ಮಂಗಳವಾರ, ಜುಲೈ 26, 2011

'ಕವಿಕಿರಣ' - 01-06-2010ರ ಸಂಚಿಕೆ

ಸಹೃದಯರೇ,
                    'ಕವಿಕಿರಣ'ದ 01-06-2010ರ ಸಂಚಿಕೆಯನ್ನು ತಮ್ಮ ಮುಂದಿಟ್ಟಿದೆ. ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ವಿನಂತಿಸುವೆ.
ತಮ್ಮವ,
ಕ.ವೆಂ.ನಾಗರಾಜ್.





ಅಂತಃಕಿರಣ
ಕಳೆದು ಹೋಗಿದ್ದೇವೆ;                             
                   ಹುಡುಕಿಕೊಡುವಿರಾ?
ಹಿನ್ನೋಟ:

     ವಂಶಮೂಲವನರಸಿ ಜಾಡರಿತು ಸಾರೆ|
     ಜಾಡು ಮುಗಿದೆಡೆಯಲ್ಲಿ ಜೀವಾಮೃತಧಾರೆ||
     ಮುನ್ನೂರು ವರುಷಗಳ ಹಾದಿಯಿದು ಜಾಣಾ|
     ಹತ್ತು ತಲೆಮಾರುಗಳ ಯಶಗೀತೆ ಕಾಣಾ||

     ಕೆಳದಿ ಕವಿಮನೆತನಕ್ಕೆ ಸೇರಿದವರೆಂದು ಗೊತ್ತಿರದ ಕುಟುಂಬವೊಂದು ತಮ್ಮ ವಂಶದ ಮೂಲವನ್ನು ಹುಡುಕಿ ಸಫಲರಾಗಿ ಸಂಭ್ರಮಿಸಿದ ಕುರಿತು ಸಂಕ್ಷಿಪ್ತವಾಗಿ ತಮ್ಮೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಬೇಕೆಂಬ ತುಡಿತದ ಫಲವೇ ಈ ಬರಹ. ಆ ಕುಟುಂಬ ಬೇರಾವ ಕುಟುಂಬವಾಗಿರದೆ ನಮ್ಮದೇ ಕುಟುಂಬವಾಗಿದೆ. ಸುಮಾರು ಎಂಟು ವರ್ಷಗಳ ಸುದೀರ್ಘ ಪ್ರಯತ್ನ ಈ ಯಶಸ್ಸಿನ ಹಿನ್ನೆಲೆಯಲ್ಲಿದೆ.
    ನನ್ನ ಅಜ್ಜ ದಿ.  ಸುಬ್ರಹ್ಮಣ್ಯಯ್ಯನವರು (೧೯೦೪-೧೯೬೬)   ಬಾಲ್ಯಾವಸ್ಥೆಯಲ್ಲೇ ತಮ್ಮ ತಂದೆ-ತಾಯಿಯರನ್ನು ಕಳೆದುಕೊಂಡು, ಕೊಪ್ಪದಲ್ಲಿದ್ದ ತಮ್ಮ ಅಜ್ಜ (ತಾಯಿಯ ತಂದೆ) ವೆಂಕಟಸುಬ್ಬಯ್ಯನವರ ಆಶ್ರಯದಲ್ಲಿ ಬೆಳೆದಿದ್ದರಿಂದ ಸಹಜವಾಗಿ ತಂದೆಯ ಕಡೆಯ ಸಂಬಂಧಗಳು ಬಿಟ್ಟುಹೋಗಿದ್ದಲ್ಲದೆ ಅವರ ಪರಿಚಯ ಮಕ್ಕಳು, ಮೊಮ್ಮಕ್ಕಳಿಗೆ ಆಗಲಿಲ್ಲ. ನಾವುಗಳೂ ನಮ್ಮ ಹೆಸರಿನ ಇನಿಷಿಯಲ್‌ನಲ್ಲಿದ್ದ ಕೆ ಅಂದರೆ ಕೊಪ್ಪ ಎಂದೇ ಭಾವಿಸಿದ್ದೆವು. ಸುಬ್ರಹ್ಮಣ್ಯಯ್ಯನವರು ತರ್ಪಣಾದಿ ಕಾರ್ಯಗಳಲ್ಲಿ ಸ್ಮರಿಸಬೇಕಾದ ಹೆಸರುಗಳ ವಿವರಗಳನ್ನು ಒಂದು ಚೀಟಿಯಲ್ಲಿ ಬರೆದು ತಮ್ಮ ಮಗ ದಿ. ವೆಂಕಟಸುಬ್ಬರಾಯರಿಗೆ (೧೯೨೫-೨೦೦೯) ಕೊಟ್ಟಿದ್ದರು. ಈ ಚೀಟಿಯನ್ನು ಗಮನಿಸಿದ ನಾನು ಅದರಲ್ಲಿನ ವಿವರಗಳನ್ನು ಆಧರಿಸಿ ವಂಶವೃಕ್ಷ ಸಿದ್ಧಪಡಿಸಿ ೨೦೦೦ನೆಯ ಸಾಲಿನಲ್ಲಿ ಪ್ರತಿಗಳನ್ನು ಬಂಧುಗಳಿಗೆ ನೀಡಿದ್ದೆನು. ಅದರಲ್ಲಿ ಕೊಪ್ಪದ ವೆಂಕಣ್ಣನ ಅಮರ ವಂಶಾವಳಿ ಎಂದೇ ನಮೂದಿಸಿದ್ದೆನು. ವರ್ಷಕ್ಕೊಮ್ಮೆ ಅಥವಾ ಅಗತ್ಯ ಬಿದ್ದಾಗ ಈ ವಂಶವೃಕ್ಷದಲ್ಲಿ ಪರಿಷ್ಕರಣೆ ಮಾಡುತ್ತಿದ್ದೆನು. ಈರೀತಿ ಸಿದ್ಧಪಡಿಸಿದ ವಂಶವೃಕ್ಷದಲ್ಲಿ ಕಂಡು ಬಂದ ಹೆಸರುಗಳವರ ಅಣ್ಣ-ತಮ್ಮಂದಿರು, ಮಕ್ಕಳು, ಮೊಮ್ಮಕ್ಕಳ ವಿವರ ನಮಗೆ ಗೊತ್ತಿರಲಿಲ್ಲ. ಅವರುಗಳನ್ನು ಹೇಗಾದರೂ ಮಾಡಿ ಹುಡುಕಬೇಕು ಎಂಬ ಪ್ರಯತ್ನ ಸಾಗಿತು. ಯಾವ ಯಾವುದೋ ಸಮಾರಂಭಗಳಲ್ಲಿ. ಊರುಗಳಲ್ಲಿ ಅವರು ಹುಚ್ಚೂರಾಯರ ಮೊಮ್ಮಗ ಅಂತೆ, ರಾಮಣ್ಣನವರ ಸಂಬಂಧಿಗಳಂತೆ ಇತ್ಯಾದಿ ಕೇಳಿಬಂದಾಗ ಪರಿಚಯಿಸಿಕೊಂಡು ವಿಚಾರಿಸುತ್ತಿದ್ದೆ.  ಅವರು ಸಂಬಂಧಿಗಳಲ್ಲ ಎಂದು ತಿಳಿದಾಗ ನಿರಾಶೆಯೂ ಆಗುತ್ತಿತ್ತು. ಹೇಳಬೇಕೆಂದರೆ ನನ್ನ ಹೆಚ್ಚಿನ ಗಮನ ಕೊಪ್ಪ ಮತ್ತು ಶಿವಮೊಗ್ಗಗಳಿಗೆ ಸೀಮಿತವಾಗಿತ್ತು. ಕಂದಾಯ ಇಲಾಖಾಧಿಕಾರಿಯಾಗಿ ನನಗಿದ್ದ ಕಾರ್ಯಬಾಹುಳ್ಯ ಸಹ ಈ ಕುರಿತು ಹುಡುಕಾಟಕ್ಕೆ ಅಡ್ಡಿಯಾಗಿತ್ತು.
     ರಾಜ್ಯ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದ ನನ್ನ ತಮ್ಮ ಸುರೇಶ ಐದು ವರ್ಷಗಳ ಹಿಂದೆ ಸ್ವಇಚ್ಛಾ ನಿವೃತ್ತಿ ಪಡೆದು ಶಿವಮೊಗ್ಗದಲ್ಲಿ ನೆಲೆ ನಿಂತಾಗ ಆತನಿಂದ ಈ ಅನ್ವೇಷಣೆ ಮುಂದುವರೆಯಿತು. ನಾವಿಕ ಪತ್ರಿಕೆಯಲ್ಲಿ ಶಿವಮೊಗ್ಗದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಪ್ರವೇಶದ್ವಾರಕ್ಕೆ ಕವಿ ಸುಬ್ರಹ್ಮಣ್ಯಯ್ಯನವರ ಹೆಸರಿಡಬೇಕೆಂದು ಶ್ರೀ ಕೂಡ್ಲಿ ಜಗನ್ನಾಥಶಾಸ್ತ್ರಿಯವರು ಬರೆದ ಪತ್ರ ಗಮನಿಸಿ ಕವಿ ಸುಬ್ರಹ್ಮಣ್ಯಯ್ಯರೆಂದರೆ ನಮ್ಮ ಅಜ್ಜನೇ ಇರಬೇಕೆಂದು ಭಾವಿಸಿ ಅವರನ್ನು ನನ್ನ ತಮ್ಮ ವಿಚಾರಿಸಿದ. ಆದರೆ ಅವರು ಉಲ್ಲೇಖಿಸಿದ ಕವಿ ಸುಬ್ರಹ್ಮಣ್ಯಯ್ಯ ನಮ್ಮ ಅಜ್ಜ ಆಗಿರಲಿಲ್ಲ. ಆದರೆ ಕೆಳದಿಯ ಗುಂಡಾಜೋಯಿಸರನ್ನು ಸಂಪರ್ಕಿಸಲು ನೀಡಿದ ಅವರ ಸಲಹೆ ಮಾತ್ರ ಅತ್ಯಂತ ಅಮೂಲ್ಯವಾದುದಾಗಿತ್ತು. ಅವರ ಸಲಹೆಯಂತೆ ಕೆಳದಿ ಗುಂಡಾಜೋಯಿಸರನ್ನು ನನ್ನ ತಮ್ಮ ಸಂಪರ್ಕಿಸಿ ವಿಚಾರಿಸಿದಾಗ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯಿತು. ಶ್ರೀ ಗುಂಡಾಜೋಯಿಸರ ಬಳಿ ಇದ್ದ ಕವಿಮನೆತನದ ವಂಶವೃಕ್ಷದ ವಿವರಗಳು ನಮ್ಮ ವಂಶವೃಕ್ಷದ ವಿವರಗಳಿಗೆ ತಾಳೆಯಾಯಿತು.. ಎರಡು ವಂಶವೃಕ್ಷದಲ್ಲಿನ ಕೈಬಿಟ್ಟ ಕೊಂಡಿಗಳು ಸರಿಯಾಗಿ ಕೂಡಿಕೊಂಡವು. ಶ್ರೀ ಗುಂಡಾಜೋಯಿಸರ ಹತ್ತಿರವಿದ್ದ ವಂಶವೃಕ್ಷದಲ್ಲಿ ಹೆಸರಿಸಿದ್ದ ಬಂಧುಗಳನ್ನು ವಿಚಾರಿಸಲಾಗಿ ಅವರು ನಮ್ಮ ಗೋತ್ರದವರೇ ಆಗಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅಜ್ಜ ಸುಬ್ರಹ್ಮಣ್ಯಯ್ಯನವರನ್ನು ಕಂಡಿದ್ದವರು, ಕೇಳಿದ್ದವರೇ ಆಗಿದ್ದಲ್ಲದೆ ನಮ್ಮ ಅಜ್ಜ ಅವರುಗಳ ಮನೆಗೆ ಹೋಗಿಬರುತ್ತಿದ್ದುನ್ನು ಧೃಢಪಡಿಸಿದ್ದು ಸಂಬಂಧ ಸರಪಳಿ ಒಂದಾಗಿದ್ದುದನ್ನು ಖಚಿತಪಡಿಸಿತು. ಹಲವಾರು ರೀತಿಯಲ್ಲಿ ಪರಿಶೀಲಿಸಿದಾಗ ವಿಷಯ ಮತ್ತಷ್ಟು ದೃಢಪಟ್ಟಿತು. ನಾವು ಕವಿಮನೆತನದವರೆಂದು ತಿಳಿದು ನಮಗೆ ಅತೀವ ಸಂತೋಷವಾಯಿತು. ಸಫಲ ಅನ್ವೇಶಣೆ ಮಾಡಿದ ಸುರೇಶ ಮತ್ತು ಅವನ ಸಹಕಾರಿಗಳಿಗೆ ಅಭಿನಂದನೆ ಸಲ್ಲಬೇಕು.
     ಹುಡುಕುವ ಕಾರ್ಯದಲ್ಲಿ ಸ್ವಜನರೂ ಸೇರಿದಂತೆ ಇತರರಿಂದಲೂ ಕೆಲವರ ಅಪಹಾಸ್ಯ, ನಿಂದೆ, ಸಂಶಯ, ತಿರಸ್ಕಾರ, ಅಲಕ್ಷ್ಯ, ಅಸಹಕಾರಗಳ ಜೊತೆಗೆ ಮೆಚ್ಚುಗೆ ಸಹಕಾರಗಳೂ ಬೆರೆತು ಒಳ್ಳೆಯ ಅನುಭವ ದೊರಕಿತು. ನಂತರದಲ್ಲಿ ಕ್ಷಿಪ್ರ ಬೆಳವಣಿಗೆಗಳಾದವು. ಪರಸ್ಪರ ಪರಿಚಯವೇ ಇಲ್ಲದಿದ್ದ, ಸಂಪರ್ಕ ಇಲ್ಲದಿದ್ದ ಬಂಧುಗಳನ್ನು ಒಟ್ಟುಗೂಡಿಸಿ ೨೮-೦೧-೦೭ರಲ್ಲಿ ತಮ್ಮ ಸುರೇಶನ ಮನೆಯಲ್ಲಿ ಕವಿಕುಟುಂಬಗಳ ಮತ್ತು ಬಂಧುಬಳಗದವರ ಪ್ರಥಮ ಸಮಾವೇಶ ಜರುಗಿತು. ಅನೇಕ ವರ್ಷಗಳ ನಂತರ ಪ್ರಥಮವಾಗಿ ಬಂಧುಗಳ ಮಿಲನದ ಕಾರಣ ಅರುಣ ಪಾರಾಯಣ ಪಠಣ, ಮುಂತಾದ ವಿಧಿ ವಿಧಾನಗಳನ್ನು ನಡೆಸಲಾಯಿತು. ಕವಿ ಮನೆತನದ ಹಿಂದಿನ ಮತ್ತು ಈಗಿನ ಪೀಳಿಗೆಗಳ ಸಾಧನೆಗಳ ಕುರಿತು ಒಂದು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಎಲ್ಲಾ ಹಿರಿಯರನ್ನು, ಸಹಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿ ಕುಟುಂಬಗಳ ಸ್ಥೂಲ ಪರಿಚಯ, ವಂಶಾವಳಿ ವಿವರಗಳನ್ನು ಒಳಗೊಂಡ ಸುರೇಶನ ಕೃತಿ ಹಳೇ ಬೇರು-ಹೊಸ ಚಿಗುರು ಪುಸ್ತಕ ಬಿಡುಗಡೆಯಾಯಿತು.
     ೨೫-೧೨-೦೭ರಲ್ಲಿ ಶ್ರೀ ಕೆಳದಿ ರಾಮಮೂರ್ತಿ ಮತ್ತು ಶ್ರೀ ನಾಗರಾಜಭಟ್ಟರ ಕುಟುಂಬಗಳ ಪ್ರಾಯೋಜಕತ್ವದಲ್ಲಿ ನಡೆದ ಎರಡನೆಯ ಸಮಾವೇಶದಲ್ಲಿ ಸುರೇಶ ಆಂಗ್ಲ ಭಾಷೆಯಲ್ಲಿ ಬರೆದ ಪುಸ್ತಕ ಕರ್ಮಯೋಗಿ ಕಲಾವಲ್ಲಭ ಎಸ್.ಕೆ.ಲಿಂಗಣ್ಣಯ್ಯ -ಜೀವನಚರಿತ್ರೆ ಬಿಡುಗಡೆಯಾಯಿತು. ಬೆಂಗಳೂರಿನ ಶ್ರೀ ಎಂ.ಎಸ್. ನಾಗೇಂದ್ರ ಕುಟುಂಬವರ್ಗದವರ ಪ್ರಾಯೋಜಕತ್ವದಲ್ಲಿ ೨೮-೧೨-೦೮ರಂದು  ನಡೆದ ಮೂರನೆಯ ಸಮಾವೇಶದಲ್ಲಿ  ನಾನು ನನ್ನ ಅಜ್ಜನ ಕುರಿತು ಬರೆದ ಕವಿ ಸುಬ್ರಹ್ಮಣ್ಯಯ್ಯ- ಒಂದು ಜೀವಗೀತೆ ಎಂಬ ಪುಸ್ತಿಕೆ ಬಿಡುಗಡೆ, ಕವಿ ಸುರೇಶ ಸಿದ್ಧಪಡಿಸಿದ ಎಲ್ಲಾ ಕುಟುಂಬಗಳವರ ಮತ್ತು ಬಂಧು ಬಳಗದವರ ವಿಳಾಸ, ದೂರವಾಣಿ ವಿವರಗಳುಳ್ಳ  ಕೈಪಿಡಿ ಬಿಡುಗಡೆಯೊಂದಿಗೆ ಕವಿಮನೆತನದ ಪತ್ರಿಕೆ ಕವಿಕಿರಣದ ಉದಯವಾಯಿತು. ೨೭-೧೨-೦೯ ರಂದು ತೀರ್ಥಹಳ್ಳಿಯಲ್ಲಿ ಶ್ರೀ ಶೇಷಾದ್ರಿ ದೀಕ್ಷಿತ್ ಮತ್ತು ಶ್ರೀ ಸುಬ್ರಹ್ಮಣ್ಯ ದೀಕ್ಷಿತ್ ಸಹೋದರರು ಮತ್ತು ಕುಟುಂಬವರ್ಗದ ಆಶ್ರಯದಲ್ಲಿ ನಾಲ್ಕನೆಯ ಸಮಾವೇಶ ನಡೆಯಿತು. ವರ್ಷದಿಂದ ವರ್ಷಕ್ಕೆ, ಸಮಾವೇಶದಿಂದ ಸಮಾವೇಶಕ್ಕೆ ಬಾಂಧವ್ಯಗಳು   ಗಟ್ಟಿಗೊಳ್ಳುತ್ತಾ, ಸಜ್ಜನಶಕ್ತಿಯ ಜಾಗೃತಿಯಾಗುತ್ತಾ ಹೋಗುತ್ತಿರುವುದು ಒಂದು ಆರೋಗ್ಯಕರ ಬೆಳವಣಿಗೆಯಾಗಿದೆ.
ಮುನ್ನೋಟ:
     ಹಿರಿಯರುಗಳು, ಬಂಧುಗಳು ಚರ್ಚಿಸಿ ಕ್ರೋಢೀಕೃತ ವಂಶವೃಕ್ಷ ಸಿದ್ಧಪಡಿಸಿ ಪ್ರಥಮ ಸಮಾವೇಶದಲ್ಲಿ ಎಲ್ಲರಿಗೂ ನೀಡಲಾಯಿತು. ಕಾಲಕಾಲಕ್ಕೆ ಸೂಕ್ತ ಸೇರ್ಪಡೆ, ತಿದ್ದುಪಡಿಗಳನ್ನು ಮಾಡಲಾಗುತ್ತಿದೆ.
     ನಿಜ, ನಾವೇನೋ ನಮ್ಮ ಮೂಲವನ್ನು ಗುರುತಿಸಿಕೊಂಡೆವು. ಆದರೆ ಈ ಕೆಲಸ ಇಲ್ಲಿಗೇ ನಿಲ್ಲಬೇಕೇ ಎಂಬುದು ಮಹತ್ವದ ಪ್ರಶ್ನೆ. ೧೦-೧೧ ತಲೆಮಾರುಗಳ ವಿವರವಿರುವ ವಂಶವೃಕ್ಷ ಗಮನಿಸಿದಾಗ ನಮ್ಮಂತೆಯೇ ಹಲವಾರು ಕಳಚಿರುವ ಕೊಂಡಿಗಳು ಕಣ್ಣಿಗೆ ಬಿದ್ದು, ಆ ಕೊಂಡಿಗಳನ್ನೂ ಹುಡುಕಿ ಕೂಡಿಸುವ ಕೆಲಸ ಉಳಿದಿರುವುದು ನಮ್ಮ ಕೆಲಸ ಇನ್ನೂ ಬಾಕಿಯಿದೆ ಎಂಬುದನ್ನು ಸೂಚಿಸುವುದಿಲ್ಲವೇ? ನಮ್ಮಂತೆಯೇ ಕೆಳದಿ ಕವಿಕುಟುಂಬಕ್ಕೆ ಸೇರಿದ್ದು, ಕವಿಕುಟುಂಬದವರೆಂದು ಗೊತ್ತಿರದ ಹಲವಾರು ಕುಟುಂಬಗಳು ಇರಬಹುದಲ್ಲವೇ? ವಂಶವೃಕ್ಷದಲ್ಲಿ ಹೆಸರಿದ್ದು ತಮ್ಮ ಮಕ್ಕಳು, ಮೊಮ್ಮಕ್ಕಳ ಹೆಸರುಗಳಿಲ್ಲದವರ ಆತ್ಮಗಳು ತಮ್ಮ ಮಕ್ಕಳನ್ನೂ ಗುರುತಿಸಿ ಎಂದು ಕೇಳುತ್ತಿರಬಹುದಲ್ಲವೇ?
     ಸಂಬಂಧ ಸರಪಳಿಯ ಕೊಂಡಿಗಳು ಕಳಚಲು   ೧. ಮಕ್ಕಳಿಲ್ಲದಿರುವುದು, ೨. ವಿವಾಹವಾಗಿಲ್ಲದಿರುವುದು, ೩. ಅಕಾಲ ಮರಣ. ೪. ದಾಯಾದಿ ಮತ್ಸರ, ಕೌಟುಂಬಿಕ ಕಲಹ, ಇತ್ಯಾದಿ ಕಾರಣಗಳಿಂದ ದೂರವಾಗಿ ಕಡಿದ ಸಂಬಂಧಗಳು, ೫. ಸಂಬಂಧಗಳಿಗೆ ಬೆಲೆ, ಮಹತ್ವ ನೀಡದ ಮನೋಭಾವ, ೬. ಇತರ ಕಾರಣಗಳು, ಇತ್ಯಾದಿ ಹಲವಾರು ಕಾರಣಗಳಿರಬಹುದು. ಕಾರಣಗಳೇನೇ ಇರಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಕಳಚಿದ ಕೊಂಡಿಗಳನ್ನು ಕೂಡಿಸುವ, ಸಂಬಂಧಗಳನ್ನು ಬೆಸೆಯುವ ಕಾರ್ಯಕ್ಕೆ ಮಾತ್ರ ಗಮನ ನೀಡುವುದು ನಮ್ಮ ಆದ್ಯತೆಯಾಗಲಿ. ಆಸಕ್ತರಿಗೆ, ಬಾಂಧವ್ಯಗಳನ್ನು ಗೌರವಿಸುವವರಿಗೆ ಮತ್ತು ಮುಂದಿನ ಪೀಳಿಗೆಗಳಿಗೆ ಇದು ನಿಸ್ಸಂದೇಹವಾಗಿ ಅಮೂಲ್ಯ ಕೊಡುಗೆ ಎಂಬುದರಲ್ಲಿ ಅನುಮಾನವಿಲ್ಲ.
ಕಳಚಿದ ಕೊಂಡಿಗಳು:
     ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ, ಕೆಳದಿ ನೃಪ ವಿಜಯ ಎಂಬ ಚಾರಿತ್ರಿಕ ಮತ್ತು ಐತಿಹಾಸಿಕ ಮಹತ್ವವುಳ್ಳ ಕೃತಿ ರಚಿಸಿದ್ದಲ್ಲದೆ ಕೆಳದಿ ಕವಿಮನೆತನ ಎಂದು ಹೆಸರು ಬರಲು ಕಾರಣನಾದ ಲಿಂಗಣ್ಣಕವಿ (ಕವಿ ಲಿಂಗಣ್ಣ/ಲಿಂಗಭಟ್ಟ)ನನ್ನು ನಮ್ಮ ಕುಟುಂಬದ ಮೂಲ/ ಪ್ರಧಾನ ವ್ಯಕ್ತಿಯಾಗಿ ಪರಿಗಣಿಸಿ ಇವನ ಪೀಳಿಗೆಯನ್ನು ಒಂದನೆಯ ಪೀಳಿಗೆ ಎಂದು ತೆಗೆದುಕೊಂಡು ನಮ್ಮ ಅನ್ವೇಶಣೆ ಪ್ರಾರಂಭವಾಗಬೇಕಿದೆ. ಈತನ ಕಾಲವನ್ನು ಇತಿಹಾಸಕಾರರು ಸುಮಾರು ಕ್ರಿ.ಶ. ೧೭೫೦ ಎಂದು ತಿಳಿಸಿದ್ದು ಇದರ ಆಧಾರದಲ್ಲೇ ನಂತರದ ಪೀಳಿಗೆಗಳವರ ಕಾಲಮಾನವನ್ನು ಲೆಕ್ಕ ಹಾಕೋಣ.
ಒಂದನೆಯ ಪೀಳಿಗೆ:
ವೆಂಕಪ್ಪನ ಮಗ ಎಂಬುದನ್ನು ಬಿಟ್ಟರೆ ಕವಿ ಲಿಂಗಣ್ಣನ ತಾಯಿಯ, ಪತ್ನಿಯ ಮತ್ತು ಇತರ ಅಣ್ಣ-ತಮ್ಮಂದಿರ (ಇದ್ದಲ್ಲಿ) ವಿವರ ತಿಳಿದುಬರುತ್ತಿಲ್ಲ.
ಎರಡನೆಯ ಪೀಳಿಗೆ:
ಕವಿಲಿಂಗಣ್ಣನ ಇಬ್ಬರು ಮಕ್ಕಳು ಶ್ಯಾಮಭಟ್ಟ ಮತ್ತು ವೆಂಕಣ್ಣ (ವೆಂಕಭಟ್ಟ)ರ ಪೈಕಿ ಶ್ಯಾಮಭಟ್ಟರ ಬಗ್ಗೆ ಯಾವುದೇ ವಿವರ ತಿಳಿದಿಲ್ಲ. ಶ್ಯಾಮಭಟ್ಟರಿಗೆ ಮಕ್ಕಳಿರಲಿಲ್ಲವೆಂದು ಹೇಳಲಾಗಿದೆ. ಲಿಂಗಣ್ಣನಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೋ ಇಲ್ಲವೋ ಎಂಬ ಮಾಹಿತಿಯಿಲ್ಲ.
ಮೂರನೆಯ ಪೀಳಿಗೆ:
ಕವಿವೆಂಕಣ್ಣನ ಇಬ್ಬರು ಮಕ್ಕಳು ಚೆನ್ನಯ್ಯ ಮತ್ತು ಸುಬ್ಬಾಭಟ್ಟರ ಪೈಕಿ ಚೆನ್ನಯ್ಯರ ಬಗ್ಗೆ ಯಾವುದೇ ವಿವರ ತಿಳಿದಿಲ್ಲ. ವೆಂಕಣ್ಣನಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೋ ಇಲ್ಲವೋ ಎಂಬ ಮಾಹಿತಿಯಿಲ್ಲ.
ನಾಲ್ಕನೆಯ ಪೀಳಿಗೆ:
ಕವಿ ಸುಬ್ಬನ ಆರು ಮಕ್ಕಳು ವೆಂಕಭಟ್ಟ, ಲಿಂಗಾಭಟ್ಟ, ರಾಮಭಟ್ಟ, ಸುಬ್ಬಾಭಟ್ಟ(ಸುಬ್ರಹ್ಮಣ್ಯ?), ನಾರಣಭಟ್ಟ ಮತ್ತು ಕೃಷ್ಣಭಟ್ಟರ ಪೈಕಿ ವೆಂಕಣ್ಣನ ಹೊರತಾಗಿ ಉಳಿದ ಮಕ್ಕಳ ವಿವರ ಗೊತ್ತಾಗಬೇಕಿದೆ. ವೆಂಕಭಟ್ಟರ ಹೊರತಾಗಿ ಉಳಿದವರಿಗೆ ಮಕ್ಕಳಿರಲಿಲ್ಲವೆಂದು ಹೇಳಲಾಗಿದೆ.
ಐದನೆಯ ಪೀಳಿಗೆ:
ಅಪ್ಪಣ್ಣಭಟ್ಟ ಮತ್ತು ಶಿವಭಟ್ಟ(ಶಿವರಾಮಭಟ್ಟ)ರ ಪತ್ನಿಯರ ಹೆಸರು ತಿಳಿಯಬೇಕಿದೆ.
ಆರನೆಯ ಪೀಳಿಗೆ:
ವೆಂಕಭಟ್ಟ, ಕೊಲ್ಲೂರಪ್ಪ ಮತ್ತು ಶ್ಯಾಮಭಟ್ಟರ ಪತ್ನಿಯರ ಹೆಸರು ತಿಳಿಯಬೇಕಿದೆ
ಏಳನೆಯ ಪೀಳಿಗೆ:
ವೆಂಕಭಟ್ಟರ ಮೂವರು ಮಕ್ಕಳು ಸುಬ್ಬಾಭಟ್ಟ, ಕೃಷ್ಣಭಟ್ಟ ಮತ್ತು ಶ್ಯಾಮಭಟ್ಟರ ಕುರಿತು ವಿವರ ತಿಳಿಯಬೇಕಿದೆ. ಕವಿ ರಾಮಣ್ಣರ ಮಗ ಹುಚ್ಚೂರಾಯರ ಬಗ್ಗೆ ಮಾಹಿತಿ ಸಿಗಬೇಕು.
     ಏಳನೆಯ ಪೀಳಿಗೆಗೆ ಸೇರಿದ ಕೆಲವು ಕವಿ ಕುಟುಂಬಗಳವರು ಮತ್ತು ನಂತರದ ಎಂಟು, ಒಂಬತ್ತು ಮತ್ತು ಹತ್ತನೆಯ ಪೀಳಿಗೆಗಳವರು ಪ್ರಸ್ತುತ ನಮ್ಮೊಡನಿದ್ದು ಅಮೂಲ್ಯ ಮಾಹಿತಿಗಳನ್ನು ಒದಗಿಸಬಹುದಾಗಿರುತ್ತದೆ. ಕವಿಕುಟುಂಬಕ್ಕೆ ಸೇರಿದ ಕೆಳದಿಯಲ್ಲಿದ್ದ ದಿ.ತಮ್ಮಣ್ಣಭಟ್ಟರ ಕುರಿತು ಸ್ವಲ್ಪ ಮಾಹಿತಿ ಲಭ್ಯವಾಗಿದ್ದು ಪೂರ್ಣ ಮಾಹಿತಿ ಸಂಗ್ರಹಕ್ಕೆ ಪ್ರಯತ್ನಿಸಲಾಗುತ್ತಿದೆ.
     ಕಳಚಿದ ಕೊಂಡಿಗಳನ್ನು ಕೂಡಿಸುವ ಕೆಲಸಕ್ಕೆ ಎಲ್ಲರೂ ಮನಸ್ಸು ಮಾಡಿದಲ್ಲಿ, ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಜೋಯಿಸ್, ದೀಕ್ಷಿತ್ ಮತ್ತು ಇತರ ಕುಟುಂಬಗಳವರು ಮತ್ತು ಆಸಕ್ತರು  ಕೈಜೋಡಿಸಿದಲ್ಲಿ ಈ ಕಾರ್ಯ ಸಾಧಿಸುವುದು ಕಷ್ಟವಾಗಲಾರದು.
     ಕಳಚಿದ ಕೊಂಡಿಗಳನ್ನು ಹುಡುಕುವ ಕಾರ್ಯದಲ್ಲಿ ನಿಮ್ಮೊಂದಿಗೆ ಇರುವ,
                               -ಕ.ವೆಂ.ನಾಗರಾಜ್. 
***
ವಿ.ಸೂ: ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಕವಿ ಸುರೇಶರ 'ಹಳೇಬೇರು - ಹೊಸಚಿಗುರು' ಮತ್ತು ಕ.ವೆಂ. ನಾಗರಾಜರ 'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕ ನೋಡಬಹುದು.
************************

Printed and published by K.V.Suresh at Kavi prakashana, Sowparnika, 3rd Cross, 3rd Main, Basaveshwaranagar, Shimoga-577204 on behalf of the owner  K.V.Nagaraj, No.2354, ‘Nagabharana’. 7th Cross, 2nd Main, Shanthinagar, Hassan-573201;   Editor:   K.V. Nagaraj.

**********************
ಸಾರ್ಥಕ - ಪ್ರೇರಕ - ಅರ್ಥಪೂರ್ಣ
ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿ ಮನೆತನದವರ ಮತ್ತು ಬಂಧುಬಳಗದವರ ಚತುರ್ಥ ಸಮಾವೇಶದ ವರದಿ
     ದಿನಾಂಕ ೨೭-೧೨-೨೦೦೯ರ ಮುಂಜಾನೆ ಬಿದ್ದ ಅಕಾಲಿಕ ತುಂತುರು ಮಳೆಯಿಂದ ನೆನೆದ ಭೂಮಿ ತಂಪಾಗಿತ್ತು. ಡಿಸೆಂಬರ್ ತಿಂಗಳಾದರೂ ಚಳಿಯ ಹೆಸರಿರಲಿಲ್ಲ. ತೀರ್ಥಹಳ್ಳಿಯ ದೀಕ್ಷಿತರ ಕಾಶಿ ಕಲಾಭವನ ಕೆಳದಿ ಕವಿಮನೆತನದವರು ಹಾಗೂ ಬಂಧು ಬಳಗದವರನ್ನು ಸ್ವಾಗತಿಸಲು ಸಜ್ಜಾಗಿತ್ತು. ಒಬ್ಬೊಬ್ಬರಾಗಿ ಹಾಗೂ ಗುಂಪಿನಲ್ಲಿ ಬಂದವರನ್ನು ದೀಕ್ಷಿತ ಸಹೋದರರು ಮತ್ತು ಕುಟುಂಬ ವರ್ಗದವರು ಆತ್ಮೀಯವಾಗಿ ಸ್ವಾಗತಿಸಿದರು. ಎಲ್ಲರಿಗೂ ಉಪಾಹಾರವಾದ ನಂತರ ಬೆ.೧೦-೩೦ಕ್ಕೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆಗೆ ಆಹ್ವಾನಿಸಿಲಾಗಿದ್ದ ಶ್ರೀ ಮತ್ತು ಶ್ರೀಮತಿ ಶೇಷಾದ್ರಿ ದೀಕ್ಷಿತ್, ಶ್ರೀ ಮತ್ತು ಶ್ರೀಮತಿ ಸುಬ್ರಹ್ಮಣ್ಯ ದೀಕ್ಷಿತ್, ಶ್ರೀ ಕೆಳದಿ ಗುಂಡಾಜೋಯಿಸರು ಮತ್ತು ಶ್ರೀ ಕವಿ ನಾಗರಾಜಭಟ್ಟರು ವೇದಘೋಷಸಹಿತ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಆರಂಭಗೊಳಿಸಿದರು.

     ಪ್ರಾರಂಭದಲ್ಲಿ ೧೪-೦೭-೦೯ರಂದು ನಿಧನರಾದ ಕವಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರಾಗಿದ್ದ ಶಿವಮೊಗ್ಗದ ಶ್ರೀ ಕವಿ ವೆಂಕಟಸುಬ್ಬರಾವ್ ಮತ್ತು   ೧೪-೦೫-೦೯ರಂದು ನಿಧನರಾದ ಹಿರಿಯರಾದ ಶಿಕಾರಿಪುರದ ಶ್ರೀಮತಿ ವಿನೋದಾಬಾಯಿ ಗೋಪಾಲರಾವ್ (ಕವಿ ಶ್ರೀಕಂಠಯ್ಯ ಮತ್ತು ಭಾಗೀರಥಮ್ಮನವರ ಪುತ್ರಿ)ರವರ ನಿಧನಕ್ಕೆ ಸಂತಾಪ ಮತ್ತು ಶ್ರದ್ಧಾಂಜಲಿ ಸೂಚಕವಾಗಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
     ಕಾಶೀಬಾಯಿಯವರ ಸುಶ್ರಾವ್ಯ ಪ್ರಾರ್ಥನೆಯ ಬಳಿಕ ಕವಿ ಶ್ರೀಕಂಠರವರು ಆಗಮಿಸಿದ್ದ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬಾಂಧವ್ಯಗಳ ಬೆಸುಗೆಗೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದು ಎಲ್ಲಾ ಬಂಧು ಬಳಗದವರು ಪೂರ್ಣ ಸಹಕಾರ ನೀಡಬೇಕೆಂದು ಕೋರಿದರು. ಅನಾರೋಗ್ಯದ ಕಾರಣ ಸಮಾರಂಭಕ್ಕೆ ಬರಲಾಗದಿದ್ದ ಹಿರಿಯರಾದ ಶ್ರೀ ಸಾ.ಕ. ಕೃಷ್ಣಮೂರ್ತಿಯವರ ಸಂದೇಶವನ್ನು ಓದಿ ಹೇಳಲಾಯಿತು.


     ಶ್ರೀ ಕ.ವೆಂ. ನಾಗರಾಜ್‌ರವರು ಮಾತನಾಡುತ್ತಾ ಕೌಟುಂಬಿಕವಾಗಿ ಅಲ್ಲದೆ ಐತಿಹಾಸಿಕವಾಗಿ ಸಹ ಈ ಸಮಾವೇಶ ಮಹತ್ವದ್ದಾಗಿದೆ; ಎಷ್ಟೋ ಜನಕ್ಕೆ ಹೆಚ್ಚೆಂದರೆ ೩-೪ ತಲೆಮಾರುಗಳ ವಿವರ,  ಅದೂ ಅಪೂರ್ಣವಾಗಿ, ಗೊತ್ತಿರಬಹುದು. ಆದರೆ ೧೨ ತಲೆಮಾರುಗಳ ವಿವರ ಲಭ್ಯವಿರುವ ಕೆಳದಿ ಕವಿಮನೆತನ ವಿಶಿಷ್ಟವಾದುದು ಎಂದರು. ನಮ್ಮ ಪೂರ್ವಜರು ಸಾಮಾನ್ಯರಂತೆ ಜೀವಿಸಿದ್ದರೆ ಈ ವಿವರ ತಿಳಿಯುತ್ತಿರಲಿಲ್ಲ. ಕಲೆ, ಸಾಹಿತ್ಯ, ಆಡಳಿತ, ಧಾರ್ಮಿಕ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿ ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದರಿಂದಲೇ ಈ ವಿವರ ಲಭ್ಯವಾದುದನ್ನು ಮರೆಯದೆ, ನಾವುಗಳೂ ಸಹ ನಮ್ಮಗಳ ಗುರುತು ಮುಂದಿನ ಪೀಳಿಗೆಗೆ ಉಳಿಯುವಂತೆ ಸಾಧಕರಾಗಬೇಕೆಂದು ಕರೆಯಿತ್ತರು. ಈ ಸಮಾವೇಶಗಳಲ್ಲಿ ಕವಿ ಕುಟುಂಬಗಳಲ್ಲದೆ ಅವರ ಹೆಣ್ಣು ಮಕ್ಕಳು ಸೇರಿರುವ ಕುಟುಂಬಗಳನ್ನು ಮತ್ತು ಬಂಧು ಬಳಗದವರನ್ನು ಆಹ್ವಾನಿಸುತ್ತಿರುವುದು ತುಂಬಾ ಉತ್ತಮ ಮತ್ತು ಔಚಿತ್ಯಪೂರ್ಣವೆಂದ ಅವರು, ಹೆಣ್ಣುಮಕ್ಕಳಿಗೆ ತಮ್ಮ ತವರಿನ ಬಗ್ಗೆ ಅಭಿಮಾನವಿದ್ದು, ತವರಿನವರ ಏಳಿಗೆಗೆ ಹರ್ಷ ಪಡುತ್ತಾರೆಂದರು. ಮೊದಲ ಎರಡು ವಾರ್ಷಿಕ ಸಮಾವೇಶಗಳನ್ನು ಕವಿ ಕುಟುಂಬಗಳವರು ಆಯೋಜಿಸಿದ್ದರೆ, ಹಿಂದಿನ ಮತ್ತು ಈಗಿನ ಸಮಾವೇಶಗಳನ್ನು ಕವಿಮನೆತನದ ಹೆಣ್ಣುಮಕ್ಕಳು ಸೇರಿರುವ ಕುಟುಂಬಗಳವರು ಆಯೋಜಿಸಿರುವುದಕ್ಕೆ ಕವಿ ಮನೆತನದ ಹೆಣ್ಣು ಮಕ್ಕಳ ತವರಿನ ಅಭಿಮಾನ ಮತ್ತು ವಾಂಛಲ್ಯವೇ ಕಾರಣವಲ್ಲದೆ ಮತ್ತೇನೂ ಅಲ್ಲವೆಂದು ಶ್ಲಾಘಿಸಿದರು. ಕವಿಕಿರಣ ಪತ್ರಿಕೆಯ ಉದ್ದೇಶ ಉತ್ತಮ ಬಾಂಧವ್ಯ ಮತ್ತು ಸಜ್ಜನಶಕ್ತಿಯ ಜಾಗರಣಕ್ಕೆ ಪ್ರೇರಿಸುವುದೇ ಆಗಿದೆಯೆಂದರು.

    ಕವಿಕಿರಣ ಪತ್ರಿಕೆಯ ಡಿಸೆಂಬರ್ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ದೀಕ್ಷಿತರು ಸಮಾರಂಭಕ್ಕೆ ಹಾಜರಾದ ಎಲ್ಲರಿಗೂ ಆಭಾರ ವ್ಯಕ್ತಪಡಿಸುತ್ತಾ  ಇಂತಹ ಉತ್ತಮ ಕೆಲಸಕ್ಕೆ  ತಮ್ಮ ಮತ್ತು ತಮ್ಮ ಸಹೋದರರುಗಳ ಸಹಕಾರ ಸದಾ ಇರುವುದೆಂದು ತಿಳಿಸಿದರು.


     ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರು ಮಾತನಾಡುತ್ತಾ ಮಾನವ ಪ್ರಾಣಿಗಿಂತ ಭಿನ್ನವಾಗಿದ್ದು, ಕೇವಲ ತಿಂದು, ಉಂಡು ಸಾಯುವುದಾದಲ್ಲಿ ಪ್ರಾಣಿಗೂ ಅವನಿಗೂ ವ್ಯತ್ಯಾಸವಿರುವುದಿಲ್ಲ; ಸಾಯುವ ಮುನ್ನ ಏನನ್ನಾದರೂ ಸಾಧಿಸಬೇಕೆಂದೂ, ಜೀವನದಲ್ಲಿ ಯಾವುದಾದರೂ ಗುರಿ ಇಟ್ಟುಕೊಂಡು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಬೇಕೆಂದೂ ಕರೆಯಿತ್ತರು. ತಮ್ಮ ೨೬ನೆಯ ವಯಸ್ಸಿನಲ್ಲಿ ಸೈಕಲ್ಲಿನಲ್ಲಿ ೩ವರ್ಷ, ೩ತಿಂಗಳುಗಳ ಕಾಲ ಅಖಿಲ ಭಾರತ ಪ್ರವಾಸ ಮಾಡಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡುದು ಅವಿಸ್ಮರಣೀಯವಾಗಿತ್ತು. ಸುಮಾರು ೫೫ಸಾವಿರ ಕಿಲೋಮೀಟರ್ ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿದ ಸಂದರ್ಭದಲ್ಲಿ ಆದ ಕೆಲವು ಅನುಭವಗಳನ್ನು ತಿಳಿಸಿದಾಗ ಎಲ್ಲರೂ ವಿಸ್ಮಿತರಾದರು. ೩ವರ್ಷಗಳಿಗೂ ಹೆಚ್ಚಿನ ಸಮಯದ ಪ್ರವಾಸದ ಬಗ್ಗೆ ಒಂದು ಗಂಟೆಯಲ್ಲಿ ತಿಳಿಸುವುದು  ಕಷ್ಟವಾದರೂ ತಿಳಿಸಿದಷ್ಟು ಸಾಧನೆಯ ವಿವರ ಕೇಳಿದವರಿಗೆ ತಾವೂ ಏನನ್ನಾದರೂ ಸಾಧಿಸಬೇಕೆಂಬ ಪ್ರೇರಣೆ ಆಗಿರಲಿಕ್ಕೂ ಸಾಕು. ಈ ಅಪ್ರತಿಮ ಸಾಧನೆ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಇವರ ಸಾಧನೆ ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿದ್ದು, ಸುಮಾರು ೩೦ ವರ್ಷಗಳ ನಂತರವಾದರೂ ಸರ್ಕಾರ ಸಹ ಇತ್ತೀಚೆಗೆ ನವದೆಹಲಿಯಲ್ಲಿ ಇವರನ್ನು ಸನ್ಮಾನಿಸಿದ ಸಂಗತಿ ತಿಳಿದು ಎಲ್ಲರಿಗೂ ಸಂತೋಷವಾಯಿತು. ಇವರು ಪ್ರವಾಸಕ್ಕೆ ಬಳಸಿದ್ದ ಸೈಕಲ್, ಪ್ರವಾಸಕಾಲದ ಭಾವಚಿತ್ರಗಳು, ಸನ್ಮಾನ, ಪ್ರಶಸ್ತಿಗಳನ್ನು ಸಮಾವೇಶದ ಸ್ಥಳದಲ್ಲಿ ಪ್ರದರ್ಶಿಸಲಾಗಿದ್ದು ಇವು ಎಲ್ಲರಿಗೂ ಪ್ರೇರಣೆ ನೀಡಿತು ಎಂಬುದರಲ್ಲಿ ಸಂಶಯವಿಲ್ಲ.


     ಕವಿ ನಾಗರಾಜಭಟ್ಟರು ಮಾತನಾಡಿ ಕವಿ ಮನೆತನದ ಪೂರ್ವಜರು ಸಾಧಕರಾಗಿದ್ದು ಅವರ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರಬೇಕೆಂದು ಕರೆ ನೀಡಿದರು.
     ಸಂಶೋಧನಾ ರತ್ನ ಶ್ರೀ ಕೆಳದಿ ಗುಂಡಾಜೋಯಿಸರು ಕೆಳದಿ ಕವಿ ಮನೆತನ, ಕೆಳದಿ ಜೋಯಿಸ್ ಮನೆತನ ಹಾಗೂ ದೀಕ್ಷಿತ್ ಕುಟುಂಬಗಳ ನಡುವೆ ಇರುವ ಸಂಬಂಧ, ಪರಸ್ಪರರ ಅಭಿವೃದ್ಧಿಗೆ ಪೂರಕರಾಗಿರುವ ಕುರಿತು ದಾಖಲೆಗಳ ಸಹಿತ ಪ್ರಸ್ತುತ ಪಡಿಸಿದ್ದು ಸಭೆಗೆ ಮೆಚ್ಚುಗೆಯಾಯಿತು.
   
    ಶ್ರೀ ಕವಿ ಸುರೇಶ್‌ರವರು ಮರೆಯಲಾಗದ ಕೆಳದಿ ಸಾಮ್ರಾಜ್ಯ ಪುಸ್ತಕವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದಕ್ಕಾಗಿ ಬಂದ ಸಂಭಾವನೆಯ ಅರ್ಧಭಾಗವನ್ನು ಕವಿಮನೆತನದ ಮಂಗಳನಿಧಿಗೆ ನೀಡುವುದಾಗಿ ಘೋಷಿಸಿದ್ದು ಸಭೆ ಇವರನ್ನು ಅಭಿನಂದಿಸಿತು.
     ದೀಕ್ಷಿತ್ ಸಹೋದರರು ಸನ್ಮಾನದ ಸಲುವಾಗಿ ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಕಾಶಿ ಸೇರಿದಂತೆ ಉತ್ತರ ಭಾರತದ ಹಲವು ಪುಣ್ಯಕ್ಷೇತ್ರಗಳಿಗೆ ಸಹ ಹೋಗಿ ಬಂದಿದ್ದರ ನಿಮಿತ್ತ ಕಾಶಿ ಸಮಾರಾಧನೆ ಸಹ ಇದೇ ದಿನ ಇಟ್ಟುಕೊಂಡಿದ್ದು, ಎಲ್ಲಾ ಅತಿಥಿಗಳಿಗೆ ಸುಗ್ರಾಸ ಭೋಜನ ಏರ್ಪಾಡಾಗಿತ್ತು.
     ಶ್ರೀಮತಿಯರಾಧ ಹೇಮಾ ಮಾಲತೇಶ್, ಸುಮನಾ ವೆಂಕಟೇಶ್, ಕಾಶೀಬಾಯಿ, ಸುಕನ್ಯಾ ಸೋಮಶೇಖರ್, ಮೊದಲಾದವರು, ಶ್ರೀಯುತ ಮಾಲತೇಶ್, ವೆಂಕಟೇಶ ಜೋಯಿಸ್ ಇವರುಗಳು ಪ್ರಧಾನ ಸೂತ್ರಗಾರರಾಗಿ ನಡೆಸಿಕೊಟ್ಟ ಮನರಂಜನಾ ಕಾರ್ಯಕ್ರಮಗಳು ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಲ್ಲದೆ ಸೃಜನಾತ್ಮಕವಾಗಿದ್ದವು. ಆ ಸಂದರ್ಭದಲ್ಲಿ ಸ್ವತಃ ರಚಿಸಿ ಹಾಡಿದ ಶ್ರೀಮತಿ ಹೇಮಾ ಮಾಲತೇಶ ಮತ್ತು ಸಂಗಡಿಗರ ಹಾಡುಗಳಿಗೆ ನೃತ್ಯ ಬಾರದ ಸಭಿಕರುಗಳೂ ವಯಸ್ಸಿನ ತಾರತಮ್ಯವಿಲ್ಲದೆ ಹೆಜ್ಜೆ ಹಾಕಿ ನರ್ತಿಸಿದ್ದು ಬಾಂಧವ್ಯಗಳು ಗಟ್ಟಿಗೊಳ್ಳುತ್ತಿರುವುದರ ಸಂಕೇತವಾಗಿತ್ತಲ್ಲದೆ, ಸಮಾವೇಶವನ್ನು ಅರ್ಥಪೂರ್ಣ ಎನ್ನಿಸಿತ್ತು. ಆಶುಭಾಷಣ ಸ್ಪರ್ಧೆಯಲ್ಲಿ ಆಸಕ್ತಿಯಿಂದ ಹಲವರು ಭಾಗವಹಿಸಿದ್ದು ವಿಜೇತರಿಗೆ ಬಹುಮಾನ ನೀಡಲಾಯಿತು.

     ಮುಂದಿನ ಸಮಾವೇಶ: ತಮ್ಮ ತಾಯಿ ದಿ. ವಿನೋದಾಬಾಯಿ ಗೋಪಾಲರಾವ್‌ರವರ ನೆನಪಿನಲ್ಲಿ ಮುಂದಿನ ವಾರ್ಷಿಕ ಸಮಾವೇಶವನ್ನು ತಾವು, ತಮ್ಮ ಸಹೋದರರು ಮತ್ತು ಕುಟುಂಬವರ್ಗದವರು ಶಿಕಾರಿಪುರದಲ್ಲಿ ದಿನಾಂಕ ೨೬-೧೨-೨೦೧೦ರಂದು ನಡೆಸಿಕೊಡುವುದಾಗಿ ಘೋಷಿಸಿದ ಶ್ರೀ ಸೋಮಶೇಖರ್ ಮತ್ತು ಕಾಶೀಬಾಯಿರವರನ್ನು ಸಭೆ ಅಭಿನಂದಿಸಿತು. ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರ ತಾಯಿ ದಿ. ಶ್ರೀಮತಿ ಜಯಲಕ್ಷ್ಮಮ್ಮ ಮತ್ತು ದಿ.ಶ್ರೀಮತಿ ವಿನೋದಾಬಾಯಿಯವರಿಬ್ಬರೂ ದಿ.ಕವಿ ಶ್ರೀಕಂಠಯ್ಯ-ಭಾಗೀರಥಮ್ಮನವರ ಹೆಣ್ಣುಮಕ್ಕಳು ಎಂಬುದು ಗಮನಿಸಬೇಕಾದ ಸಂಗತಿ.

     ಕುಮಾರಿ ಸಿಂಧು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆ ಮಾಡಿದಳು. ಕೆಳದಿ ವೆಂಕಟೇಶ ಜೋಯಿಸ್ ಎಲ್ಲರಿಗೂ ಆಭಾರ ವ್ಯಕ್ತಪಡಿಸಿದರು. ಆಹ್ವಾನ ಪತ್ರಿಕೆ ಮುದ್ರಿಸಿ ಎಲ್ಲರಿಗೂ ತಲುಪುವ ವ್ಯವಸ್ಥೆ ಮಾಡಿದ್ದಲ್ಲದೆ ಪೂರ್ವ ತಯಾರಿ ಬಗ್ಗೆ ಶ್ರಮ ವಹಿಸಿದ ಕವಿ ಶ್ರೀಕಂಠ, ಗುರುಮೂರ್ತಿ, ದತ್ತಾತ್ರಿ ಸಹೋದರರನ್ನು ಅಭಿನಂದಿಸಲಾಯಿತು. ಸ್ಮರಣೀಯವಾಗಿ ಸಮಾವೇಶವನ್ನು ಆಯೋಜಿಸಿದ ದೀಕ್ಷಿತ್ ಸಹೋದರರುಗಳು, ಅವರ ಕುಟುಂಬದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿಕಿರಣ ಪತ್ರಿಕೆಯ ಮುಂದಿನ ಸಂಚಿಕೆ ಪ್ರಾಯೋಜಕರಾದ ಶ್ರೀ ಬಿ.ವಿ. ಹರ್ಷ ಮತ್ತು ಕುಟುಂಬದವರನ್ನು ಸಭೆ ಅಭಿನಂದಿಸಿತು. ಸಾಂಸ್ಸೃತಿಕ ಕಾರ್ಯಕ್ರಮಕ್ಕೆ ಕಳೆಕೊಟ್ಟವರು, ಕವಿ ಮನೆತನದ ಮಂಗಳನಿಧಿಗೆ ದೇಣಿಗೆ ನೀಡಿದವರು, ಸಮಾವೇಶವನ್ನು ಅರ್ಥಪೂರ್ಣಗೊಳಿಸಲು ಸಹಕರಿಸಿದವರು ಎಲ್ಲರನ್ನೂ ಅಭಿನಂದಿಸುವುದರೊಂದಿಗೆ ಸಮಾವೇಶ ಸಫಲ ಅಂತ್ಯ ಕಂಡಿತು. ದೀಕ್ಷಿತ್ ಕುಟುಂಬವರ್ಗದ ಆತಿಥ್ಯ ಮತ್ತು ಸಮಾವೇಶದ ಮಧುರ ನೆನಪುಗಳೊಂದಿಗೆ ಸಾಯಂಕಾಲದ ವೇಳೆಗೆ ಎಲ್ಲರೂ ತೀರ್ಥಹಳ್ಳಿಯಿಂದ ತೆರಳಿದರು.
******************



ಪ್ರಾಯೋಜಕತ್ವ
      ಕವಿಕಿರಣ ಪತ್ರಿಕೆಯ ಸಂಚಿಕೆಗಳನ್ನು ಪ್ರಾಯೋಜಿಸಲು ಅವಕಾಶವಿದೆ. ರೂ. ೬೦೦೦/- ಮತ್ತು ಮೇಲ್ಪಟ್ಟು ಮೊಬಲಗು ನೀಡಿದಲ್ಲಿ ಅವರನ್ನು ಸಂಚಿಕೆಯ ಪ್ರಾಯೋಜಕರೆಂದು ಪರಿಗಣಿಸಿ ಪತ್ರಿಕೆಯಲ್ಲಿ ಅವರ ಕುಟುಂಬದ ಪೂರ್ಣ  ಪುಟದ ಭಾವಚಿತ್ರ ಪ್ರಕಟಿಸಿ ಸ್ಮರಿಸಲಾಗುವುದು. ಪ್ರಾಯೋಜಕರು ಮುಂದೆ ಬರಲು ಕೋರಿದೆ.
************** 

ತವರಿನ ವಾಂಛಲ್ಯ
    

      ದಿನಾಂಕ ೨೮-೦೧-೦೭ರಂದು ಶಿವಮೊಗ್ಗದಲ್ಲಿ ನಡೆದ ಕವಿಕುಟುಂಬಗಳ ಮತ್ತು ಬಂಧುಗಳ ಪ್ರಥಮ ಸಮಾವೇಶದಲ್ಲಿ ಹಿರಿಯರಾದ ಶ್ರೀಮತಿ ವಿನೋದಾಬಾಯಿಯವರನ್ನು ಸನ್ಮಾನಿಸಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಕೊಟ್ಟಿದ್ದ ಸೀರೆಯನ್ನು ತವರಿನ ಉಡುಗೊರೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಅವರು ತಮ್ಮ ಕೊನೆಯವರೆಗೂ ಆ ಸೀರೆಯನ್ನು ಜೋಪಾನವಾಗಿ ಇಟ್ಟುಕೊಂಡು ಉಡುತ್ತಿದ್ದರು. ತಮ್ಮ ಮಕ್ಕಳಿಗೂ ಅದನ್ನು ಕೊಡುತ್ತಿರಲಿಲ್ಲವೆಂದು ಅವರ ಮಕ್ಕಳು ನೆನೆಸಿಕೊಳ್ಳುತ್ತಾರೆ. ತವರಿನವರ ಬಗ್ಗೆ ಅಂತಹ ಉತ್ಕಟ ಅಭಿಮಾನ ಹೊಂದಿದ್ದ ಅವರ ಆತ್ಮಕ್ಕೆ ಅವರ ಮಕ್ಕಳು ಮುಂದಿನ ವಾರ್ಷಿಕ ಸಮಾವೇಶವನ್ನು ಶಿಕಾರಿಪುರದಲ್ಲಿ ಆಯೋಜಿಸುತ್ತಿರುವುದು ಖಂಡಿತಾ ಸಂತೋಷ ನೀಡುವುದರಲ್ಲಿ ಅನುಮಾನವಿಲ್ಲ.
******************

ಈ ಸಂಚಿಕೆಯ ಪ್ರಾಯೋಜಕರು:

ಶ್ರೀ ಬಿ.ವಿ.ಹರ್ಷ ಮತ್ತು ಕುಟುಂಬ,
ನಂ. ೧೭೫೨, ಅಮೃತಗಂಗಾ, ೬ನೆಯ ಮುಖ್ಯರಸ್ತೆ, ನ್ಯಾಯಾಂಗ ಬಡಾವಣೆ, ಜಿ.ಕೆ.ವಿ.ಕೆ. ಅಂಚೆ,
ಬೆಂಗಳೂರು-೫೬೦೦೬೫.
**
ಮುಂದಿನ ಸಂಚಿಕೆಯ ಪ್ರಾಯೋಜಕರು:

ನೀವೇ ಇರಬಹುದೆ?
**************

ಆಕ್ಷೇಪಣೆ ಸರಿಯೇ?
     ನೀವು ಇಷ್ಟಪಡದ, ಗೌರವಿಸದ ವ್ಯಕ್ತಿಗಳು ನಿಮ್ಮನ್ನು ಇಷ್ಟಪಡಲಿಲ್ಲ/ ಗೌರವಿಸಲಿಲ್ಲ ಎಂದು ಆಕ್ಷೇಪಿಸುವುದು ತರವಲ್ಲ.
***

ಮುಂದಿನ ಸಮಾವೇಶ ನಡೆಯಲಿರುವ ಸ್ಥಳ
ಶಿಕಾರಿಪುರದ ವೈಶಿಷ್ಟ್ಯ
     ಶಿವಮೊಗ್ಗದಿಂದ ಸುಮಾರು ೫೦ ಕಿ.ಮೀ. ದೂರದ ಶಿಕಾರಿಪುರ ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರ ಕ್ಷೇತ್ರವಾಗಿದ್ದು ರಾಜಕೀಯವಾಗಿ ಮಹತ್ವ ಪಡೆದಿರುವುದೇ ಅಲ್ಲದೆ ಸಾಕಷ್ಟು ಅಭಿವೃದ್ಧಿ ಕಂಡಿದೆ.  ಶೈಕ್ಷಣಿಕವಾಗಿ, ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಸಹ ಮಹತ್ವ ಪಡೆದ ಈ ತಾಲ್ಲೂಕಿನಲ್ಲಿ ನೋಡಬೇಕಾದ ಹಲವಾರು ಸ್ಥಳಗಳಿವೆ. ಸಮಾವೇಶಕ್ಕೆ ಬಂದವರು ಅನುಕೂಲ ಮಾಡಿಕೊಂಡು ಈ ಸ್ಥಳಗಳನ್ನು ದರ್ಶಿಸಬಹುದು. ಆಗದಿದ್ದಲ್ಲಿ ಬೇರೆ ಸಮಯದಲ್ಲಾದರೂ ನೋಡಬಹುದು. ಸ್ವಾತಂತ್ರ್ಯ ಹೋರಾಟಕಾಲದಲ್ಲಿ ಹೆಸರು ಮಾಡಿದ ಈಸೂರು ಈ ತಾಲ್ಲೂಕಿನ ಒಂದು ಗ್ರಾಮ. ಕುಮುದ್ವತಿ ನದಿಯ ದಂಡೆಯ ಮೇಲಿರುವ ಶಿಕಾರಿಪುರ ೧೭೬ ಗ್ರಾಮಗಳನ್ನು ಹೊಂದಿದ್ದು ಪ್ರತಿ ಗ್ರಾಮ ದೇವಾಲಯ, ಬಸದಿ, ಶಾಸನ, ಮಾಸ್ತಿಕಲ್ಲು, ವೀರಗಲ್ಲು, ಇತ್ಯಾದಿ ಐತಿಹಾಸಿಕ ಸ್ಮಾರಕಗಳಿಂದ ತುಂಬಿದೆ. ಶಿಕಾರಿಪುರದಲ್ಲಿ ಪುರಾಣಪ್ರಸಿದ್ದ ಆಂಜನೇಯ (ಹುಚ್ಚೂರಾಯ) ದೇವಸ್ಥಾನವಿದೆ.  ಬೃಹತ್ ಈಶ್ವರನ ವಿಗ್ರಹ ಪೂರ್ಣಗೊಳ್ಳುವ ಹಂತದಲ್ಲಿದೆ.
ಬ್ತಿಟಿಷರ ವಿರುದ್ಧ ಹೋರಾಡಿದ ದೊಂಡಿಯಾವಾಘ ಎಂಬ ಸರದಾರನ ಖಡ್ಗ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿದೆ.

     ಹಿರೆಕೆಲವತ್ತಿ ಗ್ರಾಮದ ಹಸಿಯಾಗಿಯೇ ಇರುವ ಮಣ್ಣು ಬಸವ, ಬಳ್ಳಿಗಾವಿಯ ಸುಮಾರು ೧೩ಕೋಟಿ ರೂ. ಬೆಲೆ ಬಾಳುವ ಹಸಿರು ಪಚ್ಚೆ ಲಿಂಗ, ಕೇದಾರೇಶ್ವರ ದೇವಾಲಯ, ತ್ರಿಪುರಾಂತಕೇಶ್ವರ ದೇವಾಲಯ, ಪ್ರಭುದೇವರ ಮಂಟಪ, ಮಲ್ಲೇಶ್ವರ ದೇವಾಲಯ, ಕಾಳಿಕಾಂಬ ದೇವಾಲಯ, ಸಂಡದ ಶ್ರೀ ಸೂರ್ಯನಾರಾಯಣ ದೇವಾಲಯ, ಹಿರೆಜಂಬೂರಿನ ಸತ್ಯಕ್ಕದೇವಿಯ ದೇವಸ್ಥಾನ (ಇಲ್ಲಿ ವೇದ ಓದುವ ನಾಯಿಯ ವಿಗ್ರಹವಿದೆ), ಮುತ್ತಿಗೆಯ ಅಜಗಣ್ಣ- ಮುಕ್ತಾಯಕ್ಕಳ ಗದ್ದುಗೆ, ಬಂದಳಿಕೆಯ ಬನಶಂಕರಿ ದೇವಾಲಯ, ತ್ರಿಮೂರ್ತಿ ದೇವಾಲಯ, ಶ್ರೀ ಸೋಮೇಶ್ವರ ದೇವಾಲಯ, ಮಾಳಗೊಂಡನಕೊಪ್ಪದ ಅನಿಮಿಷಾರಣ್ಯ ದೇವಾಲಯ, ಬೇಗೂರು ಮಲ್ಲಿಕಾರ್ಜುನ ದೇವಾಲಯ, ಶಿವನಪಾದವಿರುವ ಗ್ರಾಮ ಶಿವನಪಾದ, ತಾಳಗುಂದದ ಪ್ರಣವೇಶ್ವರ ದೇವಾಲಯ (ಇದು ಜಗತ್ತಿನ ಅತ್ಯಂತ ಹಳೆಯ ದೇವಾಲಯವೆನ್ನುತ್ತಾರೆ), ಬನವಾಸಿ, ಶಿವಶರಣೆ ಅಕ್ಕಮಹಾದೇವಿಯ ಉಡುತಡಿ, ಮದಗದ ಕೆಂಚಮ್ಮ, ತೊಗರ್ಸಿಯ ಮಲ್ಲಿಕಾರ್ಜುನ ದೇವಾಲಯ, ಇತ್ಯಾದಿಗಳು ನೋಡಬೇಕಾದ ಸ್ಥಳಗಳು. ಅಂಬ್ಲಿಗೊಳ ಜಲಾಶಯ, ಅಂಜನಾಪುರ ಜಲಾಶಯ, (ಮಾಯದಂಥ ಮಳೆ ಬಂತಮ್ಮ ಖ್ಯಾತಿಯ, ಸುಮಾರು ೪೦ ಎಕರೆ ವಿಸ್ತೀರ್ಣ ಹೊಂದಿರುವ) ಮದಗದಕೆರೆ, ಇತ್ಯಾದಿಗಳನ್ನು  ಮಳೆಗಾಲದಲ್ಲಿ ಸಂದರ್ಶಿಸುವುದು ಸೂಕ್ತವಾಗಿರುತ್ತದೆ.
***
ಅಹಂಕಾರ    
 ಅಹಂಕಾರ ಸಮೀಪದ ಬಂಧುಗಳನ್ನೂ ದೂರ ಮಾಡುತ್ತದೆ. ತಾವೇ ಸರಿ, ತಮ್ಮದೇ ಸರಿ, ಉಳಿದವರದೆಲ್ಲಾ ತಪ್ಪು ಎಂಬ ಭಾವನೆ ಮೂಡಿಸುತ್ತದೆ. ತಮ್ಮದೇ  ತಪ್ಪಿಗೂ ಇತರರೇ ಕಾರಣ ಎಂದು ದೂಷಿಸುವಂತೆ ಮಾಡುತ್ತದೆ.
***
ಸನ್ನಡತೆ    
 ತಪ್ಪನ್ನು ಎತ್ತಿ ತೋರಿಸಿದಾಗ ಸಜ್ಜನರು ಅಸಮಾಧಾನಗೊಳ್ಳದೆ ಅಥವಾ ತಪ್ಪು ತೋರಿಸಿಕೊಟ್ಟವರ ಬೇರೆ ತಪ್ಪುಗಳನ್ನು ಹುಡುಕಲು ಹೋಗದೆ ಅವರಿಗೆ ವಂದಿಸಿ ತಪ್ಪು ತಿದ್ದಿಕೊಂಡು ನಡೆಯುತ್ತಾರೆ.***
ಸಮಯ
     ಸಮಯ ಎಲ್ಲರಿಗೂ ಒಂದೇ; ಸೋಮಾರಿಗೂ ಒಂದೇ, ಸಾಧಕನಿಗೂ ಒಂದೇ. ಸಾಧಕರು ಅದನ್ನು ಉಪಯೋಗಿಸಿಕೊಳ್ಳುತ್ತಾರೆ.***
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

-ಬಸವಣ್ಣ
***
ವಾರ್ಷಿಕ ಸಮಾವೇಶಗಳಿಗೆ ಏಕೆ ತಪ್ಪದೆ ಬರಬೇಕು?

೧. ಕವಿಮನೆತನದ ಮೂಲಪುರುಷ ಕವಿಲಿಂಗಣ್ಣನನ್ನು ಸ್ಮರಿಸಲು;
೨. ಹಿಂದಿನ ಎಲ್ಲಾ ಪೂರ್ವಜರನ್ನು ಮತ್ತು ಅವರ ಸಾಧನೆಗಳನ್ನು ಗುರುತಿಸಲು, ಗೌರವಿಸಲು ಮತ್ತು ಪ್ರೇರಣೆ ಪಡೆಯಲು;
೩. ಎಲ್ಲಾ ಬಂಧುಬಳಗದವರನ್ನು ಒಟ್ಟಿಗೆ ಒಂದು ಕಡೆ ಸೇರಿಸಲು; ಬಂಧುತ್ವ ಉಳಿಸಿಕೊಳ್ಳಲು; ಬಾಂಧವ್ಯದ ಬೆಸುಗೆಯಲ್ಲಿ ಪಾಲ್ಗೊಳ್ಳಲು;
೪. ವರ್ಷದಲ್ಲಿ ವಿಧಿವಶರಾದವರಿಗೆ ಶ್ರದ್ಧಾಂಜಲಿ ಅರ್ಪಿಸಲು;
೫. ಸಮಕಾಲೀನ ಹಿರಿಯರನ್ನು ಗೌರವಿಸಿ ಸನ್ಮಾನಿಸಲು;
೬. ವೈಯಕ್ತಿಕ ಹಾಗೂ ಕುಟುಂಬದ ಸಾಧನೆಯನ್ನು ಇತರ ಬಂಧುಗಳಿಗೆ ಪರಿಚಯಿಸಲು; ಅಂತಹ ಸಾಧನೆಗಳನ್ನು ಗುರುತಿಸಿ ಗೌರವಿಸಲು;
೭. ಸಮಾಜಮುಖಿಯಾಗಿ ಬಾಳಲು, ಬೆಳೆಯಲು ಮತ್ತು ಆ ಮೂಲಕ ಸಜ್ಜನಶಕ್ತಿಯನ್ನು ಜಾಗೃತಗೊಳಿಸಲು;      ವರ್ಷಕ್ಕೆ ಒಮ್ಮೆ ನಡೆಯುವ ಸಮಾವೇಶಕ್ಕೆ - ಅದೂ ಪೂರ್ವ ನಿರ್ಧರಿತ ಸಮಯದಲ್ಲಿ ನಡೆಯುವುದರಿಂದ- ತಪ್ಪದೆ ಬಿಡುವು ಮಾಡಿಕೊಂಡು ಬರಲು ಎಲ್ಲಾ ಕುಟುಂಬಗಳವರೂ ಮತ್ತು ಬಂಧು ಬಳಗದವರು ಮನಸ್ಸು ಮಾಡುವುದು ಮತ್ತು ಉದ್ದೇಶ ಸಾರ್ಥಕಗೊಳಿಸುವುದು ಅವಶ್ಯವಾಗಿದೆ.
***
ದೊಡ್ಡವರಾಗಿರಿ
     ಮಾಡಿದ ತಪ್ಪಿಗೆ ನಿಮ್ಮಲ್ಲಿ ಯಾರಾದರೂ ಕ್ಷಮೆ ಕೇಳಿಬಂದರೆ ಕ್ಷಮಿಸಿ ದೊಡ್ಡವರಾಗಿರಿ. ದುರಭಿಮಾನದಿಂದ ಕ್ಷಮಿಸದಿದ್ದಲ್ಲಿ ಅವರು ಇವರದೇನು ದೊಡ್ಡಸ್ತಿಕೆ ಎಂಬ ಭಾವನೆಯಿಂದ ನಿಮ್ಮನ್ನೇ ತಿರಸ್ಕರಿಸಿಯಾರು. ಆಗ ನೀವು ಮೊದಲಿಗಿಂತಲೂ ಕುಬ್ಜರಾಗುವಿರಿ.
***
ಸಾಕೆಂಬುವನು ಸಾಹುಕಾರ - ಬೇಕೆಂಬುವನು ಭಿಕಾರಿ
-ಅನುಭವಿಯ ನುಡಿ

***
ಕತ್ತರಿ ಬಂಧ  
 (ಲಘು ಹರಟೆ)
      ಮೊನ್ನೆ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೆ. ಬರುವಾಗ ಓರ್ವ ತಾಯಿ ತನ್ನ ಮಗುವನ್ನೆತ್ತಿಕೊಂಡು ಹಿಂತಿರುಗುತ್ತಿದ್ದಳು.  ಸುಮಾರು ೩-೪ ವರ್ಷದ ದಷ್ಟ ಪುಷ್ಟವಾಗಿಯೇ ಬೆಳೆದಿದ್ದ ಮಗು 'ಚಾಕೀ' 'ಚಾಕೀ' ಎಂದು ಜೋರಾಗಿ ಅಳುತ್ತಾ ರಂಪಾಟ ಮಾಡುತ್ತಿತ್ತು. ಸಾಧಾರಣಕ್ಕಿಂತಲೂ ಅಧಿಕವಾಗಿಯೇ ಬಳುಕುವ ದೇಹವಿದ್ದ (ತೆಳ್ಳನೆಯ ದೇಹ) ಆ ತಾಯಿಯ ಸೊಂಟಕ್ಕೆ ತನ್ನೆರಡೂ ಕಾಲುಗಳನ್ನು ಕತ್ತರಿಯಾಗಿ ಬಳಸಿ ಮಗು ಲಾಕ್ ಮಾಡಿಬಿಟ್ಟಿತ್ತು. ಮಗುವನ್ನು ಇಳಿಸಲೂ ಆಗದೇ ಹೊತ್ತುಕೊಂಡು ಹೋಗಲೂ ಆಗದೆ ಪರಿಪಾಟಲು ಪಡುತ್ತಿದ್ದ ಆಕೆಯ ಕಂಗಳಲ್ಲಿ ನೀರು ತುಂಬಿತ್ತು. ಹತ್ತಿರ ಯಾವುದೇ ಅಂಗಡಿಗಳೂ ಇರಲಿಲ್ಲ. ಸುತ್ತ ಮುತ್ತ ತಮಾಷೆ ನೋಡುವವರ ಇರಿಸು-ಮುರಿಸಿನ ನೋಟಗಳು ಬೇರೆ. ಹಾಗೆಯೇ ಕಷ್ಟಪಟ್ಟು ಮಗುವನ್ನೆತ್ತಿಕೊಂಡು ಆಕೆ ಮರೆಯಾದರೂ ನನ್ನ ತಲೆಯಲ್ಲಿ ಆ ಮಗು ತನ್ನೆರಡು ಕಾಲುಗಳಿಂದ ತಾಯಿಯ ಸೊಂಟಕ್ಕೆ ಹಾಕಿದ್ದ ಆ ಕತ್ತರಿ-ಬಂಧನ ತಲೆಯಲ್ಲಿ ಸಾಕಷ್ಟು ವಿಚಾರ ಮಂಥನಕ್ಕೆ ಎಡೆಮಾಡಿತ್ತು. ಒಂದು ಕ್ಷಣ ನಕ್ಷತ್ರಿಕ ಹರಿಶ್ಚಂದ್ರನ ಬೆನ್ನೇರಿದ್ದ ದೃಶ್ಯ ಕೂಡ ಕಣ್ಮುಂದೆ ಸುಳಿಯಿತು.
'ಬಿಟ್ಟರು ಬಿಡದೀ ಮಾಯೆ' ಎಂಬಂತೆ ಮಗುವಿನಿಂದ ಬಿಡಿಸಿಕೊಳ್ಳಲೂ ಆಗದೆ, ಚಾಕಲೇಟ್ ಕೊಡಿಸಲೂ ಆಸ್ಪದವಿಲ್ಲದೆ, ಮಗುವನ್ನು ಹೊತ್ತುಕೊಂಡು ಹೋಗಲೂ ಆಗದೆ ಹೆಣಗುತ್ತಿದ್ದ ಆ ತಾಯಿಯ ದೃಶ್ಯ ನಿಜವಾದ ಜೀವನಾರ್ಥದ ನೋಟವೇ ಆಗಿತ್ತು. ನಾವೂ ಅಷ್ಟೆ. ಇಷ್ಟವಿರಲಿ-ಬಿಡಲಿ, ಅನೇಕ ಅಂತಹ ಸಮಸ್ಯೆಗಳೆಂಬ ಕೂಸುಗಳ ಕತ್ತರಿ-ಬಂಧಕ್ಕೆ ಒಳಗಾಗಿರುತ್ತೇವೆ. ಸಮಸ್ಯೆಗಳು ನಮ್ಮನ್ನು ಬಿಡುವಂತಿಲ್ಲ - ಬಹಳಷ್ಟು ಸಮಸ್ಯೆಗಳ ಪರಿಹಾರ ನಮ್ಮಲ್ಲಿಲ್ಲ. ಒಟ್ಟಿನಲ್ಲಿ ಸಮಸ್ಯೆಗಳ ಭಾರವಾದ ಮೂಟೆಯನ್ನು ಬೆವರಿಳಿಸುತ್ತಾ, ಏದುಸಿರು ಬಿಡುತ್ತಾ ಸಾಗಿಸುವಲ್ಲೇ ಜೀವನದ ಅಧಿಕ ಸಮಯದ ಬಳಕೆಯಾಗಿಬಿಟ್ಟಿರುತ್ತದೆ. ಇತ್ತ ಮಗುವಿಗೆ ಚಾಕಲೇಟೂ ಸಿಗಲಿಲ್ಲ - ಅತ್ತ ತಾಯಿಗೆ ಮಗುವನ್ನು ಹೊರುವದೂ ತಪ್ಪಲಿಲ್ಲ - ಅರ್ಥಾತ್ ಮಗುವಿಗೂ ಸುಖವಿಲ್ಲ - ತಾಯಿಯ ಸಂಕಷ್ಟವೂ ನೀಗಲಿಲ್ಲ ಎಂಬಂತೆ.
ಗಂಡ-ಹೆಂಡರಿರಬಹುದು, ತಂದೆ-ತಾಯಿಯರಿರಬಹುದು, ಮಕ್ಕಳಿರಬಹುದು, ಸಹೋದರ-ಸಹೋದರಿಯರಿರಬಹುದು, ಸ್ನೇಹಿತರು ಇರಬಹುದು - ಒಮ್ಮೆ ಈ ಸಂಸಾರ ಸಾಗರದಲ್ಲಿ ಇಳಿದೊಡನೆ ಈ ಕತ್ತರಿ-ಬಂಧಗಳ ಸುಖ ಶುರು. ಎಲ್ಲೆಲ್ಲೂ ನಿರೀಕ್ಷೆಗಳೇ - ಎಲ್ಲರದೂ ನಿರೀಕ್ಷೆಗಳೇ - ಅದೂ ಮಿತಿಯಿಲ್ಲದಷ್ಟು. ತೀರಿಸಿದಷ್ಟೂ ಮತ್ತಷ್ಟು, ಮಗದಷ್ಟು ಪುನ: ಪುನ: ಪುಟಿದೇಳುವ ಹೊಸ ಹೊಸದಾದ ನಿರೀಕ್ಷೆಗಳು. ಎಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ ಹಿಂಗಿಸಲಾಗದ ಈ ನಿರೀಕ್ಷೆಗಳು ನಮ್ಮ  ಬೆಂಬಿಡದ, ಕಣ್ಣಿಗೆ ಕಾಣದಿಹ ಕತ್ತರಿ-ಬಂಧಗಳು. ಇದು ಪ್ರತಿಯೊಬ್ಬರೂ ಅನುಭವಿಸಿರುವ, ನಿತ್ಯವೂ ಅನುಭವಿಸುತ್ತಿರುವ ಸಾರ್ವತ್ರಿಕ ನಿತ್ಯ-ಸತ್ಯ. ನೀವು ಇತರರಿಗೆ ಮಾಡಿದ್ದ, ಮಾಡುತ್ತಿರುವ ಮತ್ತು ಮಾಡುವ ಸಹಕಾರ/ಉಪಕಾರ/ಸಹಾಯಗಳ ಪಟ್ಟಿ ಆಂಜನೇಯನ ಬಾಲದಷ್ಟೇ ಉದ್ದವಿರಬಹುದು. ನಿಮ್ಮ ಈ ಪ್ರವೃತ್ತಿಯಿಂದ ನಿಮ್ಮ ಸುತ್ತ ಮುತ್ತಲಿನವರನ್ನು ನೀವು ಸಾಕಷ್ಟು ತೃಪ್ತಿ ಪಡಿಸಿರಲೂಬಹುದು (ಹಾಗೆಂದು ನೀವೆಂದುಕೊಂಡಿರಬಹುದು!); ಸಂತೋಷಿಸಿರಬಹುದು. ಆದರೆ ಮರೆಯದಿರಿ - ಅವರ ಕತ್ತರಿ-ಬಂಧನ ಮಾತ್ರಾ ಕಳಚದು. ಅವರ ನಿರೀಕ್ಷೆಗಳ/ಆಶಯಗಳ ಕೂಗು ('ಚಾಕೀ' 'ಚಾಕೀ' ಎಂಬ ಕೂಗಿನಂತೆ) ಎಂದಿಗೂ ಮುಗಿಯವು. ನೀವು ೧೦೦ ಮಾಡಿ ಒಂದನ್ನು ಮಾಡಲಾಗದಿದ್ದರೆ ನಿರುಪಯುಕ್ತನೆಂಬ, ಹೃದಯಹೀನ, ನಿಷ್ಕರುಣಿ, ಸ್ವಾರ್ಥಿಯೆಂಬ ಹಣೆಪಟ್ಟಿ ಕೂಡಲೇ ಸಿದ್ಧ.  ತಾವೇ ಈ ಕತ್ತರಿ-ಬಂಧಗಳಲ್ಲಿ ಸಿಕ್ಕಿಕೊಂಡಿದ್ದರೂ ಅರಿವಿಲ್ಲದ ಇತರರ ಅಪಹಾಸ್ಯ/ಅವಹೇಳನ ಕೂಡ ಎದುರಿಸಬೇಕಾದೀತು. ಹಾಗಂತ ಈ ಸರಣಿ ಇಲ್ಲಿಗೇ ಮುಗಿಯದು. 'ಕಾಲಾಯ ತಸ್ಮೈ ನಮ:' - ಕಾಲ ಕಳೆದಂತೆ ಈ ಕತ್ತರಿ-ಬಂಧಗಳ ಸುಖ ಎಂದಿನಂತೆ ಪುನರಾರಂಭ. ಕೊಡವಲೂ ಆಗದೇ ಹೊತ್ತುಕೊಂಡು ಹೋಗಲೂ ಆಗದೇ ಅನುಭವಿಸುವ - ನಿರಂತರ ಅನುಭವಿಸಲೇಬೇಕಾಗಿರುವ ಹಣೆಬರಹ ಮಾತ್ರಾ ಎಲ್ಲರಂತೆ ನಿಮ್ಮದೂ ಕೂಡ. ಈ "ಕತ್ತರಿ-ಬಂಧ" ಗಳಿಂದ ನಮಗೆ ಮುಕ್ತಿ ಸಿಗುವವರೆಗೆ  ಮುಕ್ತಿಯಿಲ್ಲ - ಇರುವವರೆಗೆ ಅದನ್ನು ಸಹಿಸಿಕೊಂಡು, ಹೊತ್ತುಕೊಂಡು ಹೋಗುವ ಶಕ್ತಿ ಮಾತ್ರಾ ಕೊಡು ಎಂದು ದೇವರನ್ನು ಪ್ರಾರ್ಥಿಸದೆ ಅನ್ಯ ಮಾರ್ಗವಿಲ್ಲ. ಎಲ್ಲರಂತೆ ನಿಮದೂ ಕೂಡ !   

 ಜೈ ಕತ್ತರಿ-ಬಂಧ!!

ಕೊನೆ ಕತ್ತರಿ:  ತಪ್ಪು ಮಾಡಿದೊಡನೆಯೆ ಪೊಲೀಸ್ ನಮ್ಮನ್ನು ಬಂಧಿಸುವಂತೆ ಜನ್ಮ ತಾಳಿದೊಡನೆಯೇ ನಾನಾ ರಿತಿಯ ಮಾಯೆಗಳು ನಮ್ಮನ್ನು ಜೀವನ ಪರ್ಯಂತ ಬಂಧಿಸಿಟ್ಟಿರುತ್ತವೆ. ಆ ಬಂಧನಗಳಿಂದ ಕೊನೆಯವರೆಗೆಮುಕ್ತಿಯಿಲ್ಲ.  ಹಾಗಾಗಿ ಬಂಧನದಲ್ಲಿದ್ದುಕೊಂಡು, ಅದರ ಕಷ್ಟಗಳನ್ನು ಸಹಿಸಿಕೊಂಡು, ಆ ಬಂಧನಗಳಿಂದ ಬಿಡುಗಡೆ ಹೊಂದಲು ಮಾಡುವ ನಿರಂತರ ಪ್ರಯತ್ನವೇ ಈ ಜೀವನ.

- ಕವಿ ವೆಂ. ಸುರೇಶ್
*****************


**************************************
ಕವಿ ಮನೆತನದ ಮಂಗಳನಿಧಿಗೆ ವಂತಿಕೆ ನೀಡಿದ ಮಹನೀಯರು
೨೦೦೯ನೆಯ ಸಾಲು :
ಶ್ರೀ/ ಶ್ರೀಮತಿಯರಾದ:
೧. ಕವಿ ಮನೆತನದ ಓರ್ವ ಹಿರಿಯರು ರೂ ೬೦೦೦
೨. ಬಿ.ವಿ. ಹರ್ಷ, ಬೆಂಗಳೂರು                       ೬೦೦೦
೩. ಸುಬ್ಬಲಕ್ಷ್ಮಮ್ಮಸುಬ್ಬರಾವ್,ಬೆಂಗಳೂರು     ೫೦೦೦ +೫೦೦
೪. ಹೆಚ್.ಎಸ್. ಪುಟ್ಟರಾಜು, ಜಾವಗಲ್       ೫೦೦೦
೫. ಪದ್ಮಾವತಮ್ಮಸುಬ್ಬರಾವ್,ಬೆಂಗಳೂರು     ೧೦೦೦
೬. ಕ.ವೆಂ. ನಾಗರಾಜ್, ಹಾಸನ               ೮೨೦
೭. ಕವಿ ವೆಂ. ಸುರೇಶ, ಶಿವಮೊಗ್ಗ               ೫೦೦
೮. ಕೆ. ಶ್ರೀಕಂಠ, ಬೆಂಗಳೂರು                       ೫೦೦
೯. ರಾಮಮೂರ್ತಿ, ಕೆಳದಿ                       ೫೦೦
೧೦.ಕೆ.ರಾಮರಾವ್,ಹರಳಾಪುರ, ಹರಿಹರ       ೩೦೦
________________________
                           ಒಟ್ಟು                      ೨೬೧೨೦
________________________

೨೦೧೦ನೆಯ ಸಾಲು (೩೦-೦೪-೧೦ರವರೆಗೆ) 
ಶ್ರೀ/ ಶ್ರೀಮತಿಯರಾದ:

೧. ಕ.ವೆಂ. ನಾಗರಾಜ್, ಹಾಸನ               ೫೦೦
೨. ಕವಿ ವೆಂ. ಸುರೇಶ, ಶಿವಮೊಗ್ಗ               ೫೦೦
೩. ಗಿರಿಜಾಲಕ್ಷ್ಮೀಪತಿ, ಬೆಂಗಳೂರು               ೫೦೦
೪. ಗಿರಿಜಾಂಬಾಕುಮಾರಸ್ವಾಮಿ, ಹಾಸನ       ೫೦೦
೫. ಹೆಚ್.ಎಸ್. ದಾಕ್ಷಾಯಿಣಿ, ಹಾಸನ       ೫೦೦
__________________________
ಒಟ್ಟು                                               ೨೫೦೦
__________________

ವೆಚ್ಚದ ವಿವರ (೦೧-೧೨-೦೯ರಿಂದ ೩೦-೦೪-೧೦ರವರೆಗೆ)

೧. ಪತ್ರಿಕೆ ನೋಂದಣಿ ಸಂಬಂಧದ ವೆಚ್ಚ       ೨೭೩
೨. ಅಂಚೆ ವೆಚ್ಚ, ಇತರೆ                               ೨೫೬
೩. ಪತ್ರಿಕೆ ಮುದ್ರಣ ವೆಚ್ಚ                      ೬೫೩೦
೪. ಸಮಾವೇಶದ ಬ್ಯಾನರ್, ಇತ್ಯಾದಿ        ೧೯೦
_____________________________
ಒಟ್ಟು                                              ೭೨೪೯
_____________________________

ಜಮಾ ಖರ್ಚು ವಿವರ 
(೦೧-೧೨-೦೯ರಿಂದ ೩೦-೦೪-೧೦ರವರೆಗೆ)

೦೧-೧೨-೦೯ರಲ್ಲಿದ್ದಂತೆ ಪ್ರಾರಂಭಶಿಲ್ಕು ರೂ.೩೨೩೪೯
ಸಂಗ್ರಹ(೦೧-೧೨-೦೯ರಿಂದ ೩೦-೦೪-೧೦)      ೧೦೮೦೦
ಬಡ್ಡಿ ಮೊಬಲಗು                                            ೬೨೮
ಒಟ್ಟು                                                       ೪೩೭೭೭
ವೆಚ್ಚ                                                          ೭೨೪೯
__________________
ಆಖೈರು ಶಿಲ್ಕು (೩೦-೦೪-೧೦ರಲ್ಲಿದ್ದಂತೆ     ೩೬೫೨೮
____________________________

 ಆರೋಗ್ಯ 

ಉಬ್ಬಸಕ್ಕೆ ವಿಶಿಷ್ಠ ಪಥ್ಯ

೧. ರೋಗಿಯು ಹಾಲು-ಮಜ್ಜಿಗೆಯನ್ನು ಕುಡಿಯಬಾರದು. ಉಬ್ಬಸವಿಲದಿದ್ದಾಗ ಹಗಲು ಬೆಣ್ಣೆ ತೆಗೆದ ಮಜ್ಜಿಗೆ ಉಪಯೋಗಿಸಬಹುದು.
೨. ಊಟವನ್ನು ಸಂಜೆಗೇ ತೆಗೆದುಕೊಳ್ಳಬೇಕು. ರಾತ್ರಿ ಏನನ್ನೂ ಸೇವಿಸಬಾರದು. ಬೇಕಾದರೆ ಬಿಸಿ ನೀರನ್ನು ಕುಡಿಯಬಹುದು. ಹಗಲಿನಲ್ಲಿ ತಣ್ಣೀರನ್ನು ಕುಡಿಯಬಹುದಾದರೂ ಒಂದೇ ಸಲಕ್ಕೆ ಹೆಚ್ಚು ನೀರನ್ನು ಕುಡಿಯಬಾರದು.
೩. ಊಟದಲ್ಲಿ ಇಲ್ಲವೇ ಊಟದ ನಂತರ ಕೂಡಲೇ ನೀರನ್ನು ಕುಡಿಯಬಾರದು. ಅಭ್ಯಾಸವಿದ್ದವರು ಒಂದೆರಡು ಗುಟುಕು ಮಾತ್ರ ಒಂದೆರಡು ಸಲ ಕುಡಿಯಬಹುದು. ಊಟ ಅಥವ ತಿಂಡಿ ತಿಂದ ೨-೩ ಗಂಟೆಗಳ ಬಳಿಕ ೨-೩ ಗಂಟೆಗೊಮ್ಮೆ ನೀರು ಕುಡಿಯುತ್ತಾ ಹೋಗಬಹುದು.
೪. ಮೈಮೇಲೆ ಇಲ್ಲವೇ ತಲೆಯ ಮೇಲೆ ಹೆಚ್ಚು ಬಿಸಿಯಾದ ನೀರಿನಿಂದ ಸ್ನಾನ ಮಾಡಬಾರದು. ಸಾಧ್ಯವಾದರೆ ತಣ್ಣೀರಿನ ಸ್ನಾನ (ತಲೆಯ ಮೇಲೆ ಕೂಡ) ರೂಢಿಸಿಕೊಳ್ಳುವುದು ಉಬ್ಬಸಕ್ಕೆ ಗುಣಕಾರಿ.
೫. ಸಂಜೆಯ/ರಾತ್ರಿಯ ಊಟವಾಗಿ ೨-೩ ಗಂಟೆಯೊಳಗೆ ಮಲಗಬಾರದು. ಹಗಲು ಮಲಗಬಾರದು.
೬. ಬೆಳಿಗ್ಗೆ ಎದ್ದು ಒಂದೆರಡು ಗಂಟೆ ಏನನ್ನೂ ಸೇವಿಸಬಾರದು. ಬೇಕಾದರೆ ಸ್ವಲ್ಪ ಬಿಸಿನೀರು ಕುಡಿಯಬಹುದು.
೭. ಒಂದು ತಿಂಡಿ, ಎರಡು ಊಟ, ಇವುಗಳ ಹೊರತಾಗಿ ಬೇರೆ ಏನನ್ನೂ ಸೇವಿಸಬಾರದು. ಕಾಫಿ-ಚಹಾ ಕುಡಿಯುವುದಿದ್ದರೆ ತಿಂಡಿ-ಊಟದ ಸಮಯಕ್ಕೇ ಕುಡಿಯಬೇಕು. ೨ ಸಲಕ್ಕಿಂತ ಹೆಚ್ಚಾಗಬಾರದು. ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ಖಂಡಿತಾ ಕುಡಿಯಬಾರದು.
೮. ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚೆ ಬಯಲಲ್ಲಿ ವೇಗವಾಗಿ ತಿರುಗಾಡಿ ಬರಬೇಕು. 
೯. ಹಾರ್ಲಿಕ್ಸ್, ಬೋರ್ನ್‌ವೀಟಾ, ಪ್ರೋಟಿನ್ಯೂಲ್ ಮುಂತಾದ ಯಾವುದೇ ಡಬ್ಬದ/ಬಾಟ್ಲಿಯ ಪೌಷ್ಟಿಕಗಳನ್ನು ಸೇವಿಸಬಾರದು. ಪುಷ್ಟಿಗೆ ಬೇಕಾದರೆ ಊಟ ಇಲ್ಲವೇ ತಿಂಡಿಯ ಜೊತೆಗೆ ಒಣ ದ್ರಾಕ್ಷಿ, ಖರ್ಜೂರ, ಬಾದಾಮಿ, ಒಣ ಅಂಜೂರ, ಮೋಸಂಬಿ, ಸಿಹಿಯಾದ ಹಸಿ ದ್ರಾಕ್ಷಿ ಮುಂತಾದವುಗಳನ್ನು ಸೇವಿಸಬಹುದು.
೧೦. ಕರಿದ ತಿನಿಸು, ಬಾಳೆಹಣ್ಣು, ಮೊಸರು, ಹುಳಿ ಹಣ್ಣುಗಳು, ಬೆಂಡೆಕಾಯಿ ವರ್ಜ್ಯ.
೧೧. ಸಕ್ಕರೆ ಅಪಾಯಕರ - ವರ್ಜ್ಯ; ಬೆಲ್ಲದ ತಿಂಡಿ, ಯಾವಾಗಲಾದರೊಮ್ಮೆ ಸ್ವಲ್ಪ ಸೇವಿಸಬಹುದು.
೧೨. ಸಂಜೆಯ ಊಟದಲ್ಲಿ ಹಾಲು, ಬೆಣ್ಣೆ, ತುಪ್ಪ, ಮೊಸರು ವರ್ಜ್ಯ. ಅನ್ನಕ್ಕಿಂತ ಅಕ್ಕಿ, ಗೋಧಿ, ಜೋಳ ಅಥವ ರಾಗಿಯ ರೊಟ್ಟಿ ಒಳಿತು.

ಸಂಗ್ರಹ - ಪ್ರಸ್ತುತಿ:            ಬಿ.ಎಸ್.ಆರ್. ದೀಪಕ್,
    ಬಿ.ಎ.ಎಮ್.ಎಸ್.(ಅಂತಿಮ ಸೆಮಿಸ್ಟರ್), ಶಿವಮೊಗ್ಗ.
***

ಸಾಧಕರಿವರು     

ಸೈಕಲ್ಲಿನಲ್ಲಿ ಭಾರತ ಸುತ್ತಿದ
ಕಾಶಿ ಶೇಷಾದ್ರಿ ದೀಕ್ಷಿತರ ಅಪ್ರತಿಮ ಸಾಧನೆಯ ಕಿರುಪರಿಚಯ

     ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ|
     ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ||
     ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ|
     ರೀತಿ ಸುಂದರವಿರೆ ಯಶ ನಿನದೆ ಮೂಢ||

     ಏನಾದರೂ ಸಾಧನೆ ಮಾಡಬೇಕೆಂದು ಬಯಸಿದವರೆಲ್ಲರೂ ಗುರಿ ಸಾಧಿಸುವುದಿಲ್ಲ, ಅದು ಸುಲಭದ ಕೆಲಸವೂ ಅಲ್ಲ. ಮನೋಬಲ, ಛಲ ಇರುವವರಿಗಷ್ಟೇ ಇದು ಸಾಧ್ಯ. ಅಂದುಕೊಂಡದ್ದನ್ನು ಸಾಧಿಸಿದ ವಿರಳ ವ್ಯಕ್ತಿಗಳಲ್ಲಿ ಒಬ್ಬರು ಕಾಶಿ ಶೇಷಾದ್ರಿ ದೀಕ್ಷಿತ್.      ೧೯೭೮ರ ಮೇ ೩೧ರಂದು ಸೈಕಲ್ಲಿನಲ್ಲಿ ಅಖಿಲ ಭಾರತ ಪ್ರವಾಸ ಮಾಡಲು ಹೊರಟಾಗ ತೀರ್ಥಹಳ್ಳಿಯ ತರುಣ ಕೆ.ಜಿ. ಶೇಷಾದ್ರಿ ದೀಕ್ಷಿತರ ವಯಸ್ಸು ೨೬ ವರ್ಷಗಳು. ಮೃದು ಸ್ವಭಾವದ ಹಾಗೂ ಅಂತಹ ಹೇಳಿಕೊಳ್ಳುವಂತಹ ದೇಹಧಾರ್ಢ್ಯತೆಯನ್ನು ಹೊಂದಿರದಿದ್ದ ಈ ತರುಣ ಇಂತಹ ಸಾಧನೆ ಮಾಡಿಯಾನೆಂದು ಹೆಚ್ಚಿನವರು ಭಾವಿಸಿರಲಿಲ್ಲ. ಸಾಧನೆ ಮಾಡಲು ಮನೋಬಲ ಮುಖ್ಯ ಎಂಬುದನ್ನು ಸಾಧಿಸಿ ತೋರಿಸಿದ ಈ ತರುಣ ಪ್ರವಾಸಕ್ಕೆ ತೆಗೆದುಕೊಂಡ ಅವಧಿ ೩ ವರ್ಷ ೨ ತಿಂಗಳುಗಳು. ಕ್ರಮಿಸಿದ ದೂರ ಸುಮಾರು ೫೫ಸಾವಿರ ಕಿ.ಮೀ.ಗಳು. ಗಳಿಸಿದ ಅನುಭವ ಅಪಾರ. ಪ್ರವಾಸ ಮುಗಿಸಿ ದಿನಾಂಕ ೨೦-೦೭-೧೯೮೧ರಂದು ತೀರ್ಥಹಳ್ಳಿಗೆ ಬಂದಾಗ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಊರಿನಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಆರತಿ ಬೆಳಗಿದರು. ಮನದುಂಬಿ ಹರಸಿದರು. ಸನ್ಮಾನ, ಪ್ರಶಸ್ತಿಗಳು ಅರಸಿ ಬಂದವು.
                                (26 ವರ್ಷದ ತರುಣ ದೀಕ್ಷಿತ್ ಪ್ರವಾಸ ಕಾಲದಲ್ಲಿ)
     ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದ ದೀಕ್ಷಿತರು ಇತರ ಕಾರ್ಯಕರ್ತರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಅನೇಕ ಪ್ರೇಕ್ಷಣಿಯ ಹಾಗೂ ಯಾತ್ರಾಸ್ಥಳಗಳಿಗೆ ಚಿಕ್ಕಂದಿನಿಂದಲೇ ಸೈಕಲ್ಲಿನಲ್ಲೇ ಪ್ರವಾಸ ಮಾಡಿದ ಹಿಂದಿನ ಅನುಭವ ಇಂತಹ ಸಾಹಸಕ್ಕೆ ಕೈಹಾಕಲು ಸ್ಫೂರ್ತಿ ನೀಡಿತ್ತು. ಕೇವಲ ಕಂಬ ಮುಟ್ಟಿ ವಾಪಸು ಬಂದಿದ್ದಲ್ಲಿ ಪ್ರವಾಸವನ್ನು ಇನ್ನೂ ಕ್ಷಿಪ್ರ ಅವಧಿಯಲ್ಲಿ ಅವರು ಪೂರ್ಣಗೊಳಿಸಬಹುದಿತ್ತು. ಆದರೆ ಪ್ರತಿ ರಾಜ್ಯದ ಪ್ರತಿ ಸ್ಥಳವನ್ನು ಒಳಹೊಕ್ಕು ನೋಡುವ ಅಭಿಲಾಷೆ ಪ್ರವಾಸದ ಅವಧಿಯನ್ನು ೩ವರ್ಷಕ್ಕೂ ಮೇಲ್ಪಟ್ಟು ಹೆಚ್ಚಿಸಿತು. ದಿನವೊಂದಕ್ಕೆ ಸುಮಾರು ೬೦ ರಿಂದ ೮೦ ಕಿ.ಮೀ. ಸೈಕಲ್ ತುಳಿಯುತ್ತಿದ್ದ ಅವರು   ತ್ರಿಪುರ ಮತ್ತು ನಾಗಾಲ್ಯಾಂಡ್‌ಗಳನ್ನು  ಬಿಟ್ಟು ಉಳಿದೆಲ್ಲಾ ರಾಜ್ಯಗಳಿಗೆ ಭೇಟಿ ಕೊಟ್ಟಿದ್ದಾರೆ. ನಿರ್ಬಂಧದ ಕಾರಣ ಈ ಎರಡು ರಾಜ್ಯಗಳನ್ನು ನೋಡಲಾಗಲಿಲ್ಲವೆಂದು ಹೇಳುತ್ತಾರೆ. ಈ ಪ್ರವಾಸಕ್ಕೆ ಅವರಿಗೆ ಸುಮಾರು ಐದು ಸಾವಿರ ರೂ. ಖರ್ಚಾಗಿದ್ದು ಮನೆಯವರಿಂದ ಬಂದ ಎರಡು ಸಾವಿರ ರೂ. ಬಿಟ್ಟರೆ ಉಳಿದ ಹಣವೆಲ್ಲಾ ಪ್ರಯಾಣಕಾಲದಲ್ಲಿ ಅಭಿಮಾನಿಗಳು, ಸಂಘ ಸಂಸ್ಥೆಗಳಿಂದ ದೇಣಿಗೆಯಾಗಿ ಬಂದದ್ದು. ಪ್ರವಾಸ ಕಾಲದಲ್ಲಿ ಆಹಾರ, ವಸತಿ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದ ರಾಷ್ಟ್ರೀಯ ಸ್ವಯಂಸೇವಕಸಂಘದ ಸಹಾಯವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಹಲವರು ಗಣ್ಯರೂ ಸಹ ನೆರವು ನೀಡಿದ ಕುರಿತು ಸ್ಮರಿಸುತ್ತಾರೆ. ಇವರ ಜೊತೆಗೆ ಪ್ರವಾಸ ಹೊರಟಿದ್ದ ಸಂಗಡಿಗ ಶ್ರೀ ಅನಂತ ಪದ್ಮನಾಭ ಕರ್ನಾಟಕ ಪ್ರವಾಸದುದ್ದಕ್ಕೂ ಜೊತೆಗಿದ್ದು ಮಹಾರಾಷ್ಟ್ರದಲ್ಲಿ ಪ್ರವಾಸ ಮೊಟಕುಗೊಳಿಸಿ ಹಿಂತಿರುಗಿದರೂ ಇವರು ಧೃತಿಗೆಡದೆ ಏಕಾಂಗಿಯಾಗಿ ಪ್ರವಾಸ ಮುಂದುವರೆಸಿ ಪೂರ್ಣಗೊಳಿಸಿದ ಸಾಹಸಿ.
     ಇವರ ಪ್ರವಾಸಕಾಲದ ಅನುಭವಗಳ ತುಣುಕುಗಳು:
ಸುದೀರ್ಘ ಪ್ರಯಾಣಕಾಲದಲ್ಲಿ ೧೦ ಟೈರುಗಳನ್ನು, ೧೨ ಟ್ಯೂಬುಗಳನ್ನು ಮತ್ತು ಒಮ್ಮೆ ಚೈನನ್ನು ಬದಲಾಯಿಸಬೇಕಾಯಿತು.
ಮಹಾರಾಷ್ಟ್ರದ ಮುಲ್ಕಾಪುರ ಸೈಕಲ್ ರೇಸ್ ಅಸೋಸಿಯೇಷನ್ ಏರ್ಪಡಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ೧೬೦ ಕಿ.ಮೀ. ದೂರವನ್ನು ೫ ಗಂಟೆ ೧೨ ನಿಮಿಷಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದರು. ಸ್ಪರ್ಧೆ ಪ್ರಾರಂಭವಾಗುವ ಸಮಯಕ್ಕೆ ಅಲ್ಲಿಗೆ ಹೋಗಿದ್ದ ಅವರು ಆಯೋಜಕರನ್ನು ಕೋರಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಸಮಯದ ಅಭಾವದಿಂದ ತಿಂಡಿಯನ್ನೂ ತಿಂದಿರಲಿಲ್ಲ. ಉಳಿದ ಸ್ಪರ್ಧಿಗಳಂತೆ ದಾರಿಯಲ್ಲಿ ಬಳಸಲು ಗ್ಲೂಕೋಸ್ ಇರಲಿ, ನೀರೂ ಹೊಂದಿರಲಿಲ್ಲ. ಹೀಗಾಗಿ ಗಮ್ಯಸ್ಥಾನ ತಲುಪಿದ ನಂತರ ಬಳಲಿ ಕುಸಿದ ಇವರಿಗೆ ಆಯೋಜಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ತೀವ್ರ ಸ್ನಾಯು ಸೆಳೆತದಿಂದ ನರಳಿದ ಅವರು ವಾಪಸು ತೀರ್ಥಹಳ್ಳಿಗೆ ಬಂದು ಕೆಲವು ದಿನಗಳು ವಿಶ್ರಾಂತಿ ಪಡೆದು ಪುನಃ ಪ್ರವಾಸ ಮುಂದುವರೆಸಿದರು.
ಮರಾಠಿ, ಹಿಂದಿ, ಗುಜರಾತಿ ಭಾಷೆಗಳನ್ನೂ ಪ್ರವಾಸ ಇವರಿಗೆ ಕಲಿಸಿಕೊಟ್ಟಿತು.
ಮಧ್ಯಪ್ರದೇಶದ ಇಂದೂರಿಗೆ ೮೦ ಕಿ.ಮೀ. ದೂರದ ಭೋಂರ್ಗ್ ಎಂಬಲ್ಲಿ ಬಿಲ್ಲು, ಬಾಣಗಳಿಂದ ಶಸ್ತ್ರಸಜ್ಜಿತರಾದ ಸುಮಾರು ೧೨ ನಗ್ನ ಆದಿವಾಸಿಗಳು ಇವರ ಮೇಲೆ ಹಲ್ಲೆ ಮಾಡಿ ಹೊಡೆದು ಕ್ಯಾಮರಾ, ವಾಚು, ಹಣ, ಬಟ್ಟೆ ಎಲ್ಲವನ್ನೂ ದೋಚಿದರು. ಅರಣ್ಯ ಕಾವಲುಗಾರ ಅಲ್ಲಿಗೆ ಬಂದಿದ್ದರಿಂದ ಸೈಕಲ್ ಬಿಟ್ಟು ಓಡಿಹೋಗಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇವರನ್ನು ಆತ ಉಪಚರಿಸಿ ಸಹಕರಿಸಿದ.
ಉತ್ತರ ಭಾರತದ ಹಲವೆಡೆ ಇವರಿಗೆ ಕೆಲಸ ಹುಡುಕಿಕೊಂಡು ಬಂದಿದ್ದರೂ ಗುರಿ ಸಾಧನೆ ಸಲುವಾಗಿ ನಿರಾಕರಿಸಿದ್ದು ಹೆಗ್ಗಳಿಕೆ.
ಮಾಜಿ ಪ್ರಧಾನಿ ಶ್ರೀ ಮೊರಾರ್ಜಿ ದೇಸಾಯಿ, ಮಾಜಿ ಉಪರಾಷ್ರಪತಿ ಶ್ರೀ ಬಿ.ಡಿ. ಜತ್ತಿ, ಜನತಾ ಪಕ್ಷದ ನೇತಾರ ಶ್ರೀ ಅಟಲ್ ಬಿಹಾರಿ ವಾಜಪೇಯಿ (ಆಗ ಅವರು ಪ್ರಧಾನ ಮಂತ್ರಿಯಾಗಿರಲಿಲ್ಲ), ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರುಗಳನ್ನು ಭೇಟಿ ಮಾಡಿದ್ದಾರೆ.
ಬಿಲಾಸಪುರದ ಬಳಿ ಕಾಡಿನಲ್ಲಿ ಕರಡಿ ಎದುರಿಗೆ ಬಂದಿದ್ದು, ಹತ್ತಿರವಿದ್ದ ಕಾಗದ, ತರಗೆಲೆಗಳನ್ನು ಸೇರಿಸಿ ಬೆಂಕಿ ಹೊತ್ತಿಸಿದ್ದರಿಂದ ಸುಮ್ಮನೆ ಹೋಯಿತು.
ಕೊಳೆತ ಸಗಣಿಯಲ್ಲಿರುವ ಹುಳುಗಳನ್ನು ಎಣ್ಣ್ಣೆಯಲ್ಲಿ ಹುರಿದು ಅತಿಥಿಗಳನ್ನು  ಸತ್ಕರಿಸುವ ಸಂಪ್ರದಾಯದ ಪರಿಚಯ ಇವರಿಗೆ ಭೂತಾನಿನಲ್ಲಾಯಿತು.
ಚಂಬಲ್ ಕಣಿವೆ ಬಳಿ ಡಕಾಯಿತರು ಇವರನ್ನು ಪೋಲಿಸ್ ಬೇಹುಗಾರನಿರಬೇಕೆಂದು ಶಂಕಿಸಿ ಅಪಹರಿಸಿಕೊಂಡು ಹೋಗಿದ್ದರೂ, ನಿಜಸಂಗತಿ ತಿಳಿದು ಹೂಹಾರ ಹಾಕಿ ಸನ್ಮಾನಿಸಿ ಖರ್ಚಿಗೆ ಹಣ ಕೊಟ್ಟು ಬೀಳ್ಕೊಟ್ಟಿದ್ದರು.
ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದೆಲ್ಲೂ ಯುವಕರಿಂದ ನಿರೀಕ್ಷಿತ ಪ್ರೋತ್ಸಾಹ ಅವರಿಗೆ ಸಿಗಲಿಲ್ಲ.
     ಪ್ರವಾಸಕಾಲದಲ್ಲಿ ದೀಕ್ಷಿತರಿಗೆ ಭಾರತದ ವಿವಿಧತೆಯ ಪ್ರತ್ಯಕ್ಷ ದರ್ಶನವಾಯಿತು. ಜನರನ್ನು, ಸ್ಥಳಗಳನ್ನು ಸಮೀಪದಿಂದ ನೋಡಿದರು. ಓದಿ ತಿಳಿಯುವುದಕ್ಕಿಂತ ನೋಡಿ ತಿಳಿಯುವ ಅನುಬವವೇ ವಿಶಿಷ್ಟವೆಂದು ಮನಗಂಡ ಅವರು ಜನರ ದಯನೀಯ ಸ್ಥಿತಿ ಕಂಡು ಮರುಗಿದರು. ಸಮಾಜಕ್ಕೆ ಉಪಯುಕ್ತವಾಗಿ ಬಾಳಬೇಕೆಂಬ ಅವರ ಮನೋಭಾವ ಗಟ್ಟಿಗೊಂಡಿತು. ದೀಕ್ಷಿತರು ಮಾಡಬೇಕಾದ ಒಂದು ಕೆಲಸ ಬಾಕಿ ಉಳಿದಿದೆ. ಅದೆಂದರೆ ತಮ್ಮ ಅನುಭವಗಳನ್ನು ಬರಹ ರೂಪದಲ್ಲಿಳಿಸಿ ಇತರರಿಗೆ ಪ್ರೇರಣೆ ನೀಡುವುದು. ಅದನ್ನೂ ಶೀಘ್ರವಾಗಿ ಪೂರ್ಣಗೊಳಿಸಲೆಂದು ಹಾರೈಸೋಣ.
-ಕ.ವೆಂ.ನಾಗರಾಜ್.
(ಆಧಾರ:   ದೀಕ್ಷಿತರು ಸಮಾವೇಶದ ಸಂದರ್ಭದಲ್ಲಿ ನೀಡಿದ ಮಾಹಿತಿ, ಪ್ರಜಾವಾಣಿ, ಬೃಹಸ್ಪತಿ ವಾಣಿ, ಸಂಯುಕ್ತ ಕರ್ನಾಟಕ ಮತ್ತು ಉದಯವಾಣಿ ಪತ್ರಿಕಾ ವರದಿಗಳು.)
####################################

     ಸಾಧನೆ ಮತ್ತು ಸನ್ಮಾನ ವ್ಯಕ್ತಿಯ ಪರಿಶ್ರಮವನ್ನು ಮತ್ತು ಸಮಾಜದ ಕರ್ತವ್ಯವನ್ನು ಬಿಂಬಿಸುವ ಪ್ರಕ್ರಿಯೆಗಳು. ನೈಜವಾದ ಸಾಧನೆಗೆ ನೈಜವಾದ ಸನ್ಮಾನ ಆರೋಗ್ಯಕರವಾದ ಸಮಾಜದ ಲಕ್ಷಣ. ನಿಸ್ವಾರ್ಥೀ ಸಾಧಕರು ಸಾಧನೆಗಳಿಗೆ ಸಲ್ಲುವ ಮನ್ನಣೆ ಮತ್ತು ಸನ್ಮಾನ ದೈವ ಪೂಜೆಗೆ ಸಮಾನ.
********

     ಹಾದಿಗಳು ಇರುವುದೇ ಕ್ರಮಿಸಲಿಕ್ಕೆ. ಅವು ಪಯಣದ ಹಾದಿಗಳಿರಬಹುದು ಅಥವಾ ಜೀವನ ಯಾನದಲ್ಲಿ ನಮ್ಮ ಪೂರ್ವಜರು ಮತ್ತು ಮಹಾನ್ ವ್ಯಕ್ತಿಗಳು ತೋರಿಸಿಕೊಟ್ಟ ಹಾದಿಗಳಿರಬಹುದು. ಒಟ್ಟಾರೆ ಹಾದಿಗಳೆಲ್ಲವೂ ಗುರಿಯೆಡೆಗೆ ನಮ್ಮನ್ನು ಸಾಗಿಸುವ ಮಾಧ್ಯಮವಷ್ಟೆ. ನಮ್ಮ ಗುರಿ ತಲುಪಲು ಯಾವ ದಾರಿ ಸುಗಮ, ಹತ್ತಿರ ಮತ್ತು ಸಹನೀಯ ಎಂಬ ವಿವೇಚನೆ ಮತ್ತು ತೀರ್ಮಾನ ನಮ್ಮದಾಗಿರಬೇಕು.

-ಕವಿ ವೆಂ. ಸುರೇಶ್.
************


ಲಿಂಗಣ್ಣ ಕವಿಯ
ಕೆಳದಿ ನೃಪವಿಜಯ
ಗದ್ಯಾನುವಾದ::  ಕೆ. ಗುಂಡಾಜೋಯಿಸ್


ಪ್ರಥಮಾಶ್ವಾಸಂ
-೪-
(ಹಿಂದಿನ ಸಂಚಿಕೆಯಿಂದ ಮುಂದಕ್ಕೆ)

      ವ|| ಅದೆಂತೆಂದೊಡಿಂತು ವಿರಾಜಿಸುತ್ತುಮಿರ್ಪ ಭದ್ರಪಾಗ್ರಜನಪ್ಪ ಚೌಡಪನ ಸ್ವಪ್ನದೊಳ್ ಶ್ರೀಮತ್ಪರಮೇಶ್ವರಂ ಮನಂಗೊಳಿಪ್ಪ ವೃದ್ಧ ಜಂಗಮ ಸ್ವರೂಪದಿಂ ಪ್ರಸನ್ನನಾಗಿ ಕೆಳದಿಪುರ ವರದೆಡೆಯೊಳ್ ಸೀಗೆವಳ್ಳಿಯೆಂಬ ತಾಣದೊಳ್ ತರುಗುಲ್ಮಲತಾ ಪ್ರತಾನಾವೃತಮಾದ ಸೀಗೆವೆಳೆಯ ಮಧ್ಯದೊಳ್ ರಾಮೇಶ್ವರನೆಂಬ ಮಹಾದಿವ್ಯಲಿಂಗಂ ನೆಲೆಸಿರ್ಪುದಾ ಲಿಂಗಂ ಬಹುಕಾಲಮಾರಭ್ಯ ವಲ್ಮೀಕಾಚ್ಛಾದಿತಮಾಗಿ ರ್ಪುದಲ್ಲಿ ತಲ್ಲಿಂಗಮಿರ್ಪುದರ್ಕೆ ಕುರುಹೇನೆಂದೊಡೆ ನಿನ್ನ ಮನೆಯೊಳೆಸೆವ ಕಪಿಳೆವಣ್ಣದ ಪಸು ಕರುವೆರಸಾ ತಾಣಮನೈದಿ ನಿಂದಾ ಪುತ್ತದ ಮೇಗಡೆಯೊಳ್ ಪ್ರತಿದಿನಂ ಪಾಲ್ಗರೆದು ಬರುತಿರ್ಪುದೆ ಕುರುಹಾ ಲಿಂಗಮಂ ಜನರ ಕಣ್ಮನಕ್ಕೆ ಗೋಚರಮಪ್ಪಂತು ನಿಮಿರ್ಚಿಸಿ ತದ್ರಾಮೇಶ್ವರ ಲಿಂಗಮಂ ಸದ್ಭಕ್ತಿಯಿಂದರ್ಚಿಸಲ್ ನಿನಗಖಂಡಪೃಥ್ವೀ ಪತಿತ್ವಂ ಕೈಸಾರ್ವುದೆಂದುಸಿರ್ದಾ ಜಂಗಮಮೂರ್ತಿ ಯಂತರ್ಧಾನಮನ್ಶೆದಳ್ಚರ್ತು ಪರಮಹರ್ಷಿತನಾಗಿ ನಿಜಮಾತೃವಪ್ಪ ಬಸವಾಂಬಿಕೆಯೊಳಿಂತು ಕಂಡ ಸ್ವಪ್ನವನುಸಿರಲದಂ ಕೇಳ್ದ್ಚಿಂತು ಸ್ವಪ್ನದೊಳ್ ನಿರೂಪಿಸಿ ಪೋದ ಜಂಗಮಮೂರ್ತಿ ಸಾಕ್ಷಾತ್ಪರಮೇಶ್ವರನೆಂಬುದೆ ನಿಶ್ಚಯವಾ ರಾಮೇಶ್ವರಲಿಂಗಕ್ಕೆ ಭಕ್ತಿಯೊಳ್ ನಡೆಕೊಂಡೊಡೆ ಮುಂದೆ ನಿನಗೆ ಮಹಾಭಿವೃದ್ಧಿಯುಂಟದರ್ಕೆ ಸಂದೆಗಮಿಲ್ಲೆಂದುಸಿರಲಂತಾ ಮಾತಂ ಕೇಳ್ದು ಮರುದೆವಸಂ ಬೇಹಚರರಂ ಕಾಯ್ಬಿಕ್ಕಿ ನಿಜಮಂದಿರದೊಳಿರ್ಪ ಕಪಿಲೆವಣ್ಣದ ಪಸುವಾ ಪುತ್ತದದೆಡೆಗೈದಿ ಸುರಭಿಯಂ ಕರೆದು ಬರ್ಪುದಂ ಗೋರಕ್ಷಕರ ಮುಖದಿಂದರಿದಲ್ಲಿಗೈದಿಯಾ ಪುತ್ತವನಗುಳಿಸಿ ನೋಡಲದರೊಳ್ ಕಂಗೊಳಿಸುತಿರ್ಪ ಮಂಗಲಮೂರ್ತಿ ಯಪ್ಪ ಶ್ರೀ ರಾಮೇಶ್ವರಲಿಂಗಮಿರಲ್ಕಂಡು ವಿಸ್ಮಿತನಾಗಿ ಕರಸರೋಜಮಂ ಮುಗಿದು ಭಯಭರಿತ ಭಕ್ತಿಯಿಂ ಪೊಡಮಟ್ಟು ನುತಿಸಿ ಬಳಿಕಾ ತರುಗುಲ್ಮಲತಾನ ಸೀಕಾಕುಂಜಗಳಂ ಸವರ್ದಾ ತಾಣಮಂ ಮನೋಹರಮಪ್ಪಂತು ಸೈತುಗೊಳಿಸಿ ತತ್ಕಾಲೋಚಿತ ಮಾದ ತೃಣಕುಟಿಯಂ ನಿರ್ಮಿಸಿ ನಿತ್ಯಮಾ ಲಿಂಗಕ್ಕಂ ಧೂಪದೀಪ ನೈವೇದ್ಯಂ ನಡೆವಂತು ಕಟ್ಟಲೆಯಂ ರಚಿಸಿ ಪ್ರತಿದಿನಂಗಳೊಳ್ ತಾಂ ಪಳ್ಳಿವಯಲಿಂದೆಳ್ತಂದಾ ಲಿಂಗಮಂ ಭಜಿಸಿ ಪೋಪ ನಿಯಮಮಂ ಮಾಡಿಕೊಂಡಿಂತು ವರ್ತಿಸುತ್ತುಮಿರ್ದು ಕತಿಪಯ ದಿನಂಗಳ್ ಪೋಗಲೊಡನಾ ಚೌಡಪನೊಂದು ದಿನದೊಳೆಂದಿನಂತೆ ನಿಜಾಲಯದಿಂ ಪೊರಮಟ್ಟು ತಾಂ ಕೃಷ್ಯಾರಂಭಮಂ ರಚಿಯಿಪ ಶಾಲೀಕ್ಷೇತ್ರದೆಡೆ ಗೈದುತ್ತುಮಿರಲಾ ಪ್ರಸ್ಥಾನದೊಳ್-
     ವ|| ಅದು ಹೇಗೆಂದರೆ ಈ ರೀತಿ ಶೋಭಿಸುತ್ತಿರುವ ಭದ್ರಪ್ಪನ ಅಣ್ಣನಾದ ಚೌಡಪ್ಪನ ಕನಸಿನಲ್ಲಿ ಪರಮೇಶ್ವರನು ವೃದ್ಧ ಜಂಗಮನ ಮನೋಹರವಾದ ರೂಪದಿಂದ ಪ್ರಸನ್ನನಾಗಿ ಕೆಳದಿ ಪಟ್ಟಣದ ಬಳಿ ಸೀಗೇವಳ್ಳಿ ಎಂಬ ಸ್ಥಳದಲ್ಲಿ ಮರ, ಪೊದೆ, ಬಳ್ಳಿ ತುಂಬಿದ ಸೀಗೆಮಟ್ಟಿಯ ಮಧ್ಯದಲ್ಲಿ ಶ್ರೀರಾಮೇಶ್ವರನೆಂಬ ಮಹಾದಿವ್ಯಲಿಂಗವು ನೆಲೆಸಿದೆ; ಆ ಲಿಂಗವು ಬಹಳಕಾಲದಿಂದಲೂ ಹುತ್ತದಿಂದ ಮುಚ್ಚಲ್ಪಟ್ಟಿದೆ. ಅಲ್ಲಿ ಆ ಲಿಂಗ ಇರುವುದಕ್ಕೆ ಗುರುತೇನು ಎಂದರೆ, ನಿನ್ನ ಮನೆಯಲ್ಲಿರುವ ಕಪಿಲೆ ಬಣ್ಣದ ಆಕಳು ಕರುಸಹಿತ ಆ ಸ್ಥಳಕ್ಕೆ ಹೋಗಿ ನಿಂತು ಹುತ್ತದ ಮೇಲೆ ಪ್ರತಿದಿನವೂ ಹಾಲು ಸುರಿಸಿ ಬರುತ್ತಿರುವುದೇ ಗುರುತು; ಆ ಲಿಂಗವನ್ನು ಜನರ ಕಣ್ಣಿಗೆ, ಮನಸ್ಸಿಗೆ ಕಾಣಿಸಿಕೊಳ್ಳುವ ಹಾಗೆ ಮಾಡಿ ಆ ಶ್ರೀ ರಾಮೇಶ್ವರ ಲಿಂಗವನ್ನು ಸದ್ಭಕ್ತಿಯಿಂದ ಪೂಜಿಸಿದರೆ ನಿನಗೆ ಅಖಂಡ ಭೂಮಿಯ ಒಡೆತನವು ಕೈಸೇರುವುದು ಎಂದು ಹೇಳಿ ಆ ಜಂಗಮಮೂರ್ತಿಯು ಅಂತರ್ಧಾನವಾಯಿತು. ಆಗ ಚೌಡಪ್ಪನು ಎಚ್ಚರಗೊಂಡು ಬಹಳ ಸಂತೋಷ ಗೊಂಡವನಾಗಿ ತನ್ನ ತಾಯಿಯಾದ ಬಸವಾಂಬಿಕೆ ಯೊಡನೆ ಹೀಗೆ ತನಗೆ ಕಂಡ ಕನಸಿನ ವೃತ್ತಾಂತವನ್ನು ಹೇಳಿದನು. ಅದನ್ನು ಕೇಳಿ ಬಸವಾಂಬಿಕೆಯು ಕನಸಿನಲ್ಲಿ ನಿರೂಪಿಸಿ ಹೋದ ಜಂಗಮಮೂರ್ತಿಯು ಸಾಕ್ಷಾತ್ ಪರಮೇಶ್ವರನೆಂಬುದೇ ನಿಶ್ಚಯವು; ಆ ಶ್ರೀ ರಾಮೇಶ್ವರ ಲಿಂಗಕ್ಕೆ ಭಕ್ತಿಯಿಂದ ನಡೆದುಕೊಂಡಲ್ಲಿ ನಿನಗೆ ಮಹಾಭಿವೃದ್ಧಿಯುಂಟಾಗುವುದು; ಇದಕ್ಕೆ ಸಂದೇಹವೇ ಇಲ್ಲ ಎಂದಳು. ಆ ಮಾತನ್ನು ಕೇಳಿ ಮರುದಿವಸ ಬೇಹುಗಾರರನ್ನು ಕಾವಲಿಟ್ಟು, ತನ್ನ
ಮನೆಯಲ್ಲಿರುವ ಕಪಿಲೆ ಬಣ್ಣದ ಹಸುವು ಹುತ್ತವಿದ್ದಲ್ಲಿಗೆ ಹೋಗಿ ಹಾಲು ಸುರಿಸಿ ಬರುವುದನ್ನು ಗೋಪಾಲಕರ ಬಾಯಿಯಿಂದ ಕೇಳಿ ತಿಳಿದುಕೊಂಡನು. ಆಗ ಅಲ್ಲಿಗೆ ಹೋಗಿ ಆ ಹುತ್ತವನ್ನು ಅಗೆದು ನೋಡಿದಾಗ ಅದರಲ್ಲಿ ಕಂಗೊಳಿಸುತ್ತಿದ್ದ ಮಂಗಳಮೂರ್ತಿಯಾದ ಶ್ರೀ ರಾಮೇಶ್ವರಲಿಂಗವು ಇರುವುದನ್ನು ಕಂಡನು. ಆಶ್ಚರ್ಯಚಕಿತನಾದ ಚೌಡಪ್ಪನು ಎರಡು ಕೈಗಳನ್ನು ಮುಗಿದು ಭಯಭಕ್ತಿಗಳಿಂದ ಅದಕ್ಕೆ ನಮಸ್ಕರಿಸಿ ಸ್ತೋತ್ರ ಮಾಡಿದನು. ಬಳಿಕ ಆ ಮರ-ಪೊದೆ-ಬಳ್ಳಿಗಳ ಸೀಗೆಯ ಮಟ್ಟೆಗಳನ್ನು ಸವರಿ, ಆ ಸ್ಥಳವನ್ನು ಮನೋಹರವಾಗುವ ಹಾಗೆ ಚೊಕ್ಕಟ ಮಾಡಿ ಸರಿಪಡಿಸಿದನು. ಆ ಕಾಲಕ್ಕೆ ತಕ್ಕಂತೆ ಹುಲ್ಲಿನ ಗುಡಿಸಿಲೊಂದನ್ನು ನಿರ್ಮಿಸಿ, ನಿತ್ಯವೂ ಆ ಲಿಂಗಕ್ಕೆ ಧೂಪ, ದೀಪ, ನೈವೇದ್ಯ ನಡೆಯುವ ಹಾಗೆ ಕಟ್ಟಳೆಯನ್ನು ಮಾಡಿದನು. ಪ್ರತಿದಿವಸವೂ ಹಳ್ಳಿಬಯಲಿನಿಂದ ಬಂದು ಆ ಲಿಂಗನ್ನು ಪೂಜಿಸಿ, ಭಜಿಸಿ ಹೋಗುವ ನಿಯಮವನ್ನು ಮಾಡಿಕೊಂಡನು. ಈರೀತಿ ಪಾಲಿಸುತ್ತ ಕೆಲವು ದಿನಗಳು ಕಳೆಯಲು, ಆ ಚೌಡಪ್ಪನು ಒಂದು ದಿನ ಎಂದಿಂತೆ ತನ್ನ ಮನೆಯಿಂದ ಹೊರಟು ತಾನು ಬೇಸಾಯ ಮಾಡುವ ಭತ್ತದ ಹೊಲದ ಕಡೆಗೆ ಹೋಗುತ್ತಿದ್ದನು. ಆ ಕಾಲದಲ್ಲಿ


ಸರಟಂ ಚೌಡಪನ್ಶೆದುತಿರ್ಪ ಪಥಕಂ ತಾನೈದಿ ಕಾಣ್ಬಂದದಿಂ
ಸಿರಮಂ ಪಾಯ್ಕಲಭೀಕ್ಷಿಸುತ್ತುಮದನೆಳ್ಬಟ್ಟಲ್ಕೆಲೆಕ್ಕೈದಿ ಮಾ
ಮರನಂ ಶೀಘ್ರದೊಳೇರ‍್ದುಮಲ್ಲಿ ಸಿರಮಂ ಪಾಯ್ಕುತ್ತಿರಲ್ ನೋಡುತ
ಚ್ಚರಿವಟ್ಟುಜ್ಜ್ವಲಿಸುತ್ತುಮಿರ್ಪ ವರಶಾಲೀಕ್ಷೇತ್ರಮಂ ಪೊರ್ದಿದಂ |೪೨ |
     ಒಂದು ಹಾವುರಾಣಿ (ಓತಿಕ್ಯಾತವು) ಚೌಡಪ್ಪನು ಹೋಗುತ್ತಿದ್ದ ದಾರಿಗೆ ಬಂದು, ಅವನು ಹೋಗುತ್ತಿದ್ದಂತೆಯೇ ತಲೆಯನ್ನು ನೆಲಕ್ಕೆ ಬಡಿಯಿತು. ಅದನ್ನು ಕಂಡ ಅವನು ಅದನ್ನು ಓಡಿಸಿದನು. ಆಗ ಅದು ಹತ್ತಿರದ ಮಾವಿನಮರವನ್ನು ಏರಿ ಅಲ್ಲಿ ತಲೆಯನ್ನು ಬಡಿದುಕೊಳ್ಳುತ್ತಿತ್ತು. ಇದನ್ನು ನೋಡಿದ ಚೌಡಪ್ಪನು ಆಶ್ಚರ್ಯಗೊಂಡನು. 


ಬಳಿಕಾ ಚೌಡಪನೊಪ್ಪುವ
ಕಳಮಕ್ಷೇತ್ರವನಭೀಕ್ಷಿಸುತೆ ತತ್ಕೃತ್ಯಂ
ಗಳನಾರಯ್ದು ಬಳಲ್ದು
ಜ್ಜ್ವಲಿಸುವ ಮಾಮರನ ತಣ್ಣೆಳಲನುರೆ ಸಾರ್ದಂ | ೪೩ |
     ಆಮೇಲೆ ಚೌಡಪ್ಪನು ಭತ್ತದ ಗದ್ದೆಯನ್ನು ನೋಡಿ ಅದರ ಕೆಲಸಗಳನ್ನು ಪರಿಶೀಲಿಸಿ, ಆಯಾಸಗೊಂಡು ಹತ್ತಿರದ ಮಾವಿನಮರದ ತಂಪಾದ ನೆರಳಿಗೆ ಹೋದನು.


ಆ ಗರುವಂ ವಿಗತಶ್ರಮ
ನಾಗಿ ತದುರ್ವೀಜಮೂಲದೊಳ್ಸುಳಿವೆಲUಂ
ಮೈಗೊಟ್ಟು ಗಾಢನಿದ್ರಾ
ಯೋಗದೆ ಮರೆದೊರಗಿರಲ್ತದಂಬಿಕೆಯಿತ್ತಂ | ೪೪ |
     ಅಲ್ಲಿ ಆತನು ಆಯಾಸ ಕಳೆದುಕೊಳ್ಳಲು ಆ ಮರದ ಬುಡದಲ್ಲಿ ಸುಳಿಯುವ ಗಾಳಿಗೆ ಮೈಕೊಟ್ಟು ಗಾಢನಿದ್ರೆಯಲ್ಲಿ ಮೈಮರೆತು ಮಲಗಿದ್ದಾಗ ಅವನ ತಾಯಿ ಅಲ್ಲಿಗೆ ಬಂದಳು.


ವರಸುತನುಣಬರ ತಳುವಿದ
ಪರಿಯೇಂ ಕಾರಣಮೊ ನೋಳ್ಪೆನನುತಾಲಯದಿಂ
ಪ್ರೆgಮಟ್ಟು ಗರ್ದೆಯಂ ಸಾ
ರ್ದರಸುತೆ ಮಾಮರನ ಮೂಲಮಂ ನೆರೆ ಸಾರ್ದಳ್                              | ೪೫ |
     ಮಗನು ಊಟಕ್ಕೆ ಬಾರದೆ ತಡ ಮಾಡಿದ ಕಾರಣವೇನು ನೋಡಬೇಕೆಂದು ಅವಳು ಮನೆಯಿಂದ ಹೊರಟು, ಗದ್ದೆಗೆ ಬಂದು ಹುಡುಕುತ್ತಾ ಮಾವಿನಮರದ ಬುಡಕ್ಕೆ ಬಂದಳು. 


ಆ ಮಾಮರದಡಿಯೊಳ್ನಿ
ದ್ರಾಮುದ್ರಿತನೇತ್ರನಾಗಿ ಮಲಗಿಸುತನಂ
ಪ್ರೇಮದೊಳೀಕ್ಷಿಸುತಿರಲು
ದ್ದಾಮಾಹಿಯದೊಂದು ಚೌಡಪನ ಶಿರದೆಡೆಯೊಳ್ | ೪೬ |
     ಆ ಮಾವಿನಮರದ ಕೆಳಗೆ ನಿದ್ದೆಯಿಂದ ಕಣ್ಣುಮುಚ್ಚಿಕೊಂಡು ಮಲಗಿದ್ದ ಮಗನನ್ನು ನೋಡಿ ಪ್ರೀತಿಯಿಂದ ಅವಲೋಕಿಸುತ್ತಿರುವಾಗ ಭಯಂಕರವಾದ ಸರ್ಪವೊಂದು ಆ ಚೌಡಪ್ಪನ ತಲೆಯ ಮೇಲೆ 


ಪೆಡೆಯಾಡುತ್ತಿರಲೀಕ್ಷಿಸಿ
ಕಡುಚೋದ್ಯಂಬಟ್ಟು ಮಗನನೆಳ್ಬಿಸೆ ಮುಳಿಸಿಂ
ಕಡಿದಪುದೆಂಬತಿಭಯದಿಂ
ಮಿಡುಕುತೆ ನಿಂದೆಮೆಯನಿಕ್ಕದೀಕ್ಷಿಸುತಿರ್ದಳ್ | ೪೭ |
     ಹೆಡೆಯಾಡಿಸುತ್ತಿರುವುದನ್ನು ಕಂಡು ಬಸವಾಂಬೆಯು ಬಹಳ ಆಶ್ಚರ್ಯಪಟ್ಟಳು. ಮಗನನ್ನು ಎಬ್ಬಿಸಿದರೆ ಹಾವು ಸಿಟ್ಟಿನಿಂದ ಕಚ್ಚುವುದೋ ಏನೋ ಎಂಬ ಭಯದಿಂದ ಅಳುಕಿ ಎವೆಯಿಕ್ಕದೆ ನಿಂತು ನೋಡುತ್ತಿದ್ದಳು.


     ವ|| ಇಂತು ನಿಂದು ನಿಟ್ಟಿಸುತಿರಲ್ ಚೌಡಪನ ಶಿರದ ಮೇಗಡೆಯೊಳ್ ನಲಿನಲಿದು ಪೆಡೆಯಾಡಿ ಕೆಲವುಂ ಪೊಳ್ತು ಪೋಗಲೊಡನಾ ಸರ್ಪಂ ಮೆಲ್ಲನಿಳಿದು ತಾನೇ ಪರಿದು ಪೋಗುತ್ತುಮಿರಲಾ ಬಸವಮಾಂಬಿಕೆಯೈತಂದು ಮರೆದೊರಗಿರ್ಪ ಸುತನನೆಳ್ಚರಿಸಿ ಕುಳ್ಳಿರಿಸಿ ತನ್ನಸ್ತಕದ ಮೇಗಡೆಯೊಳ್ ಸರ್ಪಂ ನಲಿನಲಿದು ಪೆಡೆಯಾಡಿದ ವೃತ್ತಾಂತಮನುಸಿರ್ದು ಪುಣ್ಯವಶದಿಂ ಬರ್ದುಕಿದೆ ಯೆಂದತಿವ್ಯಾಮೋಹದಿಂ ಮಗನಂ ಮುದ್ದಿಸಿ ಗಾಢಾಲಿಂಗನಂಗೈದೊಡನೆ ಪರಿದು ಪೋಪ ಪಾವಂ ತೋರಲಾಗಳಾ ಸರ್ಪಂ ತನ್ನ ಪೆಡೆಯನೆತ್ತಿಕೊಂಡಿವರಂ ತಿರಿತಿರಿಗಿ ನೋಡುತ್ತಂ ಮೆಲ್ಲಮೆಲ್ಲನೈದುತ್ತುಂ ಸನ್ನೆದೋರಿ ಕರೆದ ಭಾವಮಂ ತೋರುತ್ತುಂ ಪರಿಯುತ್ತಿರಲವರದರ ಪಿಂಗಡೆಯೊಳ್ಬೆಂಬಳಿವಿಡಿದೈದಿ ನೋಡುತ್ತುಮಿರಲಾ ಸರ್ಪಂ ನಿಕ್ಷೇಪಮಿರ್ದ ಶಾಲೀಕ್ಷೇತ್ರದೆಡೆಗಿಳಿದಲ್ಲಿ ನಿಲ್ತಿವರ್ಗಳಂ ನೋಡಿ ತನ್ನ ಪೆಡೆಯನೆತ್ತಿ ಪೆಡೆಯಗ್ರದಿಂದಾ ತಾಣಮಂ ಮುಟ್ಟಿ ಮುಟ್ಟಿ ತೋರಿಸಿಯದೃಶ್ಯಮಾಗಲಿವರಿದು ಕಾರಣ ಸರ್ಪಮಹುದೇನಾದೊಡಮೀತಾಣಮಂ ಕುರುಪಿಟ್ಟು ಮನೆಗೈದಿ ನಿಜಾನುಜನೊಡನೀವೃತ್ತಾಂತವನುಸಿರ್ದೊಡ ನಿರ್ವರ್ ಸಂತಸದಿಂ ಮಜ್ಜನ ಶಿವಾರ್ಚನ ಭೋಜನಾದಿಗಳಂ ರಚಿಸಿ ಬಳಿಕಂ ಪರಿಮಿತರಾದಾಪ್ತ ಜನರ್ವೆರಸು ಕಳಮಕ್ಷೇತ್ರಮಂ ಸಾರ್ದು ಕುರುಪಿಟ್ಟ ತಾಣದೆಡೆಗೈದಿ ಹಲಮಂ ಕಟ್ಟಿಸಿ ಪೊಡಿಸಲಾಗಳಾ ನೇಗಿಲಮೊನೆಗೆ ನಿಕ್ಷೇಪಕಟಾಹದ ಬಳೆಗಳ್ ಸಿಲುಂಕಿ ಘಣಘಣರೆಂಬ ದನಿಯಾಗಲಾಗಳಾ ಸ್ಥಳವನಗುಳಿಸಿ ನೋಡಲಲ್ಲಿ ಭೂರಿನಿಕ್ಷೇಪಕಟಾಹಂ ನಾಗರಮರಿಯೆಂಬ ಕತ್ತಿಸಹಿತಮಿರಲಾ ನಿಕ್ಷೇಪಮಂ ವಶಂಮಾಡಿ ಮರೆಯಾಗಿ ಬೈತಿರಿಕೊಂಡಾ ತಾಣದೊಳ್ ತತ್ಕಾಲೋಚಿತಮಾದ ಗೃಹಮಂ ನಿಮಿರ್ಚಿಸಿ ಕುಟುಂಬಸಹಿತಂ ತಾವಲ್ಲಿ ನಿಲ್ತಾವುದರಲ್ಲಿಯುಂ ಬಲಶಾಲಿಗಳೆನಿಸಿ ವರ್ತಿಸುತ್ತ ಮಿರುತಿರ್ದು ಕತಿಪಯ ದಿನಂಗಳ್ ಪೋಗಲೊಡನೆ 
    ಹೀಗೆ ಅವಳು ನಿಂತು ನೋಡುತ್ತಿರುವಾಗ, ಚೌಡಪ್ಪನ ತಲೆಯ ಮೇಲುಭಾಗದಲ್ಲಿ ಹಾವು ಕುಣಿಕುಣಿದು ಹೆಡೆಯಾಡಿಸಿ, ಸ್ವಲ್ಪ ಹೊತ್ತಿನ ಬಳಿಕ ಮೆಲ್ಲನೆ ತಾನೇ ಇಳಿದು ಹರಿದುಹೋಯಿತು. ಆ ಬಸವಮಾಂಬಿಕೆಯು ಥಟ್ಟನೆ ಬಂದು ಮೆಮರೆತು ಮಲಗಿದ್ದ ಮಗನನ್ನು ಎಚ್ಚರಿಸಿ ಕುಳ್ಳಿರಿಸಿದಳು. ಅವನ ತಲೆಯ ಮೇಲುಭಾಗದಲ್ಲಿ ಸರ್ಪವು ನಲಿಯುತ್ತಾ ಹೆಡೆಯಾಡಿಸಿದ ವೃತ್ತಾಂತವನ್ನು ಅವನಿಗೆ ಹೇಳಿದಳು; ಪುಣ್ಯವಶದಿಂದ ನೀನು ಬದುಕಿದೆ ಎಂದು ಹೆಚ್ಚಿನ ವ್ಯಾಮೋಹದಿಂದ ಮಗನನ್ನು ಮುದ್ದಿಸಿದಳು, ಬಿಗಿಯಾಗಿ ಅಪ್ಪಿಕೊಂಡಳು. ಹತ್ತಿರಲ್ಲಿಯೇ ಹರಿದು ಹೋಗುತ್ತಿದ್ದ ಹಾವನ್ನು ತೋರಿಸಿದಳು. ಆಗ ಆ ಸರ್ಪವು ತನ್ನ ಹೆಡೆಯನ್ನೆತ್ತಿಕೊಂಡು ಇವರನ್ನು ತಿರುತಿರುಗಿ ನೋಡುತ್ತಾ, ಮೆಲ್ಲಮೆಲ್ಲನೆ ಹೋಗುತ್ತಾ, ಸನ್ನೆ ಮಾಡಿ ಕರೆದ ಭಾವವನ್ನು ತೋರಿಸಿ ಹರಿಯುತ್ತಿತ್ತು. ಅವರು ಅದನ್ನು ಹಿಂದಿನಿಂದಲೇ ಹಿಂಬಾಲಿಸಿದರು. ನೋಡುತ್ತಿದ್ದಂತೆಯೇ ಆ ಸರ್ಪವು ನಿಕ್ಷೇಪವಿದ್ದ ಬತ್ತದ ಗದ್ದೆಗೆ ಇಳಿದು, ಅಲ್ಲಿ ನಿಂತು, ಇವರನ್ನು ನೋಡಿ, ತನ್ನ ಹೆಡೆಯನ್ನೆತ್ತಿ ಹೆಡೆಯ ತುದಿಯಿಂದ ಆ ಸ್ಥಳವನ್ನು ಮುಟ್ಟಿ ಮುಟ್ಟಿ ತೋರಿಸಿ ಅದೃಶ್ಯವಾಯಿತು. ಇವರು ಇದು ಕಾರಣಸರ್ಪ ವಾಗಿರಬೇಕು; ಆದ್ದರಿಂದ ಏನೇ ಆದರೂ ಈ ಸ್ಥಳವನ್ನು ಪರೀಕ್ಷಿಸಿ ನೋಡಬೇಕು ಎಂದು ನಿಶ್ಚಯಿಸಿಕೊಂಡರು. ಆ ಸ್ಥಳವನ್ನು ಗುರುತಿಟ್ಟು ಮನೆಗೆ ಹೋಗಿ ತಮ್ಮನಿಗೆ ಈ ವೃತ್ತಾಂತವನ್ನು ತಿಳಿಸಿದರು. ಅವರಿಬ್ಬರೂ ಸಂತೋಷದಿಂದ ಸ್ನಾನ, ಶಿವಪೂಜೆ, ಭೋಜನ ಮುಂತಾದುವುಗಳನ್ನು ಮಾಡಿದರು. ಆಬಳಿಕ ಸಾಕಷ್ಟು ಆಪ್ತಜನರೊಂದಿಗೆ ಬತ್ತದ ಗದ್ದೆಗೆ ಬಂದು ಗುರುತಿಟ್ಟ ಸ್ಥಳಕ್ಕೆ ಹೋಗಿ, ನೇಗಿಲು ಕಟ್ಟಿ ಹೊಡಿಸಲು, ಆ ನೇಗಿಲಮೊನೆಗೆ ನಿಕ್ಷೇಪದ ಕೊಪ್ಪರಿಗೆಯ ಬಳೆಗಳು ಸಿಕ್ಕಿ ಘಣಘಣ ಎಂಬ ಶಬ್ದವಾಯಿತು. ಆಗ ಆ ಸ್ಥಳವನ್ನು ಅಗೆದು ನೋಡಿದರು. ಅಲ್ಲಿ ಹೇರಳವಾದ ನಿಕ್ಷೇಪದ ಕೊಪ್ಪರಿಗೆಯೂ, ನಾಗರಮರಿ ಎಂಬ ಕತ್ತಿಯೂ ಇತ್ತು. ಆ ನಿಕ್ಷೇಪವನ್ನು ಸ್ವಾಧೀನಪಡಿಸಿಕೊಂಡು, ಅಡಗಿಸಿ ಜೋಪಾನ ಮಾಡಿದರು. ಆ ಸ್ಥಳದಲ್ಲಿ ಆ ಕಾಲಕ್ಕೆ ಉಚಿತವಾದ ಮನೆಯನ್ನು ಕಟ್ಟಿಸಿ, ಕುಟುಂಬಸಹಿತ ನೆಲೆನಿಂತರು. ಪ್ರತಿಯೊಂದರಲ್ಲಿಯೂ ಬಲಶಾಲಿಗಳೆನಿಸಿ ಅನೇಕ ದಿನಗಳನ್ನು ಕಳೆದರು. ಹೀಗಿರಲು ಒಡನೆ...
.....(ಮುಂದುವರೆಯುವುದು)
***********************

ನವರಸಕವಿ ಕೆಳದಿಯ ಸುಬ್ಬ ರಚಿಸಿದ
ಮೂಕಾಂಬಿಕೆ ಕುರಿತ ಮಂಗಳ ಗೀತೆ

     ಮಂಗಳಂ ಜಯ ಮಂಗಳಂ  ||ಪ||
    ೧. ಅಜಸುರ ಮನು ಮುನಿ ವಂದಿತೆಗೇ|
     ತ್ರಿಜಗತ್ಪಾಲೆಗೆ ಪಾರ್ವತಿಗೇ||
    ೨.ನಿಜಪದ ಭಜಕ ವ್ರಜವನು ರಕ್ಷಿಪ|
     ಭುಜಗಾಭರಣೆಗೆ ಶಾಂಭವಿಗೇ||
    ೩.ಅಗಣಿತ ಮಹಿಮೆಗೆ ಸುರನುತೆಗೆ|
     ಮೃಗಧರ ವಕ್ತ್ರೆಗೆ ಮಂಗಲೆಗೇ||
    ೪.ಖಗಭಾಸೆಗೆ ನಿಗಮಾಗಮವೇದ್ಯೆಗೆ|
     ಸುಗುಣಿ ಸುಶೀಲೆಗೆ ಚಂಡಿಕೆಗೇ||
    ೫.ಶಂಖಸುದರ್ಶನ ಧಾರಿಣಿಗೇ|
     ಪಂಕಜಪಾಣಿಗೆ ಪಾವನೆಗೇ||
    ೬.ಕಿಂಕರನಿವಹವ ಸಂತತ ಸಲಹುವ|
     ಶಂಕರಿ ಶ್ರೀ ಮೂಕಾಂಬಿಕೆಗೇ||
*******************



***
ಮನವಿ
     ಇದು ಕವಿ ವಂಶಸರ ಕುಟುಂಬದ ಹಾಗೂ ಬಂಧು ಬಳಗದವರ ಪತ್ರಿಕೆಯಾಗಿದ್ದು, ಈ ಪತ್ರಿಕೆಗೆ ಕುಟುಂಬದವರೇ ಆಧಾರ. ಈಗಾಗಲೇ ನಿರ್ಧಾರವಾಗಿರುಂತೆ ಪ್ರತಿ ಕುಟುಂಬದ ಪ್ರತಿ ಘಟಕದಿಂದ ವಾರ್ಷಿಕ ರೂ. ೫೦೦/- ಅನ್ನು ವಂತಿಕೆಯಾಗಿ ಸಂಗ್ರಹಿಸಲು ಉದ್ದೇಶಿಸಿದ ವಿಷಯ ತಿಳಿದದ್ದೇ ಆಗಿದೆ.  ಈ ಹಣವನ್ನು ಪತ್ರಿಕೆಗೆ ಮಾತ್ರವಲ್ಲದೆ ಕುಟುಂಬಗಳ ವಾರ್ಷಿಕ ಸಮ್ಮೇಳನ ನಡೆಸಲು ಯಾರೂ ಮುಂದೆ ಬರದಿದ್ದ ಸಂದರ್ಭದಲ್ಲಿ ಸಹ ಬಳಸಲು ಉದ್ದೇಶಿಸಿರುವುದರಿಂದ ಎಲ್ಲರ ಸಹಕಾರ ಕೋರಿದೆ. ವಾರ್ಷಿಕವಾಗಿ ರೂ. ೫೦೦/- ನೀಡುವುದು ಕಷ್ಟವಾಗಲಾರದಾದರೂ, ಇಷ್ಟೇ ಕೊಡಬೇಕೆಂದು ಒತ್ತಾಯವಿರುವುದಿಲ್ಲ. ವಂತಿಕೆ ಸಂಗ್ರಹಕ್ಕೆ ಯಾgನ್ನೂ ನಿಯೋಜಿಸಿರುವುದಿಲ್ಲ. ದಯವಿಟ್ಟು ಪ್ರತಿ ಕುಟುಂಬದವರೂ ಸ್ವಯಂ ಪ್ರೇರಿತರಾಗಿ ಕೆಳಗೆ ನಮೂದಿಸಿದ ಬ್ಯಾಂಕ್ ಖಾತೆಗೆ ಪಾವತಿಸಿ ತಿಳಿಸಲು ಕೋರಿದೆ. ಪಾವತಿಗೆ ರಸೀದಿ ನೀಡಲಾಗುವುದು.
     ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಬಳಗದ ಕುಟುಂಬಗಳವರು ಹಾಗೂ ಹಿತೈಷಿಗಳು ಸ್ವ ಇಚ್ಛೆಯಿಂದ ಸಹಕಾರ ನೀಡಿದಲ್ಲಿ ಸ್ವಾಗತವಿದೆ.
     ಸಂಗ್ರಹವಾದ ಮೊಬಲಗನ್ನು  ಶ್ರೀ ಸಾ.ಕ. ಕೃಷ್ಣಮೂರ್ತಿ ಮತ್ತು ಶ್ರೀ ಕವಿಸುರೇಶರ ಹೆಸರಿನಲ್ಲಿ ಬೆಂಗಳೂರಿನ ಬನಶಂಕರಿ ೨ನೆಯ ಹಂತದ ಸಿಂಡಿಕೇಟ್ ಬ್ಯಾಂಕ್‌ನ ಶಾಖೆಯಲ್ಲಿ ಜಂಟಿ ಖಾತೆಯಲ್ಲಿ  ಜಮಾ ಇರಿಸಿ, ಸಮಿತಿ ನಿರ್ಧಾರ ಪಡೆದು ವೆಚ್ಚ ಮಾಡಲಾಗುವುದು. ಖಾತೆಸಂ. ೦೪೭೮೨೦೧೦೦೩೭೬೫೦   ಆಗಿದ್ದು, ಈ ಖಾತೆಗೆ ನೇರವಾಗಿ ಜಮಾ ಮಾಡಲೂ ಅವಕಾಶವಿದೆ. ಆದಾಯ- ವೆಚ್ಚದ ವಿವರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ.. ಪರಿಶೀಲನೆಗೂ ಅವಕಾಶವಿದೆ.
     ಸಂಗ್ರಹವಾಗುವ ಮೊಬಲಗು ಸದುದ್ದೇಶಕ್ಕೆ/ ಸಮಾಜಕಾರ್ಯಕ್ಕೆ ಮಾತ್ರ ಬಳಕೆಯಾಗುವುದರಿಂದ ಮನೆಗಳಲ್ಲಿ ಶುಭಕಾರ್ಯ ನಡೆಯುವ ಮತ್ತು  ಇತರ ಸಂದರ್ಭಗಳಲ್ಲಿ ಹಾಗೂ ಹಿರಿಯರ ನೆನಪಿಗಾಗಿ ಮಂಗಳನಿಧಿ ಹೆಸರಿನಲ್ಲಿ ಸಹ ದೇಣಿಗೆ ನೀಡಬಹುದು.
*********************
ಕವಿಕಿರಣದ ಮುಂದಿನ ಸಂಚಿಕೆ ಡಿಸೆಂಬರ್, ೨೦೧೦ರಲ್ಲಿ ಪ್ರಕಟವಾಗಲಿದೆ. ಎಂದಿನಂತೆ ಎಲ್ಲರ ಪ್ರೋತ್ಸಾಹ, ಸಹಕಾರ ನಿರೀಕ್ಷಿಸಿದೆ.                                -ಸಂ.
***********************

ಪ್ರೀತಿಯ ಅಂತ್ಯ

     ಒಂದು ಸುಂದರ ದ್ವೀಪವಿತ್ತು. ಅಲ್ಲಿ ಎಲ್ಲಾ ಭಾವನೆಗಳೂ ಸಾಮರಸ್ಯದಿಂದ ಬಾಳುತ್ತಿದ್ದವು. ಒಂದು ಸಲ ಒಂದು ದೊಡ್ಡ ಪ್ರವಾಹ ಬಂದು ದ್ವೀಪ ಮುಳುಗುವ ಸ್ಥಿತಿಗೆ ಬಂದಿತು. ಎಲ್ಲಾ ಭಾವನೆಗಳೂ ಜೀವಭಯದಿಂದ ತತ್ತರಿಸಿದವು. ಆಗ ಪ್ರೀತಿ ಒಂದು ದೋಣಿಯನ್ನು ಸಿದ್ಧಪಡಿಸಿತು. ಎಲ್ಲಾ ಭಾವನೆಗಳೂ ಜೀವ ಉಳಿಸಿಕೊಳ್ಳಲು ಗಡಿಬಿಡಿಯಿಂದ ದೋಣಿಯನ್ನು ಹತ್ತಿ ಕುಳಿತವು. ಒಂದು ಭಾವನೆ ಮಾತ್ರ ಕಾಣೆಯಾಗಿತ್ತು. ಪ್ರೀತಿ ದೋಣಿಯಿಳಿದು ಬಂದು ನೋಡಿದರೆ ದುರಭಿಮಾನ ಮಾತ್ರ ಮುಖ ಊದಿಸಿಕೊಂಡು ಒಂದು ಕಡೆ ಕುಳಿತಿತ್ತು. ಪ್ರೀತಿ ಅದನ್ನು ದೋಣಿ ಹತ್ತುವಂತೆ ಪರಿಪರಿಯಾಗಿ ಕೇಳಿಕೊಂಡಿತು. ದುರಭಿಮಾನ ಜಗ್ಗಲಿಲ್ಲ. ಪ್ರವಾಹ ಏರುತ್ತಿತ್ತು. ದ್ವೀಪ ಮುಳುಗುವ ಹಂತಕ್ಕೆ ಬಂತು. ಉಳಿದ ಭಾವನೆಗಳು ಪ್ರೀತಿಯನ್ನು ಉದ್ದೇಶಿಸಿ ದುರಭಿಮಾನವನ್ನು ಅಲ್ಲೇ ಬಿಟ್ಟು ಕೂಡಲೇ ದೋಣಿ ಹತ್ತಿ ಜೀವ ಉಳಿಸಿಕೊಳ್ಳಲು ಕೇಳಿಕೊಂಡವು.. ಪ್ರೀತಿ ದುರಭಿಮಾನವನ್ನು ದೋಣಿ ಹತ್ತುವಂತೆ ಓಲೈಸುತ್ತಲೇ ಇತ್ತು. ಪ್ರವಾಹ ಹೆಚ್ಚಾಗಿ ದ್ವೀಪ ಮುಳುಗಿ ದುರಭಿಮಾನದ ಸಂಗಡ ಪ್ರೀತಿಯೂ ಸತ್ತುಹೋಯಿತು.
-ರಾಜು.     
***

ಅನಿಸಿಕೆ
    
     ಕವಿ ಮನೆತನದ ಕುಟುಂಬಗಳ ಸದಸ್ಯರ ಮತ್ತು ಬಂಧುಗಳ ನಾಲ್ಕನೆಯ ಸಮಾವೇಶ ತೀರ್ಥಹಳ್ಳಿಯಲ್ಲಿ ಚೆನ್ನಾಗಿ ನಡೆಯಿತೆಂದು ತಿಳಿದು ಸಂತೋಷವಾಯಿತು. ಈ ಶುಭಕಾರ್ಯ ಅನೂಚಾನವಾಗಿ ಮುಂದುವರೆಯಲಿ ಎಂದು ಹಾರೈಸುತ್ತೇನೆ.
     ಕವಿಕಿರಣದ ಕಳೆದ ಸಂಚಿಕೆ ಸಾಕಷ್ಟು ಮಾಹಿತಿಗಳನ್ನು ಒಳಗೊಂಡು ಕವಿಮನೆತನದವರ ಹಿರಿಮೆಯನ್ನು ಪ್ರತಿಬಿಂಬಿಸಿದೆ. ಅಭಿನಂದನೆಗಳು.
                -ಸಾ.ಕ. ಕೃಷ್ಣಮೂರ್ತಿ, ಬೆಂಗಳೂರು.

     ಪತ್ರಿಕೆ ಭೋಧಪ್ರದ ಲೇಖನಗಳನ್ನೊಳಗೊಂಡಿದೆ. ಅಭಿನಂದನೆಗಳು.
-ಸಾ.ಕ. ರಾಮರಾವ್, ಬೆಂಗಳೂರು.

*****************
ನಕ್ಕುಬಿಡಿ


SOME - ಗೀತ


ಹೆಂಡತಿ ದಿನಾ ಬೆಳಿಗ್ಗೆ 3 ಗಂಟೆಗಳ ಕಾಲ ಮನೆಯೊಳಗೆ ಸಂಗೀತ ಅಭ್ಯಾಸ ಮಾಡುತ್ತಿದ್ದಳು. ಆ ವೇಳೆಗ ಸರಿಯಾಗಿ ಗಂಡ ಮನೆಯ ಹೊರಗಡೆ ಬಾಲ್ಕನಿಯಲ್ಲಿ ನಿಲ್ಲುತ್ತಿದ್ದ. ಹೆಂಡತಿ ಕೇಳಿದಳು: ದಿನಾ ಏಕೆ ನೀವು ನಾನು ಸಂಗೀತ ಹೇಳುವಾಗ ಹೊರಗಡೆ ನಿಲ್ಲುವುದು? ಅನುಮಾನಿಸುತ್ತಲೇ ಗಂಡ ಉತ್ತರಿಸಿದ: ಪ್ರತಿದಿನ ಈ ಮನುಷ್ಯ ಹೆಂಡತಿಗೆ ಎಷ್ಟು ಹೊಡೆಯುತ್ತಾನೆಂದು ಅಕ್ಕಪಕ್ಕದವರು ಅಂದುಕೊಳ್ಳಬಾರದಲ್ಲಾ ಅದಕ್ಕೆ - ಅಂದ!
- - - - - - - - - - - - - - - - - - - - - - - - - - - - -


'ಬೆನಕ'ನ ಪುಳಕ


                             ತಾಯಿ: ಹೆಚ್.ಎಸ್.ರಾಧಾ   ತಂದೆ: ಕ.ವೆಂ.ಅನಂತ
                                           ಕಾಲೇಜ್ ವಿಲೆ, ಪಿಎ, ಅಮೆರಿಕಾ ಸಂಯುಕ್ತ ಸಂಸ್ಥಾನ


                                                            *********************


ದಾಸವರೇಣ್ಯ 'ಸ್ಕಂದ'


                                          ತಾಯಿ: ಸುಕನ್ಯಾ            ತಂದೆ: ಡಾ. ಸೋಮಶೇಖರ್
                                                                         ಶಿಕಾರಿಪುರ


*******************************


ಸುದ್ದಿ ಕಿರಣ





ಸೇವಾ ನಿವೃತ್ತಿ:           ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಕ.ವೆಂ. ನಾಗರಾಜ್‌ರವರು ಸರ್ಕಾರದ ಅನುಮತಿ ಪಡೆದು ದಿನಾಂಕ          ೩೧-೧೨-೨೦೦೯ರಂದು ಸ್ವಇಚ್ಛಾ ನಿವೃತ್ತಿ ಹೊಂದಿರುತ್ತಾರೆ. ಇವರಿಗೆ ಎರಡು ವರ್ಷಗಳ ಸೇವಾವಧಿ ಉಳಿದಿತ್ತು.


ಚೂಡಾಕರ್ಮ:  ಬೆಂಗಳೂರಿನ ಶ್ರೀಮತಿ ರೂಪಾ ಮತ್ತು ಶ್ರೀ ಈಶರವರ ಪುತ್ರ (ಬೆಂಗಳೂರಿನ ಶ್ರೀ ಕೆ.ವಿ. ವೆಂಕಟರಾಮು ಮತ್ತು ಶ್ರೀಮತಿ ಚೂಡಾಮಣಿರವರ ಮೊಮ್ಮಗ) ಆದಿತ್ಯನ ಚೂಡಾಕರ್ಮ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಸಪ್ತಪದಿ ಸಭಾಂಗಣದಲ್ಲಿ ಆಹ್ವಾನಿತ ಬಂಧು ಮಿತ್ರರ ಸಮ್ಮುಖದಲ್ಲಿ ದಿ. ೨೭-೦೧-೨೦೧೦ರಂದು ನಡೆಯಿತು.


ವಿಧಿವಶ:     ಅರಕಲಗೂಡಿನ ಶ್ರೀ ಕೆ.ಎಸ್. ವೆಂಕಟೇಶ ಮೂರ್ತಿಯವರ ಮಾವನವರಾದ ಪಾಂಡವಪುರದ ಶ್ರೀ ಎನ್. ಆರ್. ಸುಬ್ರಹ್ಮಣ್ಯರವರು ದಿನಾಂಕ         ೩೧-೦೧-೧೦ರಂದು ವಿಧಿವಶರಾಗಿದ್ದು ಕವಿಕಿರಣ ಬಳಗ ಮೃತರ ಆತ್ಮಕ್ಕೆ ಶಾಂತಿ ಕೋರುತ್ತದೆ. 


ನಾಮಕರಣ: ಹಾಸನದ ಶ್ರೀ ಕೆ.ಎಸ್.ನಾಗರಾಜ್ ಮತ್ತು ಶ್ರೀಮತಿ ರೇಣುಕಾರವರ ಮೊಮ್ಮಗು (ಶ್ರೀಮತಿ ಚೈತ್ರ ಮತ್ತು ಶ್ರೀ ಹರ್ಷರವರ ಮಗು)ವಿಗೆ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಸಪ್ತಪದಿ ಸಭಾಂಗಣದಲ್ಲಿ ಆಹ್ವಾನಿತ ಬಂಧು ಮಿತ್ರರ ಸಮ್ಮುಖದಲ್ಲಿ ದಿ. ೦೩-೦೨-೨೦೧೦ರಂದು ಸ್ಕಂದ ಎಂದು ನಾಮಕರಣ ಮಾಡಲಾಯಿತು. 
***
ಬ್ರಹ್ಮೋಪದೇಶ:  ದಿನಾಂಕ ೦೧-೦೪-೨೦೧೦ರಂದು ಬೆಂಗಳೂರಿನ  ಶ್ರೀಮತಿ ರಾಧಿಕಾ ಮತ್ತು ಡಾ. ಕೆ. ಶ್ರೀನಿವಾಸ್‌ರವರ ಪುತ್ರ ಚಿ. ರಾ. ರಾಹುಲ್ ನಿರಂಜನ ನ ಬ್ರಹ್ಮೋಪದೇಶ ಕಾರ್ಯಕ್ರಮ ಬೆಂಗಳೂರು ಬನಶಂಕರಿಯ ಶಿವಶಂಕರ ಸಭಾಂಗಣದಲ್ಲಿ ಆಹ್ವಾನಿತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.
***
ಗೃಹಪ್ರವೇಶ:  ದಿನಾಂಕ ೧೧-೦೪-೨೦೧೦ರಂದು ಶ್ರೀಮತಿ ಸುಮನಾ ಮತ್ತು ಡಾ. ಕೆಳದಿ ವೆಂಕಟೇಶ ಜೋಯಿಸರು ಸಾಗರದ ಅಣಲೆಕೊಪ್ಪ ಬಡಾವಣೆಯ ತಮ್ಮ ಮನೆ ಕೆಳದೀಶದ ಪ್ರಥಮ ಅಂತಸ್ತಿನ ಕಟ್ಟಡ ನಿರ್ಮಿಸಿದ ಸಂದರ್ಭದ ನಿಮಿತ್ತ ಆಹ್ವಾನಿತರ ಸಮ್ಮುಖದಲ್ಲಿ ಗೃಹಶಾಂತಿ ಮತ್ತು ದೇವೀಪಾರಾಯಣ ಕಾರ್ಯಕ್ರಮ ನಡೆಸಿದರು.
***
ವೈಕುಂಠ ಸಮಾರಾಧನೆ: ದಿ. ೦೪-೦೫-೨೦೧೦ರಂದು ಶ್ರೀಮತಿ ವಿನೋದಮ್ಮನವರು ವಿಧಿವಶರಾಗಿ ವರ್ಷವಾದ ಪ್ರಯುಕ್ತ ಶಿಕಾರಿಪುರದಲ್ಲಿ ವರ್ಷಾಂತ್ಯದ ಕಾರ್ಯಕಲಾಪಗಳು ನಡೆದವು.
***
ನಾದತರಂಗಿಣಿ:  ಅಭಿರುಚಿ ಸಂಸ್ಥೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ  ದಿ.೦೨-೦೫-೧೦ರಂದು ನಡೆಸಿದ ವಿಭಿನ್ನ ಕಾರ್ಯಕ್ರಮ ನಾದತರಂಗಿಣಿ ಸಂಗೀತಾಸಕ್ತರಿಗೆ ಅಪೂರ್ವ ಸಂತಸ ನೀಡಿತು. ವಿ. ವಿಜಯಲಕ್ಷ್ಮಿ ರಾಘು(ವೀಣೆ), ವಿ. ಶುಭ ಸತೀಶ್ (ಸಹವೀಣೆ), ವಿ. ಎಲ್.ವಿ. ಮುಕುಂದ(ಕೊಳಲು), ವಿ. ಬಿ.ಎಸ್.ಆರ್. ದೀಪಕ್(ವಯೊಲಿನ್), ವಿ. ಬಿ.ಆರ್. ಶ್ರೀಧರ್(ಮೃದಂಗ), ಪಂ. ರಾಘವೇಂದ್ರ ರಂಗಧೋಳ್ (ರಿದಂ ಪ್ಯಾಡ್), ಪಂ. ತುಕಾರಾಂ ರಂಗಧೋಳ್ (ತಬಲ) ಮತ್ತು ವಿ. ಎಂ.ಕೆ. ಶ್ರೀನಿಧಿ(ಕೀಬೋರ್ಡ್) ರವರು ಸಂಗೀತ ರಸದೌತಣ ನೀಡಿದರು.
***
ಶುಭವಿವಾಹ:  ಬೆಂಗಳೂರಿನ ಶ್ರೀಮತಿ ಜಯಶ್ರೀ ಮತ್ತು ಶ್ರೀ ಎಸ್.ಕೆ. ಪ್ರಕಾಶ್‌ರವರ ಮಗ (ಶ್ರೀ ಸಾ.ಕ. ಕೃಷ್ಣಮೂರ್ತಿರವರ ಮೊಮ್ಮಗ) ಚಿ. ಎಸ್.ಪಿ. ವಿನಯನ ವಿವಾಹ ಶ್ರೀಮತಿ ಗಾಯತ್ರಿ ಮತ್ತು ಡಾ. ಕೆ. ರಾಮಪ್ರಸಾದ್‌ರವರ ಪುತ್ರಿ ಚಿ,ಸೌ. ಕೆ.ಆರ್. ಪೂಜಾ ಳೊಂದಿಗೆ ದಿ. ೩೦-೦೫-೧೦ರಂದು ಮೈಸೂರಿನ ಶ್ರೀ ಕೃಷ್ಣ ಸಭಾ ಭವನದಲ್ಲಿ ಸಂಭ್ರಮದಿಂದ ನೆರವೇರಿತು.
***
ಅರಸಿಕೆರೆ ತಾಲ್ಲೂಕು ಜಾವಗಲ್ ನ ಶ್ರೀ ಹೆಚ್.ಎಸ್.ಪುಟ್ಟರಾಜು ಹಾಗೂ ಶ್ರೀಮತಿ ಸತ್ಯವತಿ (ಜೂನ್ ೨೦೦೯ ಕವಿಕಿರಣ ಪತ್ರಿಕೆಯ ಪ್ರಾಯೋಜಕರು)ಯವರ ಪುತ್ರಿ ಚಿ.ಸೌ. ಹೆಚ್.ಪಿ.ರಶ್ಮಿ ಮತ್ತು ಬೆಂಗಳೂರಿನ ಶ್ರೀ ಬಿ.ಎನ್.ರಾಮಮೂರ್ತಿ ಹಾಗೂ ಶ್ರೀಮತಿ ಕಮಲಾವತಿಯವರ ಪುತ್ರ ಚಿ.ರಾ. ಬಿ.ಆರ್.ರವಿಕುಮಾರ್ ರವರೊಂದಿಗೆ ದಿನಾಂಕ ೧೬-೦೫-೨೦೧೦ರಂದು ಬೆಂಗಳೂರಿನ ಮಲ್ಲೇಶ್ವರಂನ ಶ್ರೀ ಪದ್ಮಾನಂದ ಗುರೂಜಿ ಪ್ರಾರ್ಥನಾ ಮಂದಿರದಲ್ಲಿ ಆಪ್ತೇಷ್ಟರ ಸಮ್ಮುಖದಲ್ಲಿ ನೆರವೇರಿತು.
***
ಶ್ರೀಮತಿ ನಾಗೇಂದ್ರ ಮತ್ತು ಶ್ರೀ ಎಂ.ಎಸ್.ನಾಗೇಂದ್ರರವರತ್ರಿ ಚಿ,ಸೌ. ಸಿಂಧೂಶ್ರೀನಾಗ್ ರವರ ವಿವಾಹ ಶ್ರೀಮತಿ ಪುಷ್ಪಲತಾ ಮತ್ತು ಶ್ರೀ ಜಗ್ಗಯ್ಯ ಅನಂತುಣಿರವರ ಪುತ್ರ ಚಿ.ರಾ. ಸುಧೀರ್ ಅನಂತುಣಿರವರೊಂದಿಗೆ ಕುಚಲಾಂಬ ಕಲ್ಯಾಣ ಮಹಲ್ ನಲ್ಲಿ ಬಂಧುಬಳಗದವರ ಸಮ್ಮುಖದಲ್ಲಿ ನೆರವೇರಿತು.
***
ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯಧನ


     ಬೆಂಗಳೂರಿನ ಶ್ರೀ ಎಸ್.ಕೆ.ರಾಮರಾಯರ ಮಗ ಶ್ರೀ ಅಶ್ವಥ್ ಪ್ರಸಾದ್ ರವರು ರೂ.10000/- ಗಳನ್ನು ಮತ್ತು ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್ ರವರು ರೂ. 5000/-ಗಳನ್ನು ವಿದ್ಯಾ ಸಹಾಯನಿಧಿಗಾಗಿ ದೇಣಿಗೆ ಕೊಟ್ಟಿದ್ದು, ಅದನ್ನು ದಾನಿಗಳ ಹಾಗೂ ಹಿರಿಯರ ಅಪೇಕ್ಷೆ ಮತ್ತು ಸೂಚನೆಯಂತೆ ಈ ಕೆಳಗಿನಂತೆ ನೀಡಲಾಗಿರುತ್ತದೆ.
     ಬೆಂಗಳೂರಿನ ಶ್ರೀ ಗುರುಮೂರ್ತಿ ಮತ್ತು ದಿ.ಶ್ರೀಮತಿ ವಿಜಯಲಕ್ಷ್ಮಿರವರ ಮಗ ದ್ವಿತೀಯ ಪಿ.ಯು.ಸಿ.ಯಲ್ಲಿ ಓದುತ್ತಿರುವ ಎಸ್.ನಿತಿನ್ (ರೂ.6000/-), ಶಿವಮೊಗ್ಗದ ಶ್ರೀ ಎಸ್.ಆರ್. ಜೋಷಿ ಮತ್ತು ಶ್ರೀಮತಿ ವೀಣಾ ಜೋಷಿರವರ ಮಕ್ಕಳು ಪ್ರಥಮ ಪಿ.ಯು.ಸಿ.ಯಲ್ಲಿ ಓದುತ್ತಿರುವ ಸುಬ್ರಹ್ಮಣ್ಯ ಎಸ್. ಜೋಷಿ (ರೂ.2500/-), 8ನೇ ತರಗತಿಯಲ್ಲಿ ಓದುತ್ತಿರುವ ಸುನಿಲ್ ಎಸ್. ಜೋಷಿ (ರೂ. 2500/-), ಶಿಕಾರಿಪುರದ ದಿ. ಕೆ.ಪಿ. ವೆಂಕಟೇಶ್ ಮತ್ತು ಶ್ರೀಮತಿ ಡಿ.ಸುವರ್ಣರವರ ಮಗ ಬಿ.ಎಸ್.ಸಿ.(ಕೃಷಿ) ಪ್ರಥಮ ವರ್ಷದಲ್ಲಿ ಓದುತ್ತಿರುವ ಕೆ.ವಿ.ಶಶಿಕುಮಾರ್ (ರೂ.2000/-) ಮತ್ತು ಬೆಂಗಳೂರಿನ ಶ್ರೀ ಕೆ.ವಿ. ಶ್ರೀಧರ್ ಮತ್ತು ಶ್ರೀಮತಿ ಅನ್ನಪೂರ್ಣರವರ ಮಗ ದ್ವಿತೀಯ ವರ್ಷದ ಮೆಕ್ಯಾನಿಕಲ್ ಇಂಜನಿಯರಿಂಗ್ ಡಿಪ್ಲೊಮಾದಲ್ಲಿ ಓದುತ್ತಿರುವ ಎಸ್. ವಿಜೇತ (ರೂ.2000/-) ಇವರಿಗೆ ಕೊಡಲಾಗಿರುತ್ತದೆ.
     ದೇಣಿಗೆ ನೀಡಿದವರಿಗೆ ಮತ್ತು ಶಿಷ್ಯವೇತನ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ಕವಿಕಿರಣ ಬಳಗದ ಹೃತ್ಪೂರ್ವಕ ಅಭಿನಂದನೆಗಳು.


(ತಿಳಿದ ಮತ್ತು ತಿಳಿಸಲಾದ ಸುದ್ದಿಗಳನ್ನು ಪ್ರಕಟಿಸಿದೆ. - ಸಂ.)
**************



FORM – IV
“KAVIKIRANA”
STATEMENT about ownership and other particulars about periodical ‘KAVIKIRANA’, as required to be published under Section 19-D(b) of the Press and Registration of Books Act, read with Rule-8 of the Registration of Newspapers (Central) rules, 1956.

1. Place of Publication: Shimoga.
2. Periodicity of publication: Half yearly.
3 Printer: Sri K.V. Suresh, Citizen of India, Kavi Prakashana, ‘Sowparnika’, 3rd Cross, 3rd Main, Near Akkamahadevi Park, Basaveshwaranagar, Shimoga – 577204.
4. Publisher: Sri K.V. Suresh, Citizen of India, Kavi Prakashana, ‘Sowparnika’, 3rd Cross, 3rd Main, Near Akkamahadevi Park, Basaveshwaranagar, Shimoga – 577204.
5. Editor: Sri K.V. Nagaraj, Citizen of India, No. 2354, ‘Nagabharana’, 7th cross, 2nd Main, Shanthinagar, Hassan ;573201.
6. Owner: Sri K.V. Nagaraj, Citizen of India, No. 2354, ‘Nagabharana’, 7th cross, 2nd Main, Shanthinagar, Hassan ;573201.
  
  I, K.V. Suresh, hereby declare that the particulars given above are true to the best of my knowledge and belief.
                                                             Sd/-
Place: Shimoga                            (K.V. Suresh)
Date: 25-02-2010.                          Publisher.

ಕೊಂದವನ ಗೆಳೆತನ ಮಾಡಬೇಕು
ಅಸೂಯೆ ಪಡುವವನ ಪೋಷಿಸಲುಬೇಕು
ವಿಷವನನುಣಿಸಿದರೆ ಷಡ್ರಸವನುಣಿಸಲುಬೇಕು
ಹಿಂದೆ ನಿಂದಿಸುವವನ ವಂದಿಸಲುಬೇಕು
-ಪುರಂದರದಾಸರು.
******


     ಬಹಳಷ್ಟು ವಿಶ್ಲೇಷಣೆಯ ಕೊನೆಯಲ್ಲಿ ಹೀಗೆನ್ನಬಹುದು: ಆಯಾದಿನದ  ಪ್ರಾಮಾಣಿಕ ಕೆಲಸ, ಆಯಾದಿನದ ಪ್ರಾಮಾಣಿಕ ಚಟುವಟಿಕೆ, ಆಯಾದಿನದ ಔದಾರ್ಯದ ಮಾತುಗಳು, ಆಯಾದಿನದ ಸತ್ಕರ್ಮಗಳು - ಇವುಗಳನ್ನು ಬಿಟ್ಟು ಮನುಷ್ಯನ ಪ್ರಗತಿಗೆ ಬೇರಾವ ಉಪಾಯವೂ ಇಲ್ಲ.
-ಅನಾಮಧೇಯ.
*************







              - ಓದಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ  -
-ಕ.ವೆಂ.ನಾಗರಾಜ್.