂಬಗಳ ಹಿಂದಿನ ಸಾಧಕರುಗಳನ್ನು ಮತ್ತು ಅವರ ಕೃತಿಗಳನ್ನು ಪರಿಚಯಿಸುವ ಹಾಗೂ ಉತ್ತಮ ಸಾಧನೆಯ ಪರಂಪರೆಯ ಮುನ್ನಡೆಯೊಂದಿಗೆ ಸಜ್ಜನ ಶಕ್ತಿಯ ಜಾಗೃತಗೊಳಿಸುವ ಉದ್ದೇಶದಿಂದ ಕವಿಕಿರಣ ಎಂಬ ಪತ್ರಿಕೆ ಪ್ರಕಟಗೊಳ್ಳಲಿರುವ ವಿಚಾರವನ್ನು ಅರಿತು ಶ್ರೀ ಶ್ರೀ ಗಳವರು ಸಂತೋಷಪಟ್ಟಿರುತ್ತಾರೆ.
     ಶ್ರೀ ಶಾರದಾ ಚಂದ್ರಮೌಳೀಶ್ವರರ ಕೃಪೆಯಿಂದ ಪತ್ರಿಕೆಯು ವಿದ್ವತ್ಪೂರ್ಣ ಲೇಖನಗಳೊಂದೊಡಗೂಡಿ ಪ್ರಕಟಗೊಳ್ಳಲಿ ಹಾಗೂ ಬಹು ಜನಪ್ರಿಯತೆಯನ್ನು ಗಳಿಸುವಂತಾಗಲಿ ಎಂದು ಶ್ರೀ ಶ್ರೀಗಳವರು ಆಶೀರ್ವದಿಸಿ, ಅನುಗ್ರಹಿಸಿರುವ ಆಶೀರ್ಮಂತ್ರಾಕ್ಷತೆ, ಶ್ರೀ ಶಾರದಾ ಅರ್ಚನಾ ಪ್ರಸಾದವನ್ನು ಕಳುಹಿಸಿರುತ್ತೇನೆ.
ವಂದನೆಗಳೊಂದಿಗೆ,
ಗೌರೀಶಂಕರ್,
ಆಡಳಿತಾಧಿಕಾರಿಗಳು, ಶ್ರೀ ಶೃಂಗೇರಿ ಮಠ, ಶೃಂಗೇರಿ .

*******************************                                                   

                                        ಶುಭ ಆಶೀರ್ವಾದ

ಸಂಪಾದಕರಿಗೆ,
     ಕವಿಕಿರಣ ಎಂಬ ನೂತನ ಪತ್ರಿಕೆಯೊಂದನ್ನು ಹೊರತರಲಿರುವ ವಿಚಾರ ತಿಳಿದು ಸಂತೋಷವಾಯಿತು.
     ಕೆಳದಿ ಕವಿ ಮನೆತನದ ಹಿಂದಿನ ಸಾಧಕರುಗಳ ಹಾಗೂ ಅವರ ಕೃತಿಗಳ ಪರಿಚಯಾತ್ಮಕ ಲೇಖನಗಳಿಂದೊಡಗೂಡಿ ಸಂಚಿಕೆಯು ಆಕರ್ಷಕವಾಗಿ ಪ್ರಕಟವಾಗಲೆಂದು ಆಶಿಸುತ್ತೇನೆ.
     ಈ ದಿಸೆಯಲ್ಲಿ ನಿಮ್ಮೆಲ್ಲ ಪ್ರಯತ್ನ ಪರಿಶ್ರಮ ಸಫಲವಾಗುವಂತೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ.
ಇತಿ,
ಡಿ. ವೀರೇಂದ್ರ ಹೆಗ್ಗಡೆಯವರು,
ಶ್ರೀ ಧರ್ಮಸ್ಥಳ.


**********************                                                        

                                                 ಶುಭ ಆಶೀರ್ವಾದ

ಸಂಪಾದಕರಿಗೆ,
     ಸೂರ್ಯಃ ಆತ್ಮಾ ಜಗತಃ. ಈ ಚರಾಚರ ಪ್ರಪಂಚವನ್ನು ಬೆಳಗುವವ ಭಗವಾನ್ ಸೂರ್ಯದೇವ. ಕಿರಣ ಸ್ಪರ್ಷ ಮಾತ್ರದಿಂದ ಈ ಜೀವಜಗತ್ತಿಗೆ ಚೈತನ್ಯೋದಯ ಅರಳಿಸುವ - ಬೆಳಗಿಸುವ - ಬಾಳಿಸುವ ಗುಣವಿಶೇಷ ಕಿರಣಕ್ಕಿದೆ. ನೇರ - ನಿರಂತರತೆಯೇ ಕಿರಣದ ಗತಿ.
     ಕವಿ ಕ್ರಾಂತದರ್ಶಿ. ತನ್ನಂತರಂಗದ ಅನುಭಾವಕ್ಕೆ ಕ್ಷರರಹಿತವಾದ ಅಕ್ಷರರೂಪ ನೀಡಿ ಸಹೃದಯರಲ್ಲಿ ನವ್ಯಲೋಕವನ್ನು ಸೃಷ್ಟಿಸುವ ಅಭಿನವ ಶಬ್ಧಬ್ರಹ್ಮ. ಪ್ರಕೃತ ಕೆಳದಿಯ ಸಂಸ್ಥಾನದಲ್ಲಿ ಅರಳಿದ ಕವಿವಂಶದ ವೃಕ್ಷವಾಹಿನಿ ತನ್ನತನದ ಮೆರಗಿನೊಂದಿಗೆ ಕವಿಕಿರಣ ಎಂಬ ಪತ್ರಿಕೆಯ ಲೋಕಾರ್ಪಣೆಯ ನವವಸಂತವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ. ಈ ವಿಷಯವರಿತ ಶ್ರೀ ಸಂಸ್ಥಾನದವರು ಸಂತಸ ವ್ಯಕ್ತಪಡಿಸಿರುತ್ತಾರೆ.
     ಭೂತ - ವರ್ತಮಾನ - ಭವ್ಯಭವಿಷ್ಯತ್ತಿನ ಕೊಂಡಿಯಾಗಿ ಬೆಳಗಿದ ಕೆಳದಿಯ ಕವಿ ವಂಶವೃಕ್ಷ ಬಾಳಲಿ, ಬೆಳೆಯಲಿ, ಬೆಳಗಲಿ. ತನ್ನ ಜ್ಞಾನಕಿರಣದಿಂದ ಪ್ರಪಂಚವನ್ನು ಪೂರ್ಣತೆಯೆಡೆಗೆ ಒಯ್ಯುವಂತಾಗಲಿ ಎಂದು ಶ್ರೀ ಮಹಾ ಸಂಸ್ಥಾನದವರು ಹಾರೈಸಿದ ಸಂಗ್ತಿ ಶೃತಪಡಿಸಿದೆ.
ಶ್ರೀ ಮಹಾಸಂಸ್ಥಾನದ ಅಪ್ಪಣೆಯ ಮೇರೆಗೆ
ರಾಘವೇಂದ್ರ ಮಧ್ಯಸ್ಥ, ವ್ಯವಸ್ಥಾಪಕರು,
ಶ್ರೀ ರಾಮಚಂದ್ರಾಪುರ ಮಠ,
ಹನಿಯ ಅಂಚೆ, ಹೊಸನಗರ ತಾ., ಶಿವಮೊಗ್ಗ ಜಿಲ್ಲೆ.
*****************************
ಶುಭ ಹಾರೈಕೆ

     ಇತಿಹಾಸ ಪ್ರಸಿದ್ಧ ಕೆಳದಿ ಸಂಸ್ಥಾನದ ಕವಿ ಮನೆತನದ ಕುಟುಂಬಗಳ ಸಾಧನೆ, ಸಾಧಕರ ಪರಿಚಯಿಸುವುದರೊಂದಿಗೆ ಕವಿಕಿರಣ ಪತ್ರಿಕೆಯನ್ನು ಹೊರತರುತ್ತಿರುವುದು ಸಂತಸದ ಮತ್ತು ಅಭಿನಂದನೀಯ ಸಂಗತಿಯಾಗಿದೆ. ನಾಡಿನ ಇತಿಹಾಸದಲ್ಲಿ ಕೆಳದಿ ಸಂಸ್ಥಾನಕ್ಕೆ ವಿಶಿಷ್ಟ ಸ್ಥಾನ, ಮಾನ ಇದೆ.
ಕವಿಕಿರಣ ಪತ್ರಿಕೆಗೆ ಹಾರ್ದಿಕ ಶುಭ ಕಾಮನೆಗಳು.
ಗೋಪಾಲಕೃಷ್ಣ ಬೇಳೂರು,
ವಿಧಾನ ಸಭಾ ಸದಸ್ಯರು, ಸಾಗರ
-ಪುಟ -೨-
**************************
ಕೆಳದಿ ಕವಿಮನೆತನದ ಪೂರ್ವಜರು -1
ಕೆಳದಿ ಲಿಂಗಣ್ಣ ಕವಿ
     ಕರ್ನಾಟಕದ ಚರಿತ್ರೆಯಲ್ಲಿ ಕೆಳದಿ ನೃಪವಿಜಯ ಕೃತಿಕಾರ ಕವಿ ಲಿಂಗಣ್ಣನ ಹೆಸರು ಸಾಹಿತ್ಯ ಕ್ಷೇತ್ರದಲ್ಲಿ ಚಿರ ಪರಿಚಿತವಾದುದು. ಸುಮಾರು ೧೭೫೦ ರಲ್ಲಿ ಬಾಳಿದ ಈತನು ಕೆಳದಿ ಸಂಸ್ಥಾನದ ಆಸ್ಥಾನ ಕವಿಯಾಗಿದ್ದಾನೆ. ಕವಿ ಸುರೇಶರವರು ತಮ್ಮ ಹಳೆ ಬೇರು ಹೊಸ ಚಿಗುರು ಕೃತಿಯಲ್ಲಿ ಸ್ವಲ್ಪ ಮಟ್ಟಿಗೆ ಲಿಂಗಣ್ಣನನ್ನು ಪರಿಚಯಿಸಿರುವುದರಿಂದ ಚರ್ವಿತ ಚರ್ವಣ ಅನಗತ್ಯ.
     ತಾಳೆಯೋಲೆ ಹಸ್ತಪ್ರತಿಯಲ್ಲಿ    'ತಿಳಿಯಲ್ಕೀ ಕೃತಿನಾಮಂ  ಕೆಳದೀನೃಪವಿಜಯಮೆಂದಿದಕ್ಕಧಿನಾಥಂ   ಕೆಳದಿಪ ರಾಮೇಶ್ವರನಿದನೊಲಿದುಸುರ್ದಂ ವೆಂಕಪಾತ್ಮಜಂ ಲಿಂಗಬುಧಂ' ಎಂಬ ಉಲ್ಲೇಖನವು ಲಿಂಗಣ್ಣನು ವೆಂಕಪ್ಪನ ಮಗನೆಂದು ಉದ್ಗರಿಸಿದೆ. ಈತನ ಕಾಲವು ೧೭೫೦ರ ಸುಮಾರಿನಲ್ಲಿರುತ್ತದೆ. ಸುಸಂಸ್ಕೃತ ಕವಿಯಾಗಿ, ಚಾರಿತ್ರಿಕ ಸಂಶೋಧಕನಾಗಿ ಕೆಳದಿ ಅರಸರ ಆಸ್ಥಾನದಲ್ಲಿ ಶೋಭಿಸಿ ಲಿಂಗಣ್ಣ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾನೆ. ಕಿರಿಯ ಬಸವಪ್ಪನ ಕಾಲದ ಕೆಳದಿಯ ಸುವರ್ಣ ಯುಗವನ್ನು ಕಂಡಿದ್ದಾನೆ. ಅದು ನಾಶಗೊಂಡ ದುರಂತ ಚಿತ್ರ ವನ್ನು ಅವಲೋಕಿಸಿದ್ದಾನೆ. ಕಡೆಯಲ್ಲಿ ದಾರುಣ ಬದುಕು ಸವೆಸಿದ್ದಾನೆ. ರಾಜಾಶ್ರಯ ತಪ್ಪಿ ಮಕ್ಕಳೂ ಬೇರೆ ಬೇರೆ ಯಾಗಿ ಲಿಂಗಣ್ಣ ತುಂಬಾ ಕಷ್ಟ ಅನುಭವಿಸಿದುದು ವೇದ್ಯ ವಾಗುತ್ತದೆ. ಏನೇ ಇರಲಿ, ಈತನ ಕೃತಿಗಳು ಚಿರಂತನ ವಾದುವುಗಳು.
ಕೃತಿಗಳುಃ-
೧) ಕೆಳದಿನೃಪವಿಜಯ- ಶ್ರೀ ಗುಂಡಾಜೋಯ್ಸರ ಗದ್ಯಾನುವಾದದೊಂದಿಗೆ ೫ಬಾರಿ ಮರು ಮುದ್ರಣ ವಾಗಿದೆ.
೨)   ಶಿವಪೂಜಾದರ್ಪಣ
೩) ಪಾರ್ವತಿ ಪರಿಣಯ-  ಡಾ. ವೆಂಕಟೇಶ್ ಜೋಯಿಸ್ ಸಂಪಾದಿತ ತಿರುಪತಿ ದೇವಾಲಯ ಪ್ರಕಟಿಸಿದೆ 
೪) ದಕ್ಷಾಧ್ವರ ವಿಜಯ- ಡಾ. ವೆಂಕಟೇಶ್ ಜೋಯಿಸ್ ಸಂಪಾದಿತ ತಿರುಪತಿ ದೇವಾಲಯ ಪ್ರಕಟಿಸಿದೆ 
೫)   ಶಿವಕಲ್ಯಾಣ (ಅಪ್ರಕಟಿತ ಓಲೆಗರಿ)
     ಬೆಂಗಳೂರಿನಲ್ಲಿ ನಾನು ಓದುತ್ತಿದ್ದಾಗ ಲಿಂಗಣ್ಣ ಕವಿಯ ತಾಳೆಯೋಲೆ ಹಸ್ತಪ್ರತಿಗಳನ್ನು ಪ್ರೀತಿಯಿಂದ ನನಗಿತ್ತ (ಲಿಂಗಣ್ಣ ಕವಿ ಪೀಳಿಗೆಯ) ಸೋದರ ಮಾವಂದಿರುಗಳಿಗೆ ಕವಿ ಭಾಂಧವರ ಪರವಾಗಿ ವಿನಮ್ರ ಕೃತಜ್ಞತೆಗಳು. ಈ ತಾಳೆಯೋಲೆ ಆಧಾರದಿಂದ ಕೆಳದಿ ಸಂಶೋಧನಾಲಯ ಮುಖಾಂತರ ಪ್ರಕಟಣೆ ಕಂಡಿರುವುದು ಈಗ ತಮ್ಮ ಮುಂದಿರುವುದನ್ನು ಕಾಣಬಹುದಲ್ಲವೇ?.
        ಕೆಳದಿ ನೃಪವಿಜಯವು ಲಿಂಗಣ್ಣನನ್ನು ಸುಪ್ರಸಿದ್ದ ಇತಿಹಾಸ ಸಂಶೋಧಕನನ್ನಾಗಿಸಿದೆ. ಪೂನಾ ವಿಶ್ವ ವಿದ್ಯಾಲಯದ ಪಾಧ್ಯ್ಯಾಪಕ ಡಾಃ ಚಿಟ್ನೀಸ್ ರವರು-
“The literary sources are generally less authentic than either the inscriptions or the accounts of foreign travellers as far as the present work is concerned. The most important literary works are the Keladi Nrpa Vijayam written by Linganna Kavi or poet Linganna. This work seems to have been written between 1763-1804 AD. This literary work, unlike many others, contains more of historical information than of literary praises about the Keladi monarchs. In the work, the poet mainly gives a narration of the rulers one by one. Incidentally he refers to other contemporary dynasties ruling in India, particularly in Karnataka. Much of the information contained in this work is in agreement with the inscriptions and foreign sources. Hence it seems to be more authentic than other literary works. I have  freely drawn upon this work in my thesis corroborating it, wherever possible, by the inscriptions and other sources. It is interesting to note that Linganna Kavi has, in his work, supplemented the main narration by captions, footnotes given usually at the end of every chapter. They contain the names of various officers serving under their respective rulers. This information is useful in writing about the ministers, military generals and other office bearers.”
ಎಂಬುದಾಗಿ ಕೃತಿಯ ಶ್ರೇಷ್ಠತೆಯನ್ನು ಕೊಂಡಾಡಿ Ph.d. ವಿದ್ವಾಂಸರಿಗೆ ಆಕರಗಳ ಮಹತ್ವವನ್ನು ಪ್ರತಿಬಿಂಬಿಸಿದ್ದಾರೆ. ಕೆಳದಿ ನೃಪ ವಿಜಯದ ಹಸ್ತಪ್ರತಿಯೊಂದು ಲಂಡನ್‌ನಲ್ಲಿ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿದೆ. ಇದರ ಚಾರಿತ್ರಿಕ ಮಹತ್ವವನ್ನು ಮನಗಂಡ ಕರ್ನಲ್ ಮೆಕೆಂಝಿಯು ೧೭-೧೮ ನೇ ಶತಮಾನದಲ್ಲಿಯೇ ಇದನ್ನು ಇಂಗ್ಲೀಷ್‌ನಲ್ಲಿ ಭಾಷಾಂತರಿಸಿದ ಪ್ರಾಚೀನ ಹಸ್ತಪ್ರತಿಯೂ ಲಂಡನ್‌ನಲ್ಲಿದೆ. ಯಾವ ವಿಶ್ವವಿದ್ಯಾಲಯ ಹಾಗೂ Ph.d.  ವಿದ್ವಾಂಸನೂ ದಕ್ಷಿಣ ಭಾರತ ಇತಿಹಾಸ ರಚನೆಯಲ್ಲಿ ಲಿಂಗಣ್ಣನ ಈ ಆಕರ ಕೃತಿಯನ್ನು ಆಧರಿಸದಿದ್ದಲ್ಲಿ ಸಂಶೋಧನಾ ಕೃತಿಗೆ ಬೆಲೆ ಬರುವುದಿಲ್ಲವೆಂಬುದು ಕೃತಿ ಹಾಗೂ ವಿದ್ವಾಂಸರ ಹೆಗ್ಗಳಿಕೆ. ಕೆಳದಿ ಸಂಶೋಧನಾಲಯದಲ್ಲಿ ಇದರ ಒಂದೇ ಒಂದು ಓಲೆಗರಿಯಿರುವುದನ್ನು ಮನಗಂಡ ಸರ್ಕಾರ ಗೆಜೆಟೀರ್‌ನಲ್ಲಿ ಇದರ ಛಾಯಾ ಚಿತ್ರವನ್ನು ಪ್ರಕಟಿಸಿದೆ. ಪ್ರಸಿದ್ಧ ಏ.ಆರ್. ಕೃಷ್ಣಶಾಸ್ತ್ರಿ ಆದಿಯಾಗಿ ಖ್ಯಾತ ವಿದ್ವಾಂಸರು ಕೆಳದಿ ಕವಿ ಲಿಂಗಣ್ಣನ ಕವಿತಾ ಸಾಮರ್ಥ್ಯ ವನ್ನು ಮನಸಾರೆ ಕೊಂಡಾಡಿದ್ದಾರೆ.
ಸ ಕವಿಃ ಕಥ್ಯತೇ ಸೃಷ್ಟಾ
  ರಮತೇ ಯತ್ರ ಭಾರತೀ!
   ರಸಭಾವ ಗುಣೀ ಭೂತೈಃ
       ಅಲಂಕಾರೈಃ ಗುಣೋದಯೈಃ!!
ಎಂಬಂತೆ ಕೆಳದಿ ಕವಿ ಲಿಂಗಣ್ಣನು ಆದರ್ಶ ಪ್ರಾಯ ಇತಿಹಾಸ ಸಂಶೋಧಕ ಹಾಗೂ ಕವಿಯಾಗಿರುವುದು ಕನ್ನಡಿಗರ ಹೆಮ್ಮೆ. ಇವನ ಸ್ಮರಣೆ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮಲ್ಲರ ಆದ್ಯ ಕರ್ತವ್ಯವಾಗಿದ್ದು, ಶಿವಮೊಗ್ಗ, ಬೆಂಗಳೂರು ಹಾಗೂ ಸಾಗರದ ವೃತ್ತ ಅಥವಾ ಪ್ರಮುಖ ಮಾರ್ಗಗಳಲ್ಲಿ ಈತನ ನಾಮಾಂಕಿತವನ್ನಿಡಲು ಕವಿ ಬಾಂಧವರು ಹೋರಾಡಲು ಮನಸ್ಸು ಮಾಡುವರೇ?
                                     -ಸಂಶೋಧನಾ ರತ್ನ ಕೆಳದಿ ಗುಂಡಾ ಜೋಯಿಸ್
**************************************

ಚಿಂತಿಸಿ:
     ಸಾಧಕರನ್ನು ಅವರ ಕೃತಿಗಳಿಂದ ಜನ ಗುರುತಿಸುತ್ತಾರೆ. ಸಂಬಂಧಿಕರು ಸಾಧಕರ ಮತ್ತು ತಮ್ಮ ಸಂಬಂಧದ ಬಗ್ಗೆ ಹೆಮ್ಮೆ ಪಡುತ್ತಾರೆ. ಇತರರು ಹೆಮ್ಮೆ ಪಡುವಂತಹ ಸಾಧಕರು ನಾವೇ ಆಗಬಾರದೇಕೆ?
********************************

 ಓದುಗರ ಮಾಹಿತಿಗೆ: 
     ಕೆಳದಿಕವಿ ಮನೆತನದ ಪೂರ್ವಜರು ಶೀರ್ಷಿಕೆಯಲ್ಲಿ ಪೂರ್ವಜರ ಮಾಹಿತಿ/ ಪರಿಚಯಗಳ ಲೇಖನ ಮಾಲೆ ಪ್ರಾರಂಭಿಸಿದ್ದು, ಈ ಸಂಚಿಕೆಯಲ್ಲಿ ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಕೆಳದಿ ಲಿಂಗಣ್ಣ ಕವಿಯ ಕುರಿತು ಕೆಳದಿ ಗುಂಡಾಜೋಯಿಸ್ ಮತ್ತು ಕವಿ ಸುರೇಶರ ಲೇಖನಗಳಿವೆ.  ಲಿಂಗಣ್ಣ ಕವಿಯ ಮೇರು ಕೃತಿ ಕೆಳದಿ ನೃಪವಿಜಯ (ಶ್ರೀ ಗುಂಡಾಜೋಯಿಸರ ಗದ್ಯಾನುವಾದ ಸಹಿತ) ಧಾರಾವಾಹಿಯಾಗಿ ಬರಲಿದೆ.  ಕೆಳದಿ ಕವಿಮನೆತನದ ಸಮಕಾಲೀನರು ಶೀರ್ಷಿಕೆಯಲ್ಲಿ ಸಮಕಾಲೀನ ಕವಿ ಕುಟುಂಬಗಳ ಪರಿಚಯಮಾಲಿಕೆ ಮೂಡಿ ಬರಲಿದ್ದು, ಈ ಸಂಚಿಕೆಯಲ್ಲಿ ಶ್ರೀ ಕೆ. ವೆಂಕಟಸುಬ್ಬರಾವ್ - ಶ್ರೀಮತಿ  ಸೀತಮ್ಮ ದಂಪತಿಗಳನ್ನು ಪರಿಚಯಿಸಲಾಗುತ್ತಿದೆ. ಮುಂದಿನ ಸಂಚಿಕೆಯಲ್ಲಿ ಶ್ರೀ ಸಾ.ಕ. ಕೃಷ್ಣಮೂರ್ತಿ - ಶ್ರೀಮತಿ ಅನಸೂಯಮ್ಮರವರ ಕುರಿತು ಪರಿಚಯ ಲೇಖನ ಪ್ರಕಟವಾಗಲಿದೆ.  ಕವಿಕಿರಣದ ಸದುದ್ದೇಶ, ಸದಾಶಯಗಳಿಗೆ ಪೂರಕವಾದ ಕಥೆ , ಕವನ, ಲೇಖನ, ಇತ್ಯಾದಿಗಳಿಗೆ ಆಹ್ವಾನವಿದೆ. ಸಕಾಲದಲ್ಲಿ ಕಳುಹಿಸಿಕೊಡಲು ಕೋರಿದೆ. ಸೀಮಿತ ಪುಟಸಂಖ್ಯೆಗಳ ಕಾರಣ ಕಿರುಬರಹಗಳಿಗೆ ಆದ್ಯತೆಯಿದೆ. 
ಪ್ರಾಯೋಜಕತ್ವ:: ಪತ್ರಿಕೆಯ ಸಂಚಿಕೆಗಳನ್ನು ಪ್ರಾಯೋಜಿಸಲು ಅವಕಾಶವಿದೆ. ರೂ. ೫೦೦೦/- ನೀಡಿದಲ್ಲಿ ಅವರನ್ನು ಸಂಚಿಕೆಯ ಪ್ರಾಯೋಜಕರೆಂದು ಪರಿಗಣಿಸಿ ಪತ್ರಿಕೆಯಲ್ಲಿ ಅವರ ಪೂರ್ಣ ಪುಟದ ಪುಟದ ಭಾವಚಿತ್ರ ಪ್ರಕಟಿಸಿ ಸ್ಮರಿಸಲಾಗುವುದು. ಪ್ರಥಮ ಸಂಚಿಕೆಯನ್ನು ಕೆ. ವೆಂಕಟಸುಬ್ಬರಾವ್ - ಸೀತಮ್ಮ ದಂಪತಿಗಳ ಕಿರಿಯ ಪುತ್ರ ಕೆ.ವಿ. ಅನಂತ, ನೋರಿಸ್ ಟೌನ್, ಪಿಎ- ೧೯೪೦೩, ಅಮೆರಿಕಾ ಸಂಯುಕ್ತ ಸಂಸ್ಥಾನ ಇವರು ಪ್ರಾಯೋಜಿಸಿದ್ದು ಅವರಿಗೆ ಅಭಿನಂದನೆಗಳು.      
      ಮುಂದಿನ ಸಂಚಿಕೆಗಳಿಗೆ ಪ್ರಾಯೋಜಕರು ಮುಂದೆ ಬರಲು ಕೋರಿದೆ. 
************************
                                          -ಪುಟಗಳು - 3 ಮತ್ತು 4-
***************************************************************

ಕೆಳದಿ ಕವಿ ಲಿಂಗಭಟ್ಟ       (ಕವಿ ಲಿಂಗಣ್ಣ)                
  - ಕವಿ ವೆಂ. ಸುರೇಶ

     ಕ್ರಿ,ಶ. ೧೭೫೦ ರ ಸುಮಾರಿನಲ್ಲಿದ್ದ ಕವಿ ಲಿಂಗಣ್ಣ ಕೆಳದಿ ಸಂಸ್ಥಾನದ ಆಸ್ಥಾನ ಕವಿ, ಇವರ ನಂತರ ಇವರ ವಂಶಸ್ಥರಿಗೆ ಕವಿ ಎಂಬ ಉಪನಾಮ ಬಂದಿದೆ. ಆದುದರಿಂದ ಕವಿ ವಂಶಕ್ಕೆ ಮೂಲಪುರುಷರು ಈ ಕವಿ ಲಿಂಗಣ್ಣ. ಇವರ ತಂದೆ ವೆಂಕಟಪ್ಪ (ತಾಯಿಯ ವಿವರ ತಿಳಿದಿಲ್ಲ). ಇವರ ವಾಸ ಸಾಗರ - ಕೆಳದಿ ಆಗಿತ್ತೆಂದೂ, ಇವರಿಗೆ ಇದೇ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ಜಮೀನು ಇತ್ತೆಂದೂ ಉಲ್ಲೇಖಗಳು ತಿಳಿಸುತ್ತವೆ. ಕೆಳದಿ ಮ್ಯೂಜಿಯಂಬಲ್ಲಿರುವ ನವಾಬ್ ಹೈದರಾಲಿಯ ಸಹಿ ಇರುವ ಈ ಅಪೂರ್ವ ಚಾರಿತ್ರಿಕ ದಾಖಲೆಯಲ್ಲಿ ಕೆಳದಿ ಕವಿ ಸುಬ್ಬಾಭಟ್ಟ - ಶ್ಯಾಂಭಟ್ಟರಿಗೆ ಕೆಳದಿ ಅರಸರು ನೀಡಿದ್ದ ಇನಾಂ ಭೂಮಿಯು ಹೈದರನ ಪರಿವಾರದಲ್ಲಿ ಜಫ್ತಿಯಾಗಿದ್ದುದನ್ನು ಕೆಳದಿ ರಾಜಧಾನಿ ನಗರ (ಬಿದನೂರು) ದಿವಾನ್ ಅವಲ್ ನರಸಪ್ಪಯ್ಯನವರು ತಪ್ಪಿಸಿ ಸದರಿ ಕವಿಗಳಿಗೆ ಪರಿಹಾರ ದೊರಕಿಸಿಕೊಟ್ಟ ಬಗ್ಗೆ ವಿವರಗಳಿವೆ. ಕೆಳದಿ ಕವಿ ಲಿಂಗಣ್ಣನವರ ಗ್ರಂಥಗಳಿಂದ ಇವರು ಎರಡನೇ ಬಸಪ್ಪನಾಯಕನ ಕಾಲದಲ್ಲಿ (೧೭೩೯-೧೭೫೫)ಜೀವಿಸಿರಬಹುದೆಂದು ತೋರುತ್ತದೆ.
     ಒಮ್ಮೆ ಲಿಂಗಣ್ಣನವರು ಕೊಲ್ಲೂರಿನ ಶ್ರೀ ಮೂಕಾಂಬಿಕೆಯ ಸನಿಹದಲ್ಲಿ ಭಕ್ತಿಯಿಂದ ದೇವಿಯನ್ನು ಕುರಿತು ಪ್ರಾರ್ಥಿಸುತ್ತಾ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಆಗ ತಾನೇ ಕೊಲ್ಲೂರಿಗೆ ಆಗಮಿಸಿದ್ದ ಕೆಳದಿ ನಾಯಕ ನಿಗೆ ಈತನ ಗಾನಮಾಧುರ್ಯ ಬಹು ಮೆಚ್ಚಿಗೆ ಯಾಯಿತು. (ಕೆಳದಿ ಅರಸರಿಗೆ ಕೊಲ್ಲೂರಿನ ಶ್ರೀ ಮೂಕಾಂಬಿಕೆಯೂ ಕುಲದೇವರಲ್ಲಿ ಒಂದಾಗಿತ್ತು). ತುಸು ಸಮಯದಲ್ಲಿಯೇ ದೇವಿಯ ಸನಿಹದಿಂದ ಪುಷ್ಪವೊಂದು ಲಿಂಗಣ್ಣನ ಮಡಿಲಿಗೆ ಬಿತ್ತು. ಇದನ್ನು ಕಂಡು ಕೆಳದಿ ನಾಯಕನು ಈತನ ಪೂರ್ವೇತಿಹಾಸವನ್ನು ತಿಳಿದು ತನ್ನ ಆಸ್ಥಾನದಲ್ಲಿ ಆಸ್ಥಾನ ಕವಿಯನ್ನಾಗಿ ಸೇರಿಸಿಕೊಂಡನು.* (ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿಗಳಾಗಿದ್ದ ದಿ. ಜಿ.ವಿ.ಕೆ. ರಾವ್‌ರವರ ಮಾವನವರಾದ ಶ್ರೀ ಮಾಧವರಾಯರು ತೆಗೆದುಕೊಂಡು ಹೋಗಿದ್ದ ಸಾಗರದ ಕವಿ ಲಿಂಗಣ್ಣಯ್ಯನವರು ರಚಿಸಿದ್ದ ವೈದೀಕ ಧರ್ಮದ ಶಾಸ್ತ್ರೀಯ ವಿಚಾರ ಎಂಬ ಹಸ್ತ ಪ್ರತಿಯಲ್ಲಿ ಈಬಗ್ಗೆ ಉಲ್ಲೇಖಿಸಲಾಗಿದೆ ಎಂದು ಕೆಳದಿಯ ಶ್ರೀ ಗುಂಡಾಜೋಯಿಸ್ ರವರಿಂದ ತಿಳಿದು ಬರುತ್ತದೆ.) *ಮಾನವಿಕ ಕರ್ನಾಟಕ, ಸಂ.೨, ೧೯೭೩, ಪು.೬೧ - ಮೈಸೂರು ವಿಶ್ವವಿದ್ಯಾಲಯ.  
  ಕವಿ ಲಿಂಗಣ್ಣ ರಚಿಸಿದ ಕೆಲವು ಕೃತಿಗಳ ಸೂಕ್ಷ್ಮ ಪರಿಚಯವನ್ನು ಇಲ್ಲಿ ಕೊಡಲಾಗಿದೆ.
೧. ಕೆಳದಿ ನೃಪವಿಜಯ: (ಪುನರುಕ್ತಿಯಾಗುವುದರಿಂದ ಈ ಭಾಗ ಕೈಬಿಟ್ಟಿದೆ).
೨. ದಕ್ಷಾಧ್ವರ ವಿಜಯ: ಇದೊಂದು ಖಂಡ ಕಾವ್ಯ. ಸ್ಕಂದ ಪುರಾಣದಲ್ಲಿ ವ್ಯಾಸ ಮಹರ್ಷಿಯ ಶಿಷ್ಯನಾದ ಸೂತನು ಶೌನಕಾದಿ ಮುನಿಗಳನ್ನು ನೈಮಿಷಾರಣ್ಯದಲ್ಲಿ ಸಂಧಿಸಿದಾಗ ಮಹಾದೇವನ ಮಹಾತ್ಮೆಯನ್ನು ಕೇಳುತ್ತಾರೆ. ಆಗ ಅಲ್ಲಿ ದಕ್ಷನ ವಿಷಯ ಬರುತ್ತದೆ. ಬ್ರಹ್ಮಪುತ್ರನಾದ ದಕ್ಷನಿಗೆ ತಾನೇ ಶ್ರೇಷ್ಠನೆಂಬ ಗರ್ವ. ದಕ್ಷನು ಬ್ರಹ್ಮನ ಮಾತಿನಂತೆ ತನ್ನ ಮಗಳಾದ ಸತೀದೇವಿಯನ್ನು ಶಂಕರನಿಗೆ ಕೊಟ್ಟು ಮದುವೆ ಮಾಡಿದನಂತೆ. ಮುಂದೊಮ್ಮೆ ಇಂದ್ರಾದಿಗಳೂ, ಮಹರ್ಷಿಗಳೂ ನೈಮಿಷಾರಣ್ಯಕ್ಕೆ ಬಂದಾಗ ಇವರನ್ನು ಸ್ತುತಿಸಿದರಂತೆ. ಆದರೆ ಶಿವನು ಅವರನ್ನು ಎದ್ದು ಗೌರವಿಸಲಿಲ್ಲ. ಇದರಿಂದ ಸಿಟ್ಟುಗೊಂಡ ದಕ್ಷನು ಶಿವನನ್ನು ಯಜ್ಞಬಾಹ್ಯನನ್ನಾಗಿ ಮಾಡಿರುವುದಾಗಿ ತಿಳಿಸುತ್ತಾನೆ. ತಿಳಿ ಹೇಳಲು ಮುಂದಾದ ನಂದಿಗೂ ಶಾಪವಿತ್ತು ಕನಖಲ ಎಂಬ ಕ್ಷೇತ್ರದಲ್ಲಿ ಯಜ್ಞಕ್ಕೆ ಮುಂದಾಗುತ್ತಾನೆ. ಇದು ಶಿವದ್ರೋಹವಾಗಿ ಪರಿಣಮಿಸಿ ನಡೆಸಿದ ಯಾಗವೇ ದಕ್ಷಾಧ್ವರವೆಂದು ಪುರಾಣ ಪ್ರಸಿದ್ಧವಾಗಿದೆ.
     ದಕ್ಷಾಧ್ವರ ವಿಜಯ ಕಾವ್ಯದ ಕೆಲವು ಸಾಲುಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದ್ದು, ಇವುಗಳು ಸಂಗೀತಾಸಕ್ತರಿಗೆ ಹೆಚ್ಚು ಪ್ರಿಯವಾಗಬಹುದು; ಸಂಗೀತ ಶಾಸ್ತ್ರದಲ್ಲೂ ಕವಿಗೆ ಇದ್ದ ಪ್ರೌಢಿಮೆಯನ್ನು ಕೂಡ ನಾವಿಲ್ಲಿ ಗಮನಿಸಬಹುದಾಗಿದೆ.
ಜಯ ಜಯ ಜಗದಂಬಿಕೆ
ಸುರಯುವತೀಜನ ಸೇವಿತೆ| ಮುನಿಭಾವಿತೆ|
ಧರಣೀಧರ ವರಜಾತೆ|
ಬಾಲೆ ಸಕಲ ಜಗನ್ಮೋಹಿನಿ| ಸಿಂಹವಾಹಿನಿ|
ಲಾಲಿತ ಗಣಪ ಸೇನಾನಿ|| . .(ಭೈರವಿ ರಾಗ)
ಕಲ್ಯಾಣಿ ಕುರುವಾಣಿ| ಕಲ್ಯಾಣಂ ಕುರುವಾಣಿ ಸುವೇಣಿ|
ಕಲ್ಯಾಣಿ ವರದೇ ಬ್ರಹ್ಮಾಣಿ|| . .(ಬಿಲಾವರಿ ರಾಗ)
ಸಂತತಮೀಡೇ ಶಂಕರಂ| ಶಂಕರಂ| ಬ್ರಹ್ಮಾದಿದೇವ ಕಿಂಕರಂ|  ವಾರಿಜಭವ ಕಂಕರಂ| ಕುಂಡಲಿತ ದರ್ವೀಕರಂ| ಬಾಲಶೀತಾಂಶೂ ಶೇಖರಂ| ಸಂತತ ಮೀಡೇ ಶಂಕರಂ || (ಮೋಹನಕಲ್ಯಾಣಿ ರಾಗ)
ಲಿಂಗಂ ಭಜೇ ದಿವ್ಯ ಲಿಂಗಂ ಭಜೇ|ಮಹಾಲಿಂಗಂ ಭಜೇ ಶಿವಲಿಂಗಂ ಭಜೇ|| (ಪೂರ್ವಿ ಕಲ್ಯಾಣಿ ರಾಗ)
ಪಾಲಯಮಾಂ ಶಂಕರ| ಪೋಷಿತ ಸುರ|       ಜಾಲ ವ್ಯೋಮ ಗಂಗಾಧರಾ|| ನೀಲಲೋಹಿತ ಭೂರಲೋಲ ಗಾನ ವಿಲೋಲ|| ಕಾಲ ಕಾಲ ಕರುಣಾಲವಾಲ ಧೃತ| ಶೂಲ ನೀಲ ಫಾಲ ವಿಲೋಚನ|| (ತೋಡಿ ರಾಗ)
೩. ಶಿವಪೂಜಾ ದರ್ಪಣ:  ಇದೊಂದು ಖಂಡ ಕಾವ್ಯ. ೫೮೫ ಸಂಖ್ಯೆಯ ಕಂದ, ವೃತ್ತ, ವಚನ, ಗದ್ಯಗಳಿಂದ ಕೂಡಿದ ಕೃತಿ. ಶಿವಪೂಜೆ ಈ ಕಾವ್ಯದ ವಸ್ತು. ಭಕ್ತಿಮಾರ್ಗದ ವೈಶಿಷ್ಟ್ಯ ಇದರಲ್ಲಿ ಸ್ಪಷ್ಟಪಡಿಸಲ್ಪಟ್ಟಿದೆ. ೧೭ನೇ ಶತಮಾನದಲ್ಲಿ ಪೂಜಾವಿಧಿಯನ್ನು ಕನ್ನಡದಲ್ಲಿ ನಿರೂಪಿಸಿದ ಪ್ರಥಮ ಪ್ರಯತ್ನ ಇದೆನ್ನಬಹುದು, (ಇತ್ತೀಚೆಗೆ ಹಿರೇಮಗಳೂರು ಕಣ್ಣನ್ ರವರೂ ಕೂಡಾ ಪೂಜಾ ಮಂತ್ರಗಳನ್ನು ಕನ್ನಡದಲ್ಲಿ ಅಳವಡಿಸಿರುವುದೂ ಉಲ್ಲೇಖಾರ್ಹ). ಶಿವಪೂಜಾ ದರ್ಪಣ ಆಸ್ತಿಕರ ಕೈಪಿಡಿ; ಶಿವಭಕ್ತರ ಆರಾಧನಾ ಗ್ತಂಥವೆಂದೂ ಬಣ್ಣಿಸಲಾಗಿದೆ.
     ಕವಿಯು ಪ್ರಥಮಾಶ್ವಾಸದಲ್ಲಿ ಶಿವ - ಪಾರ್ವತಿ ಯನ್ನು, ವಿಘ್ನೇಶ್ವರನನ್ನು, ಶಾರದೆಯನ್ನು, ವಾಲ್ಮೀಕಿ, ಕಾಳಿದಾಸ, ಪಂಪ, ರಾಘವಾಂಕರಂಥ ಮಹಾನ್ ಕವಿಗಳನ್ನು ಸ್ಮರಿಸುವ ಪರಿ ಅವರ ಉತ್ತಮ ಸಂಸ್ಕಾರ ವನ್ನು ಹಾಗೂ ದೇವರ ಮತ್ತು ವಿದ್ವಾಂಸರ ಮೇಲಿರುವ ಅಚಲ ಶ್ರದ್ಧಾಭಕ್ತಿಯ ದ್ಯೋತಕವಾಗಿದೆ. ಪೂಜೆಯ ವಿವಿಧ ಹಂತಗಳನ್ನು ಬಲು ಸುಂದರವಾಗಿ ನಿರೂಪಿಸ ಲಾಗಿದ್ದು, ಶಿವನಿಗೆ ನೈವೇದ್ಯವನರ್ಪಿಸುವಾಗ ಕೃತಿಯಲ್ಲಿ ಬರುವ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಕೊಟ್ಟೆಯ ಕಡುಬಂ ಗೋಧಿಯ|
ರೊಟ್ಟಿಯನಾ ಕಡಲೆಗಡುಬ ಪೊಯ್ಗಡುಬಮಂ ನುಂ
ಪಿಟ್ಟ ವೃತ್ತಾಸು ಮುಳುಕಗ|
ಳೊಟ್ಪೊಜೆಗಳನಳಕನೇತ್ರ ಭಕ್ಷಿಪುದೊಲವಿಂ||
ಹೆರೆದುಪ್ಪಂ ತಿಳಿದುಪ್ಪಂ|
ನೊರೆದುಪ್ಪಂ ಕಡಿದುಪ್ಪ ನೀರ್ಮಳಲ್ದುಪ್ಪಂ||
ನೆರೆಯುದಿರ್ದುಪ್ಪಮೆನಿಪ್ಪೀ|
ಪರಿಪರಿದುಪ್ಪಗಳ ಸವಿಯ ನೋಳ್ಪುದುಮೇಶಾ||

     ಶಿವಪೂಜಾ ದರ್ಪಣದ ಪ್ರತಿ ಅಧ್ಯಾಯದ ಅಂತ್ಯದಲ್ಲಿ ಕವಿ ತನ್ನ ಹೆಸರು ಹಾಗೂ ಗೋತ್ರ (ಹರಿತಸ)ಗಳನ್ನು ಹೇಳಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಈ ಕಾವ್ಯದ ಅಂತ್ಯದಲ್ಲಿ ಕವಿ ಬರೆದ ಮುಕ್ತಾಯ ಇಂತಿದೆ. (ಬಹುಶಃ ಶಿವಪೂಜಾದರ್ಪಣದಲ್ಲಿ ವಿವರವಾಗಿ ನಿರೂಪಿಸಿರುವ ಶಿವಪೂಜೆಯ ಪ್ರತಿ ಹೆಜ್ಜೆಗಳ ಸಾರಾಂಶವೇ ಇದರಲ್ಲಿದೆಯೆನ್ನಲಡ್ಡಿಯಿಲ್ಲ).
ಇದಖಿಲ ಸುರನರೋರಗ ನಿಕರ ಮಕುಟ ತಟ ಘಟಿತ ಮಾಣಿಕ್ಯ
ಮಯೂಖಮಂಜರೀಪುಂಜ ಶಬಲೀಕೃತ ಕನತ್ಕನಕ ಪಾದುಕಾ
ವಿರಾಜಮಾನ ಶ್ರೀಮತ್ಸಾಂಬ ಸದಾಶಿವ ಚರಣಾರವಿಂದ ದ್ವಂದ್ವ ಭಕ್ತಿರಸ ಮಕರಂದಮತ್ತ ಮಧುಕರಾಯಣಮಾನಸ ಭೂಸುರ ಕುಲಪ್ರದೀಪ ಹರಿತಸ ಗೋತ್ರೋದ್ಭವ ವೆಂಕಪಾತ್ಮಜ ಲಿಂಗಣಸೂರಿ ವಿರಚಿತ
ಶಿವಪೂಜಾದರ್ಪಣ ಪ್ರಬಂಧದೊಳ್ ರಂಗಪೂಜಾ ದೀಪಾರಾಧನ
ವಿವಿಧ ನೀರಾಜ(ನ) ವಸ್ತ್ರ (ಸಮ)ರ್ಪಣ ಮಂತ್ರಪುಷ್ಪ ಪ್ರದಕ್ಷಿಣ
ನಮಸ್ಕಾರ ಪ್ರಾರ್ಥನ ನಾನಾ ವಿಧ ವಿನಿಯೋಗ ಸೇವಾ ಸಮರ್ಪಣ
ಋಗ್ವೇದಾದಿ ವೇದ ವೇದಾಂಗ ಶಾಸ್ತ್ರಪುರಾಣಾಗಮ ತಂತ್ರೀ ಪಟಹಾದಿ ವಾದ್ಯ ಸುಷಿರ ವಾದ್ಯಾದಿ ವಾದುವಾದನ ಶ್ರವಣ ನೃತ್ಯ ವೃಷಭ ತುರಂಗಾರೋಹಣಾದಿ ನಾನಾ ವಿಧಯಾನೋತ್ಸವ ದೋಲಾರೋಹಣ ಖೇಲನ ಮಣಿಮಂಟಪ ಪ್ರ(ಧಾನ) ಮಂಗಲಾರತಿಕ ಸಮರ್ಪಣ ಕ್ಷೀರ ಪಾನಾತ್ಮಾರೋಪಣಾದಿ ಪೂಜೋಪಚಾರ ಸಮರ್ಪಣ ಕೃತಿ ಪ್ರಶಂಸಾತಚ್ಛ್ರವಣ ಫಲ ವಿವರಣಂ ಪಂಚಮಾಶ್ವಾಸಂ ಸಂಪೂರ್ಣಂ

     ಕವಿ ಲಿಂಗಣ್ಣ ಪಾರ್ವತಿ ಪರಿಣಯ ಮತ್ತು ಶಿವಕಲ್ಯಾಣ (ಯಕ್ಷಗಾನ) ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ.[ದಕ್ಷಾಧ್ವರ ವಿಜಯ (ಮೇಲೆ ಉಲ್ಲೇಖಿಸಿದ ಕೆಲವು ರಚನೆಗಳ ಸಂಪೂರ್ಣ ಸಾಹಿತ್ಯ ಇದರಲ್ಲಿದೆ) ಮತ್ತು ಶಿವಪೂಜಾ ದರ್ಪಣ ಕೃತಿಗಳನ್ನು ಕೆಳದಿಯ ಡಾ: ವೆಂಕಟೇಶ ಜೋಯಿಸರು ಸಂಪಾದಿಸಿ ೨೦೦೨ ರಲ್ಲಿ ಪ್ರಕಟಿಸಿದ್ದಾರೆ.]
     ಒಟ್ಟಿನಲ್ಲಿ ಹೇಳಬೇಕೆಂದರೆ ಕವಿ ಲಿಂಗಣ್ಣ ಓರ್ವ ಉತ್ತಮ ಇತಿಹಾಸಕಾರ, ಶ್ರೇಷ್ಠ ಕವಿ, ಸಂಗೀತಜ್ಞ ಮತ್ತು ಆಸ್ತಿಕ ಪುರುಷ. ಈತ ರಚಿಸಿರುವ ಅನೇಕ ಕೃತಿಗಳು ಸಂಶೋಧನೆಗೆ ಅರ್ಹವಾಗಿದ್ದು, ಚರಿತ್ರೆಯಲ್ಲಿ ಮತ್ತು ಕಾವ್ಯದಲ್ಲಿ ಆಸಕ್ತಿ ಹೊಂದಿದವರೆಲ್ಲರೂ ಈ ದಿಶೆಯಲ್ಲಿ ಕಾರ್ಯೋನ್ಮುಖರಾದಲ್ಲಿ ಇನ್ನೂ ಉತ್ತಮವಾದ ಸಂಗತಿಗಳನ್ನು ಬೆಳಕಿಗೆ ತರಬಹುದಾಗಿದೆ. ಈತನ ನಂತರದ ಪೀಳಿಗೆಯವರಾದ ಸಾಗರದ ಕವಿ ಲಿಂಗಣ್ಣಯ್ಯ (ಶ್ರೇಷ್ಠ ಚಿತ್ರಕಾರ - ರಾಮಾಯಣ ಮತ್ತು ಭಾಗವತವನ್ನು ಚಿತ್ರದಲ್ಲಿ ನಿರೂಪಿಸಿದ್ದಾರೆ. ಚಿತ್ರ ರಚನೆ, ಮುದ್ರಣಕಲೆ, ಛಾಯಾಗ್ರಹಣ ಕಲೆ, ಮುಂತಾದ ವಿಷಯಗಳ ಬಗ್ಗೆ ಪುಸ್ತಕಗಳನ್ನು ರಚಿಸಿದ್ದಾರೆ). ಇವರ ಮೊಮ್ಮಗ ಕೆಳದಿ ಗುಂಡಾಜೋಯಿಸ್ (ಕೆಳದಿ ಮ್ಯೂಜಿಯಂ ಸಂಸ್ಥಾಪಕರು, ಸಂಶೋಧಕರು, ಅನೇಕ ಇತಿಹಾಸ ಕೃತಿಗಳ ರಚನೆಕಾರರು, ರಾಜ್ಯ ಪ್ರಶಸ್ತಿ ವಿಜೇತರು) ಮತ್ತು ಕವಿ ವಂಶದ ಇತರ ಅನೇಕರು ವಿವಿಧ ಕ್ಷೇತ್ರಗಳಲ್ಲಿ (ಸಂಗೀತ, ಸಾಹಿತ್ಯ, ಕಲೆ, ಇಂಜನಿಯರಿಂಗ್, ವೈದ್ಯಕೀಯ, ಆಧ್ಯಾತ್ಮಿಕ. ಇತ್ಯಾದಿ) ತಮ್ಮದೇ ಆದ ಅನುಪಮ ರೀತಿಯಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಿದ್ದು, ಕವಿ ಲಿಂಗಣ್ಣನ ಹಾದಿಯಲ್ಲಿಯೇ ಸಾಗುತ್ತಿರುವುದು ಬಹುಶಃ ಕವಿ ಲಿಂಗಣ್ಣನ ಮತ್ತು ಕುಲಾರಾಧ್ಯ ದೇವತೆಯಾದ ಕೊಲ್ಲೂರು ಮೂಕಾಂಬಿಕೆಯ ಕೃಪೆಯೆಂದೇ ಹೇಳಬಹುದು. 

   (ಲೇಖಕರ 'ಉತ್ಕೃಷ್ಟದೆಡೆಗೆ' ಪುಸ್ತಕದಿಂದ ಆಯ್ದ ಲೇಖನ)      
                 * * *
                         -ಪುಟಗಳು -5,6-
************************************************************************

ಕೆಳದಿ ಕವಿ ಮನೆತನದ ಬಂಧು-ಬಳಗದ ವಾರ್ಷಿಕ ಸಮ್ಮೇಳನಗಳ ವರದಿ
     ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಕೆಳದಿ ಸಂಸ್ಥಾನದ ಆಸ್ಥಾನ ಕವಿ ಲಿಂಗಣ್ಣನನ್ನು ಕವಿ ಮನೆತನದ ಒಂದನೆಯ ಪೀಳಿಗೆ ಎಂದು ಪರಿಗಣಿಸಿದರೆ, ಪ್ರಸ್ತುತ ಮೊದಲಿನ ಆರು ಪೀಳಿಗೆಯವರು ಈಗ ಬದುಕಿಲ್ಲ. ಏಳರಿಂದ ಹತ್ತನೆಯ ಪೀಳಿಗೆಯ ಕುಟುಂಬಗಳವರು ಈಗ ಇದ್ದು ಹನ್ನೊಂದನೆಯ ಪೀಳಿಗೆ ಆಗಮನ ಸನ್ನಿಹಿತವಾಗಿದೆ. ಸುಮಾರು ಮುನ್ನೂರು ವರ್ಷಗಳ ಇತಿಹಾಸವಿರುವ ಈ ಮನೆತನದ ಕುಟುಂಬಗಳ ಸದಸ್ಯರುಗಳು ಹಲವೆಡೆ ಚದುರಿ ಹೋಗಿದ್ದು, ಅವರುಗಳನ್ನು ಗುರುತಿಸಿ ಒಟ್ಟುಗೂಡಿಸಿ ವರ್ಷಕ್ಕೆ ಒಮ್ಮೆಯಾದರೂ ಒಟ್ಟಿಗೆ ಸೇರಿಸಿ ಸಮಾವೇಶ ನಡೆಸುವ ಕಾರ್ಯ ೨೦೦೭ ರಲ್ಲಿ ಚಾಲನೆ ಪಡೆಯಿತು. ಪರಸ್ಪರ ಪರಿಚಯವೇ ಇಲ್ಲದ, ಸಂಪರ್ಕ ಸಹ ಇಲ್ಲದಿದ್ದ ಬಂಧುಗಳನ್ನು  ಒಟ್ಟುಗೂಡಿಸಿ ೨೮-೦೧-೦೭ರಲ್ಲಿ ಕವಿ ಸುರೇಶರ ಮನೆಯಲ್ಲಿ ನಡೆದ ಪ್ರಥಮ ಸಮ್ಮೇಳನ ಅವಿಸ್ಮರಣೀಯ, ಅನುಪಮವಾಗಿದ್ದು, ಇದಕ್ಕಾಗಿ ಕವಿ ಸುರೇಶರವರು ಪಟ್ಟ ಪರಿಶ್ರಮ ಸಾರ್ಥಕವಾಗಿದೆ. ೨೫-೧೨-೨೦೦೭ರಲ್ಲಿ ಕೆಳದಿಯಲ್ಲಿ ದ್ವಿತೀಯ ವಾರ್ಷಿಕ ಸಮ್ಮೇಳನ ಕೆಳದಿ ರಾಮಮೂರ್ತಿ ಸಹೋದರರ ಪ್ರಾಯೋಜಕತ್ವದಲ್ಲಿ ನಡೆಯಿತು. ಈ ಎರಡು ಸಮಾವೇಶಗಳ ಸಂಕ್ಷಿಪ್ತ ವರದಿ ಇಲ್ಲಿದೆ.
ಪ್ರಥಮ ವಾರ್ಷಿಕ ಸಮಾವೇಶ - ೨೮-೦೧-೨೦೦೭
     'ನಾವು - ನಮ್ಮವರು' ಶೀರ್ಷಿಕೆಯಲ್ಲಿ ಕವಿ ಸುರೇಶರ ಶಿವಮೊಗ್ಗದ ಸ್ವಗೃಹದಲ್ಲಿ ಕವಿ ಲಿಂಗಣ್ಣ ವೇದಿಕೆಯಲ್ಲಿ ಬೆಳಿಗ್ಗೆ  ೮-೦೦ ಗಂಟೆಗೆ ಆರಂಭವಾದ ಕಾರ್ಯಕ್ರಮಗಳು ಸಾಯಂಕಾಲ ೬-೦೦ ಗಂಟೆಯವರೆಗೆ ನಡೆದು ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿತೆಂದರೆ ಉತ್ಪ್ರೇಕ್ಷೆಯಲ್ಲ. ಸುಮಾರು ೧೫೦ ಸದಸ್ಯರುಗಳು ಪೂರ್ಣಕಾಲ ಸಕ್ರಿಯವಾಗಿ ಪಾಲ್ಗೊಂಡ ಈ ಸಮಾವೇಶ ಕೆಳಕಂಡ ಭಾವನಾತ್ಮಕ ಕ್ಷಣಗಳಿಗೆ. ಕಾರ್ಯಗಳಿಗೆ ಸಾಕ್ಷಿಯಾಯಿತು.
೧. ಅರುಣ ಪಾರಾಯಣ: ಅನೇಕ ವರ್ಷಗಳ ನಂತರ ಪ್ರಥಮ ಬಾರಿಗೆ ಬಂಧುಗಳ ಮಿಲನವಾಗುತ್ತಿರುವ ನಿಮಿತ್ತ ಶ್ರೀ ಸಾ.ಕ. ಕೃಷ್ಣಮೂರ್ತಿ, ಡಾ. ಕೃಷ್ಣಜೋಯಿಸ್ ಮತ್ತು ಶ್ರೀ ರಾಮಾಜೋಯಿಸ್ ರವರು ಅರುಣಪಾರಾಯಣ ಮಾಡಿದರು.
೨. ಪ್ರಾಸ್ತಾವಿಕ: ಸಮಾವೇಶದ ಪ್ರಸ್ತುತತೆ, ಕಾರ್ಯಕ್ರಮಗಳ ವಿವರ ಕುರಿತು ಕ.ವೆಂ. ನಾಗರಾಜರಿಂದ ಪ್ರಾಸ್ತಾವಿಕ ಭಾಷಣ ಹಾಗೂ ಗಣ್ಯರ ಪರಿಚಯ
೩. ಗಣ್ಯರು ಹಾಗೂ ಕುಟುಂಬದ ಹಿರಿಯರಿಂದ ಜ್ಯೋತಿ ಬೆಳಗುವುದು - ವೇದಘೋಷದೊಂದಿಗೆ
೪. ಬಂಧುಗಳ ಪರಸ್ಪರ ಪರಿಚಯ 
೫. ಪುಸ್ತಕ ಬಿಡುಗಡೆ: ಕವಿ ಸುರೇಶ ಸಂಪಾದಿಸಿದ 'ಹಳೆ ಬೇರು - ಹೊಸ ಚಿಗುರು' ಪುಸ್ತಕ ಬಿಡುಗಡೆ ಮಾಡಿದ ಶ್ರೀ ಕೂಡಲಿ ಜಗನ್ನಾಥ ಶಾಸ್ತ್ರಿಗಳಿಂದ ಸ್ತುತ್ಯಾರ್ಹ ಕಾರ್ಯದ ಪ್ರಶಂಸೆ
೬. ವಸ್ತು ಪ್ರದರ್ಶನ: ಕೆಳದಿ ಗುಂಡಾ ಜೋಯಿಸರು ಉದ್ಘಾಟಿಸಿದ ಕವಿ ಮನೆತನದ ಹಿಂದಿನ ಮತ್ತು ಈಗಿನ ಪೀಳಿಗೆಗಳ ಸಾಧನೆ ಪರಿಚಯಿಸುವ ಪುಟ್ಟ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪರಸ್ಪರ ಅಂತಃಕರಣ ಮತ್ತು ನಿರಂತರ ಸಂಪರ್ಕದ ಬಗ್ಗೆ ಗುಂಡಾಜೋಯಿಸರ ಮಾತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
೭. ಸನ್ಮಾನ: 'ಹಳೇ ಬೇರು ಹೊಸಚಿಗುರು' ಪುಸ್ತಕ ರಚನೆಗೆ ಸಹಕರಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಕವಿ ಕುಟುಂಬಗಳ ಹಿರಿಯರಾದ ಶ್ರೀಯುತರಾದ ಸಾ.ಕ.ಕೃಷ್ಣಮೂರ್ತಿ, ರಾಮರಾವ್, ನಾಗರಾಜಭಟ್ಟ, ರಾಮಾಜೋಯಿಸ್, ವಿನೋದಮ್ಮ, ಸೀತಾಲಕ್ಷ್ಮಮ್ಮ, ಸುಬ್ಬಲಕ್ಷ್ಮಮ್ಮ, ಪದ್ಮಾವತಮ್ಮ, ಗಿರಿಜಮ್ಮ, ರಾಮಮೂರ್ತಿ, ಹರಿಹರದ ರಾಮರಾವ್ ಮೊದಲಾದವರನ್ನು ಯಥೋಚಿತವಾಗಿ ಸನ್ಮಾನಿಸಲಾಯಿತು.
     ಕವಿ ಮನೆತನದ ಸದಸ್ಯರ ಪೈಕಿ ಅತ್ಯಂತ ಹಿರಿಯರಾದ ಶ್ರೀ ಕವಿ ವೆಂಕಟಸುಬ್ಬರಾವ್ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳನ್ನು ಅವರ ಮಕ್ಕಳು ಸನ್ಮಾನಿಸಿ ಗೌರವ, ಪ್ರೀತಿ, ವಾತ್ಸಲ್ಯ, ಕೃತಜ್ಞತೆಗಳನ್ನು ಸಲ್ಲಿಸಿದ್ದು ತುಂಬಾ ಭಾವನಾತ್ಮಕ ವಾಗಿತ್ತು. ಸನ್ಮಾನಿತರುಗಳು ಹಾಗೂ ಗಣ್ಯರು ಹೃದಯ ಮುಟ್ಟುವ ಮಾತುಗಳನ್ನಾಡಿದರು.
     ೮. ವಿಚಾರ ವಿನಿಮಯ: ಮುಂದಿನ ಸಮಾವೇಶ, ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಾಯಿತು.     ಕಾರ್ಯಕ್ರಮದಲ್ಲಿ ಶ್ರೀಮತಿ ಕಾಶಿಬಾಯಿ, ಅಂಬಿಕಾ, ದೀಪಕ್, ಮುಂತಾದವರು ತಮ್ಮ ಸುಮಧುರ ಗಾಯನದಿಂದ ರಂಜನೆ ನೀಡಿದರು. ಒಳ್ಳೆಯ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.  ಪ್ರತಿ ವರ್ಷ ಡಿಸೆಂಬರ್ ತಿಂಗಳ ೨೫ ರಂದು ಇದೇ ರೀತಿ ಒಟ್ಟಿಗೆ ಸೇರಬೇಕೆಂದು ನಿರ್ಧರಿಸಲಾಯಿತು. ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.

ದ್ವಿತೀಯ ವಾರ್ಷಿಕ ಸಮಾವೇಶ - ೨೫-೧೨-೨೦೦೭
     ಕೆಳದಿಯ ಶ್ರೀ ರಾಮಮೂರ್ತಿ ಮತ್ತು ಸಹೋದರರ ಪ್ರಾಯೋಜಕತ್ವದಲ್ಲಿ ಕೆಳದಿಯಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದ ಎರಡನೆಯ ಸಮಾವೇಶ ಸಹ ಅವಿಸ್ಮರಣೀಯ ಅನುಭವವನ್ನು ಭಾಗವಹಿಸಿದ ಎಲ್ಲ ಬಂಧುಗಳಿಗೆ ನೀಡಿತು. ಬಂಧುಗಳು ಸಾಕ್ಷೀಕರಿಸಿದ ನಡಾವಳಿ ಹೀಗಿತ್ತು:
೧. ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭ
೨. ಶ್ರದ್ಧಾಂಜಲಿ: ಕಳೆದ ಸಾಲಿನಲ್ಲಿ ನಿಧನರಾದ ಶ್ರೀ ರಾಮಾಜೋಯಿಸ್, ನಿವೃತ್ತ ತಹಸೀಲ್ದಾರರು (ಶ್ರೀ ಗುಂಡಾಜೋಯಿಸರ ಸಹೋದರ) ಮತ್ತು ಶ್ರೀಮತಿ ರತ್ನಮ್ಮ ಸುಂದರರಾವ್ (ಶ್ರೀ ದಿ. ಸಾ.ಕ. ಲಿಂಗಣ್ಣಯ್ಯನವರ ಮಗಳು, ಖ್ಯಾತ ಸಾಹಿತಿ ದಿ. ಶ್ರೀ ಬ.ನ. ಸುಂದರರಾವ್ ರವರ ಪತ್ನಿ) ರವರಿಗೆ ಮೌನ ಆಚರಿಸಿ ಸ್ಮರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
೩. ಕವಿ ಮನೆತನದ ಹಿರಿಯ ಸಾಧಕ ಸಾಗರದ ಕವಿ ಲಿಂಗಣ್ಣಯ್ಯರ ಜೀವನ ಚರಿತ್ರೆಯನ್ನು ಆಂಗ್ಲ ಭಾಷೆಯಲ್ಲಿ ಶ್ರೀ ಕವಿ ವೆಂ. ಸುರೇಶರವರು ರಚಿಸಿದ್ದು 'ಕರ್ಮಯೋಗಿ ಕಲಾವಲ್ಲಭ ಎಸ್.ಕೆ. ಲಿಂಗಣ್ಣಯ್ಯ' ಎಂಬ ಹೆಸರಿನ ಈ ಪುಸ್ತಕದ ಬಿಡುಗಡೆ ಮಾಡಿ ಮಾತನಾಡಿದ ಶ್ರೀ ಸೂರ್ಯನಾರಾಯಣರಾವ್‌ರವರು ಕವಿ ಮನೆತನದ ಹಿರಿಮೆಯನ್ನು ಎತ್ತಿಹಿಡಿದ ಸಾಧಕರ ಪರಿಚಯವನ್ನು ಮಾಡಿಕೊಡುವ ಈ ಕೆಲಸ ಸ್ತುತ್ಯಾರ್ಹವೆಂದರು.
೪. ಸ್ವರಚಿತ ಕವನಗಳನ್ನು ರಚಿಸಿ ಹಾಡಿದ ಅನೇಕ ಬಂಧುಗಳು ಸಮಾವೇಶಕ್ಕೆ ಅರ್ಥ ನೀಡಿದರು.
೫. ಆಗಮಿಸಿದ್ದ ಗಣ್ಯರು, ಕುಟುಂಬಗಳ ಹಿರಿಯರು ಸುಯೋಗ್ಯ ಮಾರ್ಗದರ್ಶನ ನೀಡಿದರು.
೬. ಶ್ರೀ ಸಾ.ಕ. ಕೃಷ್ಣಮೂರ್ತಿರವರ ಅಧ್ಯಕ್ಷತೆಯಲ್ಲಿ ಶ್ರೀಯುತರಾದ ಕ.ವೆಂ. ನಾಗರಾಜ್, ಕೆ. ಶ್ರೀಕಂಠ, ಬಿ.ಎನ್. ತ್ಯಾಗರಾಜ್, ಸಾ.ಕ. ಗೋಪಿನಾಥ್, ರಾಮಮೂರ್ತಿ. ಕೆ.ಎನ್. ಶಿವಪ್ರಸಾದ್, ಶ್ರೀಮತಿಯರಾದ ಕೆ.ವಿ. ಲಲಿತಾಂಬ, ಕಾಶೀಬಾಯಿ ಯವರುಗಳು ಒಳಗೊಂಡಂತೆ ಕಾರ್ಯಕಾರಿ ಸಮಿತಿ ರಚನೆಗೆ ಒಪ್ಪಲಾಯಿತು.
೭. ಕವಿ ಕುಟುಂಬದ ಪತ್ರಿಕೆಯೊಂದನ್ನು ಹೊರತರಲು ನಿರ್ಧರಿಸಿ ಶ್ರೀ ಕ.ವೆಂ. ನಾಗರಾಜ್ ಸಂಪಾದಕರು, ಶ್ರೀ ಕವಿ ಸುರೇಶ ಸಹ ಸಂಪಾದಕರಾಗಿರುವಂತೆ ಶ್ರೀಯುತರಾದ ಸಾ.ಕ.ಗೋಪಿನಾಥ್, ಶಿವಪ್ರಸಾದ್, ಎಂ.ಎಸ್. ನಾಗೇಂದ್ರ, ಕೆ. ವೆಂಕಟೇಶ ಜೋಯಿಸ್, ಶ್ರೀಕಂಠ ಮತ್ತು ಶ್ರೀಮತಿ ಶೈಲಜಾ ಪ್ರಭಾಕರ್ ರವರುಗಳು ಒಳಗೊಂಡಂತೆ ಪತ್ರಿಕಾ ಸಮಿತಿ ರಚನೆಗೆ ಒಪ್ಪಲಾಯಿತು.
ಉತ್ತಮ ಉಪಾಹಾರ, ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮಧುರ ನೆನಪುಗಳೊಂದಿಗೆ ಬಂಧುಗಳು ವಿದಾಯ ಹೇಳಿದರು.
                                    * * * * *  * * * * *

ಸಂದೇಶ   

    ಕೆಳದಿ ಅರಸರ ಸತ್ಯನಿಷ್ಟ ಆಳ್ವಿಕೆಯಿಂದ ಐತಿಹಾಸಿಕ ಮನ್ನಣೆಯನ್ನು ಪಡೆದಿರುವ ಕೆಳದಿಯು, ಕವಿಲಿಂಗಣ್ಣ, ಕವಿ ವೆಂಕಣ್ಣ, ಕವಿ ಕೃಷ್ಣಪ್ಪ ಮೊದಲಾದ ಕವಿಗಳಿಂದಾಗಿ ಕವಿಗಳ ನಾಡೆಂದೇ ಪ್ರಸಿದ್ಧಿಯನ್ನು ಪಡೆದಿದೆ, ಈ ಕವಿ ಕುಟುಂಬದವರು ಹಲವೆಡೆ ಹರಡಿ ಹಂಚಿಹೋಗಿರುವ ಈ ಕವಿ ಮನೆತನದವರನ್ನು ಒಂದೆಡೆ ಸೇರಿಸಿ ವಾರ್ಷಿಕ ಸಮಾವೇಶ ನಡೆಸುತ್ತಿರುವುದು ಅಭಿನಂದನೀಯ.      ಕವಿ ಕುಟುಂಬಗಳ ಹಿಂದಿನ ಸಾಧಕರುಗಳ ಹಾಗೂ ಅವರ ಕೃತಿಗಳ ಪರಿಚಯ ಮಾಡಿಕೊಡುವ ಹಾಗು ಉತ್ತಮ ಸಾಧನೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಮುಖ್ಯ ಉದ್ದೇಶದಿಂದ ಕವಿಕಿರಣ ಎಂಬ ಪತ್ರಿಕೆಯನ್ನು ಪ್ರಾರಂಭಿಸುವ ತಮ್ಮ ಉದ್ದೇಶ ಸಾರ್ಥಕವಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.   
                                             - ಡಾ. ನಲ್ಲೂರು ಪ್ರಸಾದ್ ಆರ್.ಕೆ.  
                                                        ಅಧ್ಯಕ್ಷರು,
                                           ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. 
***********************

 ಅಭಿನಂದನೆ

     ಬೆಂಗಳೂರಿನ ಶ್ರೀ ಎಂ.ಎಸ್. ನಾಗೇಂದ್ರ ಮತ್ತು ಕುಟುಂಬ ವರ್ಗದವರು 28-12-2008ರಂದು ಬೆಂಗಳೂರಿನಲ್ಲಿ ನಡೆಯುವ ತೃತೀಯ ವಾರ್ಷಿಕ ಸಮಾವೇಶದ ಆಯೋಜಕರಾಗಿದ್ದು ಅವರಿಗೆ ಕವಿಮನೆತನದ ಬಂಧು-ಬಳಗದವರ ಅಭಿನಂದನೆಗಳು.
**************************
 -ಪುಟಗಳು - 7,8-
***************************************

ಲಿಂಗಣ್ಣ ಕವಿಯ
ಕೆಳದಿ ನೃಪವಿಜಯ

ಗದ್ಯಾನುವಾದ: ಕೆ. ಗುಂಡಾಜೋಯಿಸ್

ಉಪೋದ್ಘಾತ:     ಕರ್ನಾಟಕದ ಹಲವಾರು ಸಂಸ್ಥಾನಗಳಲ್ಲಿ ಕೆಳದಿಯು ಪ್ರಮುಖವಾದುದಾಗಿದೆ. ಕ್ರಿ.ಶ.೧೫ನೆಯ ಶತಮಾನದಲ್ಲಿ ಜನಿಸಿದ ಈ ಪಾಳೆಯಪಟ್ಟು ೨೫೦ ವರ್ಷಗಳವರೆಗೂ ಬಲಿಷ್ಠವಾಗಿ ಆಳಿದ ರಾಜ್ಯವೆನಿಸಿತು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕೆಳದಿಯು ಹಿಂದೂ ತತ್ವ ಹಾಗೂ ಸಂಸ್ಕೃತಿಯ ರಕ್ಷಣೆಯ ಸ್ಥಾನವನ್ನು ವಹಿಸಿಕೊಂಡಿತು. ಈ ರಾಜ್ಯವು ತನ್ನ ಉನ್ನತಿಯ ಕಾಲದಲ್ಲಿ ಮೈಸೂರಿಗಿಂತಲೂ ಅಧಿಕ ವಿಸ್ತಾರವನ್ನು ಒಳಗೊಂಡ ಸಂಪದ್ಭರಿತ ರಾಜ್ಯವಾಗಿ ಮೆರೆಯಿತು.
     ಕೆಳದಿ ಅರಸರ ವಂಶಪರಂಪರೆಯನ್ನು ಕುರಿತು ರಚಿಸಿದ ಕೆಳದಿ ನೃಪವಿಜಯವು ಸಮಕಾಲೀನ ಕೃತಿಗಳಲ್ಲಿ ಶ್ರೇಷ್ಠ ಐತಿಹಾಸಿಕ ಆಕರ ಗ್ರಂಥವೆನಿಸಿದೆ.
     ಕೆಳದಿ ನಾಯಕರ ಚರಿತ್ರೆಯನ್ನು ಯಥಾವತ್ತಾಗಿ ನಿರೂಪಿಸುವ ಕೆಳದಿ ನೃಪವಿಜಯವು ೧೨ ಆಶ್ವಾಸಗಳುಳ್ಳ ಚಂಪೂಗ್ರಂಥ.
ಇದು ಕಂಠೀರವ ನರಸರಾಜ ವಿಜಯ ಹಾಗೂ ಚಿಕ್ಕದೇವರಾಜ ವಂಶಾವಳಿಗಳಂತೆ ಐತಿಹಾಸಿಕ ಪ್ರಾಮುಖ್ಯವುಳ್ಳದ್ದು.
     ಕ್ರಿ.ಶ. ೧೮ನೆಯ ಶತಮಾನದಲ್ಲಿ ಈ ಕೃತಿಯನ್ನು ರಚಿಸಿದ ಕೆಳದಿ ಅರಸರ ಆಸ್ಥಾನಕವಿ ಲಿಂಗಣ್ಣ, ಆಸ್ಥಾನದಲ್ಲಿದ್ದುಕೊಂಡು ರಚನೆ ಮಾಡಿರುವುದರಿಂದ ಈ ಐತಿಹಾಸಿಕ ಕೃತಿಯು ಇತಿಹಾಸಜ್ಞರಿಗೆ ಮಹತ್ವಪೂರ್ಣ ಆಕರ ಗ್ರಂಥವೆನಿಸಿದೆ.
     ಕಾವ್ಯಾಂಶಕ್ಕಿಂತಲೂ ಚಾರಿತ್ರಿಕಾಂಶಗಳೇ ಹೆಚ್ಚಾಗಿರುವ ಈ ಕೃತಿಯಲ್ಲಿ ಕವಿಯು ಕೆಳದಿ ಅರಸರ ಸಮಗ್ರ ಪರಿಚಯವನ್ನು ನೀಡಲು ಪ್ರಯತ್ನಿಸಿ, ಪ್ರಾಸಂಗಿಕವಾಗಿ ಚಿತ್ರದುರ್ಗದ ನಾಯಕರು, ಬೇಲೂರ ನಾಯಕರು, ವಿಜಯನಗರದ ಚಕ್ರವರ್ತಿಗಳು, ಷಾಹಿ ರಾಜರು, ಮೈಸೂರು ಒಡೆಯರು, ತರಿಕೆರೆಯ ನಾಯಕರು, ದೆಹಲಿಯ ಬಾದಷಹರು, ಅಹಮದ್ ನಗರದ ನಿಜಾಂಷಹನೇ ಮುಂತಾದವರು, ಬಿಜಾಪುರದವರು, ಸೋದೆ, ಗೇರುಸೊಪ್ಪ, ಬಿಳಗಿ ಇತ್ಯಾದಿ ಅರಸರ ಚರಿತ್ರೆಗಳು, ಶ್ರೀ ಶೃಂಗೇರಿ ಮಠದ ಪರಂಪರೆಯ ಗುರುಗಳು ಮುಂತಾದ ಚರಿತ್ರೆಗಳನ್ನು ಹಾಸುಹೊಕ್ಕಾಗಿ ಹೆಣೆದಿದ್ದಾನೆ. ಶಾಸನಾದಿ ಸಂಶೋಧನೆಗಳಲ್ಲಿ ಹಾಗೂ ಚಾರಿತ್ರಿಕಾಂಶ ಅಧ್ಯಯನದ ಉಲ್ಲೇಖಗಳಲ್ಲಿ ಇವುಗಳನ್ನು ವಿವೇಚಿಸಲಾಗಿ ಈತನು ಹೇಳಿದ ಐತಿಹಾಸಿಕ ಸಂಗತಿಯು ಸಾಕ್ಷೀಭೂತವಾಗಿ ಸತ್ಯವೆಂದು ಹೇಳುವಂತಿವೆ.
     ಕೆಳದಿ ನೃಪವಿಜಯದಂತೆ ಕೆಳದಿನಾಯಕ ಬಸವರಾಜನಿಂದ ರಚಿಸಲ್ಪಟ್ಟ ಶಿವತತ್ವರತ್ನಾಕರವು ಸಂಸ್ಕೃತದಲ್ಲಿ ವಿಶ್ವಕೋಶವೆನಿಸಿದೆ. ಕೆಳದಿ ಅರಸರ ಚರಿತ್ರೆಯನ್ನು ಪ್ರಬುದ್ಧಾತ್ಮಕವಾಗಿ ಹಾಗೂ ಪ್ರಾಮಾಣಿಕ ರೀತಿಯಲ್ಲಿ ರಚಿಸಿರುವ ಕೃತಿಯಲ್ಲಿ ಶಿವತತ್ವರತ್ನಾಕರಕ್ಕಿಂತ ಕೆಳದಿ ನೃಪವಿಜಯವೇ ಅಗ್ರಮಾನ್ಯತೆ ಪಡೆದಿದೆ.
     ಕೆಳದಿ ಸರಕಾರದ ವರದಿಯೋಪಾದಿಯಲ್ಲಿ ಚಾರಿತ್ರಿಕಾಂಶಗಳನ್ನೊಳಗೊಂಡು ಪ್ರಾಮಾಣಿಕ ಗ್ರಂಥವೆನಿಸಿದ ಈ ಕೃತಿ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯಕ್ಕಷ್ಟೇ ಸೀಮಿತ ಕೊಡುಗೆಯಲ್ಲದೆ ಇಡೀ ಭಾರತದ ಇತಿಹಾಸಕ್ಕೆ ಮಾರ್ಗದರ್ಶನ ನೀಡುವ ಕೈದೀವಿಗೆಯ ಕೃತಿಯಾಗಿದೆ.
          
ತಿಳಿಯಲ್ಕೀ ಕೃತಿನಾಮಂ
           ಕೆಳದೀನೃಪವಿಜಯಮೆಂದಿದಕ್ಕಧಿನಾಥಂ
           ಕೆಳದಿಪ ರಾಮೇಶ್ವರನಿದ

           ನೊಲಿದುಸುರ್ದಂ ವೆಂಕಪಾತ್ಮಜಂ ಲಿಂಗಬುಧಂ

            ಪ್ರಾಕೃತ ಸಂಸ್ಕೃತ ಮೃದು ಭಾ
            ಷಾಕವನದಿನಧಿಕರಮ್ಯಮಾಗಿರ್ಪುದರಿಂ
            ಶ್ರೀಕೆಳದಿ ನೃಪವಿಜಯಮೆನಿ
            ಪೀ ಕಾವ್ಯಂ ಸೇವ್ಯಮೆನಿಸಿ ಶೋಭಿಸುತಿರ್ಕಂ
         

                     
ಪ್ರಥಮಾಶ್ವಾಸಂ
                
  ಈ ಕೃತಿಗಾದಿಯಾವುದೆನಲುಜ್ವಲ ತುಂಗತರಂಗಸಂಚರ
   ದ್ಭೀಕರಮೀನ ಕರ್ಕಟಕೂರ್ಮ ಕನತ್ಸಲಿಲೇಭನಕ್ರದ
   ರ್ವೀಕರ ಶಿಂಶುಮಾರ ಮುಖವಾಶ್ಚರಸಂಚಯಚಾಲನೋಚ್ಚಲ
   ಚ್ಛೀಕರ ಫೇನ ಕಂಬು ಕುಲರತ್ನಗಳಿಂದೆಸೆದತ್ತು ಸಾಗರಂ              ೧

        ಈ ಕೃತಿಗೆ ಮೂಲ ಯಾವುದು ಎನ್ನುವ ಪ್ರಶ್ನೆಗೆ ಉತ್ತರವಾಗಿ ಸಮುದ್ರವು ಶೋಭಿಸುತ್ತಿದೆ. ಆ ಸಮುದ್ರವು ಎತ್ತರವಾಗಿ ಹೊಳೆಯುವ ಅಲೆಗಳ ಮೇಲೆ ಸಂಚರಿಸುವ ಭಯಂಕರವಾದ ಮೀನುಗಳು, ಏಡಿಗಳು, ಆಮೆಗಳು, ನೀರಾನೆಗಳು, ಮೊಸಳೆಗಳು, ಹಾವುಗಳು ಸಮುದ್ರವ್ಯಾಘ್ರಿ ಮುಂತಾದ ಜಲಚರಗಳ ಸಮೂಹದ ಓಡಾಟದಿಂದ ಹಾರುವ ತುಂತುರು ಹನಿಗಳಿಂದಲೂ, ನೊರೆಗಳಿಂದಲೂ, ಶಂಖಗಳಿಂದಲೂ, ರತ್ನಗಳಿಂದಲೂ ಮೆರೆಯುತ್ತಿತ್ತು.
         ಹರನ ನಿಷಂಗವಚ್ಯುತನ ಪಾಸು ಜಲೇಶನ ರಾಜಮಂದಿರಂ
         ನಿರುಪಮಮಪ್ಪ ಲಕ್ಷ್ಮಿಯ ತವರ್ಮನೆ ಚಂದ್ರನ ಜನ್ಮಭೂಮಿ ಭೂ
         ಧರವರಪುತ್ರನುದ್ಘಕವಚಂ ಬಡಬಾನಲಪಾನಪಾತ್ರಮ
      ತ್ಯುರುತರುಮಪ್ಪ ಸನ್ಮಣಿಗಳಾಗರಮೊಪ್ಪಿದುದೈದೆ ಸಾಗರಂ         ೨

     ಆ ಸಮುದ್ರವು ಶಿವನ ಬತ್ತಳಿಕೆ, ವಿಷ್ಣುವಿನ ಹಾಸಿಗೆ, ವರುಣನ ಅರಮನೆ, ಲಕ್ಷ್ಮೀದೇವಿಯ ತವರುಮನೆ, ಚಂದ್ರನ ಜನ್ಮಸ್ಥಾನ, ಹಿಮವಂತನ ಮಗ ಮೈನಾಕನ ರಕ್ಷಾಕವಚ, ವಡಬಾಗ್ನಿಯ ಕುಡಿಯುವ ಜಲಪಾತ್ರೆ ಮತ್ತು ಶ್ರೇಷ್ಠವಾದ ಒಳ್ಳೆಯ ರತ್ನಗಳ ಭಂಡಾರವಾಗಿ ಶೋಭಿಸುತ್ತಿದೆ.
            
ವಳಿತೋಳ್ ಸುಳಿ ಚಕ್ರಂ ನೊರೆ
             ಯೆಳೆನಗೆ ಬೊಬ್ಬುಳಿಗಳುದರದೊಳಗಣಜಾಂಡಾ
             ವಳಿ ನೀರ್ತನುರುಚಿ ಬಡಬಾ
             ನಲನಂಬರಮಾಗಲಬುಧಿ ಹರಿಯವೊಲೆಸೆಗುಂ                       ೩
 

    ಸಮುದ್ರವು ಹರಿಯ ಹಾಗೆ ಶೋಭಿಸುತ್ತದೆ. ಅಲೆಗಳೇ ತೋಳುಗಳು; ಸುಳಿಯೇ ಚಕ್ರ, ನೊರೆಯೇ ಮಂದಹಾಸ, ನೀರುಗುಳ್ಳೆಗಳೇ ಹೊಟ್ಟೆಯೊಳಗಿನ ಬ್ರಹ್ಮಾಂಡ ಸಮೂಹ, ನೀರೇ ದೇಹದ ಕಾಂತಿ, ಬಡಬಾಗ್ನಿಯೇ ಪೀತಾಂಬರ. ಹೀಗೆ ಹರಿಯ ಲಕ್ಷಣಗಳು ಸಮುದ್ರದಲ್ಲಿವೆ.
    
ವ:: ಮತ್ತಮದಲ್ಲದಾ ಮಹಾರ್ಣವಂ ಸಾರ್ವಭೌಮವಿಭವದಂತಪರಿಮಿತ ವಾಹಿನೀ ಸಂಗತಮುಂ, ನಂದಗೋಕುಲದಂತೆ ಕಂಸಾರಾತಿರಮಣೀಯಮುಂ ವೈನತೇಯನಂತೆ ವಿಲಸದ್ವಿಷ್ಣು ಪದಾವಲಂಬಿಯುಂ, ವಸಂತಸಮಯದಂತುಜ್ವಲತ್ಕಳಿಕಾಪ್ರತಾನ ಶೋಭಿತಮುಂ, ಜ್ಯೋತಿಶ್ಚಕ್ರದಂತೆ ಮನೋಹರಮೀನ ಮಿಥುನ ಕರ್ಕಾಟಕ ರಾಶಿಸಮಾವೃತಂ, ಮಾರ್ತಾಂಡನಂತುಜ್ವಲಾಬ್ಜ ಕದಂಬ ಸಮುಚ್ಛ್ರಯಕಾರಿಯುಂ, ಯೋಗಿಜನದಂತೆ ಮುಕ್ತಾಮಯಮುಂ ಕಂದರ್ಪನಂತನವರತಮನುಪಮಾಗಣ್ಯ ಲಾವಣ್ಯ ಸ್ವಭಾವಮುಂ, ಶಶಾಂಕೋದಯದಂತೆ ಕುವಲಯೋತ್ಸವಕಾರಿಯುಮೆನಿಸಿ ವಿಭ್ರಾಜಿಸುತ್ತಿರ್ದುದಂತುಮಲ್ಲದೆಯುಂ    
     ಇಷ್ಟು ಮಾತ್ರವಲ್ಲದೆ ಆ ದೊಡ್ಡ ಸಮುದ್ರವು ಚಕ್ರವರ್ತಿಯ ವೈಭವದ ಹಾಗೆ ಅಸಂಖ್ಯಾತವಾಹಿನಿ (ನದಿ ಮತ್ತು ಸೈನ್ಯ) ಗಳಿಂದ ಕೂಡಿದೆ; ನಂದಗೋಕುಲದ ಹಾಗೆ ಕಂಸವಿರೋಧಿ (ವಿಷ್ಣು ಮತ್ತು ಕೃಷ್ಣ) ಇರುವುದರಿಂದ ಸುಂದರವಾಗಿದೆ. ಗರುಡನ ಹಾಗೆ ಮೆರೆಯುವ ವಿಷ್ಣುಪದವನ್ನು ಹೊತ್ತುಕೊಂಡಿದೆ. ವಸಂತಕಾಲದ ಹಾಗೆ ಪ್ರಕಾಶಿಸುವ ಕಲಿಕೆಗಳಿಂದ (ಮತ್ತು ಮೊಗ್ಗು) ಶೋಭಿಸುತ್ತದೆ. ಜ್ಯೋತಿಷ್ಚಕ್ರದ ಹಾಗೆ ಮನೋಹರವಾದ ಮೀನ-ಮಿಥುನ-ಕರ್ಕಾಟಕ ರಾಶಿಗಳಿಂದ (ಮೀನುಗಳ ಜೋಡಿಗಳು ಏಡಿಗಳ ಗುಂಪು ಮತ್ತು ಮೀನಾದಿ ರಾಶಿಗಳು) ಆವರಿಸಲ್ಪಟ್ಟಿದೆ. ಸೂರ್ಯನ ಹಾಗೆ ಹೊಳೆಯುವ ಅಬ್ಜ (ಚಂದ್ರ ಮತ್ತು ತಾವರೆ) ಸಮೂಹದ ಉನ್ನತಿಯನ್ನು ಮಾಡುತ್ತವೆ. ಯೋಗಿಗಳ ಹಾಗೆ ಮುಕ್ತಾಮಯವಾಗಿದೆ (ಮುತ್ತಿನಿಂದ ಕೂಡಿದೆ; ರೋಗವಿಲ್ಲದಾಗಿದೆ) ಮನ್ಮಥನ ಹಾಗೆ ಯಾವಾಗಲೂ ಅಸಮಾನವೆಂದು ಲೆಕ್ಕಿಸಲ್ಪಡುವ ಲಾವಣ್ಯ (ಸೌಂದರ್ಯ ಮತ್ತು ಉಪ್ಪು) ಸ್ವಭಾವವುಳ್ಳದ್ದಾಗಿದೆ. ಚಂದ್ರೋದಯದ ಹಾಗೆ ಕುವಲಯಕ್ಕೆ (ಭೂಮಂಡಲಕ್ಕೆ ಮತ್ತು ನೈದಿಲೆಗೆ) ಆನಂದವನ್ನು ಉಂಟು ಮಾಡುತ್ತಾ ಶೋಭಿಸುತ್ತದೆ. ಅಲ್ಲದೆ -                          

                     ತಿಳಿಯಲ್ಕತಿ ಚಂಚಲೆ ಮಗ
                     ಳಳಿಯಂ ಪೂಗಣ್ಣನಾತ್ಮಜಂ ಕ್ಷಯಿ ಮೊಮ್ಮಂ
                    ಒಡಲಿಲಿಯೆನುತಂ ಚಿಂತಿಸಿ
                    ಸಲೆ ಸುಯ್ಯವೊಲಾದುದಬ್ಧಿಯದ್ಭುತರಾವಂ                  ೪

     ಸಮುದ್ರ ರಾಜನ ಮಗಳು ಲಕ್ಷ್ಮಿ ಅತ್ಯಂತ ಚಂಚಲೆ ಎನಿಸಿದವಳು; ಅಳಿಯನಾದ ವಿಷ್ಣುವು ಹೂಗಣ್ಣಿನವನು (ತಾವರೆ ಯಂತ ಕಣ್ಣುಳ್ಳವನು), ಮಗನಾದ ಚಂದ್ರ ಕ್ಷಯ ರೋಗಿ, ಮೊಮ್ಮಗ ಮನ್ಮಥನಿಗೆ ದೇಹವೇ ಇಲ್ಲ (ಅನಂಗ), ಹೀಗಾಯಿತೆಂದು ಚಿಂತಿಸುತ್ತಾ ನಿಟ್ಟುಸಿರು ಬಿಡುವ ರೀತಿಯಲ್ಲಿ ಸಮುದ್ರದ ಅದ್ಭುತವಾದ ಗರ್ಜನೆಯಿದೆ.
               ಅಮರರ್ಗಮೃತಾಶನರೆಂ
               ದುಮೆಯಾಣ್ಯಗೆ ನೀಲಕಂಠನೆಂದಚ್ಯುತಗಂ
               ಕ್ರಮದಿಂ ಕಮಲಾಪತಿಯೆಂ
               ದಮರ್ದಿರೆ ಪೆಸರಿತ್ತ ಜಲಧಿಯೇಂ ರಂಜಿಸಿತೋ             ೫
   

  ಈ ಸಮುದ್ರದ ದೆಸೆಯಿಂದ ದೇವತೆಗಳು ಅಮೃತವನ್ನುಂಡು ಅಮರರಾದರು. ಶಿವನಿಗೆ (ಇದರಲ್ಲಿ ಹುಟ್ಟಿದ ವಿಷವನ್ನು ಕುಡಿದಿದ್ದರಿಂದ) ನೀಲಕಂಠನೆಂಬ ಹೆಸರುಂಟಾಯಿತು, ವಿಷ್ಣುವಿಗೆ (ಮಗಳಾದ ಲಕ್ಷ್ಮಿಯನ್ನು ಕೊಟ್ಟುದರಿಂದ) ಲಕ್ಷ್ಮೀಪತಿಯೆಂದು ಹೆಸರಾಯಿತು. ಹೀಗೆ ದೇವತೆಗಳಿಗೂ ಹರಿಹರರಿಗೂ ಒಳ್ಳೆಯ ಹೆಸರನ್ನು ಕೊಟ್ಟು ಸಮುದ್ರವು ಎಷ್ಟೊಂದು ಹಿರಿಯತನದಿಂದ ಮೆರೆಯುತ್ತಿದೆ!
                
ಇಂತೆಸೆವಂಬುಧಿಮಧ್ಯದೊ
                 ಳಂ ತವೆ ಕಂಗೊಳಿಸುತಿರ್ಪ ಜಂಬೂದ್ವೀಪಾ
                 ಬ್ಜಾಂತರದ ಚಾರುಕರ್ಣಿಕೆ
                 ಯಂತಿರೆ ಕನಕಾಚಲಂ ವಿರಾಜಿಸುತಿರ್ಕುಂ                  ೬
    

      ಈ ರೀತಿ ಶೋಭಿಸುವ ಸಮುದ್ರದ ಮಧ್ಯದಲ್ಲಿ ವಿರಾಜಿಸುತ್ತಿದ್ದ ಜಂಬೂದ್ವೀಪವೆಂಬ ಕಮಲದ ನಡುವೆ ಇರುವ ಮನೋಹರವಾದ ದಳ ಅಥವಾ ಮೊಗ್ಗಿನಂತೆ ಮೇರು ಪರ್ವತವು ಶೋಭಾಯಮಾನವಾಗಿತ್ತು.
                  ಜಲಜಜ ವಿಷ್ಣುವಿವಾದವ
                  ನಿಲಿಸಲ್ ಕಲ್ಪಾಂತದೆಡೆಯೊಳೊಗೆದತಿ ತೇಜೋ
                  ಜ್ವಲ ದಿವ್ಯಮಹಾಲಿಂಗದ
                 ನಿಲವೆನೆ ಚೆಲ್ವಾಯ್ತು ಕಣ್ಗೆ ಕಾಂಚನಶೈಲಂ                   ೭
 

    ಹಿಂದಿನ ಕಲ್ಪದಲ್ಲಿ ಬ್ರಹ್ಮ ವಿಷ್ಣು ಇವರಿಬ್ಬರ ವಿವಾದವನ್ನು ನಿಲ್ಲಿಸಲು ಒಡಮೂಡಿದ ಅಸಮಾನವಾದ ಹಾಗೂ ಶ್ರೇಷ್ಠವಾದ ತೇಜೋರಾಜಿತ ಮಹಾಲಿಂಗದ (ಈಶ್ವರನ) ಹಾಗೆ ಕಾಂಚನಶೈಲವು ಕಣ್ಣಿಗೆ ರಂಜಿಸುತ್ತಿತ್ತು.
               ಮಿಸುಪಾ ಮೇರುವ ತೆಂಕಣ
               ದೆಸೆಯಳ್ಪೂರ್ವಾಪರಾಂಬುನಿಧಿಗಳನವಗಾ
               ಹಿಸಿ ನಭಮಂ ತುಡುಕುತೆ ಕ
               ಣ್ಗೆಸೆದುದು ಹಿಮವನ್ನಗೇಂದ್ರಮುರುಗುಣಸಾಂದ್ರಂ            ೮
    

 ಆ ಮೇರು ಪರ್ವತದ ದಕ್ಷಿಣದಿಕ್ಕಿನಲ್ಲಿ ಪೂರ್ವ ಪಶ್ಚಿಮ ಸಮುದ್ರಗಳನ್ನು ತಾಗಿ, ಆಕಾಶವನ್ನು ತುಡುಕುತ್ತಿರುವ ಹಿಮಾಲಯ ಪರ್ವತವು ಉತ್ತಮಗುಣಯುಕ್ತವಾಗಿ ಶೋಭಿಸುತ್ತಿತ್ತು.
                                                                 . .  (ಮುಂದುವರೆಯುವುದು)
**************************
-ಪುಟಗಳು:9,10,11-
********************************************
    
ಕೆಳದಿ ಕವಿಮನೆತನದ ಸಮಕಾಲೀನರು -೧
ಕವಿ ವೆಂಕಟಸುಬ್ಬರಾವ್ - ಸೀತಮ್ಮ
    ಕವಿ ವೆಂಕಟಸುಬ್ಬರಾವ್ ರವರು ಸಮಕಾಲೀನ ಕವಿ ಕುಟುಂಬಗಳ ಸದಸ್ಯರುಗಳ ಪೈಕಿ ಅತ್ಯಂತ ಹಿರಿಯ ಸದಸ್ಯರು. ೧೨-೦೧-೧೯೨೫ರಲ್ಲಿ ಜನಿಸಿ ಧರ್ಮಪತ್ನಿ ಸೀತಮ್ಮರವರನ್ನು ೨೩-೦೫-೧೯೪೯ರಲ್ಲಿ ವಿವಾಹವಾಗಿ ಸಾರ್ಥಕ ಬದುಕು ನಡೆಸಿರುವ ಇವರು ಸದ್ಯದಲ್ಲಿಯೇ ೬೦ ವರ್ಷಗಳ ದಾಂಪತ್ಯ ಜೀವನ ಪೂರ್ಣಗೊಳಿಸಲಿದ್ದಾರೆ. ಕವಿಕಿರಣ ಬಳಗ ಇವರುಗಳಿಗೆ ಸುದೀರ್ಘ ಆಯಸ್ಸು ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತದೆ; ಹಾಗೂ ಇವರ ಮಾರ್ಗದರ್ಶನ ಬಯಸುತ್ತದೆ.
     ಇವರ ಪರಿಚಯ ಲೇಖನ ಬರೆದಿರುವ ಶ್ರೀ ಹೆಚ್. ಎಸ್. ಗೋಪಾಲಕೃಷ್ಣರವರು ಶ್ರೀಮತಿ ಸೀತಮ್ಮ ವೆಂಕಟಸುಬ್ಬರಾವ್ ರವರ ತಮ್ಮ. ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಶಿರಸ್ತೆದಾರರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆ ನಿಂತಿದ್ದಾರೆ.
*************************
ಹೀಗಿದ್ದಾರೆ ನಮ್ಮ ಅಕ್ಕ - ಭಾವ    

     ನನ್ನ ಅಕ್ಕ ಸೀತಮ್ಮನನ್ನು ಕವಿ ಸುಬ್ರಹ್ಮಣ್ಯಯ್ಯರವರ ಏಕೈಕ ಪುತ್ರ ಕೆ. ವೆಂಕಟಸುಬ್ಬರಾವ್‌ರವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ನ್ಯಾಯಾಂಗ ಇಲಾಖೆಯಲ್ಲಿ ಕಾಪಿಯಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯಯ್ಯನವರಿಗೆ ಇಬ್ಬರು     ಹೆಣ್ಣು ಮಕ್ಕಳೂ  - ಸೀತಾಲಕ್ಷ್ಮಮ್ಮ ಮತ್ತು ನಾಗರತ್ನಮ್ಮ - ಇದ್ದಾರೆ.
     ಸುಬ್ರಹ್ಮಣ್ಯಯ್ಯನವರು ತಮ್ಮ ಮಗ ಹುಟ್ಟಿದ ಮೂರು ತಿಂಗಳಿಗೇ ಕೊಪ್ಪವನ್ನು ಬಿಟ್ಟು ದಾವಣಗೆರೆಗೆ ಬಂದು ನೆಲೆಸಿದರು. ವೆಂಕಟಸುಬ್ಬರಾಯರು ದಾವಣಗೆರೆಯಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ವಿದ್ಯಾಭ್ಯಾಸ ಮಾಡಿ ಮುಂದೆ ಕಾಲೇಜು ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೇ ಹೋಗಬೇಕಾಗಿದ್ದರಿಂದ ಅನಾನುಕೂಲತೆಯಿಂದ ಮುಂದೆ ಓದಲಾಗಲಿಲ್ಲ. ನೌಕರಿಗೆ ಸೇರಿ ಆಸರೆಯಾಗಿರಬೇಕೆಂದು ತಂದೆ ಬಯಸಿದ್ದರು. ಅದರಂತೆ ಆಗ ಹರಿಹರದಲ್ಲಿ ಬೀಡು ಬಿಟ್ಟಿದ್ದ ಬ್ರಿಟಿಶ್ ಮಿಲಿಟರಿ ಕ್ಯಾಂಪ್‌ನಲ್ಲಿ ಸಿವಿಲ್ ವಿಭಾಗದಲ್ಲಿ ಕ್ಲರ್ಕ್ ಆಗಿ ಸ್ವಲ್ಪ ಸಮಯ ಕೆಲಸ ಮಾಡಿದರು.  ತಂದೆಗೆ ಮಿಲಿಟರಿ ಸೇವೆ ಮಾಡುವುದು  ಇಷ್ಟವಿಲ್ಲದ್ದರಿಂದ   ನ್ಯಾಯಾಂಗ ಇಲಾಖೆಯಲ್ಲಿ     ೨೨-೬-೧೯೪೫ರಲ್ಲಿ ಶಿವಮೊಗ್ಗದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಗುಮಾಸ್ತರಾಗಿ ನೇಮಕಗೊಂಡು ನಂತರದಲ್ಲಿ ನ್ಯಾಯಾಂಗ ಇಲಾಖೆಯ ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡು ಶಿರಸ್ತೇದಾರ್ ಹುದ್ದೆಯವರೆಗೆ ಬಡ್ತಿ ಹೊಂದಿ ಹಲವು ಊರುಗಳಲ್ಲಿ -ಅಂದರೆ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಭದ್ರಾವತಿ, ನರಸಿಂಹರಾಜಪುರ, ಮೈಸೂರು, ಹಾಸನ, ಇತ್ಯಾದಿ - ಕೆಲಸ ಮಾಡಿದ್ದಾರೆ. ನ್ಯಾಯಾಂಗ ಇಲಾಖೆಯಲ್ಲಿ ಸಿವಿಲ್, ಕ್ರಿಮಿನಲ್ ವಿಭಾಗದ ಎಲ್ಲಾ ಕೆಲಸಗಳಲ್ಲಿ ಹೆಚ್ಚಿನ ರೀತಿಯಲ್ಲಿ ಪರಿಣಿತಿ ಹೊಂದಿದ್ದು, ಸಿಬ್ಬಂದಿಗಳಿಗೆ ನ್ಯಾಯಾಂಗ ಇಲಾಖೆಯ ಎಲ್ಲಾ ಕೆಲಸಗಳನ್ನು ಹೇಳಿಕೊಡುತ್ತಿದ್ದರಲ್ಲದೆ  ನ್ಯಾಯಾಧೀಶರುಗಳೂ ಕೆಲವು ಸಂದರ್ಭಗಳಲ್ಲಿ ಇವರ ಸಲಹೆ ಪಡೆಯುತ್ತಿದ್ದರು.
     ಅವರ ೨೫ನೆಯ ವಯಸ್ಸಿನಲ್ಲಿ ನನ್ನಕ್ಕ ಅಂದರೆ ಹಳೇಬೀಡು ಶ್ಯಾನುಭೋಗರಾಗಿದ್ದ ಶ್ರೀಯುತ ಹೆಚ್. ಪಿ. ಸುಬ್ಬರಾಯರ ಜೇಷ್ಠ ಪುತ್ರಿ ಸೀತಮ್ಮನನ್ನು ವಿವಾಹವಾದರು. ಸೀತಮ್ಮ ಸರಳ ಸುಂದರವಾಗಿದ್ದು ವೆಂಕಟಸುಬ್ಬರಾಯರಿಗೆ ಅನುರೂಪಳಾಗಿದ್ದು, ಒಳ್ಳೆಯ ಗೃಹಿಣಿ. ಮಮತಾಮಯಿ. ವೆಂಕಟಸುಬ್ಬರಾಯರಿಗೆ ಆಗ ತಮ್ಮ ಕಡೆಯ ಬಂಧು ಬಳಗ ಜಾಸ್ತಿ ಇರಲಿಲ್ಲ. ಹೆಂಡತಿಯ ತವರುಮನೆ ಅಂದರೆ ನಮ್ಮ ಕಡೆಯ ಬಳಗದವರನ್ನು ಬಹಳ ಹಚ್ಚಿಕೊಂಡಿದ್ದರು. ನಮ್ಮ ತಂದೆ ತಾಯಿಗೆ ಎಂಟು ಜನ ಗಂಡು ಮಕ್ಕಳು ಮತ್ತು ನಾಲ್ಕು ಜನ ಹೆಣ್ಣು ಮಕ್ಕಳು ಇರುವ ದೊಡ್ಡ ಕುಟುಂಬವಿದ್ದರೂ, ಶ್ರೀಯುತರು ಮಾವನಿಗೆ ಹಿರಿಯ ಮಗನಂತೆ ಇದ್ದು, ಅವರ ಕುಟುಂಬದ ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದು ನಮಗೆ ಹೆಮ್ಮೆಯ ವಿಷಯ. ನಾನು ಮತ್ತು ನನ್ನ ತಮ್ಮ ಜಯಶಂಕರನೇ ಇದಕ್ಕೆ ನಿದರ್ಶನ. ನಮ್ಮಿಬ್ಬರ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತುಕೊಂಡು ಸರ್ಕಾರಿ ನೌಕರಿ ದೊರೆಯುವವರೆಗೆ ಜೀವನಕ್ಕೆ ದಾರಿಯಾಗುವಂತೆ ಉಪಕಾರ ಮಾಡಿದ್ದಾರಲ್ಲದೆ, ನನ್ನ ಮದುವೆಯ ಉಸ್ತುವಾರಿಯನ್ನೂ ಅವರೇ ಹೊತ್ತು ಕೊಂಡು ನಿರ್ವಹಿಸಿದರು. ಆ ವೇಳೆಗಾಗಲೇ ನಮ್ಮ ತಂದೆಯವರು ಕಾಲವಾಗಿದ್ದರು. ನಮ್ಮ ತಂದೆಯವರು ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಅವರೇ ಆಶ್ರಯ ಕೊಟ್ಟು ಉಪಚರಿಸಿದ ಮಹಾನುಭಾವರು. ನನ್ನ ಮದುವೆ ಪ್ರಭಾವತಿಯೊಂದಿಗೆ ಆಗಿದ್ದು. ನಮ್ಮಿಬ್ಬರನ್ನೂ ಅವರ ಮನೆಯಲ್ಲೇ ಆಶ್ರಯ ಕೊಟ್ಟು ಒಂದು ವರ್ಷದವರೆಗೆ ಇಟ್ಟುಕೊಂಡಿದ್ದರು. ಅವರಿಗೆ ನರಸಿಂಹರಾಜಪುರಕ್ಕೆ ವರ್ಗವಾದ ಕಾರಣ ನಾನು ಬೇರೆ ಮನೆ ಮಾಡಬೇಕಾಯಿತು. ಆಗಲೂ ಅವರು ನಮ್ಮಿಬ್ಬರನ್ನು ಬಿಟ್ಟು ಹೋಗುವಾಗ ಅವರ ಮಕ್ಕಳನ್ನು ಬಿಟ್ಟು ದೂರ ಹೋಗುತ್ತಿರುವಷ್ಟೇ ದುಃಖಿಸಿದರು. ಅವರು ತಮ್ಮ ತಂಗಿಯ ಗಂಡ (ಭಾವ) ಕೃಷ್ಣಮೂರ್ತಿಯವರಿಗೂ ನ್ಯಾಯಾಂಗ ಇಲಾಖೆಯಲ್ಲಿ ನೌಕರಿ ಕೊಡಿಸಿ ಜೀವನಕ್ಕೆ ದಾರಿ ಮಾಡಿಕೊಟ್ಟರು. ನನ್ನ ತಂಗಿಯ ಗಂಡ ಸತ್ಯನಾರಾಯಣರವರಿಗೂ ಸಹ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಕೊಡಿಸಿ ಉಪಕಾರ ಮಾಡಿದರು.
     ಅವರ ಔದಾರ್ಯ, ವಿವೇಚನೆ, ಸಹಕಾರ, ಕಾರ್ಯತತ್ಪರತೆ, ಕರುಣೆ ಇವುಗಳನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಅವರು ಕರ್ತವ್ಯ ನಿರ್ವಹಿಸುವಾಗ ಹತ್ತಾರು ಜನರಿಗೆ ಕೆಲಸ ಕೊಡಿಸಿದ್ದನ್ನು ಪಡೆದವರು ಈಗಲೂ ಅವರನ್ನು ಸ್ಮರಿಸುತ್ತಿದ್ದಾರೆ. ಸ್ವಲ್ಪ ಮುಂಗೋಪದ ಸ್ವಭಾವದವರಾದರೂ ಮೃದು ಹೃದಯಿಗಳು.     ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬ ಮಗಳನ್ನು ಹೊಂದಿರುವ ಇವರು ಎಲ್ಲರಿಗೂ ವಿದ್ಯಾಭ್ಯಾಸ ಮಾಡಿಸಿ ವಿವಾಹಗಳನ್ನು ಮಾಡಿ ಎಲ್ಲರೂ ಒಳ್ಳೆಯ ಸ್ಥಿತಿಯಲ್ಲಿ ನೆಲೆಗೊಳ್ಳುವಂತೆ ಮಾಡಿದ್ದಾರೆ. ಹಿರಿಯ ಮಗ ನಾಗರಾಜ ತಹಸೀಲ್ದಾರ್ ಆಗಿದ್ದಾನೆ. ಮಗಳು ಲಲಿತಾಂಬಾ ವೆಂಕಟರಾಮಯ್ಯ ನ್ಯಾಯಾಂಗ ಇಲಾಖೆಯಲ್ಲಿ ಶೀಘ್ರಲಿಪಿಗಾರ್ತಿಯಾಗಿದ್ದು ಸ್ವಯಂ ನಿವೃತ್ತಿ ಪಡೆದವಳು ಎರಢನೆಯ ಮಗ ಸುರೇಶ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದು ಸ್ವಯಂ ನಿವೃತ್ತಿ ಪಡೆದು ಸಮಾಜ ಕಾರ್ಯಗಳಲ್ಲಿ ತೊಡಗಿದ್ದಾನೆ. ಮೂರನೆಯ ಮಗ ಶ್ರೀಧರ ಖಾಸಗಿ ವೃತ್ತಿಯಲ್ಲಿದ್ದಾನೆ. ಕೊನೆಯ ಮಗ ಅನಂತ ಅಮೆರಿಕಾದಲ್ಲಿ ಸಾಫ್ಟ್‌ವೇರ್ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದಾನೆ. ಒಳ್ಳೆಯ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಹೊಂದಿ ಅವರ ಅಭಿವೃದ್ಧಿಯನ್ನು ಕಾಣುತ್ತಾ ಸಂತೋಷದಿಂದ ಪತ್ನಿ ಸೀತಮ್ಮರೊಂದಿಗೆ ತುಂಬು ಜೀವನ ನಡೆಸುತ್ತಿದ್ದಾರೆ.
     ಶ್ರೀಯುತರ ಈ ಯಶಸ್ಸಿನ ಗುಟ್ಟಿಗೆ ಅವರ ಶ್ರೀಮತಿ ಸೀತಮ್ಮನವರ ಸಹಕಾರ, ಔದಾರ್ಯವೇ ಕಾರಣ. ತಾಳ್ಮೆ, ಸಹನೆ, ವಿವೇಕದ ಪ್ರತಿರೂಪವಾಗಿರುವ ಮಮತಾಮಯಿ ತಾಯಿ ಸೀತಮ್ಮ. ಇವರ ಗಂಡು ಮಕ್ಕಳೂ ಇವರನ್ನು ಕಣ್ಣು ರೆಪ್ಪೆಯಂತೆ ನೋಡಿ ಕೊಳ್ಳುತ್ತಿದ್ದಾರೆ. ನಮಗಂತೂ ಇವರಿಬ್ಬರು ನಮ್ಮ ತಂದೆ ತಾಯಿಯ ಸ್ಥಾನದಲ್ಲಿರುವ ಮಹಾನುಭಾವರು. ಅವರಿಗೆ ನನ್ನ ಮತ್ತು ನನ್ನ ಪತ್ನಿ ಪ್ರಭಾವತಿಯ ಸಾಷ್ಟಾಂಗ ನಮನಗಳನ್ನು ಎಷ್ಟು ಅರ್ಪಿಸಿದರೂ ಸಾಲದೆನಿಸುತ್ತದೆ. ಅವರು ಯಾವಾಗಲೂ ನಮ್ಮ ಹಳೇಬೀಡಿನ ಬಾಂಧವರೆಲ್ಲರ ಕಷ್ಟ ಸುಖಗಳನ್ನು ವಿಚಾರಿಸಿಕೊಳ್ಳದ ದಿನವಿಲ್ಲ. ಆಗಾಗ್ಗೆ ನಾವೆಲ್ಲಾ ಭೇಟಿ ಯಾಗುತ್ತಿದ್ದರೆ  ಅದೇ ಅವರಿಗೆ ಸಂತಸ. ಎಲ್ಲರ ಯಶಸ್ಸಿಗೆ ಹಾರೈಸುವುದೇ ಅವರ ದೊಡ್ಡ ಗುಣ. ಅವರು ಶಿವಮೊಗ್ಗದಲ್ಲಿದ್ದರೂ ಅವರ ಮನಸ್ಸು ಯಾವಾಗಲೂ ಎಲ್ಲಾ ಬಂಧುಗಳ ಕುಟುಂಬಗಳೊಂದಿಗೆ ಬೆರೆತಿರುತ್ತದೆ. ದೇವರು ಅವರಿಬ್ಬರನ್ನೂ ಸಂಪೂರ್ಣ ಆಯಸ್ಸು ಮತ್ತು ಆರೋಗ್ಯ ಕೊಟ್ಟು ಚೆನ್ನಾಗಿಟ್ಟಿರಲಿ ಎಂಬುದೇ ನಮ್ಮ ಪ್ರಾರ್ಥನೆ.
-ಹೆಚ್. ಎಸ್. ಗೋಪಾಲಕೃಷ್ಣ.


* * * * * * * *
ಶುಭ ಸಂದೇಶ
     ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕರ್ನಾಟಕದ ಐತಿಹಾಸಿಕ ಕೆಳದಿ ಸಂಸ್ಥಾನದ ಗತವೈಭವದ ನೆನಪಿನಲ್ಲಿ ಶ್ರೀ ಕವಿ ಲಿಂಗಣ್ಣ ಮುಂತಾದ ಕವಿ ಮನೆತನಕ್ಕೆ ಸೇರಿದ ಕುಟುಂಬಗಳ ನೆನಪಿಗಾಗಿ ವಾರ್ಷಿಕ ಸಮಾವೇಶ ನಡೆಸುತ್ತಿರುವುದನ್ನು ಕೇಳಿ ತುಂಬಾ ಸಂತೋಷವಾಯಿತು. ಮರೆತು ಹೋಗುತ್ತಿರುವ ಎಷ್ಟೋ ವೈಶಿಷ್ಟ್ಯಗಳನ್ನು ನೆನಪು ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿರುವುದು ಪ್ರಶಂಸನೀಯವಾಗಿದೆ. ಹಾಲಿ ಮೂರನೇ ವಾರ್ಷಿಕ ಸಮಾವೇಶದಲ್ಲಿ ಹೊರತರಲಿರುವ ಉದ್ದೇಶಿತ ಕವಿಕುಟುಂಬದ ಪತ್ರಿಕೆ ಕವಿಕಿರಣ ಪತ್ರಿಕೆಯು ಯುವ ಪೀಳಿಗೆಗೆ ದಾರಿದೀಪವಾಗಿ ಕವಿಹೃದಯ ಚಿಗುರೊಡೆಯಲಿ, ಸಮಾಜಕ್ಕೆ ಆಶಾದಾಯಕವಾಗಿ ಉತ್ತಮ ರೀತಿಯಲ್ಲಿ ಹೊರಹೊಮ್ಮಿ, ಯೋಜಿತ ಉದ್ದೇಶ ಸಫಲವಾಗಲಿ ಎಂದು ಹಾರೈಸುತ್ತೇನೆ.
       ಡಾ|| ಪ್ರವೀಣ್ ಕುಮಾರ್ ಜಿ.ಎಲ್., ಕ.ಆ.ಸೇ.,
   ಉಪವಿಭಾಗಾಧಿಕಾರಿ ಮತ್ತು ಉಪವಿಭಾಗೀಯ ದಂಡಾಧಿಕಾರಿ,
                       ಸಾಗರ.    
*********************************
ಸನ್ಮಾರ್ಗ
     ತಪ್ಪು ಮಾಡಿಯೂ ಸರಿಯೆಂದು ವಾದಿಸುವುದಕ್ಕಿಂತ ತಪ್ಪು ಒಪ್ಪಿಕೊಂಡು ಸರಿಯಾಗಿ ನಡೆಯುವುದು ಸರಿಯಾದ ಮಾರ್ಗ. ಇಂತಹವರನ್ನು ಜನರು ಮೆಚ್ಚುತ್ತಾರೆ.
**************
                                                       -ಪುಟಗಳು 12,13- 
****************************************    

 ಶುಭನುಡಿ
     ನಮ್ಮ ಪೂರ್ವಿಕರು ಪ್ರತಿಭಾಸಂಪನ್ನರಾಗಿದ್ದು, ನಮ್ಮ ಮನೆತನದ ಈಗಿನವರೂ ಸಹ ಪ್ರತಿಭಾಶಾಲಿಗಳಾಗಿದ್ದಾರೆ. ಪ್ರತಿವರ್ಷ ಕವಿವಂಶಸ್ಥರ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ. ಕವಿಮನೆತನದ ಪತ್ರಿಕೆ ಕವಿಕಿರಣ ಹೊರತರುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ.
     ಕೊಲ್ಲೂರು ಮೂಕಾಂಬಿಕೆ ಮತ್ತು ವೆಂಕಟರಮಣ ಸ್ವಾಮಿಯ ಅನುಗ್ರಹದಿಂದ ಪತ್ರಿಕೆಯ ಸದುದ್ದೇಶ ನೆರವೇರಲಿ.
- ಕವಿ ವೆಂಕಟಸುಬ್ಬರಾವ್, ಶಿವಮೊಗ್ಗ.
***********************************

ಶುಭಾಶಯ
      ಇತಿಹಾಸವನ್ನು ಅಭ್ಯಾಸ ಮಾಡಿರಿ. ಚರಿತ್ರೆಯಲ್ಲಿರುವ ಒಳ್ಳೆಯ ಅಂಶಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಈ ಕಾಲದಲ್ಲಿ ಉತ್ತಮ ನಾಗರಿಕರಾಗಿ ಬಾಳಿರಿ. ಮುಂದಿನ ಪೀಳಿಗೆಗೆ ಒಳ್ಳೆಯ ಮಾರ್ಗದೋರಿ ಭಾರತವನ್ನು ಮತ್ತು ಕನ್ನಡ ನೆಲವನ್ನು ಉಜ್ವಲವಾಗಿ ಬೆಳಗಲು ಪಣತೊಟ್ಟು ಕಾರ್ಯಶೀಲರಾಗಿ ದುಡಿಯಿರಿ.
ಕವಿಕಿರಣಕ್ಕೆ ಶುಭವಾಗಲಿ.
-ಸಂಶೋಧನಾ ರತ್ನ ಕೆಳದಿ ಗುಂಡಾಜೋಯಿಸ್
***********************************
ಹಳೆ ಬೇರು ಹೊಸ ಚಿಗುರು
ಇರಲು ಚೆಂದ ಹಳೆ ಬೇರು ಹೊಸ ಚಿಗುರು,
ಹಾಡಲು ಅಂದ ಹಳೆ ರಾಗ ಹೊಸ ಗಾನ,
ಕೇಳಲು ಆನಂದ ಹಳೆ ವಿಷಯ ಹೊಸ ವಿಸ್ಮಯ,
ಬರೆಯಲು ಸದಾ ಹಳೆ ಸಾಹಿತ್ಯ ಹೊಸ ವಿಚಾರ,
ನುಡಿಯಲು ಕಂದ ಹಳೆ ಭಾಷೆ ಹೊಸ ನುಡಿ,
ಹರಡಲು ಗಂಧ ಹಳೆಗಾಳಿ ಹೊಸ ಪರಿಮಳ,
ಇರುವುದು ಬಂಧ ಹಳೆ ಜನ ಹೊಸ ಮನ,
ಸವಿಯಲು ಮುದ ಹಳೆ ಅಡುಗೆ ಹೊಸ ರುಚಿ,
ಸೇರಲು ಬಂದ ಹಳೆ ಭಾವದ ಹೊಸ ಜನ,
ನೆಂಟರು ತಂದ ಹಳೆ ಸಂಬಂಧ ಹೊಸ ಸಂಭ್ರಮ!
             - ಹೇಮಾ ಮಾಲತೇಶ, ಶಿವಮೊಗ್ಗ.
**********************************

ಹೀಗಿರಬೇಕು  ನಮ್ಮವ
 ಕವಿ, ಕರುಣಿ, ಕಣ್ಮಣಿ, ಕಷ್ಟ ಸಹಿಷ್ಣು
ವಿ ವಿನಯಿ, ವಿಶ್ವಾಸಿ, ವಿಜಯಿ, ವಿದ್ಯಾವಂತ
 ಮಮತಾಮಯಿ, ಮಂದಸ್ಮಿತ, ಮನೋಹರ
ನೆ ನೆಂಟ, ನೆರಳಾಗಿರುವ, ನೆಮ್ಮದಿವಂತ
 ತಪಸ್ವಿ, ತನ್ಮಯಿ, ತಪ್ಪು ಮಾಡದವ
 ನಮ್ರ., ನಮ್ಮವ, ನಂಬಿಕಸ್ಥ, ನಡೆನುಡಿವಂತ
 ದಯಾವಂತ, ದಾರ್ಶನಿಕ, ದಕ್ಷ, ಧರ್ಮಿಷ್ಟ
 ವಜ್ರಕಾಯ, ವಾಗ್ಮಿ, ವಾತ್ಸಲ್ಯಮಯಿ, ವರ್ಚಸ್ವಿ
            
              - ಹೇಮಾ ಮಾಲತೇಶ, ಶಿವಮೊಗ್ಗ.
* * *

ಹಣೆಬರಹ
       ಹೆತ್ತವರು ಬರೆವುದಿಲ್ಲ ಹಣೆಯಲ್ಲಿ
       ಬರುವಾಗ ಬರೆದು ಕಳಿಸುವನು ಅಲ್ಲಿ
       ಬರೆದುದನು ಓದಲಾಗದು ನಮ್ಮಲ್ಲಿ
       ಅಂತೂ ಸಿಲುಕಿರುವೆವು ಗೊಂದಲದಲ್ಲಿ ! !
-ಕವಿಶ್ರೀ (ಕೆ. ಶ್ರೀಕಾಂತ್)
* * *

ಶ್ರದ್ಧಾಂಜಲಿ    
     ದಿ. ಕವಿ ಸುಬ್ರಹ್ಮಣ್ಯಯ್ಯನವರ ತಂಗಿ ದಿ. ಸುಂದರಮ್ಮನವರ ಮಗ ಹಾಗೂ ಶ್ರೀಮತಿ ಸೀತಮ್ಮ ಕವಿ ವೆಂಕಟಸುಬ್ಬರಾವ್‌ರವರ ಸಹೋದರಿ ಶ್ರೀಮತಿ ಸಾವಿತ್ರಮ್ಮನವರ ಪತಿಯಾದ ಶ್ರೀ ಸತ್ಯನಾರಾಯಣರಾವ್ ರವರು ದಿನಾಂಕ  ೨೮-೦೫-೨೦೦೭ ರಂದು ನಮ್ಮನ್ನು ಅಗಲಿದ್ದಾರೆ. ಶ್ರೀಯುತರು ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು.
     ದಿ. ಕವಿ ಸುಬ್ರಹ್ಮಣ್ಯಯ್ಯನವರ ಮಗಳು ಶ್ರೀಮತಿ ನಾಗರತ್ನಮ್ಮನವರ ಪತಿ ಶ್ರೀ ನಾರಾಯಣರಾವ್‌ರವರು ದಿನಾಂಕ ೧೮-೦೭-೨೦೦೮ ರಂದು ದೈವಾಧೀನರಾಗಿದ್ದಾರೆ. ಹೊಸನಗರ ತಾಲ್ಲೂಕು ಬಿಲ್ಲೇಶ್ವರದಲ್ಲಿ ಅರ್ಚಕರಾಗಿದ್ದ ಅವರು ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
     ಅಗಲಿದ ಆತ್ಮಗಳಿಗೆ ಸದ್ಗತಿ ದೊರೆಯಲಿ ಎಂದು ಕವಿಕಿರಣ ಬಳಗ ಪ್ರಾರ್ಥಿಸುತ್ತದೆ.
*********************************************
                                                                                     -ಪುಟ ೧೪-
**********************************************
ಕೆಳದಿ ಶ್ರೀರಾಮೇಶ್ವರ ದೇವಾಲಯ                                                                                                   - ಡಾ. ಕೆಳದಿ ವೆಂಕಟೇಶ ಜೋಯಿಸ್.

 

     ಕೆಳದಿ ಶಿವಮೊಗ್ಗದಿಂದ ೭೮ ಕಿ.ಮೀ. ಮತ್ತು ಸಾಗರದಿಂದ ೫.೫ ಕಿ.ಮೀ. ದೂರದಲ್ಲಿದೆ. ಕೆಳದಿ ಎಂಬ ವೇಶ್ಯೆ ಕೆಳದಿ ಕೆರೆಗೆ ಬಲಿಯಾದ್ದರಿಂದ ಅವಳ ನೆನಪಿ ಗಾಗಿ ಕೆಳದಿ ಎಂಬ ಹೆಸರು ಬಂದಿರುವುದಾಗಿ ಐತಿಹ್ಯ ವಿದೆ. ಇದಕ್ಕೆ ಸಂಬಂಧಿಸಿದಂತೆ ಕೆಳದಿ ಕೆರೆಯ ಮೇಲ್ಭಾಗದಲ್ಲಿ ವಡ್ಡರ ತಿಮ್ಮಿ ಎಂಬ ನಗ್ನ ಶಿಲ್ಪವಿದ್ದು ಇವಳೇ ಕೆಳದಿ ಎಂದು ಹೆಸರು ಪಡೆದ ವೇಶ್ಯೆ ಎಂದು ಹೇಳಲಾಗುತ್ತದೆ. ಕೆಳದಿ ಕ್ರಿ.ಶ. ೧೫೦೦ ರಿಂದ ೧೫೧೪ರ ವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತು. ರಣದುಲ್ಲಾ ಖಾನ್, ಬಿಜಾಪುರದ ಆದಿಲ್ ಷಾಹಿ ಮತ್ತು ಹೈದರಾಲಿ ಕಾಲದಲ್ಲಿ ಹಾಳಾಗುವಂತಾಯಿತು.
     ಕೆಳದಿಯಲ್ಲಿ ಶ್ರೀ ರಾಮೇಶ್ವರ, ವೀರಭದ್ರ, ಪಾರ್ವತಿ ದೇವಾಲಯವಿದೆ. ಅಲ್ಲದೆ ಇತರ ಹಲವು ದೇವಾಲಯಗಳಿವೆ.
     ಶ್ರೀ ರಾಮೇಶ್ವರ ವಿಗ್ರಹ ಮೊದಲು ಊರ ಹೊರ ವಲಯದ ಸೀಗೆಹಟ್ಟಿಯ ಮಧ್ಯೆ ಇತ್ತಂತೆ. ಚೌಡಪ್ಪ ನಾಯಕನ ಮನೆಯ ಹಸು ಪ್ರತಿದಿನ ಅಲ್ಲಿಗೆ ಬಂದು ಅಲ್ಲಿದ್ದ ಹುತ್ತಕ್ಕೆ ಹಾಲು ಕರೆಯುತ್ತಿತ್ತಂತೆ. ಇದು ಚೌಡಪ್ಪ ನಾಯಕನಿಗೆ ಒಮ್ಮೆ ತಿಳಿದು ಅನಂತರ ಆ ಪೊದೆಗಳನ್ನು ತೆಗೆಸಿ ನೋಡಿದಾಗ ಅಲ್ಲಿ ಲಿಂಗ ವಿದ್ದುದನ್ನು ನೋಡಿ ತೃಣಕುಟಿ ನಿಮಿಸಿದನಂತೆ. ಅನಂತರದಲ್ಲಿ ಈ ಪ್ರದೇಶದ ಒಡೆಯನಾದ ಮೇಲೆ ದೇವಾಲಯ, ಗರ್ಭಗೃಹವನ್ನು ಶಿಲಾಮಯವಾಗಿ ಮಾಡಿದ್ದುದಾಗಿ ಕೆಳದಿ ನೃಪ ವಿಜಯದಲ್ಲಿ ತಿಳಿಸಲಾಗಿದೆ. ಇಲ್ಲಿ ಈ ಮೊದಲು ಶಿವ ದೇವಾಲಯ ಇದ್ದಿರಬಹುದು. ಅದು ಈ ಪ್ರಾಂತವನ್ನು ಮೊದಲು ಆಳಿದ ಹೊಯ್ಸಳ, ಸಾಂತ ಅಥವಾ ವಿಜಯ ನಗರದ ಕಾಲದಲ್ಲಿ ನಿರ್ಮಾಣ ಆಗಿದ್ದಿರಬಹುದು. ದೇವಾಲಯದ ಆವರಣದಲ್ಲಿರುವ ಬಾವಿಯ ಪಕ್ಕ ದಲ್ಲಿರುವ ವೀರಗಲ್ಲು ಮತ್ತು ಮಹಾಸತಿ ಕಲ್ಲುಗಳು ಹಾಗೂ ವಠಾರದಲ್ಲಿರುವ ನಾಗರಗಳ ಮಧ್ಯದಲ್ಲಿ ಇಟ್ಟಿರುವ ಶ್ರೀ ಲಕ್ಷ್ಮೀನಾರಾಯಣ ಶಿಲ್ಪದ ಲಕ್ಷಣವನ್ನು ಗಮನಿಸಿದಾಗ ಈ ಪ್ರದೇಶವು ಕೆಳದಿಗೂ ಮೊದಲು ಹೊಯ್ಸಳರ ಆಡಳಿತಕ್ಕೆ ಒಳಪಟ್ಟಿದ್ದಿತೆಂದು ಊಹಿಸ ಬಹುದಾಗಿದೆ. ಈ ಪ್ರದೇಶದಲ್ಲಿ ಕಾಡಿನಲ್ಲಿ ಇನ್ನೊಂದು ಈಶ್ವರ ದೇವಾಲಯ ಇದ್ದ ಅವಶೇಷ ಗಳನ್ನು ನೋಡಿರುವುದಾಗಿ ಸ್ಥಳೀಕರು ಹೇಳುತ್ತಾರೆ.
ಇದು ಕೆಳದಿ ಜೋಯಿಸರಿಗೆ ಸದಾಶಿವನಾಯಕನು ಕೊಟ್ಟ, ಶಾಸನದಲ್ಲಿ ದಾಖಲಾಗಿರುವ ಶಂಭುಲಿಂಗ ದೇವಾಲಯವೇ ಆಗಿದ್ದರೂ ಆಗಿರಬಹುದು. ಆಡಳಿತ ದಲ್ಲಿ ತಾನು ಎದ್ದು ನಿಲ್ಲುವಂತಾದ ಮೇಲೆ ಲಿಂಗಕ್ಕೆ ಮರದಲ್ಲಿ ಗುಡಿ ಕಟ್ಟಿಸಿದನೆಂದೂ ಅನಂತರ ಈ ದೇವಾಲಯವನ್ನು ಮತ್ತು ನಂದಿ ಮಂಟಪವನ್ನು ಶಿಲ್ಪ ಶಾಸ್ತ್ರದನ್ವಯ ಶಿಲಾಮಯವಾಗಿಸಿ ಗರ್ಭಗೃಹವನ್ನು ಕಲ್ಲಿನಿಂದ ಕಟ್ಟಿಸಿದನೆಂದು ತಿಳಿದುಬರುತ್ತದೆ. ಹಾಗೆಯೇ ಈಶ್ವರ ದೇವಾಲಯದ ಎಡಭಾಗದಲ್ಲಿ ಪಾರ್ವತಿ ದೇವಾಲಯವನ್ನು ಕಟ್ಟಿಸಿದನು. ಇದಕ್ಕೆ ಪೂಜಾದಿ ಗಳಿಗಾಗಿ ದಾನದತ್ತಿಗಳು ಬಿಡಲ್ಪಟ್ಟಿತ್ತು. ಕ್ರಿ.ಶ. ೧೫೦೯ರ ಶಾಸನವೊಂದು ವಿಜಯನಗರದ ವೆಂಕಟಾದ್ರಿ ಯಜಮಾನರ ಪೌತ್ರರಾದ  ನಾರಸಿಂಹ ಯಜಮಾನರ ಪುತ್ರರಾದ ನರಸಪ್ಪ ದೈವಜ್ಞ ಯಜಮಾನರಿಗೆ ಶ್ರೀ ಸದಾ ಶಿವನಾಯಕರು ಇಲ್ಲಿಯ ಸ್ಥಳದ ದೇವತಾ ಪೂಜೆ, ಶಂಭುಲಿಂಗಪೂಜೆ, ಭೂಮಿತತ್ವ, ದೈವಜ್ಞ ಯಜಮಾನಿಕೆ ಕೊಟ್ಟುದನ್ನು ತಿಳಿಸುತ್ತದೆ. ಕ್ರಿ.ಶ. ೧೫೫೬ರ ವರೆಗೆ ಈ ಮನೆತನದವರು ಪೂಜೆ ಪುನಸ್ಕಾರ ಮಾಡಿಕೊಂಡು ಬಂದಿರಬೇಕು. ಕ್ರಿ.ಶ. ೧೫೫೬ರಲ್ಲಿ ಬನವಾಸಿ ಆಚಾರ್ಯ ಭೀಮಭಟ್ಟರ ಮಗ ಆಚಾರ್ಯ ಮಧುಲಿಂಗಭಟ್ಟರಿಗೆ ಈ ಸ್ಥಳದ ಪೂಜೆ ಕೊಟ್ಟಿರುವುದನ್ನು ಶಾಸನವೊಂದು ತಿಳಿಸುತ್ತದೆ. ಇಂದೂ ಈ ಕುಟುಂಬದವರೇ ಪೂಜಾದಿ ಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈಗ ದೇವಾಲಯವೂ ಮುಜರಾಯಿ ಆಡಳಿತಕ್ಕೆ ಒಳಪಟ್ಟಿದೆ. ಕೇಂದ್ರ ಪುರಾತತ್ವ ಇಲಾಖೆಯ ರಕ್ಷಣಾ ಸ್ಮಾರಕವಾಗಿದೆ. ಕ್ರಿ.ಶ. ೧೫೯೦-೧೬೨೯ರ ಮಧ್ಯದಲ್ಲಿ ಆಡಳಿತ ನಡೆಸಿದ ಹಿರಿಯ ವೆಂಕಟನಾಯಕನ ಕಾಲದಲ್ಲಿ ಈ ದೇವಾಲಯದ ಮುಂಭಾಗದ ರಂಗ ಮಂಟಪ ಮತ್ತು ವರಗು ದಿಣ್ಣೆಗಳನ್ನು ನಿರ್ಮಿಸಲಾಯಿತು. ಮುಂದೆ ದೊಡ್ಡ ಸಂಕಣ್ಣನಾಯಕನ ಕಾಲದಲ್ಲಿ ಶಿಕಾರಿಪುರ ತಾಲ್ಲೂಕಿನ ಮಾಸೂರು ಗ್ರಾಮದಲ್ಲಿ ಸಿಕ್ಕ ವೀರಭದ್ರ ಮೂರ್ತಿಯನ್ನು ಶ್ರೀ ರಾಮೇಶ್ವರ ದೇವಾಲಯದ ಬಲ ಬದಿಯಲ್ಲಿ ಪ್ರತಿಷ್ಠಾಪಿಸಿದನು. ಕೆಳದಿಯ ರಾಣಿ ಚೆನ್ನಮ್ಮಾಜಿಯು ಈ ದೇವಾಲಯಕ್ಕೆ ಗೋಪುರವನ್ನು ಮತ್ತು ರಂಗಮಂಟಪವನ್ನು ನಿರ್ಮಿಸಿದಳು. ಹಿರಿಯ ಬಸವಪ್ಪನಾಯಕನು (೧೬೯೭-೧೭೧೪) ವೀರಭದ್ರ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಲ್ಲಿ ನಿರ್ಮಿಸಿದನು. ದೇವಾಲಯದ ಎದುರಿನಲ್ಲಿರುವ ಧ್ವಜಸ್ಥಂಭವನ್ನು ಚೆನ್ನಮ್ಮಾಜಿ ಕಾಲದಲ್ಲಿದ್ದ ಬೊಕ್ಕಸದ ಸಿದ್ದಬಸವಯ್ಯನು ಕ್ರಿ.ಶ. ೧೬೮೧ರಲ್ಲಿ ನಿರ್ಮಿಸಿದನು. ದೇವಾಲಯದ ಮುಂಭಾಗದ ಪೌಳಿಯನ್ನು ಚಂದ್ರಸಾಲೆ ಎಂದು ಕರೆದಿದ್ದು ಮುಂಭಾಗದ ಬಾಗಿಲ ಮೇಲು ಭಾಗದಲ್ಲಿ ರಾಮೇಶ್ವರ ದೇವಸ್ಥಾನದ ಚಂದ್ರಸಾಲೆ ೧೮೯೬ನೇ ಇಸವಿ ಹೊನ್ನಾವರದ ನಾರಾಯಣಾಚಾರಿ ಮಗ ವಾಮನಾಚಾರಿ ಕಟ್ಟಿದ್ದು ಎಂದಿದೆ. ಲಾರ್ಡ್ ವೇsವೆಲ್ ಇಲ್ಲಿಗೆ ಬಂದಿದ್ದು ಆ ಸಂದರ್ಭದಲ್ಲಿ ಇದನ್ನು ಕಟ್ಟಲಾಯಿತೆಂದೂ ಹೇಳಲಾಗಿದೆ.
     ಕೆಳದಿ ದೇವಾಲಯವು ದ್ರಾವಿಡ, ಹೊಯ್ಸಳ ಶೈಲಿಯಲ್ಲಿ ಹಸಿರು ಬಣ್ಣದ ಕಲ್ಲಿನಿಂದ ನಿರ್ಮಾಣ ವಾಗಿದೆ. ಚಿಕ್ಕ ಗರ್ಭಗೃಹ, ಪ್ರದಕ್ಷಿಣಾಪಥ, ನವರಂಗ, ಮುಖಮಂಟಪಗಳಿಂದ ಕೂಡಿದೆ. ಜಗಲಿಯ ಹೊರ ಭಾಗದ ಒಂದು ದಿಂಡಿನಲ್ಲಿ ವಾದ್ಯಗಾರರು, ನರ್ತಕರ ಶಿಲ್ಪವಿದೆ. ಎರಡು ಅಡಿ ಎತ್ತರದ ಮೆರುಗಿರುವ ಶಿಲಾ ಲಿಂಗವಿರುವ ಗರ್ಭಗೃಹದ ಬಿತ್ತಿಯಲ್ಲಿ ಚಚ್ಚೌಕದ ಅರ್ಧ ಕಂಬಗಳ ಅಲಂಕಾರವಿದೆ. ನಡುವೆ ಕಣ್ಣಪ್ಪ, ಗರುಡ, ಹನುಮ, ಒಂಟೆ, ಆನೆ, ಮಿಥುನಶಿಲ್ಪಗಳು, ಆನೆಯ ಜೊತೆ ಹೋರಾಟ ಮಾಡಿದ ಯೋಧ, ಸೋಮಗ್ರಹಣ, ಮದ್ದಳೆಗಾರ, ಯೋಗನಿರತ ರಾಮೇಶ್ವರ ಮೊದಲಾದ ಶಿಲ್ಪಗಳಿವೆ. ಮುಂದೆ ಚಾಚಿಕೊಂಡಿರುವ ಛಾವಣಿಯ ಏಣುಗಳಲ್ಲಿ ವೀರಭದ್ರ, ತಾಂಡವೇಶ್ವರ, ಪಾರ್ವತಿ, ಮೋಹಿನಿ, ವೇಣುಗೋಪಾಲ ಕಾಳಿಂಗಮರ್ದನ, ಭೈರವ ಶಿಲ್ಪಗಳಿವೆ. ಗರ್ಭಗೃಹದ ಮೇಲಿನ ಗೋಪುರ ಚೌಕಾಕಾರವಾಗಿದೆ. ಮುಖ ಮಂಟಪವು ನಾಲ್ಕು ಅಂಕಣ ಉದ್ದ ಮತ್ತು ಮೂರು ಅಂಕಣ ಅಗಲವಿದೆ. ಹದಿನೆಂಟು ಕಂಬಗಳಿವೆ. ಇಲ್ಲಿ ಎಡ ಬಲಗಳಲ್ಲಿ ಗಣಪತಿ, ಮಹಿಷ ಮರ್ದಿನಿ ಮೂರ್ತಿಗಳಿವೆ. ದ್ವಾರ ಬಂಧದ ಇಕ್ಕೆಲಗಳಲ್ಲಿ ಶೈವ ದ್ವಾರಪಾಲಕರಿದ್ದಾರೆ. ನವ ರಂಗ ಚಿಕ್ಕದಾಗಿದೆ. ಇಲ್ಲಿ ಬಸವ ಮತ್ತು ಶಿವ ಪಾರ್ವತಿ ಉತ್ಸವಮೂರ್ತಿಗಳಿವೆ. ೨೧-೦೯-೧೯೯೭ರಲ್ಲಿ ಈ ಹಿಂದಿನ ಉತ್ಸವಮೂರ್ತಿಯು ಕಳುವಾಗಿದ್ದು ಅನಂತರದಲ್ಲಿ ಈಗ ಹೊಸ ಉತ್ಸವಮೂರ್ತಿಯನ್ನು ಮಾಡಿಸಲಾಗಿದೆ. ಪ್ರದಕ್ಷಿಣಾಪಥದ ಕಲ್ಲು ಒಂದು ಗುಂಟೆಯಷ್ಟು ದೊಡ್ಡ ದಾಗಿದೆ. ಇದರ ಮೇಲೆ ಆರು ಕಂಬಗಳು ನಿಂತಿವೆ. ಈ ದೇವಾಲಯ ಮೂರು ಪ್ರವೇಶದ್ವಾರಗಳನ್ನು ಹೊಂದಿದೆ. ಒಳಗೆ ಸುತ್ತಲೂ ಕುಳಿತುಕೊಳ್ಳಲು ಜಗಲಿ ಇದೆ. ಅಲ್ಲಿರುವ ತಾಳ ಪ್ರಸ್ತಾರ ಗಂಗಪ್ಪನ ನಮನ ಎಂಬ ಲಿಪಿ ಮತ್ತು ಪಕ್ಕದ ಅಂಕಗಳು ಸಂಗೀತದ ಮಟ್ಟನ್ನು, ಸಂಗೀತಗಾರನನ್ನೂ ಉಲ್ಲೇಖಿಸುತ್ತದೆ. ನಮಸ್ಕಾರ ಹಾಕಿ ರುವಂತೆ ಚಿತ್ರಿಸಿರುವ ಉಬ್ಬು ಚಿತ್ರಗಳು ಯಾವ ರಾಜರದ್ದೆಂದು ಸ್ಪಷ್ಟವಿಲ್ಲದಿದ್ದರೂ ಇಮ್ಮಡಿ ಸೋಮಶೇಖರ ನಾಯಕನದೆಂದು ಹೇಳುತ್ತಾರೆ. ಈ ದೇವಾಲಯದ ಹೊರಗಿನ ಮೈಯಲ್ಲಿರುವ ಗಜಹಂಸದ ಶಿಲ್ಪವನ್ನು ಲಕ್ಷ್ಮಿ ಮತ್ತು ಸರಸ್ವತಿ ಸಂಕೇತವೆಂದು ಕುವೆಂಪು ವಿಶ್ವವಿದ್ಯಾಲಯಕ್ಕೆ ಲಾಂಛನವಾಗಿ ಬಳಸಿಕೊಳ್ಳ ಲಾಗಿದೆ. ಈ ದೇವಾಲಯ ನಿರ್ಮಾಣಕ್ಕೆ ಕಲ್ಲನ್ನು ಹತ್ತಿರದ ನಾಡಕಲಸಿಯಿಂದ ತಂದಿರಬಹುದೆಂದು ಸಂಶೋಧಕರು ಊಹಿಸಿದ್ದಾರೆ. ಕಾರ್ತಿಕ ಅಮಾವಾಸ್ಯೆ ಮತ್ತು ಫಾಲ್ಗುಣ ಶುದ್ಧ ತೃತೀಯ ದೂತ ರಥವೂ, ಫಾಲ್ಗುಣ ಶುದ್ಧ ಪಾಡ್ಯದಂದು ಶ್ರೀ ದೇವರಿಗೆ ರಥೋತ್ಸವ ನಡೆಯತ್ತದೆ.

ಪಾರ್ವತಿ ದೇವಾಲಯ
     ಗರ್ಭಗೃಹವು ಶಿಲಾಮಯದಿಂದ ಕೂಡಿದೆ. ಮುಂಭಾಗ ಕೆಂಪು ಜಂಬಿಟ್ಟಿಗೆಕಲ್ಲಿನಲ್ಲಿ ಕಟ್ಟಿರುವುದಾಗಿದೆ. ಶಿಲಾಭಾಗದಲ್ಲಿ ಭೈರವ, ಷಣ್ಮುಖ, ಗಣೇಶ, ಅಂಧ ಕಾಸುರನ ವಧೆಯಲ್ಲಿ ನಟರಾಜ, ಪುರುಷಾಮೃಗ, ಕಣ್ಣಪ್ಪ, ಗಜಲಕ್ಷ್ಮಿಯ ಶಿಲ್ಪವಿದೆ. ಈ ದೇವಾಲಯದ ಹೊರಭಾಗದ ಗೋಡೆಯಲ್ಲಿ ಉಮಾಮಹೇಶ್ವರ ಶಿಲ್ಪ ಇದೆ, ಇದು ಕೆಳದಿಯ ಮೊದಲ ಚಿನ್ನದ ನಾಣ್ಯಗಳಲ್ಲಿ ಇರುವ ಚಿಹ್ನೆಯಾಗಿದೆ. ಪಕ್ಕದಲ್ಲಿ ಸಾಕ್ಷಿ ಆಂಜನೇಯ ಎಂದು ಕರೆಯುವ ಆಂಜನೇಯನ ಶಿಲ್ಪವಿದೆ. ಅದರ ಮುಂದೆ ಚಂಡಿಕೇಶ್ವರನಿದ್ದಾನೆ. ಮುಂಭಾಗವೂ ಸಹ ಕಲ್ಲಿನಲ್ಲೇ ನಿರ್ಮಾಣವಾಗಿದ್ದ ಬಗ್ಗೆ ಅಲ್ಲಿ ಸಿಕ್ಕಿರುವ ಅವಶೇಷಗಳು ತಿಳಿಸುತ್ತವೆ. ಇದು ಆದಿಲ್‌ಷಾಹಿಯ ಆಕ್ರಮಣದ ಕಾಲದಲ್ಲಿ ಹಾಳಾಗಿದೆ. ಈ ದೇವಾಲಯದ ಚಂದನ ಮರದಿಂದ ಮಾಡಿದ್ದೆನ್ನುವ ಶಿಲ್ಪವು ಸುಂದರ ವಾಗಿದೆ. ಕಂಬಗಳು, ಮೇಲ್ಛಾವಣಿಯ ರಂಗೋಲಿ, ನಾಲ್ಕೂ ಪಕ್ಕಗಳಲ್ಲಿರುವ ಮೂರ್ತಿ ಶಿಲ್ಪಗಳು ಕಲಾ ಪ್ರೌಢಿಮೆ ತೋರುತ್ತವೆ. ಇಲ್ಲಿಯ ಮೊದಲ ಅಂಕಣದ ಒಂದನೇ ಸಾಲಿನಲ್ಲಿ ನಂದಿ, ವೀರಭದ್ರ, ತುಂಬುರ, ನಾರದ, ಅಘೋರೇಶ್ವರ, ರಾಮೇಶ್ವರ, ಚಂದ್ರಮೌಳೇಶ್ವರ, ಕೊರವಂಜಿ ಇದೆ. ಎರಡನೇ ಸಾಲಿನಲ್ಲಿ ದತ್ತಾತ್ರೇಯ, ಅಗ್ನಿ, ನಟರಾಜ, ದಕ್ಷಾಧಿಪತಿ, ವೀರಭದ್ರ, ವೆಂಕಟ ರಮಣ, ಕಾಳಿಂಗ ಮರ್ದನ, ವೇಣುಗೋಪಾಲ, ನರ್ತಕಿ ಇದೆ. ಮೂರನೇ ಸಾಲಿನಲ್ಲಿ ಮಹಿಷಾಸುರ ಮರ್ದಿನಿ, ನಗಾರಿ, ಪುಂಗಿ, ಮೃದಂಗ, ವೀಣಾ, ನರ್ತನ, ತಾಳ, ಪಿಟೀಲು, ಗಜಾಸುರ ಸಂಹಾರ, ತಂಬೂರಿ ಇದೆ. ನಾಲ್ಕನೇ ಸಾಲಿನಲ್ಲಿ ಶಿವಪಾರ್ವತಿ, ಕಾಲಭೈರವ, ಲಕ್ಷ್ಮಣ, ರಾಮ, ಮಾರುತಿ, ಗಣೇಶ, ವೆಂಕಟರಮಣ, ಭೃಂಗಿ ಇದೆ.
     ಎರಡನೇ ಅಂಕಣದಲ್ಲಿ ಇಂದ್ರ, ಅಗ್ನಿ, ಯಮ, ನೈರುತ್ಯ, ವರುಣ, ವಾಯುವ್ಯ, ಕುಬೇರ, ಈಶಾನ್ಯ ಇತ್ಯಾದಿ ಕಲಾ ಕೌಸ್ತುಭಗಳಿವೆ. ಕೆಳದಿಯ ಬ್ರಹ್ಮರಥ ಅಗ್ನಿಗಾಹುತಿಯಾಗಿದೆ. ೧೯೭೩ರಲ್ಲಿ ಹೊಸರಥ ನಿರ್ಮಾಣ ವಾಗಿದೆ. ದೇವಾಲಯದ ವಠಾರದಲ್ಲಿ ಚಂಡಿಕೇಶ್ವರ, ಆಂಜನೇಯ, ಗಣಪತಿ, ವೆಂಕಟರಮಣ ಮೊದಲಾದ ವಿಗ್ರಹಗಳಿವೆ. ದೇವಾಲಯದಲ್ಲಿ ನವರಾತ್ರಿ ಕಾಲದಲ್ಲಿ ಅಲಂಕಾರಕ್ಕಾಗಿ ಬಳಸುವ ಮರದ ಶಿಲ್ಪಗಳು ಹಲವಿವೆ.
ವೀರಭದ್ರ ದೇವಾಲಯ
     ರಾಮೇಶ್ವರ ದೇವಾಲಯಕ್ಕೆ ಹೊಂದಿಕೊಂಡೇ ಈ ದೇವಾಲಯವಿದೆ. ಇದನ್ನು ಕ್ರಿ.ಶ.೧೫೪೬-೧೫೫೯ರ ಅವಧಿಯ ಮಧ್ಯಭಾಗದಲ್ಲಿ ದೊಡ್ಡ ಸಂಕಣ್ಣನಾಯಕನು ತೀರ್ಥಯಾತ್ರೆಗೆ ಹೋಗಿದ್ದಾಗ ಶಿಕಾರಿಪುರದ ಮಾಸೂರಿ ನಲ್ಲಿ ಕನಸ್ಸಿನಲ್ಲಿ ವೀರಭದ್ರನನ್ನು ಕಂಡು ಅದರಂತೆ ಇಲ್ಲಿ ಪ್ರತಿಷ್ಟಾಪಿಸಿದ್ದಾಗಿ ಕೆಳದಿನೃಪವಿಜಯ ತಿಳಿಸುತ್ತದೆ. ಮುಂಭಾಗದ ಕೆಲಸವು ಕೆಳದಿ ವೀರಭದ್ರ ನಾಯಕ ಮತ್ತು ಚೆನ್ನಮ್ಮಾಜಿಯ ಕಾಲದಲ್ಲಿ ನಿರ್ಮಾಣವಾಗಿದೆ. ಗರ್ಭಗೃಹದ ಮುಂಭಾಗದ ಬಾಗಿಲುವಾಡದ ಮೇಲಿರುವ ಆಳ್ವಾರರ ಮತ್ತು ಕೃಷ್ಣನ ಶಿಲ್ಪಗಳು ಗಮನಿಸಬೇಕಾಗುತ್ತದೆ.


      ಈ ದೇವಾಲಯದಲ್ಲಿ ಮೇಲ್ಭಾಗದಲ್ಲಿರುವ ಗಂಡ ಭೇರುಂಡ ಕೆಳದಿ ಲಾಂಛನ. ವಿಜಯನಗರದ ನಂತರ ಇದನ್ನು ಕೆಳದಿ ಅರಸರು ತಮ್ಮ ಲಾಂಛನವಾಗಿ ಬಳಸಿ ಕೊಂಡಿದ್ದಾರೆ. ಕೆಲವು ವಿದ್ವಾಂಸರುಗಳು ಗಂಡಭೇರುಂಡ ಶಿಲ್ಪ ಕೆಳದಿ ಅರಸರ ರಾಜಲಾಂಛನ ಆಗುವುದು ಅಸ್ವಾಭಾವಿಕ ಎಂದು ಅಭಿಪ್ರಾಯಿಸುತ್ತಾರೆ. ಅವರ ಪ್ರಕಾರ ನಾಣ್ಯಗಳಲ್ಲಿ ಶಿವ ಪಾರ್ವತಿಯರ ಚಿತ್ರ ವಿರುವುದು, ಶಾಸನಗಳ ಕೊನೆಯಲ್ಲಿ ಶ್ರೀ ಸದಾಶಿವ ಎಂಬ ಮುದ್ರಾಂಕಿತ ಬರುವುದು ಗಮನಿಸಿದಾಗ ಇವರ ಲಾಂಛನ ಶಿವ ಪಾರ್ವತಿ ಜೋಡಿಚಿತ್ರವಾಗಿದೆ ಎಂಬುದು. ಕೆಳದಿ ಕಾಲದ ಚಿನ್ನದ ನಾಣ್ಯಗಳಲ್ಲಿ ಗಂಡ ಭೇರುಂಡ ಶಿಲ್ಪ ಇರುವುದನ್ನು ಗಮನಿಸಲಾಗಿದೆ. ಅಲ್ಲದೆ ಇದನ್ನು ನಾಣ್ಯಶಾಸ್ತ್ರ ವಿದ್ವಾಂಸರೂ ಒಪ್ಪುತ್ತಾರೆ. ಹಾಗಾಗಿ ಇವರ ಲಾಂಛನ ಗಂಡಭೇರುಂಡವೇ ಆಗಿತ್ತೆನ್ನ ಬಹುದಾಗಿದೆ. ಇಂದು ಕರ್ನಾಟಕದ ಲಾಂಛನವಾಗಿ ಇದು ಬಳಕೆಯಾಗಿದೆ. ಕೆಳದಿ ಲಾಂಛನದಲ್ಲಿ ನಾಲ್ಕು ಆನೆ, ನಾಲ್ಕು ಸಿಂಹ ಹೊತ್ತು ಹಾರುತ್ತಿರುವ ಗರುಡನನ್ನು ನೋಡಬಹುದು. ಕೆಳಭಾಗದ ಕಾಲುಗಳಲ್ಲಿ ಎರಡು ಆನೆ ಗಳ ಒಳಗೆಯೇ ಎರಡು ಸಿಂಹಗಳನ್ನು ಅಳವಡಿಸಿ ರುವುದನ್ನು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ತಿಳಿದುಬರುತ್ತದೆ. ಕೊಕ್ಕಿನಲ್ಲಿ ಎರಡು ಸಿಂಹ, ಅದರ ಕಾಲಿಗೆ ಸೇರಿದಂತೆ ಎರಡು ಆನೆ ಹೊತ್ತಿರುವ ಈ ಶಿಲ್ಪ ಸುಂದರವಾಗಿದೆ. ಈ ದೇವಾಲಯದ ಗರ್ಭಗೃಹ, ಮುಖಮಂಟಪಗಳು ರಾಮೇಶ್ವರ ದೇವಾಲಯವನ್ನೇ ಹೋಲುತ್ತದೆ. ಇಲ್ಲಿಯ ನವಗ್ರಹಗಳು, ನಾಗಬಂಧಗಳು, ಗರ್ಭಗೃಹದ ದ್ವಾರ ಮೋಹಕವಾಗಿದೆ. ದೇವಾಲಯದ ಕಂಬಗಳಲ್ಲಿ ವಿಜಯನಗರದ ವಿಜಯ ವಿಠಲ ದೇವಾಲಯದಂತೆ ಯಾಳಿಯನ್ನು ಅಳವಡಿಸಲಾಗಿದೆ. ಒಂದೆಡೆ ಮರಾಠ ಪ್ರಭಾವದ ಕುದುರೆ ಸವಾರ, ಆನೆ ಮುಖದ ಹಂಸ, ಯೋಗಿಯ ಶಿರದ ಅಗ್ರಭಾಗದಲ್ಲಿ ವೃಕ್ಷ ಬೆಳೆದ ಶಿಲ್ಪ, ರಾಜಚಿಹ್ನೆಯಿಂದ ಕೂಡಿದ ನಾಯಕ, ಮೇಲ್ಭಾಗದಲ್ಲಿ ಕಂಗೊಳಿಸುವ ಮನೋಹರ ಕಮಲಗಳು, ನಾಗಬಂಧ, ಗೃಹಗಳ ಮಧ್ಯ ಇರುವ ಸೂರ್ಯ, ಜಿಂಕ ಯೊಂದಿಗೆ ಚಂದ್ರ,, ಆನೆ, ಸಿಂಹ, ಹೂವು, ಪರ್ವತ, ಮಾವುತ, ಎತ್ತು ಮೊದಲಾದುವು ಸೌಂದರ್ಯ ಪ್ರಜ್ಞೆ ಪ್ರತೀಕವಾಗಿದೆ. ಕಮಲವೊಂದು ಸಿಡಿಲಿನಿಂದ ಭಗ್ನ ವಾಗಿದೆ. ದ್ವಾರಬಂಧದ ಕಂಬಗಳಲ್ಲಿ ದ್ವಾರಪಾಲಕರ ಶಿಲ್ಪವಿದೆ. ಗರ್ಭಗೃಹದಲ್ಲಿ ವೀರಭದ್ರ ಮೂರ್ತಿ ಇದೆ. ವೀರಭದ್ರ ದೇವಾಲಯದಲ್ಲಿ ಕೃಷ್ಣ, ನಾರಸಿಂಹ ಮೊದಲಾದ ಶಿಲ್ಪವನ್ನೂ ಅಳವಡಿಸಿ ಆ ಮೂಲಕ ಸರ್ವಧರ್ಮವನ್ನು ಪ್ರತಿಪಾದಿಸಿದಂತಿದೆ. ಇಲ್ಲಿ ಇರುವ ತಮ್ಮಡಿ ವೀರಪ್ಪ ಎಂಬ ರೇಖಾಚಿತ್ರ ಮತ್ತು ಬರಹ ಯಾರೆಂದು ಸ್ಪಷ್ಟವಾಗುವುದಿಲ್ಲ. ಈ ದೇವಾಲಯದ ಗೋಪುರದಲ್ಲಿರುವ ಕಳಸದಲ್ಲಿ ಮಹಿಸೂರ ಬಸವೇಶ್ವರ ದೆವರ ಪಾದಕೆ ನೆರಸಭೀಸಲಕೊಪ್ಪದ ಬಂಮೈಯ ಗೌಡರ ಮಗ ಬಸವೈಯ ಗೌಡರ ಭಕ್ತಿ ಎಂದಿದೆ.
ಧ್ವಜಸ್ಥಂಭ
     ಇದು ವೀರಭದ್ರ ದೇವಾಲಯದ ಎದುರಿನಲ್ಲಿದೆ. ಸುಮಾರು ೨೫ ಅಡಿ ಎತ್ತರದ ಈ ಸ್ಥಂಭದಲ್ಲಿ ಗಣೇಶ, ಶಿವ, ನಂದಿ, ಪಾರ್ವತಿ, ಭೈರವ ಶಿಲ್ಪಗಳಿವೆ. ಇದನ್ನು ಮಾನಸ್ಥಂಭ ಎನ್ನುವವರೂ ಇದ್ದಾರೆ. ದೀಪಸ್ಥಂಭ ಎನ್ನುವವರೂ ಇದ್ದಾರೆ. ಆದರೆ ಇಲ್ಲಿರುವ ಶಾಸನವು ಕ್ರಿ.ಶ. ೧೬೭೮ರಲ್ಲಿ ಬೊಕ್ಕಸದ ಸಿದ್ದಬಸವಯ್ಯನು ಪ್ರತಿಷ್ಠೆ ಮಾಡಿಸಿದ ಧ್ವಜಸ್ಥಂಭದ ಸೇವೆ ಎಂದಿರುವುದನ್ನು ನೋಡಿದಾಗ ಇದು ಧ್ವಜಸ್ಥಂಭವೆಂದು ಸ್ಪಷ್ಟವಾಗುತ್ತದೆ. ಕೆಳದಿ ಚೆನ್ನಮ್ಮಾಜಿಯ ಕಾಲದಲ್ಲಿ ನಂದಿ ಧ್ವಜಸ್ಥಂಭ ಸ್ಥಾಪಿಸಲಾಯಿತು. ಈ ಸ್ಥಂಭದ ಮೇಲ್ಭಾಗದಲ್ಲಿ ನಂದಿ  ವಿಗ್ರಹವಿದೆ. ಇದರಲ್ಲಿ ಗಣಪತಿಯ ಕೆಳಭಾಗದಲ್ಲಿರುವ ಶಿಲ್ಪಗಳು ಕೆಳದಿ ರಾಣಿ ಚೆನ್ನಮ್ಮಾಜಿ, ಶಿವಾಜಿಯ ಮಗ ರಾಜಾರಾಮ ಮತ್ತು ಅವರ ಸೇವಕ, ಸೇವಿಕೆಯರನ್ನು ಸೂಚಿಸುತ್ತದೆ. ವೀರಭದ್ರ ದೇವಾಲಯದ ಕೊನೆಯಲ್ಲಿನ ಕಂಬದಲ್ಲಿ ಹೊರಭಾಗದಲ್ಲಿ ಶಿವಾಜಿಯನ್ನು ಕುದುರೆಯ ಮೇಲೆ ಕುಳಿತಿರುವಂತೆ ಚಿತ್ರಿಸಿರುವುದನ್ನು ನೋಡಬಹುದು.
     ದೇವಾಲಯದ ಹೊರಗೋಡೆಯಲ್ಲಿರುವ ಸಾಸಿವೆ ಗಣಪತಿ, ಒಂದೇ ದೇಹ ಎರಡು ಮುಖ ತೋರುವ ಚಿತ್ರ (ಆನೆ ಮತ್ತು ಹಸು), ವಾಸ್ತುಪುರುಷನ ಶಿಲ್ಪ, ಕೈ ಎತ್ತಿ ಕುಳಿತಿರುವ ಬಾಲಕನ ಶಿಲ್ಪ, ದರ್ಪಣ ವೀಕ್ಷಿಸುತ್ತಿರುವ ಸುಂದರಿ, ಮೋಹಿನಿ, ಭಸ್ಮಾಸದುರ, ಇತ್ಯಾದಿಗಳು ಗಮನಿಸುವಂತಹವು. ಉಳಿದ ಕಡೆ ಪಂಚಶಿರ, ಕಾಮಧೇನು, ಜಂಗಮ ಶಿಲ್ಪಗಳಿವೆ. ಹಲವು ಕಣ್ಮರೆಯಾಗಿವೆ. ರಾಮೇಶ್ವರ, ವೀರಭದ್ರ ದೇವಾಲಯದ ಹೊರಗೋಡೆ ಗೋಪುರಗಳಿಂದ ತುಂಬಿದೆ. ರಾಮೇಶ್ವರ ದೇವಾಲಯದ ಎದುರುಮುಖದ ಮೇಲ್ಭಾಗದಲ್ಲಿ ಬೃಂಗಿ ಎಂಬ ಮೂರು ಕಾಲಿನ ವಿಚಿತ್ರ ಶಿಲ್ಪ ಇದೆ. ಇದು ಈಶ್ವರನ ಗಣಗಳಲ್ಲಿ ಒಂದಾಗಿದೆ. ಇಲ್ಲಿರುವ ಒಂದು ಕಂಬವನ್ನು ಕಲ್ಲುಜಾಗಟೆ ಎಂದು ಕರೆಯಲಾಗುತ್ತದೆ. ಕಲ್ಲು ಹೊಡೆತಕ್ಕೆ ಈಗಾಗಲೇ ಕಂಬ ತತ್ತರಿಸಿದೆ. ಈಶ್ವರ ಮತ್ತು ವೀರಭದ್ರ ದೇವಾಲಯದ ಮೇಲ್ಭಾಗದಲ್ಲಿ ಶಿಖರವಿದೆ. ವಠಾರದಲ್ಲಿ ನಾಲ್ಕು ಆಂಜನೇಯ, ನಾಲ್ಕು ವಿಷ್ಣು, ಕ್ಷೇತ್ರಪಾಲ, ಗಣಪತಿಯ ಶಿಲ್ಪವಿದೆ. ನಾಗಶಿಲ್ಪಗಳ ಮಧ್ಯದಲ್ಲಿರುವ ಹೊಯ್ಸಳಕಾಲದ ಲಕ್ಷ್ಮೀನರಸಿಂಹನ ಶಿಲ್ಪ ಸುಂದರವಾಗಿದೆ. ಹೊಯ್ಸಳಕಾಲದ ವೀರ ಮತ್ತು ಮಾಸ್ತಿಕಲ್ಲುಗಳು ಎರಡಿವೆ. ಕೋಣೆಯೊಂದರಲ್ಲಿ ಕೆಳದಿ ಸಂಸ್ಥಾನ ಉದಯಕ್ಕೆ ಮೂಲ ಕಾರಣರಾದ ಎಡವಮುರಾರಿ, ಬಲವಮುರಾರಿಯರ ಮತ್ತು ಅವರ ಹೆಂಡತಿಯರ ಸುಮಾರು ೪೯೦ ವರ್ಷದಷ್ಟು ಹಳೆಯದಾದ ಬೃಹದಾಕಾರದ ಮರದ ಶಿಲ್ಪಗಳಿವೆ. ಕೆಳದಿ-ಸಾಗರ ಮಾರ್ಗದಲ್ಲಿ ಹಳ್ಳಿಬೈಲು ಎಂಬಲ್ಲಿ ರಸ್ತೆಯ ಎರಡೂ ಕಡೆ ಇರುವ ಕಟ್ಟೆಗಳು ಇವರುಗಳು ರಾಜ್ಯ ಸ್ಥಾಪನೆಗಾಗಿ ಆತ್ಮಾರ್ಪಣೆ ಮಾಡಿಕೊಂಡ ಸ್ಥಳ ಎಂದು ಹೇಳಲಾಗುತ್ತದೆ.
**   **   **   **
ಮನವಿ
     ಇದು ಕವಿ ವಂಶಸ್ಥರ ಕುಟುಂಬದ ಹಾಗೂ ಬಂಧು ಬಳಗದವರ ಪತ್ರಿಕೆಯಾಗಿದ್ದು, ಈ ಪತ್ರಿಕೆಗೆ ಕುಟುಂಬದವರೇ ಆಧಾರ. ಕೆಳದಿಯಲ್ಲಿ ನಡೆದ ಎರಡನೆಯ ವಾರ್ಷಿಕ ಕುಟುಂಬ ಸಮಾವೇಶದಲ್ಲಿ ಹಾಗೂ ೧೫-೦೬-೨೦೦೮ರಲ್ಲಿ ನಡೆದ ಪತ್ರಿಕಾ ಸಮಿತಿ ಸಭೆಯಲ್ಲಿ ನಿರ್ಧಾರವಾಗಿರುವಂತೆ ಪ್ರತಿ ಕುಟುಂಬದ ಪ್ರತಿ ಘಟಕದಿಂದ ವಾರ್ಷಿಕ ರೂ. ೫೦೦/- ಅನ್ನು ವಂತಿಕೆಯಾಗಿ ಸಂಗ್ರಹಿಸಲು ಉದ್ದೇಶಿಸಿದ ವಿಷಯ ತಿಳಿದದ್ದೇ ಆಗಿದೆ.  ಈ ಹಣವನ್ನು ಪತ್ರಿಕೆಗೆ ಮಾತ್ರವಲ್ಲದೆ ಕುಟುಂಬಗಳ ವಾರ್ಷಿಕ ಸಮ್ಮೇಳನ ನಡೆಸಲು ಯಾರೂ ಮುಂದೆ ಬರದಿದ್ದ ಸಂದರ್ಭದಲ್ಲಿ ಸಹ ಬಳಸಲು ಉದ್ದೇಶಿಸಿರುವುದರಿಂದ ಎಲ್ಲರ ಸಹಕಾರ ಕೋರಿದೆ. ವಾರ್ಷಿಕವಾಗಿ ರೂ. ೫೦೦/- ನೀಡುವುದು ಕಷ್ಟವಾಗಲಾರದಾದರೂ, ಇಷ್ಟೇ ಕೊಡಬೇಕೆಂದು ಒತ್ತಾಯವಿರುವುದಿಲ್ಲ. ಪಾವತಿಗೆ ರಸೀದಿ ನೀಡಲಾಗುವುದು. ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಬಳಗದ ಕುಟುಂಬಗಳವರು ಹಾಗೂ ಹಿತೈಷಿಗಳು ಸ್ವ ಇಚ್ಛೆಯಿಂದ ಸಹಕಾರ ನೀಡಿದಲ್ಲಿ ಸ್ವಾಗತವಿದೆ.
     ಸಂಗ್ರಹವಾದ ಮೊಬಲಗನ್ನು ಶ್ರೀ ಸಾ.ಕ. ಕೃಷ್ಣಮೂರ್ತಿ ಮತ್ತು ಶ್ರೀ ಕವಿಸುರೇಶರ ಹೆಸರಿನಲ್ಲಿ ಬೆಂಗಳೂರಿನ ಬನಶಂಕರಿ ೨ನೆಯ ಹಂತದ ಸಿಂಡಿಕೇಟ್ ಬ್ಯಾಂಕ್‌ನ ಶಾಖೆಯಲ್ಲಿ ಜಂಟಿ ಖಾತೆಯಲ್ಲಿ  ಜಮಾ ಇರಿಸಿ, ಸಮಿತಿ ನಿರ್ಧಾರ ಪಡೆದು ವೆಚ್ಚ ಮಾಡಲಾಗುವುದು. ಖಾತೆಸಂ. ೦೪೭೮೨೦೧೦೦೩೭೬೫೦   ಆಗಿದ್ದು, ಈ ಖಾತೆಗೆ ನೇರವಾಗಿ ಜಮಾ ಮಾಡಲೂ ಅವಕಾಶವಿದೆ. ಆದಾಯ - ವೆಚ್ಚದ ವಿವರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಪರಿಶೀಲನೆಗೂ ಅವಕಾಶವಿದೆ.
     ಸಂಗ್ರಹವಾಗುವ ಮೊಬಲಗು ಸದುದ್ದೇಶಕ್ಕೆ/ ಸಮಾಜಕಾರ್ಯಕ್ಕೆ ಮಾತ್ರ ಬಳಕೆಯಾಗುವುದರಿಂದ ಮನೆಗಳಲ್ಲಿ ಶುಭಕಾರ್ಯ ನಡೆಯುವಾಗ, ಇತರ ಸಂದರ್ಭಗಳಲ್ಲಿ ಹಾಗೂ ಹಿರಿಯರ ನೆನಪಿಗಾಗಿ ಸಹ ಮಂಗಳನಿಧಿ ಹೆಸರಿನಲ್ಲಿ ದೇಣಿಗೆ ನೀಡಬಹುದು.
*************************
ದಾರಿದೀಪವಾಗಲಿ
     ಪ್ರತಿವ್ಯಕ್ತಿಯೂ ಒಂದೊಂದು ಜನ್ಮದಲ್ಲೂ ಆಯಾ ಜನ್ಮದ ಹಿರಿಯರ ಬಳುವಳಿಯಿಂದ ಹೊಸ ಹೊಸ ಸಂಸ್ಕಾರಗಳನ್ನು ಪಡೆಯುತ್ತಾ ಮುಕ್ತಿಪಥದಲ್ಲಿ ವಿಕಾಸಗೊಳ್ಳುತ್ತಾನೆ. ಅದರಂತೆ ಕವಿವಂಶದಲ್ಲಿ ಜನಿಸಿರುವ ನಮಗೆ ನಮ್ಮ ಪೂರ್ವಜರಿಂದ ಪ್ರಾಪ್ತವಾಗಿರುವ ಸದ್ಗುಣ ಸಂಪತ್ತುಗಳಿಗಾಗಿ ಅವರೆಲ್ಲರನ್ನೂ ಕೃತಜ್ಞತಾಪೂರ್ವಕವಾಗಿ ಶಿರಬಾಗಿ ನಮಿಸೋಣ.
     ಇಂತಹ ಸದ್ಗುಣ ಸಂಪತ್ತುಗಳ ವೃದ್ಧಿಗೆ ಸಹಕಾರಿಯಾಗಿ, ದಾರಿದೀಪವಾಗಿ ಕವಿಕಿರಣ ಬೆಳಗಲಿ ಎಂದು ಆಶಿಸುತ್ತೇನೆ.
-ಸಾ.ಕ. ಕೃಷ್ಣಮೂರ್ತಿ, ಬೆಂಗಳೂರು.
*****************
 ಪ್ರೀತಿ
ಇನ್ನೊಬ್ಬರ ಇಚ್ಛೆ, ಬಯಕೆಗಳಿಗೆ ತನ್ನ ಇಚ್ಛೆ-ಬಯಕೆಗಳಿಗಿಂತ ಹೆಚ್ಚಿನ ಆದ್ಯತೆ ನೀಡುವುದು ಪ್ರೀತಿಯ ಶುದ್ಧರೂಪವಾಗಿದೆ.
********************
-ಪುಟಗಳು 15-18-
****************************
ಸುದ್ದಿ - ಕಿರಣ !!
 ದಿ.೦೫-೦೧-೦೮ರ ಕೆಳದಿ ಉತ್ಸವದಲ್ಲಿ   ಸಂಶೋಧನಾ ರತ್ನ ಬಿರುದು ಮತ್ತು ರೂ.೨೫೦೦೦/- ನಗದು ನೀಡಿ ಶ್ರೀ ಗುಂಡಾ ಜೊಯಿಸ್‌ರಿಗೆ ಸನ್ಮಾನ.
* ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಶಿವಮೊಗ್ಗೆಯಲ್ಲಿ ದಿ. ೨೭-೦೭-೦೮ರಂದು ಮತ್ತು ಅಲ್ಪ ಸಂಖ್ಯಾತರ ಮತ್ತು ಹಿರಿಯ ನಾಗರೀಕರ ಇಲಾಖೆ, ಬೆಂಗಳೂರು, ಇವರ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಹಿರಿಯ ನಾಗರಿಕ ವಿದ್ವಾಂಸರೆಂದು ಶ್ರೀ ಗುಂಡಾ ಜೊಯಿಸರನ್ನು ದಿ.೧-೧೦-೦೮ರಂದು ಸನ್ಮಾನಿಸಲಾಯಿತು.
* ಶಿಕಾರಿಪುರದ ಶ್ರೀಮತಿ ಕಾಶೀಬಾಯಿಯವರು ಸುಗಮ ಸಂಗೀತದಲ್ಲಿ ಆಕಾಶವಾಣಿಯ ಬಿ ಗ್ರೇಡ್ ಕಲಾವಿದರಾಗಿ ಆಯ್ಕೆಯಾಗಿರುತ್ತಾರೆ.
* ಶ್ರೀ ಬಿ.ವಿ.ಹರ್ಷ  ದಕ್ಷಿಣ ಕೊರಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ಅಮೆರಿಕೆಯ ಕೊಲಂಬೋ ವಿಶ್ವವಿದ್ಯಾನಿಲಯದ ಎಂ.ಟೆಕ್. ಪದವಿ ಯನ್ನು ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ಮುಗಿಸಿದ್ದಾರೆ.
* ಕು. ಬಿ.ಎಸ್.ಆರ್. ದೀಪಕ್ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ (ವಯಲಿನ್) ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಉತ್ತೀರ್ಣನಾಗಿದ್ದು, ಆಕಾಶವಾಣಿಯಲ್ಲಿ ಬಿ ಗ್ರೇಡ್ ಕಲಾವಿದನಾಗಿ ಆಯ್ಕೆಯಾಗಿದ್ದಾನೆ.   ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಡೆಸಿದ ಅಂತರ ಕಾಲೇಜು ಸ್ಪರ್ಧೆಯಲ್ಲಿ (ವಯಲಿನ್) ಪ್ರಥಮ ಸ್ಥಾನ ಪಡೆದಿದ್ದಾನೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರತಿಷ್ಠಿತ ಶಿಷ್ಯವೇತನವನ್ನು (ಸಂಗೀತ) ಪಡೆದಿದ್ದಾನೆ. ಬಿ.ಎ.ಎಂಎಸ್. ಪ್ರಥಮ ಹಂತದ ಪರೀಕ್ಷೆ ಯಲ್ಲಿ ವಿಶ್ವವಿದ್ಯಾಲಯಕ್ಕೆ ೨ನೇ ಸ್ಥಾನ ಪಡೆದು ಉತ್ತೀರ್ಣನಾಗಿದ್ದಾನೆ.
* ಕು. ಬಿ.ಎಸ್.ಆರ್. ಅಂಬಿಕಾ ಶಿವಮೊಗ್ಗದ ವಿದ್ಯಾ ಗಣಪತಿ ಸಂಘದವರು ನಡೆಸುವ ಜೂನಿಯರ್ ಸಂಗೀತ ಕಛೇರಿಗಳಲ್ಲಿ ಅನೇಕ ಕಲಾವಿದರಿಗೆ ವಯಲಿನ್ ಸಹಕಾರ ನೀಡಿ ಮೆಚ್ಚುಗೆ ಪಡೆದಿದ್ದಾಳೆ. ಸಂಗೀತ ಹಾಡುಗಾರಿಕೆ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಕಡೂರಿನಲ್ಲಿ ದುರ್ಗಾ ಸೇವಾ ಸಮಿತಿಯ ವತಿಯಿಂದ ಏರ್ಪಾಟಾದ ಕಾರ್ಯ ಕ್ರಮದಲ್ಲಿ ಅಣ್ಣ ದೀಪಕ್‌ನೊಡನೆ ವಯಲಿನ್-ದ್ವಂದ್ವ ಕಾರ್ಯಕ್ರಮ ನೀಡಿದ್ದಾಳೆ.
*  ದಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ),ಬೆಂಗಳೂರು, ಇವರು ಎಲ್&ಟಿ ಯ ಇಂಜಿನಿಯರ್ ಆದ ಶ್ರೀ ಕೆ.ಜಿ.ನಾಗರಾಜ ಜೊಯಿಸ್‌ರವರಿಗೆ ಅವರ ಕಾರ್ಯಕುಶಲತೆಗಾಗಿ ೨೯.೮.೨೦೦೮ರಂದು ಧಾರವಾಡದಲ್ಲಿ ನಡೆದ ಸಮಾರಂಭ ದಲ್ಲಿ ACCE-Sarvamangala Award-2008 ಪ್ರಶಸ್ತಿಯನ್ನು ಲೋಕೋಪಯೋಗಿ ಸಚಿವರಾದ ಮಾನ್ಯ ಶ್ರೀ ಸಿ.ಎಂ.ಉದಾಸಿಯವರ ಹಸ್ತ ಪ್ರದಾನ ಮಾಡಿದೆ.
*   ಶ್ರೀ ನಾಗರಾಜ್ ಜೊಯಿಸ್-ರೂಪಾ ರವರ ಪುತ್ತಿ ಕು.ಸಿರಿ ಎನ್.ಜೊಯಿಸ್ ರಾಷ್ಟ್ರೀಯ ಮಟ್ಟದ ಕಲರ್ ಚ್ಯಾಂಪ್-೨೦೦೮ ನ ಪ್ರಥಮ ಸುತಿನಲ್ಲಿ ವಿಜಯಿ ಎಂದು ಫೋಷಿತೆ;
*   ಶ್ರೀ ಜಗದೀಶ ಚಂದ್ರ  ಇವರು ಸಾಮಾನ್ಯ ಮತ್ತು ಮಧ್ಯಮವರ್ಗದವರಿಗಾಗಿ ಗೃಹ ವಿನ್ಯಾಸದ ಬಗ್ಗೆ   ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಿಯಮಿತವಾಗಿ 'ಮನೆ ಕಥೆ' ಶೀರ್ಷಿಕೆಯಡಿಯಲ್ಲಿ ಲೇಖನಗಳನ್ನು ಬರೆಯುತ್ತಿರುತ್ತಾರೆ.
*   ಶ್ರೀಮತಿ .ಬಿಂದು ಮತ್ತು ಶ್ರೀ ರಾಘವೇಂದ್ರರವರ ಪುತ್ರಿ, ಅಕ್ಷಯಳ (ಜಯಗೌರಿ) ೨ನೆಯ ವರ್ಷದ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ೧೪-೦೬-೨೦೦೮ ರಂದು ಅನಾಥ ಮಕ್ಕಳಿಗೆ ಶಿಕ್ಷಣಶುಲ್ಕ ಪಾವತಿಸುವ ಸಲುವಾಗಿ ಬೆಂಗಳೂರಿನ ಒಂದು ಸೇವಾಸಂಸ್ಥೆಗೆ ರೂ. ೧೦೦೦೦/- ದೇಣಿಗೆ ನೀಡಿ ಆಚರಿಸಲಾಯಿತು.
*   ಬೆಂಗಳೂರಿನ ಕಲಾಶ್ರೀ ಸಾಂಸ್ಕೃತಿಕ ಸಮ್ಮಿಲನ ವೇದಿಕೆ ಹಾಗೂ ಸುಚೇತನಾ ಕಲಾವಿದರು ಜಂಟಿಯಾಗಿ ೭-೦೯-೦೮ರಂದು ಆಯೋಜಿಸಿದ್ದ ವಿಜ್ಞಾನ ಯುಗದಲ್ಲಿ ಆಧ್ಯಾತ್ಮದ ಅವಶ್ಯಕತೆ ವಿಚಾರಗೋಷ್ಟಿ ಸಂದರ್ಭದಲ್ಲಿ ವೇಷಭೂಷಣ ಸ್ಪರ್ಧೆ ಸಹ ಏರ್ಪಡಿಸಿದ್ದು ಭಾಗ ವಹಿಸಿದ್ದ ಅತಿ ಕಿರಿಯ ಸ್ಪರ್ಧಿ ಅಕ್ಷಯ(ಜಯಗೌರಿ) ಬಹುಮಾನ ವಿಜೇತೆ. 
   
* ಶ್ರೀ ಗುರುಮೂರ್ತಿ ಮತ್ತು ದಿ.ವಿಜಯಲಕ್ಷ್ಮಿ ಇವರ ಪುತ್ರ ಚಿ. ನಿತಿನ್‌ನ ಉಪನಯನ ಕಾರ್ಯಕ್ರಮ ಕೊಲ್ಲೂರಿನಲ್ಲಿ ಇತ್ತೀಚೆಗೆ ಬಂಧು-ಮಿತ್ರರರ ಸಮ್ಮುಖ ದಲ್ಲಿ ಸಂಪನ್ನವಾಯಿತು.

*   ಶ್ರೀ ಕ.ವೆಂ. ಅನಂತ ಮತ್ತು ಶ್ರೀಮತಿ ರಾಧಾರವರ ಪುತ್ರ ಬೆನಕನ ಚೂಡಾಕರ್ಮ ಅಮೆರಿಕಾದ ಡೆಲವೇರ್‌ನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ೩೦-೦೬-೨೦೦೮ರಂದು ನೆರವೇರಿತು.
* ಗೃಹಪ್ರವೇಶ: ಡಾ. ವೆಂಕಟೇಶಜೋಯಿಸ್ ಮತ್ತು ಸುಮನಾಜೋಯಿಸ್ ರವರು ದಿನಾಂಕ ೦೮-೦೫-೨೦೦೮ ರಂದು ಸಾಗರದ ಅಣಲೇಕೊಪ್ಪ ಬಡಾವಣೆಯಲ್ಲಿ ಕಟ್ಟಿಸಿದ ನೂತನ ಗೃಹ ಕೆಳದೀಶದ ಗೃಹಪ್ರವೇಶವನ್ನು ಬಂಧು ಮಿತ್ರರ ಸಮ್ಮುಖದಲ್ಲಿ ನೆರವೇರಿಸಿದರು.
*   ಶ್ರೀ ಕೆ.ವಿ. ರಾಘವೇಂದ್ರ ಮತ್ತು ಶ್ರೀಮತಿ ಬಿಂದು ರವರ ಹೆಚ್.ಎಸ್.ಆರ್.ಲೇಔಟ್, ೧ನೆಯ ಸೆಕ್ಟರ್, ೨೬ನೆಯ ಮುಖ್ಯರಸ್ತೆ, ೧೧ಎ ಅಡ್ಡರಸ್ತೆಯ ನಂ.೭೬೮ರಲ್ಲಿನ ನೂತನ ಗೃಹ 'ಕ್ಷೇಮ'ದ ಗೃಹಪ್ರವೇಶ ದಿನಾಂಕ    ೧೦-೧೧-೨೦೦೮ರಂದು ಸರಳವಾಗಿ ನಡೆಯಿತು.
************************

೨೦೦೮ರಲ್ಲಿ ಪ್ರಕಟವಾದ ಕೃತಿಗಳು:೧. ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ (ಸತ್ಯಶೋಧನೆ) - ಲೇ: ಕೆಳದಿ ಗುಂಡಾಜೋಯಿಸ್. ಪ್ರ: ಕೆಳದಿ ವ,ಸಂ.ಇ.ಸಂ.ಕೇಂದ್ರ, ಕೆಳದಿ. ಪು. ೧೬೬. ಬೆಲೆ: ರೂ.೧೮೦.
೨.  ಉತ್ಕೃಷ್ಟದೆಡೆಗೆ (ಲೇಖನಗಳ ಸಂಗ್ರಹ) - ಲೇ: ಕವಿ ವೆಂ. ಸುರೇಶ, ಪ್ರ: ಕವಿ ಪ್ರಕಾಶನ, ಶಿವಮೊಗ್ಗ. ಪು. ೯೮. ಬೆಲೆ: ರೂ.೭೫. ೧೮-೦೫-೨೦೦೮ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಶ್ರೀ ಮನು ಬಳಿಗಾರ್‌ರಿಂದ ಬಿಡುಗq.
೩. ಕೆಳದಿ ಕವಿ ಲಿಂಗಣ್ಣ ವಿರಚಿತ ಪಾರ್ವತಿ ಪರಿಣಯ - ಸಂ: ಡಾ. ಕೆಳದಿ ವೆಂಕಟೇಶ ಜೋಯಿಸ್. ಪ್ರ: ಕೆಳದಿ ವ.ಸಂ.ಇ.ಸಂ. ಕೇಂದ್ರ, ಕೆಳದಿ.
೪.   ರತ್ನಾಂಕುರ - ಕಥಾಮಾಲಿಕೆ - ಲೇ: ರತ್ನಮ್ಮ ಸುಂದರರಾವ್, ಪ್ರ: ವಸಂತ ಸಾಹಿತ್ಯ ಗ್ರಂಥಮಾಲಾ, ಬೆಂಗಳೂರು.  ಪು. ೧೬೬.

*   ಬಿಡುಗಡೆಯಾಗಲಿರುವ ಕೃತಿಗಳು:
೧.  ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ - ಲೇ:   ಕ. ವೆಂ. ನಾಗರಾಜ್,ಹಾಸನ. ಪ್ರ: ಕವಿ ಪ್ರಕಾಶನ, ಶಿವಮೊಗ್ಗ.
೨.  ಕವಿ ಮನೆತನದ ಬಂಧು-ಬಳಗದವರ ವಿಳಾಸ, ದೂರವಾಣಿ, ಇತ್ಯಾದಿ ವಿವರಗಳ ಡೈರೆಕ್ಟರಿ - ಸಂ. ಕವಿ ವೆಂ. ಸುರೇಶ, ಪ್ರ: ಕವಿ ಪ್ರಕಾಶನ, ಶಿವಮೊಗ್ಗ.

******************
   ಪ್ರಕಟವಾಗಬಹುದಾದ ಸುದ್ದಿಗಳು ಇನ್ನೂ ಇರಬಹುದು. ತಿಳಿದ ಮತ್ತು ತಿಳಿಸಲಾದ ಸುದ್ದಿಗಳನ್ನು ಮಾತ್ರ ಇಲ್ಲಿ ಕೊಟ್ಟಿದೆ. ಸಂಬಂಧಿಸಿದವರು ಸಕಾಲದಲ್ಲಿ ಮಾಹಿತಿಗಳನ್ನು ನೀಡಿದರೆ ಪ್ರಕಟಿಸಲು ಅನುಕೂಲವಾಗುವುದು.
-ಸಂ.

****************************

೧೮-೦೫-೦೮ರಂದು ಶಿವಮೊಗ್ಗದಲ್ಲಿ ಕವಿ ಸುರೇಶರ 'ಉತ್ಕೃಷ್ಟದೆಡೆಗೆ' ಕೃತಿ ಬಿಡುಗಡೆ ಸಮಾರಂಭದಲ್ಲಿ ಕ.ವೆಂ. ನಾಗರಾಜರಿಂದ ಕೃತಿ ಪರಿಚಯ

********************
ಗೋತ್ರ ಪ್ರವರ್ತಕ ಹರಿತಸ
ಮನವಿ
    

     ಕೆಳದಿ ಕವಿ ಮನೆತನದ ಕುಟುಂಬಗಳವರು ಹರಿತಸ ಗೋತ್ರಕ್ಕೆ ಸೇರಿದವರಾಗಿದ್ದು, ಹರಿತಸರ ಕುರಿತು ತಿಳಿದುಕೊಂಡಿರುವುದು ಸೂಕ್ತವಾದುದು. ಆದುದರಿಂದ ಇವರ ಕುರಿತು ಪರಿಚಯ ಲೇಖನ ಬರೆದುಕೊಡಲು ವಿಪ್ರವಾಹಿನಿಯಲ್ಲಿ ಋಷಿಮುನಿಗಳ ಪರಿಚಯ ಲೇಖನ ಮಾಲಿಕೆ ಬರೆಯುತ್ತಿರುವ ಶ್ರೀ ಬೆಳವಾಡಿ ಅಶ್ವತ್ಥ ನಾರಾಯಣರವರನ್ನು ಕೋರಲಾಗಿತ್ತು. ಅವರು ಹರಿತಸರ ಬಗ್ಗೆ ಮಾಹಿತಿ ಸಂಗ್ರಹಿಸಲು ಬಹಳ ಶ್ರಮ ಪಟ್ಟಿದ್ದಾರೆ. ಇದಕ್ಕಾಗಿ ಇವರು ಹಲವಾರು ಊರುಗಳಿಗೆ ಪ್ರವಾಸ ಸಹ ಮಾಡಿದ್ದಾರೆ. ಇವರಿಗೆ ಅಪೂರ್ಣ ಮಾಹಿತಿ ಮಾತ್ರ ಲಭ್ಯವಾಗಿದ್ದು, ಆಧಾರವಿಲ್ಲದೆ ಲೇಖನ ಬರೆಯಬಾರದೆಂಬ ಉತ್ತಮ ಭಾವನೆ ಹೊಂದಿದ್ದಾರೆ. ಕವಿ ಕುಟುಂಬದ ಯಾರಿಗೇ ಆಗಲಿ, ಹರಿತಸರ ಕುರಿತು ಮಾಹಿತಿ ಇದ್ದಲ್ಲಿ ನೀಡಲು ಕೋರಿದೆ. ಇಲ್ಲದಿದ್ದಲ್ಲಿ ತಮಗೆ ಗೊತ್ತಿರುವ ಪ್ರಾಜ್ಞರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಕ್ಕೆ ಅವರುಗಳೂ ಕೈಜೋಡಿಸಲು ವಿನಂತಿಸಿದೆ.
-ಸಂ.

************************

ಕವಿಮನೆತನದವರು ಬೆಳೆಸಬಹುದಾದ ಸಂಪ್ರದಾಯ
೧. ವರ್ಷಕ್ಕೊಮ್ಮೆ ಕೆಳದಿ, ಕೊಲ್ಲೂರುಗಳಿಗೆ ಭೇಟಿ,
೨. ವರ್ಷಕ್ಕೊಮ್ಮೆ ಬಂಧು ಬಳಗದ ಸಮಾವೇಶಕ್ಕೆ ಹಾಜರಾಗುವುದು.
೩. ಶುಭ ಸಮಾರಂಭ, ಇತರ ಸಮಾರಂಭಗಳ  ಸಂದರ್ಭಗಳಲ್ಲಿ 'ಮಂಗಳ ನಿಧಿ' ನೀಡುವುದು.


******************************************** ***
             -ಪುಟಗಳು ೧೯,೨೦-
******************************************************



                                                                             ರಕ್ಷಾಪುಟ -3
**********************************************************

ರಕ್ಷಾಪುಟ -4
                                                                                       
********************
ಸಹೃದಯ ವಾಚಕರಿಗೆ ವಂದನೆಗಳು.