ಬುಧವಾರ, ಜುಲೈ 11, 2012

ಕವಿಕಿರಣ - ಜೂನ್, 2011ರ ಸಂಚಿಕೆ

ಸಹೃದಯರೇ,
             'ಕವಿಕಿರಣ'ದ 1, ಜೂನ್, 2011 ರ ಸಂಚಿಕೆಯನ್ನು ಈ ಮೂಲಕ ತಮ್ಮ ಅವಗಾಹನೆಗೆ ಪ್ರಕಟಿಸಿದೆ.  ಕಾಲಕ್ರಮೇಣ ಉಳಿದ ಸಂಚಿಕೆಗಳನ್ನೂ ಪ್ರಕಟಿಸಲಾಗುವುದು. ನಿಮ್ಮ ಸಲಹೆ, ಸೂಚನೆ, ಸಹಕಾರಗಳನ್ನು ಹೃತ್ಪೂರ್ವಕ ಸ್ವೀಕರಿಸಲಾಗುವುದು. 
           ಇದು ಕವಿ ಪ್ರಕಾಶನದ ಪ್ರಕಟಣೆಗಳನ್ನು ಅಂತರ್ಜಾಲದ ಮೂಲಕವೂ ಜನರಿಗೆ ತಲುಪಿಸಲು ಉದ್ದೇಶಿಸಿರುವ ಬ್ಲಾಗ್.  ಈ ತಾಣದಲ್ಲಿ ಇದುವರೆಗೆ ಪ್ರಕಟಿಸಿದ ಇತರ ಪ್ರಕಟಣೆಗಳು:
1. 'ಕವಿಕಿರಣ' ಪತ್ರಿಕೆ ಮೂಡಿದ ಪರಿಯ ಪರಿಚಯ, 
     http://kavikirana.blogspot.in/2011/01/blog-post_26.html
2. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2008ರ ಸಂಚಿಕೆ
     http://kavikirana.blogspot.in/2011/02/2008.html
3. 'ಕವಿಕಿರಣ' ಪತ್ರಿಕೆಯ ಜೂನ್, 2009ರ ಸಂಚಿಕೆ
     http://kavikirana.blogspot.in/2011/04/2009.html
4. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2009ರ ಸಂಚಿಕೆ
     http://kavikirana.blogspot.in/2011/05/01-12-2009.html
5. 'ಕವಿಕಿರಣ' ಪತ್ರಿಕೆಯ ಜೂನ್, 2010ರ ಸಂಚಿಕೆ
    http://kavikirana.blogspot.in/2011/07/01-06-2010.html
6. 'ಕವಿಕಿರಣ' ಪತ್ರಿಕೆಯ ಜೂನ್, 2010ರ ವಿಶೇಷ ಸಂಚಿಕೆ
   http://kavikirana.blogspot.in/2011/09/01-06-2010.html
7.  ಕ.ವೆಂ. ನಾಗರಾಜರ ಕೃತಿ: ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿಚಿತ್ರಣ)  http://kavikirana.blogspot.in/2011/06/blog-post_23.html
8. ಕವಿ ವೆಂ. ಸುರೇಶರ  'Karmayogi – Kalavallabha S.K. LINGANNAIYA – a concise biography of Sri S.K. Lingannaiya'
     http://kavikirana.blogspot.in/2011/07/this-book-is-biography-of-one-of.html
9. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2010ರ ಸಂಚಿಕೆ
     http://kavikirana.blogspot.in/2012/04/01-2010.html
      ಕಾಲಕ್ರಮೇಣ ಉಳಿದ ಪ್ರಕಟಣೆಗಳನ್ನೂ ಸಹೃದಯೀ ವಾಚಕರ ಮುಂದಿಡುವ ವಿಚಾರವಿದೆ. ಪ್ರತಿಗಳು ಬೇಕೆನಿಸಿದವರು ನನ್ನನ್ನಾಗಲೀ, ಕವಿ ಸುರೇಶರನ್ನಾಗಲೀ ಸಂಪರ್ಕಿಸಬಹುದು. ತಮ್ಮ ಪ್ರತಿಕ್ರಿಯೆ, ಸಲಹೆ, ಸೂಚನೆ, ಸಹಕಾರಗಳಿಗೆ ಸ್ವಾಗತ.
-ಕ.ವೆಂ.ನಾಗರಾಜ್,  ಸಂಪಾದಕ.
- - - - - - - - - - - - - - - - - - - - - - - - - - - - - - - - - - - - - - -
ಕವಿಕಿರಣ - 1, ಜೂನ್, 2011


       ಮೂಢ ಉವಾಚ
ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲ
ಒಳಗಣ್ಣು ತೆರೆದಿರಲು ಪತನದ ಭಯವಿಲ |
ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರು
ತಪ್ಪೆ ಸರಿಯೆಂದವರು ಜಾರುವರು ಮೂಢ ||
                                  - ಕ.ವೆಂ.ನಾ..
              * * * *


ಸಂಪಾದಕರು:
     ಕ.ವೆಂ. ನಾಗರಾಜ್,
     ನಂ.೨೩೫೪, ನಾಗಾಭರಣ, ೭ನೆಯ ಅಡ್ಡರಸ್ತೆ.
     ೨ನೆಯ ಮುಖ್ಯರಸ್ತೆ, ಶಾಂತಿನಗರ,
     ಹಾಸನ - ೫೭೩೨೦೧.

             kavinagaraj2010@gmail.com

     ಮೊಬೈಲ್ ದೂ: 94485 01804.


ಸಹಸಂಪಾದಕರು:
     ಕವಿ ವೆಂ. ಸುರೇಶ್,                                                
     ಸೌಪರ್ಣಿಕಾ, ೩ನೆಯ ಮುಖ್ಯ ರಸ್ತೆ, ೩ನೆಯ      
     ಅಡ್ಡರಸ್ತೆ, ಅಕ್ಕಮಹಾದೇವಿ ಪಾರ್ಕ್ ಹತ್ತಿರ,  
     ಬಸವೇಶ್ವರ ನಗರ, ಶಿವಮೊಗ್ಗ - ೫೭೭೨೦೪.
     ಮೊಬೈಲ್ ದೂ: 9448932866.

E mail: bsr_kavisuresh@yahoo.co.in



ಮುದ್ರಕರು ಮತ್ತು ಪ್ರಕಾಶಕರು:
     ಕವಿ ಪ್ರಕಾಶನ, ಶಿವಮೊಗ್ಗ.
* * * *
ಪತ್ರಿಕೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಲೇಖಕರದ್ದೇ ಹೊರತು ಪತ್ರಿಕೆಯದಲ್ಲ.
******
ಸೂಚನೆ
     ಕವಿಕಿರಣದ ಸದುದ್ದೇಶ, ಸದಾಶಯಗಳಿಗೆ ಪೂರಕವಾದ ಕಥೆ , ಕವನ, ಲೇಖನ, ಇತ್ಯಾದಿಗಳಿಗೆ ಆಹ್ವಾನವಿದೆ. ಸಕಾಲದಲ್ಲಿ ಕಳುಹಿಸಿಕೊಡಲು ಕೋರಿದೆ. ಸೀಮಿತ ಪುಟಸಂಖ್ಯೆಗಳ ಕಾರಣ ಕಿರುಬರಹಗಳಿಗೆ ಆದ್ಯತೆಯಿದೆ.
******
  ಕವಿ ಪ್ರಕಾಶನದ ಪ್ರಕಟಣೆಗಳು
೧. ಹಳೇ ಬೇರು - ಹೊಸ ಚಿಗುರು - ಕವಿ ವಂಶಸ್ಥರ ಸ್ಥೂಲ ಪರಿಚಯ ಮತ್ತು ವಂಶಾವಳಿ -     ಲೇ:   ಕವಿ ವೆಂ. ಸುರೇಶ್, ಪು: ೧೨೬. ಬೆಲೆ: ರೂ. ೧೨೫/-
೨. Karmayogi – Kalavallabha S.K. LINGANNAIYA – a concise biography of Sri S.K. Lingannaiya – Author: Kavi Suresh. P:114. Price: Rs. 80/-
೩. ಉತ್ಕೃಷ್ಟದೆಡೆಗೆ - ಲೇಖನಗಳ ಸಂಗ್ರಹ -             ಲೇ: ಕವಿ ವೆಂ. ಸುರೇಶ್,  ಪು:೯೮, ಬೆಲೆ: ರೂ. ೭೫/-
೪. ಕವಿಸಂಪರ್ಕವಾಹಿನಿ (ದೂರವಾಣಿ ಕೈಪಿಡಿ) -ಸಂ. ಕವಿ ಸುರೇಶ್,  ಪು:೨೬, ಬೆಲೆ: ರೂ.೧೫/-
೫. ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ -(ವ್ಯಕ್ತಿಚಿತ್ರಣ)-   ಲೇ: ಕ. ವೆಂ. ನಾಗರಾಜ್, ಹಾಸನ. ಪು.೬೦, ಬೆಲೆ: ರೂ.೪೦/-.
೬. ಮೂಢ ಉವಾಚ - ಚಿಂತನಶೀಲ ಮುಕ್ತಕಗಳು-ಲೇ: ಕ.ವೆಂ.ನಾಗರಾಜ್, ಹಾಸನ, ಪುಟ.೮೦, ಬೆಲೆ: ರೂ. ೨೦/-.
********
ಪತ್ರಿಕೆಯ ಸಂಚಿಕೆಗಳನ್ನು ಸಂಗ್ರಹಿಸಿಡಿ
     ಕವಿ ಕುಟುಂಬಗಳ ಕುರಿತು ಅಮೂಲ್ಯ ಮಾಹಿತಿಗಳು ಪ್ರತಿ ಸಂಚಿಕೆಯಲ್ಲೂ ಇರುವುದರಿಂದ ಎಲ್ಲಾ ಸಂಚಿಕೆಗಳನ್ನು ಕವಿ ಕುಟುಂಬಗಳವರು ಹಾಗೂ ಬಂಧುಗಳು ಕುಟುಂಬದ ದಾಖಲೆಯಾಗಿ ಸಂರಕ್ಷಿಸಿಡಲು ಕೋರಿದೆ. ಈ ಸಂಚಿಕೆಗಳು ಮುಂದಿನ ಪೀಳಿಗೆಗಳಿಗೂ, ಇತಿಹಾಸಾಸಕ್ತರಿಗೂ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ. 
*****
ರಕ್ಷಾಪುಟಗಳು 
ಪುಟ ೧: ವಾಯುಸ್ತುತಿ ಮಾರುತಿ (ಸಾ.ಕ. ಲಿಂಗಣ್ಣಯ್ಯ ನವರ ಕೃತಿ)
ಪುಟ ೪: ಶಿಕಾರಿಪುರ ಸಮಾವೇಶದ ಕೆಲವು ದೃಶ್ಯಗಳು 
******************************************************
ಅಂತಃಕಿರಣ
ಸಂಪ್ರದಾಯಗಳು ಸಂಕೋಲೆಗಳಾಗದಿರಲಿ

     ಕೆಲವು ದಶಕಗಳ ಹಿಂದೆ ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು ಕೈಗೆ ಬಳೆ ಹಾಕಿಕೊಳ್ಳದೆ ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆಸಬೇಕಾಗಿದ್ದ ಕಾಲವಿತ್ತು. ಚಿಕ್ಕ ವಯಸ್ಸಿನಲ್ಲೇ ವಿಧವೆಯಾದವರ ಪಾಡು ಅನುಭವಿಸಿದವರಿಗೇ ಗೊತ್ತು.  ಆಕೆಗೆ ಶುಭ ಕಾರ್ಯಗಳಲ್ಲಿ ಆಹ್ವಾನವಿರುತ್ತಿರಲಿಲ್ಲ. ಆಕೆ ಎದುರಿಗೆ ಬಂದರೆ ಅಪಶಕುನವೆಂದು ಭಾವಿಸುವವರಿದ್ದರು. ಹೊಸ ಪೀಳಿಗೆಯವರಿಗೆ ಇಂತಹ ಅನಿಷ್ಟ ಸಂಪ್ರದಾಯದ ಪರಿಚಯ ಇರಲಾರದು. ಪ್ರಾರಂಭದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುವುದು ನಿಂತರೂ ಕೈಗೆ ಬಳೆ ಹಾಕಿಕೊಳ್ಳಲು, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ, ಸುಧಾರಣೆಯಾಗಿದೆ. ಕಳೆದ ಎರಡು-ಮೂರು ದಶಕಗಳಿಂದೀಚೆಗೆ ಈ ಸಂಪ್ರದಾಯದ ಆಚರಣೆ ಕಂಡು ಬರುತ್ತಿಲ್ಲ. ಒಂದು ಅನಿಷ್ಟ ಸಂಪ್ರದಾಯದ ಅಂತ್ಯವಾಗಿರುವುದು ಸಮಾಧಾನದ ಸಂಗತಿ. 
     ಸಂಪ್ರದಾಯವೆಂದರೆ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುವ ಆಚರಣೆಗಳು/ ನಡವಳಿಕೆಗಳು. ಸರಿಯೋ, ತಪ್ಪೋ ವಿಚಾರ ಮಾಡದೆ ಅದನ್ನು ಮುಂದುವರೆಸಿಕೊಂಡು ಬರುವವರನ್ನು ಸಂಪ್ರದಾಯವಾದಿಗಳು ಎನ್ನುತ್ತಾರೆ. ಕೆಲವನ್ನು ಆಚರಿಸಿ ಕೆಲವನ್ನು ಕೈಬಿಡುವ ಅನುಕೂಲ/ಅವಕಾಶವಾದಿಗಳೂ ಇದ್ದಾರೆ. ಅರ್ಥವಿಲ್ಲದ ಸಂಪ್ರದಾಯಗಳನ್ನು ಧಿಕ್ಕರಿಸಿ ನಡೆಯುವವರೂ ಇದ್ದಾರೆ. ಸ್ವತಃ ಸಂಪ್ರದಾಯಗಳನ್ನು ಆಚರಿಸದಿದ್ದರೂ, ಅರ್ಥವಿಲ್ಲವೆಂದು ತಿಳಿದಿದ್ದರೂ, ಇತರರ ಸಲುವಾಗಿ ಅವನ್ನು ಬೆಂಬಲಿಸುವವರ ಸಂಖ್ಯೆ  ಸಹ ಗಣನೀಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ  ಎಲ್ಲರನ್ನೂ ಹೊಂದಿಸಿಕೊಂಡು, ಹೊಂದಿಕೊಂಡು ಸಮನ್ವಯ ಮಾಡಿ ಸದ್ವಿಚಾರ ತಿಳಿಸಲು ಹೆಣಗುವವರೂ ಇದ್ದಾರೆ. ಎಲ್ಲಾ ಸಂಪ್ರದಾಯಗಳೂ ಕೆಟ್ಟವಲ್ಲ; ಹಾಗೆಯೇ ಎಲ್ಲವೂ ಒಳ್ಳೆಯವು ಎಂದು ಹೇಳಲಾಗುವುದಿಲ್ಲ. ಯಾವ ಆಚರಣೆಗಳಿಂದ ಯಾರಿಗೂ ತೊಂದರೆಯಿಲ್ಲವೋ, ಯಾವುದರಿಂದ ಮನುಷ್ಯನ ಬೌದ್ಧಿಕ ವಿಕಾಸ, ಅಭಿವೃದ್ಧಿಗೆ ಸಹಕಾರವಾಗುವುದೋ, ಸಂತಸ ಹರಡುವುದೋ, ತಾರತಮ್ಯ ಇಲ್ಲದಿರುವುದೋ ಅಂತಹವುಗಳನ್ನು  ಒಳ್ಳೆಯ ಸಂಪ್ರದಾಯಗಳೆನ್ನಬಹುದು. ಇದಕ್ಕೆ ತದ್ವಿರುದ್ಧವಾದ ಸಂಪ್ರದಾಯಗಳನ್ನು ಕೆಟ್ಟವು ಎಂದುಕೊಳ್ಳಬಹುದು. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ, ಈಗಂತೂ ಹೊಸ ಹೊಸ ಸಂಪ್ರದಾಯಗಳು, ಆಚರಣೆಗಳು ಚಾಲ್ತಿಗೆ ಬರುತ್ತಿವೆ. ಹಿಂದಿನ ಅನುಭವಗಳಿಂದ ಹೇಳುವುದಾದರೆ ಕ್ರಮೇಣ ಅವು ಗಟ್ಟಿಗೊಳ್ಳುತ್ತವೆ.
     ಬಾಲ ಗಂಗಾಧರನಾಥ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವ ಸಲುವಾಗಿ ಹುಟ್ಟುಹಾಕಿದ ಸಾರ್ವಜನಿಕ ಗಣೇಶ ಉತ್ಸವಗಳು ಇಂದು ಯಾವ ಮಟ್ಟಕ್ಕೆ ತಲುಪಿವೆ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ಮೊದಲು ಊರಿಗೆ ಒಂದರಂತೆ ಇದ್ದುದು, ಈಗ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಗಳನ್ನು ಇಟ್ಟು ಅಲ್ಲಿ ನಡೆಸುವ ಕಾರ್ಯಕ್ರಮಗಳು, ಪೈಪೋಟಿ, ವಂತಿಕೆ ವಸೂಲಿ, ವಿಸರ್ಜನೆ ಸಮಯದಲ್ಲಿ ಕುಡಿದು ಕುಣಿಯುವ ಯುವಕರು, ಮತೀಯ ಘರ್ಷಣೆಗಳು, ಇತ್ಯಾದಿಗಳನ್ನು ಗಮನಿಸಿದರೆ ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ ಎಂದು ಅನ್ನಿಸದೇ ಇರದು. ಒಳ್ಳೆಯ ರೀತಿಯಲ್ಲಿ ಆಚರಿಸುವವರು ಇದ್ದರೂ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟು. ಗಣೇಶೋತ್ಸವಗಳು ಮುಗಿಯುವವರೆಗೂ ಶಾಂತಿ, ಸುವ್ಯವಸ್ಥೆಗಳಿಗಾಗಿ ಸಂಬಂಧಿಸಿದವರು ಹಗಲೂ ರಾತ್ರಿ ಹೆಣಗುವ, ಇಂತಹ ಉತ್ಸವಗಳು (ಗಣೇಶೋತ್ಸವ ಮಾತ್ರ ಅಲ್ಲ, ಎಲ್ಲಾ ಮತೀಯ/ಧಾರ್ಮಿಕ ಉತ್ಸವಗಳು ಸೇರಿ) ಏಕಾದರೂ     ಬರುತ್ತವೋ ಎಂದು ಅಂದುಕೊಳ್ಳುವ ಪರಿಸ್ಥಿತಿ ಇಂದು  ಇದೆ. ನಾನು ಗಣೇಶೋತ್ಸವವನ್ನಾಗಲೀ, ಇಂತಹ ಇತರ ಉತ್ಸವಗಳನ್ನಾಗಲೀ ವಿರೋಧಿಸುತ್ತಿಲ್ಲ, ಅದನ್ನು ಆಚರಿಸಲಾಗುತ್ತಿರುವ ರೀತಿಯ  ಬಗ್ಗೆ ಮಾತ್ರ ಬೆರಳು ತೋರಿಸುತ್ತಿದ್ದೇನೆ. 
     ಸಂಕಷ್ಟಹರ ಗಣಪತಿ ಪೂಜೆಯನ್ನು  ಇಂದು ಸಾಮೂಹಿಕ ಸನ್ನಿಯಂತೆ ಆಚರಿಸಲಾಗುತ್ತಿದೆ. ಆದರೆ ಎಷ್ಟು ಜನರು ಇದನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ? ಹೆಚ್ಚಿನವರು ಸ್ವಸಹಾಯ ಪದ್ಧತಿಯ ಹೋಟೆಲ್ಲಿನಲ್ಲಿ ಹಣ ಕೊಟ್ಟು ಕಾಫಿ ಕುಡಿದಂತೆ ದೇವಸ್ಥಾನಕ್ಕೆ ಹೋಗಿ ಹಣ ಕೊಟ್ಟು ಚೀಟಿ ಬರೆಸಿ ಹೋಗುತ್ತಾರೆ, ಪ್ರಸಾದ ಕೊಡುವ ಸಮಯಕ್ಕೆ ಬಂದು ಕೈಮುಗಿದು ಪ್ರಸಾದ ಪಡೆದು ಹೋಗುತ್ತಾರೆ. ಪೂಜೆಯ ಸಮಯದಲ್ಲಿ ದೇವಸ್ಥಾನದಲ್ಲಿದ್ದವರೂ ಪರಸ್ಪರ ಮಾತುಕತೆಗಳಲ್ಲಿ ತೊಡಗಿರುತ್ತಾರೆ. ಇಂತಹ ಆಚರಣೆಯಿಂದ ಯಾರಿಗೆ ಪ್ರಯೋಜನ? ಯಾರ ಕಷ್ಟಗಳು ಪರಿಹಾರವಾಗುತ್ತದೆ? ಶ್ರದ್ಧೆಯಿಂದ, ಅರ್ಥ ತಿಳಿದುಕೊಂಡು ಮಾಡುವ ಕ್ರಿಯೆಗಳಿಂದ ಮಾತ್ರ ಫಲ ಸಿಗಲು ಸಾಧ್ಯವಲ್ಲವೇ? ಇಲ್ಲದಿದ್ದರೆ ಅವು ತೋರಿಕೆಗೆ ಮಾಡುವ ಆಚರಣೆಗಳು ಅಷ್ಟೆ. ಇಸ್ಲಾಮ್ ಮತ ಪ್ರಾರಂಭವಾದ ಸಂದರ್ಭದಲ್ಲಿ ಧ್ವನಿವರ್ಧಕವಿರಲಿಲ್ಲ. ಆದರೆ ಇಂದು ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಧ್ವನಿವರ್ಧಿಸಿ ನಮಾಜು, ಉಪದೇಶಗಳನ್ನು ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅದನ್ನು ಕೇಳಲು ಇಚ್ಛಿಸದವರಿಗೂ ಬಲವಂತವಾಗಿ ಕೇಳುವಂತೆ ಮಾಡುತ್ತಿರುವುದು ಒಂದು ರೀತಿಯ ಶಬ್ದಮಾಲಿನ್ಯವಲ್ಲವೇ?   
     ಜಾತ್ರೆ, ಪೂಜೆ, ಇತ್ಯಾದಿಗಳ ಹೆಸರಿನಲ್ಲಿ ದೇವರನ್ನು ಸಂತುಷ್ಟಗೊಳಿಸುವ(?) ಕಾರಣದಿಂದ ಪ್ರಾಣಿಬಲಿ ನೀಡುವ ಸಂಪ್ರದಾಯ ಒಳ್ಳೆಯದೆಂದು ಹೇಳಬಹುದೆ? ಇದನ್ನು ಸಮರ್ಥಿಸುವ ಜನರಿಗೆ ಕಡಿಮೆಯೇನಿಲ್ಲ. ಶಿಕಾರಿಪುರದಲ್ಲಿ ತಾಲ್ಲೂಕು ದಂಡಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಾತ್ರೆಯ ಸಮಯದಲ್ಲಿ ಕೋಣಬಲಿ ತಡೆಯಲು ಒಂದು ಗ್ರಾಮದಲ್ಲಿ  ಪೋಲಿಸರ ನೆರವಿನೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿssssssಸಲಾಗಿತ್ತು. ಗ್ರಾಮಸ್ಥರಿಗೆ ಕಾನೂನಿನಲ್ಲಿ ಇರುವ ನಿಷೇಧ, ಉಲ್ಲಂಘಿಸಿದರೆ ಆಗುವ ಪರಿಣಾಮಗಳು, ಇತ್ಯಾದಿ ತಿಳುವಳಿಕೆ ಹೇಳಲಾಗಿತ್ತು.   ಮುಂಚಿತವಾಗಿ ನಡೆಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಪಶುವೈದ್ಯರ ಸಹಾಯದಿಂದ ಸಿರಿಂಜಿನಲ್ಲಿ ಕೋಣನ ರಕ್ತವನ್ನು ತೆಗೆದು ಸಾಂಕೇತಿಕವಾಗಿ ದೇವಿಗೆ ಅರ್ಪಿಸಲು ಗ್ರಾಮದ ಮುಖ್ಯಸರು ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರೂ, ಪೋಲಿಸರ ಕಣ್ಗಾವಲು ಇದ್ದರೂ  ಎಲ್ಲರ ಕಣ್ಣುತಪ್ಪಿಸಿ ಕೋಣಬಲಿ ನೀಡಿದ ಪ್ರಸಂಗ ಬೇಸರ, ಮುಜುಗರ ಉಂಟುಮಾಡಿತ್ತು. ಎಲ್ಲಾ ಮಾಧ್ಯಮಗಳಲ್ಲೂ ವಿಷಯ ಅತಿರಂಜಿತವಾಗಿ ಪ್ರಚಾರಗೊಂಡಿತು. ಕೆಲವರ ಮೇಲೆ ಪ್ರಕರಣ ದಾಖಲಿಸಿದರೂ ರಾಜಕೀಯ ನಾಯಕರ ಮಧ್ಯಪ್ರವೇಶ ಪ್ರಕರಣವನ್ನು ದುರ್ಬಲಗೊಳಿಸಿದ್ದು ಸುಳ್ಳಲ್ಲ. ಈ ಪ್ರಕರಣವನ್ನು ರಾಜಕೀಯ ಮಾಡುವ ಸಲುವಾಗಿ ಪರವಾಗಿ ಮತ್ತು ವಿರೋಧವಾಗಿ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಬಳಸಿಕೊಂಡವು. ಅನಿಷ್ಟ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದವರೂ ಸಾತ್ವಿಕ ಕಾರಣಕ್ಕೆ ವಿರೋಧಿಸದೆ ವಿರೋಧಿಗಳನ್ನು ವಿರೋಧಿಸಲು ಮಾತ್ರ ಬಳಸಿದ್ದು ನೋವಿನ ವಿಷಯ. ಮಾಧ್ಯಮಗಳೂ ಕೆಸರೆರಚಾಟಕ್ಕೆ ಸಾಥ್ ನೀಡಿದವೇ ಹೊರತು, ಅವುಗಳಿಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಶಕ್ತಿಯಿದ್ದರೂ ಮಾಡಲಿಲ್ಲ.  ಇಂತಹ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಅಂಧ ಸಂಪ್ರದಾಯಗಳ ಕುರಿತು ತಿಳಿಸುವ ಸಲುವಾಗಿ ಕೆಲವನ್ನು ಮಾತ್ರ ಸಾಂಕೇತಿಕವಾಗಿ ಉದಾಹರಿಸಿದ್ದೇನೆ.   
     ಸಂಪ್ರದಾಯಗಳನ್ನು ಹೇಗೆ ಆಚರಿಸಬೇಕು ಅನ್ನುವುದಕ್ಕಿಂತ ಕೆಟ್ಟ ಸಂಪ್ರದಾಯಗಳನ್ನು ಗುರುತಿಸಿ ಅವುಗಳಿಂದ ದೂರ ಉಳಿಯಲು ಮತ್ತು ಸಾಧ್ಯವಾದರೆ ತಡೆಯಲು ಪ್ರಯತ್ನಿಸುವುದು ಇಂದಿನ ಅಗತ್ಯ. ಮಠ-ಮಂದಿರಗಳು, ಮಸೀದಿಗಳು, ಚರ್ಚುಗಳು, ಇತ್ಯಾದಿಗಳು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಈ ಕೇಂದ್ರಗಳು ವಾಸ್ತವವಾಗಿ ಸತ್ಕರ್ಮಗಳನ್ನು ಪೋಷಿಸುವ, ಜ್ಞಾನ ಪಸರಿಸುವ ಕೆಲಸ ಮಾಡಬೇಕು. ವಿಷಾದದ ಸಂಗತಿಯೆಂದರೆ ಹೆಚ್ಚಿನವು ಋಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ, ವೈದ್ಯಕೀಯ ಸಂಸ್ಥೆಗಳನ್ನು, ಕಲ್ಯಾಣ ಮಂದಿರಗಳನ್ನು ಕಟ್ಟಿ ಹಣ ಮಾಡುವ ಕೇಂದ್ರಗಳಾಗಿವೆ. ತಿರುಳಿಗಿಂತ ಸಿಪ್ಪೆಗೆ ಹೆಚ್ಚು ಮಾನ್ಯತೆ ಕೊಡಲಾಗುತ್ತಿದೆ. ನಿಜ, ತಿರುಳಿನ ರಕ್ಷಣೆಗೆ ಸಿಪ್ಪೆಯಿರಬೇಕು, ಆದರೆ ಸಿಪ್ಪೆಯೇ ತಿರುಳಾಗಬಾರದು. ಆ ಕಾರಣದಿಂದಾಗಿ ಉತ್ತರಾಧಿಕಾರಕ್ಕಾಗಿ ಕಚ್ಚಾಡುವ, ಒಡೆತನ ಸಾಧಿಸಬಯಸುವವರ ಕೂಟ ಅಲ್ಲಿ ಮನೆ ಮಾಡಿವೆ. ಮೂಲ ಉದ್ದೇಶ ಮರೆತು ಭೌತಿಕ ಆಸ್ತಿ, ಸಂಪತ್ತು ಕ್ರೋಢೀಕರಿಸಲು ನೀಡುವ ಮಹತ್ವವೇ ಇದಕ್ಕೆ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ. 
     ನನಗೆ ಬಂದಿದ್ದ ಇ-ಮೇಲ್ ಒಂದರಿಂದ ರೂಢಿಗತ ಸಂಪ್ರದಾಯಗಳಿಗೆ ಹೇಗೆ ಮನಸ್ಸು ಒಗ್ಗಿಕೊಳ್ಳುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಸಿಕ್ಕಿತು. ಅದೆಂದರೆ ಬಲಶಾಲಿ ಆನೆಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಮರವೊಂದಕ್ಕೆ ಕಟ್ಟಿ ಹಾಕಿದರೆ ಅದು ಬಿಡಿಸಿಕೊಳ್ಳಲು ಪ್ರಯತ್ನವೇ ಮಾಡುವುದಿಲ್ಲ. ಆನೆ ಎಷ್ಟು ಬಲಶಾಲಿಯೆಂದರೆ ಅದಕ್ಕೆ ಆ ಸರಪಳಿ ಮತ್ತು ಮರ ಲೆಕ್ಕವೇ ಅಲ್ಲ. ಅದು ಮನಸ್ಸು ಮಾಡಿದರೆ ಸರಪಳಿ ತುಂಡರಿಸಬಲ್ಲದು ಮತ್ತು ಮರವನ್ನು ಕಿತ್ತು ಬಿಸಾಡಬಲ್ಲದು. ಆದರೂ ಅದು ಮಾಡುವುದಿಲ್ಲ. ಏಕೆಂದರೆ ಆನೆ ಚಿಕ್ಕದಾಗಿದ್ದಾಗ ಅದನ್ನು ಅದೇ ರೀತಿ ಕಟ್ಟಿ ಹಾಕಲಾಗುತ್ತಿತ್ತು. ಚಿಕ್ಕದಾಗಿದ್ದರಿಂದ ಬಂಧನದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅದಕ್ಕೆ ಆಗ ಆಗುತ್ತಿರಲಿಲ್ಲ. ಕ್ರಮೇಣ ಅದೇ ಅಭ್ಯಾಸವಾಗಿ ಮರಕ್ಕೆ ಕಟ್ಟಿ ಹಾಕಿದರೆ ಬಿಡಿಸಿಕೊಳ್ಳಲಾಗುವುದಿಲ್ಲವೆಂಬ ಭಾವ ಗಟ್ಟಿಗೊಂಡು ಅದು ದೊಡ್ಡದಾದ ಮೇಲೂ ಹಾಗೆ ಕಟ್ಟಿಹಾಕಿದರೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರಲೇ ಇರಲಿಲ್ಲ. ನಮ್ಮ ಸ್ಥಿತಿ ಸಹ ಅದೇ ರೀತಿ ಇದೆ. ನಮಗೆ ವಿಚಾರ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ. ಕೆಲವು ಸಂಪ್ರದಾಯಗಳು ಅರ್ಥಹೀನವೆಂದು ನಮಗೆ ತಿಳಿಯುತ್ತದೆ, ಮನಸ್ಸು ಮಾಡಿದರೆ ಅದನ್ನು ಧಿಕ್ಕರಿಸುವ, ಮುಂದುವರೆಸದಿರುವ ಶಕ್ತಿ ನಮಗಿದೆ, ಆದರೂ ನಾವು ಹಾಗೆ ಮಾಡುವುದಿಲ್ಲವೆಂಬುದು ವಿಷಾದದ ಸಂಗತಿ. 'ಅಪ್ಪ ಹಾಕಿದ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಳ್ಳಲಾಗುವುದೇ' ಎಂಬ ಪ್ರಚಲಿತ ಗಾದೆ ಮಾತು ತಿಳಿಸುವುದೂ ವಿಚಾರ ಮಾಡಿ ಮುಂದುವರೆಯಿರಿ ಎಂದೇ. ಮರದ ನೆರಳಿನಲ್ಲಿ ಬಾಳೋಣ, ಆದರೆ ನೇಣು ಹಾಕಿಕೊಳ್ಳದಿರೋಣ. ಸಾರಾಸಗಟಾಗಿ ಎಲ್ಲವನ್ನೂ ತಳ್ಳಿಹಾಕಬೇಕಾಗಿಲ್ಲ. ಕುಟುಂಬಕ್ಕೆ, ಸುತ್ತಮುತ್ತಲಿನವರಿಗೆ ಹಿತವೆನಿಸುವ ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬಹುದು, ಆದರೆ ಅನಿಷ್ಠ ಸಂಪ್ರದಾಯಗಳನ್ನು ನಿಲ್ಲಿಸುವ ಮತ್ತು ಸದ್ಯಕ್ಕೆ ಒಳ್ಳೆಯದೆನಿಸಿದರೂ ಕಾಲಾನುಕಾಲಕ್ಕೆ ಅದರ ಆಚರಣೆಯಿಂದ ಆಗುವ ಪರಿಣಾಮಗಳನ್ನೂ ಗಮನಿಸಿ ಯೋಗ್ಯತಾನುಸಾರ ನಿರ್ಣಯಿಸಿ ಅಂತಹವುಗಳನ್ನು ಕೈಬಿಡುವ ಬಗ್ಗೆ ನಿರ್ಧರಿಸುವುದು ಇಂದಿನ ಅಗತ್ಯವಾಗಿದೆ. ಕುಟುಂಬದ ಸದಸ್ಯರುಗಳಿಗೂ ಈ ಕುರಿತು ತಿಳಿಸುವ ಪ್ರಯತ್ನ ಮಾಡೋಣ. ಸಂಪ್ರದಾಯಗಳು ನಮ್ಮನ್ನು ಕಟ್ಟಿಹಾಕುವ ಸರಪಳಿಗಳಾಗದಿರಲಿ; ನಮ್ಮನ್ನು ಒಳ್ಳೆಯ ದಾರಿಯಲ್ಲಿ ಕೈಹಿಡಿದು ಮುನ್ನಡೆಸುವ ದಾರಿದೀಪಗಳಾಗಲಿ. 
ಸದುದ್ದೇಶಕ್ಕಾಗಿ ತಮ್ಮೊಡನೆ,
-ಕ.ವೆಂ. ನಾಗರಾಜ್. 
****************************
     ಅಲ್ಲಿ (ಬ್ರಹ್ಮದಲ್ಲಿ) ಸೂರ್ಯನಾಗಲಿ, ಚಂದ್ರನಾಗಲಿ, ನಕ್ಷತ್ರಗಳಾಗಲಿ ಪ್ರಕಾಶಿಸುವುದಿಲ್ಲ. ನಮ್ಮ ಅಗ್ನಿಯು ಪ್ರಕಾಶಿಸುವುದೆಲ್ಲಿ ಬಂತು? ಪ್ರಕಾಶಿಸುತ್ತಿರುವ ಅವನನ್ನೇ ಅನುಸರಿಸಿ ಎಲ್ಲವೂ ಪ್ರಕಾಶಿಸುತ್ತಿರುವುದು. ಅವನ ಪ್ರಕಾಶದಿಮದಲೇ ಇವೆಲ್ಲವೂ ಪ್ರಕಾಸಿಸುತ್ತಿರುವುವು.
                                                                                                                         -ಕಠ
**************************
ಪ್ರಾಯೋಜಕತ್ವ  
     ಕವಿಕಿರಣ ಪತ್ರಿಕೆಯ ಸಂಚಿಕೆಗಳನ್ನು ಪ್ರಾಯೋಜಿಸಲು ಅವಕಾಶವಿದೆ. ರೂ. ೬೦೦೦/- ಮತ್ತು ಮೇಲ್ಪಟ್ಟು ಮೊಬಲಗು ನೀಡಿದಲ್ಲಿ ಅವರನ್ನು ಸಂಚಿಕೆಯ ಪ್ರಾಯೋಜಕರೆಂದು ಪರಿಗಣಿಸಿ ಪತ್ರಿಕೆಯಲ್ಲಿ ಅವರ ಕುಟುಂಬದ ಪೂರ್ಣಪುಟದ ಭಾವಚಿತ್ರ ಪ್ರಕಟಿಸಿ ಸ್ಮರಿಸಲಾಗುವುದು. ಪ್ರಾಯೋಜಕರು ಮುಂದೆ ಬರಲು ಕೋರಿದೆ.
***************************
ಹಿಂದಿನ ಸಂಚಿಕೆಗಳ ಪ್ರಾಯೋಜಕರುಗಳು:
೧. ಶ್ರೀ ಕ.ವೆಂ. ಅನಂತ ಮತ್ತು ಕುಟುಂಬ, ಕಾಲೇಜ್ ವಿಲೆ, ಪಿಎ, ಯು.ಎಸ್.ಎ.
೨. ಶ್ರೀ ಹೆಚ್,ಎಸ್ ಪುಟ್ಟರಾಜು ಮತ್ತು ಕುಟುಂಬ, ಜಾವಗಲ್, ಅರಸಿಕೆರೆ ತಾಲ್ಲೂಕು.
೩. ಕವಿಮನೆತನದ ಓರ್ವ ಹಿರಿಯರು, ಬೆಂಗಳೂರು
೪. ಶ್ರೀ ಬಿ.ವಿ. ಹರ್ಷ ಮತ್ತು ಕುಟುಂಬ, ಬೆಂಗಳೂರು.
೫. ದಿ. ಶ್ರೀ ಕವಿ ವೆಂಕಟಸುಬ್ಬರಾಯರ ಮಕ್ಕಳು. (ವಿಶೇಷ ಪೂರಕ ಸಂಚಿಕೆ)
೬. ಶ್ರೀ ಎನ್. ಶ್ರೀನಿವಾಸ ಮತ್ತು ಕುಟುಂಬ, ಬೆಂಗಳೂರು.
ಈ ಸಂಚಿಕೆಯ ಪ್ರಾಯೋಜಕರು:
ಶ್ರೀ ಹೆಚ್.ಕೆ.ಸತ್ಯನಾರಾಯಣ ಮತ್ತು ಕುಟುಂಬ, ಶಿಕಾರಿಪುರ.
                  ***************
ಹೀಗೊಂದು ಪ್ರಶ್ನೋತ್ತರ
ಪ್ರಶ್ನೆ: ದೇವರ ಪ್ರಾರ್ಥನೆ ಮಾಡುವಾಗ  ಸಿಗರೇಟು ಸೇದಬಹುದೇ?
ಉತ್ತರ: ಉಂಟೇ? ಅದು ಉದ್ಧಟತನವಾಗುವುದು, ದೇವರಿಗೆ ಅಗೌರವ ತೋರಿಸಿದಂತೆ ಆಗುವುದು.
ಪ್ರಶ್ನೆ: ಸಿಗರೇಟು ಸೇದುವಾಗ ದೇವರನ್ನು ಪ್ರಾರ್ಥಿಸಬಹುದೇ?
ಉತ್ತರ: ಅಗತ್ಯವಾಗಿ. ದೇವರನ್ನು ಯಾವ ಸಮಯದಲ್ಲೂ, ಎಂತಹ ಸಂದರ್ಭದಲ್ಲಾದರೂ ಪ್ರಾರ್ಥಿಸಬಹುದು. 

Printed and published by K.V.Suresh at Kavi prakashana, Sowparnika, 3rd Cross, 3rd Main, Basaveshwaranagar, Shimoga-577204 on behalf of the owner  K.V.Nagaraj, No.2354, ‘Nagabharana’. 7th Cross, 2nd Main, Shanthinagar, Hassan-573201;   Editor:   K.V. Nagaraj. 

*****************************************

ಲಿಂಗಣ್ಣ ಕವಿಯ 
ಕೆಳದಿ ನೃಪವಿಜಯ
ಗದ್ಯಾನುವಾದ::  ಕೆ. ಗುಂಡಾಜೋಯಿಸ್
ಪ್ರಥಮಾಶ್ವಾಸಂ
-೬-
(ಹಿಂದಿನ ಸಂಚಿಕೆಯಿಂದ ಮುಂದಕ್ಕೆ)

     ವ|| ಇಂತು ಚೌಡಪಂ ರಾರಾಜಿಸುತಿರ್ದನೀ ಕಥಾಸಂದರ್ಭಕೋಸುಗಂ ವಿದ್ಯಾನಗರೀರತ್ನಸಿಂಹಾಸನಾಧೀಶ್ವರರಾದ ಹರಿಹರರಾಯ  ಬುಕ್ಕರಾಯ ಮುಂತಾದ ರಾಯರ ವಂಶ ಪರಂಪರಾವಿವರಣಮಂ ಸಂಕ್ಷೇಪದಿಂ ಪೇಳ್ವೆನದೆಂತೆಂದೊಡೆ, ಶಿವಾಂಶೀಭೂತರೆನಿಸಿ ಕಾರಣಪುರುಷರಾಗಿ ಜನಿಸಿ ಬ್ರಹ್ಮಾಂಶೀಭೂತನಾದ ಮಂಡನಮಿಶ್ರನ ಕೂಡೆ ವಾದಮಂ ಮಾಡಿ  ಜಯಿಸಿ ಅಮರುಕವೆಂಬ ಗ್ರಂಥಮಂ ಮಾಡಿ ಶಾರದಾಂಬೆಯಂ ಶೃಂಗಪುರದ ಪೀಠಕ್ಕೆ ತಂದು ನಿಲಿಸಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಷಡ್ದರ್ಶನ ಸ್ಥಾಪನಾಚಾರ್ಯರಾದ ಜಗದ್ಗುರುಗಳೆಂದು ಪರಮ ಪ್ರಖ್ಯಾತಿಯಂ ಪಡೆದ ಶಂಕರಾಚಾರ್ಯರ್, ಪಾದಪದ್ಮಾಚಾರ್ಯರ್, ತೋಟಕಾಚಾರ್ಯರ್, ಹಸ್ತಾಮಲಕಾಚಾರ್ಯರ್, ಸುರೇಶ್ವರಾಚಾರ್ಯರ್ ಇಂತು ನಾಲ್ವರ್ ಶಿಷ್ಯರಂ ಮಾಡಿಕೊಂಡು ಪೂರ್ವಪಶ್ಚಿಮ ದಕ್ಷಿಣೋತ್ತರ ಸಮುದ್ರಾಂತಮಾಗಿ ಸ್ವಸಂಕೇತನಾಮದಲ್ಲಿ ಮಠಗಳಂ ಕಟ್ಟಿಸಿ ತತ್ತನ್ಮಠಂಗಳಲ್ಲಿ ಸ್ವಶಿಷ್ಯರಂ ನೆಲೆಗೊಳಿಸಿ ತಾಂ ವಿದ್ಯಾಶಂಕರನೆಂಬೊಬ್ಬ ಶಿಷ್ಯನಂ ಮಾಡಿಕೊಂಡಿರುತಿರ್ದು ಮುಕ್ತರಾಗಲಾಗಿಯಾಮೇಲೆಯುತ್ತರದಿಕ್ಕಿನ ಕೃಷ್ಣಾದೇವೀ ನದೀತೀರದಲ್ಲಿ ಗೃಹಸ್ಥಾಶ್ರಮದಲ್ಲರುತಿರ್ದ ಮಾಧವಭಟ್ಟನೆಂಬಾತಂ ದಕ್ಷಿಣದೇಶಕ್ಕೆ ಬಂದು ಕುಂತಳದೇಶದೊಳಗಣ ಪಂಪಾಕ್ಷೇತ್ರದಲ್ಲಿ ನಿಂದು ಭಾಗ್ಯಾಪೇಕ್ಷಿಯಾಗಿ ಶ್ರೀಚಕ್ರಯಂತ್ರ ಪುರಶ್ಚರಣಮಂ ಮಾಡುತ್ತಾಮಿರಲಾಗಿ ಅಮ್ಮನವರು ಪ್ರಸನ್ನರಾಗಿ ನಿನಗಿಹಜನ್ಮದಲ್ಲಿ ಭಾಗ್ಯಪ್ರಾಪ್ತಿಯಿಲ್ಲಮುತ್ತರಜನ್ಮದಲ್ಲಿ ಕೊಟ್ಟೇನೆನಲಾಗಿಯಾ ಮಾತಂ ಮನದೆಕೊಂಡು ಆ ಮಾಧವಭಟ್ಟಂ ಶಂಕರಾಚಾರ್ಯರ ಶಿಷ್ಯರಾದ ವಿದ್ಯಾಶಂಕರರಿಂದೆ ಸಂನ್ಯಾಸಾಶ್ರ,ಮವನಂಗೀಕರಿಸಿ ವಿದ್ಯಾರಣ್ಯರೆಂದು ಪ್ರಸಿದ್ಧನಾಮಾಂಕಿತರಾಗಿರುತುಮಿರಲಾಗಿ, ಈ ದೇಶಮಂ ಜೈನರ್ ಕಿರಾತರ್ ಮುಂತಾದವರ್ಕಳಾಕ್ರಮಿಸಿ ತಮ್ಮತಮ್ಮ ಇಚ್ಛಾನುಕೂಲಮಿರ್ದ ರೀತಿಯೊಳ್‌ ನಡೆಕೊಳ್ವರ್, ಈ ಮಂಡಲದೊಳೊಂದು ಪಟ್ಟಣಮಂ ನಿರ್ಮಾಣಂಗೈಸಿ ದುಷ್ಟನಿಗ್ರಹ ಶಿಷ್ಟಪರಿಪಾಲನವಂ ಮಾಡಿ ನಡೆಕೊಳ್ವಂತು ರಾಯಪಟ್ಟವಂ ಕಟ್ಟುವುದು ಎಂದು ಅಮ್ಮನವರಿಂ ಸ್ವಪ್ನವಾಗಲಾಗಿ ಆ ಸ್ವಪ್ನಾರ್ಥವಂ ಮನದೊಳಿಟ್ಟು ಕಡಿಪಯದಿವಸಂ ವರ್ತಿಸುತ್ತುಮಿರಲಾಗಿಯುತ್ತರದೇಶದಿಂದೆ ಸಹೋದರರಾದ ಹರಿಹರಬುಕ್ಕರೆಂಬ ಬಡಕ್ಷತ್ರಿಯರುಂ ಈ ದಕ್ಷಿಣರಾಜ್ಯಕೈತಂದು ಕುರುಬರಲ್ಲಿ ನಂಟತನವಂ ಮಾಡಿ ಹೆಣ್ಣು ತಂದು ಮದುವೆಯಾಗಿ ಸುಖವಾಸಿಗಳಾಗಿರುತ್ತುಮಿರಲಾಗಿ ಅವರೊಳ್ ಪಿರಿಯನಾದ ಹರಿಹರಗೆ ನೀನುಂ ಬುಕ್ಕನುಂ ಸಹ ವಿದ್ಯಾರಣ್ಯರ ಬಳಿಗೆ ಹೋಗಿ ಆಶ್ರಯಿಸಲಾಗಿ ಮಹದೈಶ್ವರ್ಯಂ ಬಂದೀತೆಂದು ಸ್ವಪ್ನವಾಗಲಾಗಿ ಆಮೇಲೆ ಆ ಹರಿಹರಬುಕ್ಕರ್ ಹಂಪೆಗೆ ಬಂದು ವಿದ್ಯಾರಣ್ಯರಂ ಕಂಡು ಸಂಧಿಸಿ ಸ್ವಪ್ನಾಭಿಪ್ರಾಯವನುಸಿರಲಾಗಿ ಆಗ ವಿದ್ಯಾರಣ್ಯರ್ ಹಂಪೆಯ ಸ್ಥಳದವರಂ ಕರೆಯಿಸಿ ವಿಚಾರವಂ ಮಾಡಲಾಗಿ ಅವರ್ಪೇಳಿದುದು: ಪೂರ್ವದೊಳ್ ಸೂರ್ಯವಂಶಜನಾದ ತ್ರಿಶಂಕು ಮಹಾರಾಯಂ ಪಂಪಾಕ್ಷೇತ್ರಕ್ಕೆ ಬಂದು ಈ ವಿರೂಪಾಕ್ಷಲಿಂಗಂ ಪ್ರಾದುರ್ಭವಲಿಂಗವೋ ಪ್ರತಿಷ್ಠಾಲಿಂಗವೋ ಯೆಂದು ಕೇಳಿದಲ್ಲಿ ಈ ಲಿಂಗಂ ಜ್ಯೋತಿರ್ಮಯವಾದ ಲಿಂಗಂ, ಈ ಲಿಂಗದ ಮಹಿಮೆಯಂ ಪೇಳ್ವುದಕ್ಕೆ ಬ್ರಹ್ಮದೇವರಿಗಾದರೂ ಅಸಾಧ್ಯಮೆಮ್ಮಪಾಡೇನೆನಲಾಗಿ ಆ ಮಾತಂ ಕೇಳ್ದು, ಆ ತ್ರಿಶಂಕು ಮಹಾರಾಯಂ ಪ್ರತಿಷ್ಠಾಲಿಂಗವೋಯೆಂದು ಕೇಳ್ದ ದೋಷನಿವೃತ್ತಿಗೋಸುಗಂ ಕೃಷ್ಣವೇಣೀ ನದೀತೀರಮಾರಭ್ಯ ಸೇತುಪರ್ಯಂತಂ ಮೂರುವರೆ ಕೋಟಿರಾಜ್ಯವನೀ ವಿರೂಪಾಕ್ಷದೇವರ್ಗೆ ಧಾರೆಯನೆರೆದನೆಂದು ಸ್ಥಳದವರ್ಪೇಳಲ್ ಆ ಮಾತಂ ಕೇಳ್ದಾ ವಿದ್ಯಾರಣ್ಯರ್ ಹರಿಹರಬುಕ್ಕರಂ ಕರೆದು ಈ ರಾಜ್ಯಕ್ಕೆಲ್ಲಂ ವಿರೂಪಾಕ್ಷಸ್ವಾಮಿಯ ಕರ್ತಂ, ನೀಂ ಆ ದೇವರ ಭಕ್ತರಾಗಿ ವರ್ತಿಸುತ್ತುಂ ಶ್ರೀ ವಿರೂಪಾಕ್ಷನೆಂದೊಪ್ಪವಂ ಹಾಕಿ ನಡೆಕೊಂಡು ಸದ್ಧರ್ಮದಿಂ ರಾಜ್ಯವನಾಳಿಕೊಂಡಿರ್ಪುದೆಂದು ಕಟ್ಟಳೆಯಂ ರಚಿಸಿ ಆ ಹರಿಹರಗೆ ಹರಿಹರರಾಯನೆಂದು ಪೆಸರಿಟ್ಟು ವಿದ್ಯಾನಗರಮೆಂಬ ಪಟ್ಟಣಮಂ ನಿರ್ಮಾಣಂ ಮಾಡಿಸುವ ಕಾಲದಲ್ಲಿಯಾ ಪಟ್ಟಣದ ಕೆಸರ್ಗಲ್ಲಮುಹೂರ್ತ ಕಾಲದಲ್ಲಿ ವಿಧಿವಶದಿಂದೊರ್ವ ದಾಸನೂದಿದ ಶಂಖಧ್ವನಿಯಿಂ ವಿದ್ಯಾರಣ್ಯರ ನಿಯಾಮಕಂಗೈದ ಲಗ್ನಂ ವ್ಯತ್ಯಾಸವಾಗಲಾಗಿ ಈ ಪಟ್ಟಣಂ ಕೆಲವು ವರ್ಷದ ಮೇಲೆ ತುರುಷ್ಕಾಧೀನವಾದೀತೆಂದು ವಿದ್ಯಾರಣ್ಯಾತ್ಮಕ ಕಾಲಜ್ಞಾನವೆಂದು ಕೆಲವು ಕಾಲಜ್ಞಾನಗ್ರಂಥವಂ ಬರೆಸಿ, ಆ ವಿದ್ಯಾರಣ್ಯರ್ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೨೫೮ನೆಯ ಸಂವತ್ಸರದಲ್ಲಿ ಆ ವಿದ್ಯಾನಗರೀ ರತ್ನ ಸಿಂಹಾಸನದಲ್ಲಿ ಹರಿಹರರಾಯಂಗೆ ಪಟ್ಟಮಂ ಕಟ್ಟಿ ನಿಲಿಸಿದರ್: 
     ಇಂತು ಚೌಡಪ್ಪನು ರಾರಾಜಿಸುತ್ತಿದ್ದನು. ಈ ಕಥಾಸಂದರ್ಭಕ್ಕೆ ಅನುಗುಣವಾಗಿ ವಿದ್ಯಾನಗರದ (ವಿಜಯನಗರದ) ರತ್ನಸಿಂಹಾಸನಕ್ಕೆ ಒಡೆಯರಾದ ಹರಿಹರರಾಯ ಹಾಗೂ ಬುಕ್ಕರಾಯ ಮುಂತಾದ ರಾಯರ ವಂಶಪರಂಪರೆಯ ವಿವರಣೆಯನ್ನು ಸಂಕ್ಷಿಪ್ತವಾಗಿ ಹೇಳುವೆನು; ಅದು ಹೇಗೆಂದರೆ - ಶಿವಾಂಶೀಭೂತರೆನಿಸಿ, ಕಾರಣಪುರುಷರಾಗಿ ಶಂಕರಾಚಾರ್ಯರು ಜನಿಸಿದರು. ಇವರು ಬ್ರಹ್ಮನ ಅಂಶೀಭೂತನಾದ ಮಂಡನಮಿಶ್ರರೆಂಬುವರೊಡನೆ ವಾದ ಮಾಡಿ ಜಯಿಸಿದರು. ಅಮರುಕವೆಂಬ ಗ್ರಂಥವನ್ನು ರಚಿಸಿ ಶ್ರೀ ಶಾರದಾಂಬೆಯನ್ನು ಶೃಂಗಪುರದ (ಈಗಿನ ಶೃಂಗೇರಿ) ಪೀಠಕ್ಕೆ ತಂದು ಪ್ರತಿಷ್ಠಾಪಿಸಿದರು; ಶ್ರೀಮತ್ಪರಮಹಂಸ, ಪರಿವ್ರಾಜಕಾಚಾರ್ಯ, ಷಡ್ದರ್ಶನ ಸ್ಥಾಪನಾಚಾರ್ಯರೆಂದೂ ಜಗದ್ಗುರುಗಳೆಂದೂ ಪ್ರಖ್ಯಾತಿ ಹೊಂದಿದರು. ಇವರು ಪಾದಪದ್ಮಾಚಾರ್ಯರು, ತೋಟಕಾಚಾರ್ಯರು, ಹಸ್ತಾಮಲಕಾಚಾರ್ಯರು, ಹಾಗೂ ಸುರೇಶ್ವರಾಚಾರ್ಯರು ಎಂಬುದಾಗಿ ನಾಲ್ವರು ಶಿಷ್ಯರನ್ನು ನಿಯಮಿಸಿಕೊಂಡು ಪೂರ್ವ, ಪಶ್ಚಿಮ, ದಕ್ಷಿಣ ಹಾಗೂ ಉತ್ತರದಲ್ಲಿ ಸಮುದ್ರವೇ ಮೇರೆಯಾಗುಳ್ಳ ಪ್ರದೇಶದಲ್ಲಿ ತಮ್ಮ ಹೆಸರಿನ ಗುರುತಿನಲ್ಲಿ ಮಠಗಳನ್ನು ಕಟ್ಟಿಸಿದರು. ಆಯಾಯಾ ಮಠಗಳಲ್ಲಿ ತಮ್ಮ ಶಿಷ್ಯರನ್ನು ನಿಯಮಿಸಿ ತಾವು ವಿದ್ಯಾಶಂಕರರೆಂಬ ಒಬ್ಬ ಶಿಷ್ಯನನ್ನು ಮಾಡಿಕೊಂಡು ಇರುತ್ತಿರಲಾಗಿ ಹಲವು ಕಾಲಾನಂತರ ಮುಕ್ತರಾದರು. ಆಮೇಲೆ ಉತ್ತರದಿಕ್ಕಿನ ಕೃಷ್ಣಾನದೀ ತೀರದಲ್ಲಿ ಮಾಧವಭಟ್ಟರೆಂಬವರು ಗೃಹಸಧರ್ಮವನ್ನು ಸ್ವೀಕರಿಸಿ ನೆಲೆಸಿದ್ದರು. ಇವರು ದಕ್ಷಿಣ ದೇಶಕ್ಕೆ ಬಂದು, ಕುಂತಳ ದೇಶದಲ್ಲಿರುವ ಪಂಪಾಕ್ಷೇತ್ರದಲ್ಲಿ ಭಾಗ್ಯವನ್ನು ಅಪೇಕ್ಷಿಸಿ ಶ್ರೀಚಕ್ರಯಂತ್ರ ಪುರಶ್ಚರಣೆಯನ್ಮ್ನ ಜಪಿಸುತ್ತಾ ತಪಸ್ಸು ಮಾಡುತ್ತಿದ್ದರು. ಶ್ರೀ ದೇವಿಯು ಪ್ರಸನ್ನಳಾಗಿ ನಿನಗೆ ಈ ಜನ್ಮದಲ್ಲಿ ಭಾಗ್ಯಪ್ರಾಪ್ತಿ ಇರುವುದಿಲ್ಲ; ಮುಂದಿನ ಜನ್ಮದಲ್ಲಿ ಕೊಡುತ್ತೇನೆ ಎಂಬುದಾಗಿ ಅಪ್ಪಣೆಯಿತ್ತಳು. ಇದನ್ನು ಮನಸ್ಸಿಗೆ ತೆಗೆದುಕೊಂಡು ಆ ಮಾಧವಭಟ್ಟರು ಶಂಕರಾಚಾರ್ಯರ ಶಿಷ್ಯರಾದ ವಿದ್ಯಾಶಂಕರರಿಂದ ಸಂನ್ಯಾಸಾಶ್ರಮವನ್ನು ಸ್ವೀಕರಿಸಿ, ವಿದ್ಯಾರಣ್ಯರೆಂಬುದಾಗಿ ಪ್ರಸಿದ್ಧರಾದರು. ಹೀಗಿರಲಾಗಿ ಒಂದು ದಿನ ಶ್ರೀದೇವಿಯು ಕನಸಿನಲ್ಲಿ ಕಾಣಿಸಿಕೊಂಡು ಈ ದೇಶವನ್ನು ಜೈನರು, ಬೇಡರು ಮುಂತಾದವರುಗಳು ಆಕ್ರಮಿಸಿ, ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಮಂಡಲದಲ್ಲಿ ಒಂದು ಪಟ್ಟಣವನ್ನು ನಿರ್ಮಿಸಿ, ದುಷ್ಟನಿಗ್ರಹ ಶಿಷ್ಟಪರಿಪಾಲನೆ ಮಾಡುವಂತೆ ರಾಯರ ಪಟ್ಟವನ್ನು ಕಟ್ಟಬೇಕು ಎಂಬುದಾಗಿ ಹೇಳಿದಳು. ಈ ಸ್ವಪ್ನದ ಅರ್ಥವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೆಲವು ದಿನಗಳನ್ನು ಕಳೆಯಲು, ಉತ್ತರದೇಶದಿಂದ ಬಡವರೂ ಹಾಗೂ ಕ್ಷತ್ರಿಯರೂ ಆದ ಹರಿಹರ ಬುಕ್ಕರೆಂಬ ಸಹೋದರರು ದಕ್ಷಿಣ ರಾಜ್ಯಕ್ಕೆ ಬಂದರು. ಇವರು ಕುರುಬರಲ್ಲಿ ಬಾಂಧವ್ಯ ಬೆಳೆಸಿ, ಹೆಣ್ಣು ತಂದುಕೊಂಡು ಮದುವೆಯಾಗಿ ಸುಖವಾಸಿಗಳಾಗಿರುತ್ತಿದ್ದರು. ಇವರಲ್ಲಿ ಹಿರಿಯನಾದ ಹರಿಹರನಿಗೆ ನೀನು ಹಾಗೂ ಬುಕ್ಕನೂ ಸಹ ವಿದ್ಯಾರಣ್ಯರ ಹತ್ತಿರ ಹೋಗಿ, ಅವರನ್ನು ಆಶ್ರಯಿಸಿದರೆ ನಿನಗೆ ಮಹತ್ತರವಾದ  ಐಶ್ವರ್ಯ ಲಭಿಸುತ್ತದೆ ಎಂಬುದಾಗಿ ಕನಸು ಕಂಡಿತು. ಆಮೇಲೆ ಹರಿಹರಬುಕ್ಕರು ಹಂಪೆಗೆ ಬಂದು ವಿದ್ಯಾರಣ್ಯರನ್ನು ಸಂಧಿಸಿ, ತಮಗೆ ಉಂಟಾದ ಕನಸಿನ ವೃತ್ತಾಂತವನ್ನು ನಿವೇದಿಸಿಕೊಳ್ಳಲಾಗಿ - ಆಗ ವಿದ್ಯಾರಣ್ಯರು ಹಂಪೆಯ ಸ್ಥಳದವರನ್ನು ಕರೆಯಿಸಿ ವಿಚಾರವನ್ನು ಮಾಡಲು ಅವರು ಹೇಳಿದ ಅಂಶವು ಹೀಗಿದೆ - ಪೂರ್ವದಲ್ಲಿ ಸೂರ್ಯವಂಶದವನಾದ ತ್ರಿಶಂಕು ಮಹಾರಾಯನು ಪಂಪಾಕ್ಷೇತ್ರಕ್ಕೆ ಬಂದು ಈ ವಿರೂಪಾಕ್ಷ ಲಿಂಗವು ಉದ್ಭವಲಿಂಗವೋ ಅಥವಾ ಪ್ರತಿಷ್ಠಾಲಿಂಗವೋ ಎಂದು ಕೇಳಿದನು. ಈ ಲಿಂಗವು ಜ್ಯೋತಿರ್ಮಯವಾದುದು; ಇದರ ಮಹಿಮೆಯನ್ನು ವರ್ಣಿಸುವುದಕ್ಕೆ ಬ್ರಹ್ಮದೇವರಿಗೂ ಅಸಾಧ್ಯವಿರುವಾಗ ನಮ್ಮ ಪಾಡೇನು ಎಂಬುದಾಗಿ ಸ್ಥಳದವರು ಉತ್ತರಿಸಿದರು ಮತ್ತು ಆ ಮಾತನ್ನು ಕೇಳಿದ ತ್ರಿಶಂಕು ಮಹಾರಾಯನು ತಾನು ಪ್ರತಿಷ್ಠಾಲಿಂಗವೋ ಎಂಬುದಾಗಿ ಕೇಳಿದ ದೋಷ ನಿವಾರಣೆಗಾಗಿ ಕೃಷ್ಣವೇಣೀ ನದೀ ತೀರದಿಂದ ಸೇತುಪರ್ಯಂತದವರೆಗೆ ಮೂರುವರೆ ಕೋಟಿ ರಾಜ್ಯವನ್ನು ಶ್ರೀ ವಿರೂಪಾಕ್ಷ ದೇವರಿಗೆ ಧಾರೆ ಎರೆದನು ಎಂಬುದಾಗಿ ಸ್ಥಳದವರು ತಿರುಗಿ ಉತ್ತರವಿತ್ತರು. ಆ ಮಾತನ್ನು ಕೇಳಿದ ವಿದ್ಯಾರಣ್ಯರು ಹರಿಹರಬುಕ್ಕರನ್ನು ಕರೆದು ಈ ರಾಜ್ಯಕ್ಕೆಲ್ಲ ಶ್ರೀ ವಿರೂಪಾಕ್ಷಸ್ವಾಮಿಯೇ ಕರ್ತನು. ನೀವು ಈ ದೇವರ ಭಕ್ತರಾಗಿ ಇರುತ್ತಾ ಶ್ರೀ ವಿರೂಪಾಕ್ಷನೆಂಬುದಾಗಿ ಮುದ್ರೆಯನ್ನು ಹಾಕಿ ನಡೆದುಕೊಳ್ಳುತ್ತಾ ಸದ್ಧರ್ಮದಿಂದ ರಾಜ್ಯವನ್ನು ಪಾಲಿಸಿಕೊಂಡು ಬರಬೇಕೆಂದು ನಿಯಮಿಸಿದರು. ಆ ಹರಿಹರನಿಗೆ ಹರಿಹರರಾಯನೆಂದು ನಾಮಕರಣ ಮಾಡಿದರು. ವಿದ್ಯಾನಗರ ಎಂಬ ಪಟ್ಟಣವನ್ನು ನಿರ್ಮಿಸಲು, ಪಟ್ಟಣದ ಅಡಿಗಲ್ಲು ಸ್ಥಾಪಿಸುವ ಮುಹೂರ್ತಕಾಲದಲ್ಲಿ ಒಬ್ಬ ದಾಸನು ಶಂಖವನ್ನು ಊದಿದ್ದರಿಂದ ವಿದ್ಯಾರಣ್ಯರು ಗೊತ್ತು ಮಾಡಿದ್ದ ಸುಮುಹೂರ್ತ ಕಾಲವು ವ್ಯತ್ಯಾಸವಾಯಿತು. ಈ ಕಾರಣ ಕೆಲವು ವರ್ಷಗಳ ಅನಂತರ ಈ ಪಟ್ಟಣವು ತುರುಕರ ಅಧೀನವಾಗುವುದೆಂದು ತಿಳಿಸುವ ಕಾಲಜ್ಞಾನ ಗ್ರಂಥವನ್ನು ರಚಿಸಿದರು, ಸ್ವಸ್ತಿ ಶ್ರೀ ಶಾ.ಶ. ೧೨೫೮ರಲ್ಲಿ ಹರಿಹರರಾಯನಿಗೆ ವಿದ್ಯಾನಗರೀ ರತ್ನಸಿಂಹಾಸನದಲ್ಲಿ ಪಟ್ಟವನ್ನು ಕಟ್ಟಿಸಿ, ರಾಜ್ಯವನ್ನು ಸ್ಥಾಪಿಸಿದರು.                                                                                     (ಮುಂದುವರೆಯುವುದು)
**********************************************

ಶಿಕಾರಿಪುರದಲ್ಲಿ ಸಿರಿಗಟ್ಟಿದ ಸಂಭ್ರಮ
ಕೆಳದಿ ಕವಿ ಮನೆತನದವರ ಮತ್ತು ಬಂಧುಗಳ ೫ನೇ ವಾರ್ಷಿಕ ಸಮಾವೇಶದ ವರದಿ
-ಕವಿ ವೆಂ. ಸುರೇಶ್.

     ದಿ.ಗೋಪಾಲರಾವ್ ಮತ್ತು ದಿ.ವಿನೋದಮ್ಮನವರ ಮಕ್ಕಳಾದ ಶ್ರೀಮತಿ ಮತ್ತು ಶ್ರೀ ರಾಮಮೂರ್ತಿ, ಬೆಂಗಳೂರು, ಶ್ರೀ ರಂಗನಾಥ, ಶಿಕಾರಿಪುರ,  ಶ್ರೀಮತಿ ಮತ್ತು ಶ್ರೀ ಸೋಮಶೇಖರ್, ಶಿಕಾರಿಪುರ ಮತ್ತು ಅವರ ಸಹೋದರಿಯರಾದ ಶ್ರೀಮತಿ ಸುವರ್ಣ ಮತ್ತು ಶ್ರೀಮತಿ ಕಾಶೀಬಾಯಿರವರು ತಮ್ಮ ತಾಯಿಯವರ ನೆನಪಿನಲ್ಲಿ ದಿನಾಂಕ ೨೬-೧೨-೨೦೧೦ರಂದು ಶಿಕಾರಿಪುರದಲ್ಲಿ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಿ ಉತ್ತಮ ಸಂಪ್ರದಾಯವನ್ನು ಮುನ್ನಡೆಸಿದ ಮಹನೀಯರು. ಬಂದವರೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಅಚ್ಚುಕಟ್ಟಾಗಿ ಊಟೋಪಚಾರದ ವ್ಯವಸ್ಥೆ ಮಾಡಿ ಇಡೀ ಸಮಾರಂಭವನ್ನು ಸ್ಮರಣೀಯವಾಗಿ ಮಾಡುವುದರಲ್ಲಿ ಇವರು ವಹಿಸಿದ ಕಾಳಜಿ, ಶ್ರಮಕ್ಕಾಗಿ ಇವರೆಲ್ಲರೂ ಅಭಿನಂದನಾರ್ಹರು.
                                         ಸಮಾವೇಶಕ್ಕೆ ಸಾಕ್ಷಿಯಾದ ಕವಿಮನೆತನದವರು, ಬಂಧು-ಬಳಗ

     ಸಮ್ಮೇಳನದ ಪೂರ್ವಭಾವಿಯಾಗಿ ಶ್ರೀ ರಾಮಮೂರ್ತಿ ದಂಪತಿಗಳಿಂದ ಸ್ವಗೃಹದಲ್ಲಿ ಶ್ರೀ ಸತ್ಯನಾರಾಯಣಸ್ವಾಮಿ ವ್ರತ ನಡೆಯಿತು. ಬೆಳಗಿನ ಉಪಹಾರದ ನಂತರ ಕಾರ್ಯಕ್ರಮ ಆರಂಭಗೊಂಡು ವೇದಿಕೆಗೆ ಬೆಂಗಳೂರಿನ ಶ್ರೀ ಎಸ್.ಕೆ. ಕೃಷ್ಣಮೂರ್ತಿ, ಶಿವಮೊಗ್ಗದ ಶ್ರೀ ಕವಿ ನಾಗರಾಜಭಟ್, ಹರಿಹರದ ಶ್ರೀ ಕವಿ ರಾಮರಾವ್ ಮತ್ತು ಆಗಮಿಸಿದ್ದ ಹಾಸನದ ಹಿತೈಷಿ ಶ್ರೀ ಹರಿಹರಪುರಶ್ರೀಧರರವರನ್ನು ಆಹ್ವಾನಿಸಲಾಯಿತು. ಅಗಲಿದ ಕವಿಕುಲದ ಪೂರ್ವಜರನ್ನು ಸ್ಮರಿಸಿ ಎರಡು ನಿಮಿಷಗಳ ಮೌನದೊಂದಿಗೆ ಗೌರವಾರ್ಪಣೆ ಮಾಡಲಾಯಿತು.  ಕು.ಸತೀಶ್‌ಕುಮಾರರ ಪ್ರಾರ್ಥನೆ ನಂತರ, ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮದ ವಿದ್ಯುಕ್ತ ಉದ್ಘಾಟನೆ ಮಾಡಿದರು.
     ಕವಿ ಮನೆತನದ ಕುಟುಂಬಗಳು, ಬಂಧುಗಳು ಪುನರ್ಮಿಲನಗೊಂಡ ಹಾದಿ, ಕವಿಕಿರಣ ಪತ್ರಿಕೆಯ ವಿಶೇಷತೆ, ಸಂಬಂಧಗಳನ್ನು ಬೆಸೆಯುವಲ್ಲಿ ಎಲ್ಲರ ಸಕ್ರಿಯ ಪಾತ್ರ ಮತ್ತು ವಿಶೇಷವಾಗಿ ಕವಿವಂಶದ ಯುವಪೀಳಿಗೆ ಈ ನಿಟ್ಟಿನಲ್ಲಿ ಇಡಬೇಕಾದ ಹೆಜ್ಜೆಗಳನ್ನೊಳಗೊಂಡಂತೆ ಅನೇಕ ವಿಚಾರಗಳನ್ನು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಶ್ರೀ ಕವಿ ನಾಗರಾಜ್ ರವರು ಪ್ರಸ್ತಾಪಿಸಿದರು. ಶಿಕಾರಿಪುರದಲ್ಲಿ ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಯಾಗಿ ಎರಡು ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ದಿನಗಳನ್ನು ಸ್ಮರಿಸಿಕೊಂಡು ಶಿಕಾರಿಪುರದ ನೆನಪು ಹಸಿರಾಗಿ ಉಳಿದಿದೆಯೆಂದು ಹೇಳಿದರು. 
                                                 ಕ.ವೆಂ.ನಾಗರಾಜರ ಪ್ರಾಸ್ತಾವಿಕ ನುಡಿ
     ವಿಶೇಷ ಅತಿಥಿಯಾಗಿ ಆಗಮಿಸಿದ್ದ ಶ್ರೀ ಹರಿಹರಪುರ ಶ್ರೀಧರ್ ರವರು ಈ ಕುಟುಂಬ ಮಿಲನ ಕಾರ್ಯಕ್ರಮದ ಬಗ್ಗೆ ಅತ್ಯಂತ ಪ್ರಶಂಸನೀಯ ಮಾತುಗಳನ್ನಾಡಿ ಇದು ಎಲ್ಲ ಕುಟುಂಬಗಳೂ ಅನುಸರಿಸಬೇಕಾದ ಅನುಕರಣೀಯ ಕಾರ್ಯಕ್ರಮ ಎಂದು ನುಡಿದರು. 
                                                 ಮುಖ್ಯ ಅತಿಥಿ ಹರಿಹರಪುರ ಶ್ರೀಧರರ ಅನಿಸಿಕೆ
                                                  ಶ್ರೀ ಸಾ.ಕ. ಕೃಷ್ಣಮೂರ್ತಿಗಳಿಗೆ ಸನ್ಮಾನ
     ವಯೋವೃದ್ಧರೂ ಮತ್ತು ಮಾರ್ಗದರ್ಶಕರೂ ಆದ ಶ್ರೀ ಎಸ್.ಕೆ. ಕೃಷ್ಣಮೂರ್ತಿಯವರನ್ನು ಈ ಸಂದರ್ಭದಲ್ಲಿ ಎಲ್ಲ ಕವಿ ಮನೆತನದವರ ಮತ್ತು ಬಂಧುಗಳ ಪರವಾಗಿ ಬಹಳ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನಿಸಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿ ಶ್ರೀ ಎಸ್.ಕೆ.ಕೃಷ್ಣಮೂರ್ತಿಗಳು ಇಂತಹ ಪ್ರೇರಣಾದಾಯಿ ಕಾರ್ಯಕ್ರಮಗಳನ್ನು ನಿರಂತರ ಮುಂದುವರೆಸಿಕೊಂಡು ಹೋಗುವಲ್ಲಿ ಎಲ್ಲರೂ ಸಹಕರಿಸಬೇಕೆಂದು  ಕಳಕಳಿಯ ಮನವಿ ಮಾಡಿದರು. 
                                ಶ್ರೀ ಹೊನ್ನಾಳಿ ಕೃಷ್ಣಮೂರ್ತಿಗಳಿಂದ ಸಂಚಿಕೆ ಬಿಡುಗಡೆ

     ಹೊನ್ನಾಳಿಯ ವೇ||ಬ್ರ||ಶ್ರೀ|| ಕೃಷ್ಣಮೂರ್ತಿ ಜೊಯಿಸರು ಕವಿಕಿರಣ ಪತ್ರಿಕೆಯ ಡಿಸೆಂಬರ್,೨೦೧೦ ಆವೃತ್ತಿಯನ್ನು ಬಿಡುಗಡೆಗೊಳಿಸಿದರು. ಪತ್ರಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅವರು, ಇಲ್ಲಿ ಬರುವ ಲೇಖನಗಳು ಎಲ್ಲರಿಗೂ ಸ್ಫೂರ್ತಿದಾಯಕವಾಗಿ ಎಲ್ಲರೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರಕವಾಗಲಿ; ಎಲ್ಲರೂ ತಮ್ಮ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿ ಎಂದು ಆಶಿಸಿದರು. ಅಷ್ಟೇ ಅಲ್ಲದೆ ಕವಿಕಿರಣ ಪತ್ರಿಕೆಯ ಮುಂದೆ ಬರುವ ಒಂದು ಸಂಚಿಕೆಯನ್ನು ಪ್ರಾಯೋಜಿಸುವ ಮತ್ತು ಮುಂದಿನ ಕೆಳದಿ ಕವಿ ಮನೆತನದ ಬಂಧು ಬಳಗದವರ ವಾರ್ಷಿಕ ಸಮ್ಮೇಳನ ಕಾರ್ಯಕ್ರಮವನ್ನು ಹಾಸನದಲ್ಲಿ ತಮ್ಮ ಕುಟುಂಬದವರು ಹಾಗೂ ಶ್ರೀಮತಿ ಮತ್ತು ಶ್ರೀ ಕುಮಾರಸ್ವಾಮಿಯವರ ಕುಟುಂಬದವರು ಸೇರಿ ಆಯೋಜಿಸುವುದಾಗಿ ಘೋಷಿಸಿದರು. ಎಲ್ಲರೂ ಕರತಾಡನ ಮಾಡಿ ಅವರನ್ನು ಅಭಿನಂದಿಸಿದರು. 
     ಕುಟುಂಬ ಮಿಲನದ ಮಹತ್ವ ಕುರಿತು ಮಾತನಾಡಲು ಆಹ್ವಾನಿಸಲಾಗಿದ್ದ ಮಲೆನಾಡು ಅಭಿವೃದ್ಧಿ ಮಂಡಲಿಯ ಅಧ್ಯಕ್ಷರಾದ ಶ್ರೀ ಪದ್ಮನಾಭ ಭಟ್‌ರವರು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಅದೇ ದಿನ ಇದ್ದರೂ ಸಹ ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವೇ ಸರಿ.  ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಇಂತಹ ಒಂದು ಕುಟುಂಬ ಸಮ್ಮಿಲನ ಕಾಯಕ್ರಮ ಆಶ್ಚರ್ಯಕರವಾದ  ಮತ್ತು ಅನುಕರಣೀಯವಾದ ವಿಚಾರ ಎಂದು ಶ್ಲಾಘಿಸಿದರು. 
                                          ಶ್ರೀ ಪದ್ಮನಾಭಭಟ್ಟರಿಂದ ಶ್ಲಾಘನೆಯ ನುಡಿಗಳು
     ಸಮಾರಂಭದ ಅಂಗವಾಗಿ ನಡೆದ ಆಶುಭಾಷಣ ಸ್ಪರ್ಧೆಯಲ್ಲಿ ಶಿಕಾರಿಪುರದ ಶ್ರೀ ಸತ್ಯನಾರಾಯಣರಾವ್ ರವರ ಪುತ್ರಿ ಕುಮಾರಿ ಗೌರಿ ಪ್ರಥಮಸ್ಥಾನ ಮತ್ತು ಶ್ರೀಮತಿ ಪ್ರತಿಭಾ ಹೆಗಡೆ, ಬೆಂಗಳೂರು ಇವರು ದ್ವಿತೀಯ ಬಹುಮಾನವನ್ನು ಪಡೆದರು. ಶ್ರಿ ಹರಿಹರಪುರ ಶ್ರೀಧರ್ ಮತ್ತು ಡಾ||ವೆಂಕಟೇಶ್ ಜೊಯಿಸ್, ಕೆಳದಿ ಇವರು ತೀರ್ಪುಗಾರರಾಗಿ ಸಹಕರಿಸಿದರು. ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸುಕನ್ಯ ಸೋಮಶೇಖರ್ ಎಲ್ಲರೂ ಮೆಚ್ಚುವಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು.
                                                               ಆಯೋಜಕರಿಗೆ ಅಭಿವಂದನೆ
     ಶಿಕಾರಿಪುರದಲ್ಲಿ ನಡೆದ ಈ ಅವಿಸ್ಮರಣೀಯ ಕಾರ್ಯಕ್ರಮ ಸಮಾರಂಭದಲ್ಲಿ ಹಾಜರಿರುವ ಅತೀ ಹಿರಿಯರಿಗೆ ಸನ್ಮಾನಿಸುವ ಮತ್ತು ಕಾರ್ಯಕ್ರಮವನ್ನು ಆಯೋಜಿಸಿದವರಿಗೆ ಕವಿಮನೆತನದವರ ಮತ್ತು ಬಂಧುಗಳೆಲ್ಲರ ಪರವಾಗಿ ಕೃತಜ್ಙತೆಗಳನ್ನು ಅರ್ಪಿಸುವ ಎರಡು ಹೊಸ ಸಂಪ್ರದಾಯಗಳಿಗೆ ನಾಂದಿ ಹಾಡಿತು. ಶ್ರೀ ಎಸ್.ಕೆ.ಕೃಷ್ಣಮೂರ್ತಿಯವರು ಸಮ್ಮೇಳನವನ್ನು ಅತೀ ಅಚ್ಚುಕಟ್ಟಾಗಿ ಮತ್ತು ಆತ್ಮೀಯವಾಗಿ ಏರ್ಪಾಟು ಮಾಡಿದ ದಿ.ಗೋಪಾಲರಾವ್ ಮತ್ತು ದಿ. ವಿನೋದಮ್ಮನವರ ಮಕ್ಕಳೆಲ್ಲರಿಗೂ ಕವಿ ಕುಟುಂಬದವರೆಲ್ಲರ ಪರವಾಗಿ ನೆನಪಿನ ಕಾಣಿಕೆ ಮತ್ತು ಫಲಪುಷ್ಪಗಳನ್ನು ನೀಡಿ ಅಭಿನಂದಿಸಿದರು. ೨೦೧೧ರ ಡಿಸೆಂಬರ್‌ನಲ್ಲಿ ಹಾಸನದಲ್ಲಿ ನಡೆಯುವ ಮುಂದಿನ ಸಮಾವೇಶದಲ್ಲಿ ಹೆಚ್ಚಿನ ಆಸಕ್ತಿಯೊಂದಿಗೆ ಸೇರುವ ಆಶಯದೊಂದಿಗೆ ಸಮಾರಂಭ ಮುಕ್ತಾಯವಾಯಿತು.
(೪ನೆಯ ರಕ್ಷಾಪುಟದಲ್ಲಿ ಸಮಾರಂಭದ ಇನ್ನೂ ಕೆಲವು ದೃಶ್ಯಗಳಿವೆ).
************

ಹಾಸನದಲ್ಲಿ ನಡೆಯಲಿರುವ ೬ನೆಯ ವಾರ್ಷಿಕ ಸಮ್ಮಿಲನ
     ೨೦೧೧ರ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಹಾಸನದಲ್ಲಿ ಕೆಳದಿ ಕವಿ ಕುಟುಂಬಗಳ ಮತ್ತು ಬಂಧು-ಬಳಗದವರ ೬ನೆಯ ವಾರ್ಷಿಕ ಸಮ್ಮಿಲನ ಆಯೋಜಿಸಲು  ಹೊನ್ನಾಳಿಯ ಶ್ರೀಮತಿ ಜಯಶ್ರೀ ಮತ್ತು ಶ್ರಿ ವೇ.ಬ್ರ.ಶ್ರೀ ಕೃಷ್ಣಜೋಯಿಸರು ಹಾಗೂ ಹಾಸನದ ಶ್ರೀಮತಿ ಗಿರಿಜಾಂಬಾ ಮತ್ತು ಶ್ರೀ ಕುಮಾರಸ್ವಾಮಿ ಮತ್ತು ಅವರ ಕುಟುಂಬವರ್ಗದವರು ಮುಂದೆ ಬಂದಿದ್ದು ಅವರಿಗೆ ಅಭಿನಂದನೆಗಳು. ಸಮಾವೇಶ ಅರ್ಥಪೂರ್ಣವಾಗಿ ಸಂಪನ್ನಗೊಳಿಸಲು ಎಲ್ಲರೂ ತಪ್ಪದೆ ಹಾಜರಾಗಲು ಮತ್ತು ಕ್ರಿಯಾತ್ಮಕವಾಗಿ ಪಾಲುಗೊಳ್ಳಲು ಕೋರಲಾಗಿದೆ. 
*********************

ಅಭಿನಂದನೆ
     ಕವಿಕಿರಣದ ಡಿಸೆಂಬರ್, ೨೦೧೧ರ ಸಂಚಿಕೆಯನ್ನು ಪ್ರಾಯೋಜಿಸಲು ಶ್ರೀ ಬಿ.ಎಲ್. ಸತೀಶಕುಮಾರ್, ಬೆಂಗಳೂರು ಇವರು ಮುಂದೆ ಬಂದಿದ್ದು ಅವರಿಗೆ ಕವಿಕಿರಣ ಬಳಗದ ಅಭಿನಂದನೆಗಳು.
********************
ಆ ಪರ ಮತ್ತು ಅಪರವಾದ ಬ್ರಹ್ಮವು ಸಾಕ್ಷಾತ್ಕರಿಸಲ್ಪಟ್ಟಿದೆ. ಇವನ ಹೃದಯ ಗ್ರಂಥಿಯು ನಾಶವಾಗುತ್ತದೆ. ಎಲ್ಲ ಸಂಶಯಗಳೂ ಪರಿಹಾರವಾಗುತ್ತವೆ. ಎಲ್ಲ ಕರ್ಮಗಳು ಕ್ಷೀಣವಾಗುತ್ತವೆ.
-ಮುಂಡಕೋಪನಿಷತ್.
*********************
ಮನವಿ
     ಇದು ಕವಿ ವಂಶಸರ ಕುಟುಂಬದ ಹಾಗೂ ಬಂಧು ಬಳಗದವರ ಪತ್ರಿಕೆಯಾಗಿದ್ದು, ಈ ಪತ್ರಿಕೆಗೆ ಕುಟುಂಬಗಳವರೇ ಆಧಾರ. ಈಗಾಗಲೇ ನಿರ್ಧಾರವಾಗಿರುವಂತೆ ಪ್ರತಿ ಕುಟುಂಬದ ಪ್ರತಿ ಘಟಕದಿಂದ ವಾರ್ಷಿಕ ರೂ. ೫೦೦/- ಅನ್ನು ವಂತಿಕೆಯಾಗಿ ಸಂಗ್ರಹಿಸಲು ಉದ್ದೇಶಿಸಿದ ವಿಷಯ ತಿಳಿದದ್ದೇ ಆಗಿದೆ.  ಈ ಹಣವನ್ನು ಪತ್ರಿಕೆಗೆ ಮಾತ್ರವಲ್ಲದೆ ಕುಟುಂಬಗಳ ವಾರ್ಷಿಕ ಸಮ್ಮೇಳನ ನಡೆಸಲು ಯಾರೂ ಮುಂದೆ ಬರದಿದ್ದ ಸಂದರ್ಭದಲ್ಲಿ ಸಹ ಬಳಸಲು ಉದ್ದೇಶಿಸಿರುವುದರಿಂದ ಎಲ್ಲರ ಸಹಕಾರ ಕೋರಿದೆ. ವಾರ್ಷಿಕವಾಗಿ ರೂ. ೫೦೦/- ನೀಡುವುದು ಕಷ್ಟವಾಗಲಾರದಾದರೂ, ಇಷ್ಟೇ ಕೊಡಬೇಕೆಂದು ಒತ್ತಾಯವಿರುವುದಿಲ್ಲ. ವಂತಿಕೆ ಸಂಗ್ರಹಕ್ಕೆ ಯಾರನ್ನೂ ನಿಯೋಜಿಸಿರುವುದಿಲ್ಲ. ದಯವಿಟ್ಟು ಪ್ರತಿ ಕುಟುಂಬದವರೂ ಸ್ವಯಂ ಪ್ರೇರಿತರಾಗಿ ಕೆಳಗೆ ನಮೂದಿಸಿದ ಬ್ಯಾಂಕ್ ಖಾತೆಗೆ ಪಾವತಿಸಿ ತಿಳಿಸಲು ಕೋರಿದೆ.     ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಬಳಗದ ಕುಟುಂಬಗಳವರು ಹಾಗೂ ಹಿತೈಷಿಗಳು ಸ್ವಇಚ್ಛೆಯಿಂದ ಸಹಕಾರ ನೀಡಿದಲ್ಲಿ ಸ್ವಾಗತವಿದೆ.
     ಸಂಗ್ರಹವಾದ ಮೊಬಲಗನ್ನು  ಶ್ರೀ ಸಾ.ಕ. ಕೃಷ್ಣಮೂರ್ತಿ ಮತ್ತು ಶ್ರೀ ಕವಿಸುರೇಶರ ಹೆಸರಿನಲ್ಲಿ ಬೆಂಗಳೂರಿನ ಬನಶಂಕರಿ ೨ನೆಯ ಹಂತದ ಸಿಂಡಿಕೇಟ್ ಬ್ಯಾಂಕ್‌ನ ಶಾಖೆಯಲ್ಲಿ ಜಂಟಿ ಖಾತೆಯಲ್ಲಿ  ಜಮಾ ಇರಿಸಲಾಗಿದೆ. ಖಾತೆಸಂ. ೦೪೭೮೨೦೧೦೦೩೭೬೫೦   ಆಗಿದ್ದು, ಈ ಖಾತೆಗೆ ನೇರವಾಗಿ ಜಮಾ ಮಾಡಲೂ ಅವಕಾಶವಿದೆ. ಆದಾಯ- ವೆಚ್ಚದ ವಿವರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ.. ಪರಿಶೀಲನೆಗೂ ಅವಕಾಶವಿದೆ.
     ಸಂಗ್ರಹವಾಗುವ ಮೊಬಲಗು ಸದುದ್ದೇಶಕ್ಕೆ/ ಸಮಾಜಕಾರ್ಯಕ್ಕೆ ಮಾತ್ರ ಬಳಕೆಯಾಗುವುದರಿಂದ ಮನೆಗಳಲ್ಲಿ ಶುಭಕಾರ್ಯ ನಡೆಯುವ ಮತ್ತು  ಇತರ ಸಂದರ್ಭಗಳಲ್ಲಿ ಹಾಗೂ ಹಿರಿಯರ ನೆನಪಿಗಾಗಿ ಮಂಗಳನಿಧಿ ಹೆಸರಿನಲ್ಲಿ ಸಹ ದೇಣಿಗೆ ನೀಡಬಹುದು.
             *********************
ಹೌದೆ?
ಕೊಟ್ಟದ್ದು ಹೋಗುವುದಿಲ್ಲ. ಇಟ್ಟದ್ದು ಇರುವುದಿಲ್ಲ.
********
     ಹೇಗೆ ಹರಿಯುತ್ತಿರುವ ನದಿಗಳು ನಾಮರೂಪಗಳನ್ನು ಬಿಟ್ಟು ಸಮುದ್ರದಲ್ಲಿ ಅದೃಶ್ಯವಾಗುವುವೋ ಹಾಗೆಯೇ ವಿದ್ವಾಂಸರು ನಾಮರೂಪಗಳಿಂದ ಬಿಡುಗಡೆಯನ್ನು ಹೊಂದಿ ಪರಾತ್ಮರನೂ ದಿವ್ಯನೂ ಆದ ಪುಡುಷನನ್ನು ಹೊಂದುವರು.
-ಮುಂಡಕೋಪನಿಷತ್.
*******************
ಕೆಳದಿ ಕವಿಮನೆತನದ ಪೂರ್ವಜರು - ೬
ಬಹುಮುಖ ವ್ಯಕ್ತಿತ್ವದ ಅನುಪಮ ಚಿತ್ರ ಕಲಾವಿದ 
ಎಸ್. ಕೆ. ಲಿಂಗಣ್ಣಯ್ಯ
-ಕವಿ ವೆಂ. ಸುರೇಶ್, ಶಿವಮೊಗ್ಗ 
                    ಮೊಮ್ಮಗಳು ಶ್ರೀಮತಿ ನಾಗವೇಣಿಯವರು ರಚಿಸಿದ ದಿ. ಎಸ್.ಕೆ. ಲಿಂಗಣ್ಣಯ್ಯನವರ ವರ್ಣಚಿತ್ರ

     ಕೆಳದಿ ಸಾಮ್ರಾಜ್ಯದ ಇತಿಹಾಸ ಜೀವಂತವಾಗಿರಿಸುವಲ್ಲಿ ಕೆಳದಿ ಕವಿಮನೆತನದವರ ಪಾತ್ರ ಅತ್ಯಂತ ಅಮೂಲ್ಯ. ಕೆಳದಿ ಸಂಸ್ಥಾನದ ಆಸ್ಥಾನಕವಿಯಾಗಿದ್ದ ಕವಿ ಲಿಂಗಣ್ಣ ರಚಿಸಿದ ಕೆಳದಿ ನೃಪವಿಜಯವೆಂಬ ಅನುಪಮ ಕೃತಿ ಇಡೀ ಕೆಳದಿ ಇತಿಹಾಸಕ್ಕೆ ಹಿಡಿದ ಕೈಗನ್ನಡಿ. ಈತನ ಮಗನಾದ ಕವಿ ವೆಂಕಣ್ಣ ಸಹ ಪೂರ್ವಿಕರಂತೆ ಸೃಜನಶೀಲ ಕವಿಯಾಗಿದ್ದು ನರಹರಿ ವಿಜಯ (ಭಾಮಿನಿ ಷಟ್ಪದಿಯ ಕಾವ್ಯ), ಗಣ ಸಹಸ್ರನಾಮ ಮತ್ತು ಪಾರ್ವತಿ ವಲ್ಲಭ ಶತಕ ಎಂಬ ಕೃತಿಗಳ ರಚನೆಕಾರ. ಸಾಗರದ ಕವಿ ಲಿಂಗಣ್ಣಯ್ಯ (ಎಸ್.ಕೆ.ಲಿಂಗಣ್ಣಯ್ಯ) ಕೆಳದಿ ಕವಿಮನೆತನದ ೬ನೆಯ ಪೀಳಿಗೆಗೆ ಸೇರಿದವರು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಾಸವಿದ್ದ ಕವಿ ಕೃಷ್ಣಪ್ಪ-ಸುಬ್ಬಮ್ಮನವರ ಕಿರಿಯ ಪುತ್ರನಾಗಿ ೧೮೭೯ರಲ್ಲಿ ಜನಿಸಿದವರು ಕವಿ ಲಿಂಗಣ್ಣಯ್ಯ. ತಂದೆ ಕವಿ ಕೃಷ್ಣಪ್ಪನವರೂ ಕೂಡ ಅತ್ಯಂತ ದೈವಭಕ್ತರು, ಜ್ಯೋತಿಷ್ಯದಲ್ಲಿ ಸಾಕಷ್ಟು ಪರಿಣತರು ಹಾಗೂ ವಿಶೇಷವಾಗಿ ಅಂತರ್ಜಲವನ್ನು ಗುರುತಿಸುವಲ್ಲಿ ಸಿದ್ಧಹಸ್ತರು ಎಂದು ಹೇಳಲಾಗಿದೆ. ಇವರೂ ಸಹ ಸಾಹಿತ್ಯದಲ್ಲಿ ಅನೇಕ ಕೃಷಿ ಮಾಡಿದ ಬಗ್ಗೆ ತಿಳಿದುಬರುತ್ತದೆಯಾದರೂ, ಬಹಳಷ್ಟು ಕೃತಿಗಳು ಕಣ್ಮರೆಯಾದಂತೆ ತೋರುತ್ತದೆ.
- - - - - - - - - - - - - - - - - - - - - - - - - - - - - - - - - -
    ಎಸ್.ಕೆ. ಲಿಂಗಣ್ಣಯ್ಯನವರ ಜೀವನ ಚರಿತ್ರೆಯನ್ನು ಇದೇ ಲೇಖಕರು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ್ದು ಎಲ್ಲಾ ಕವಿಮನೆತನದ ಸದಸ್ಯರುಗಳು, ಬಂಧು-ಬಳಗದವರು ಹಾಗೂ ಇತಿಹಾಸಾಸಕ್ತರು ಓದಲೇಬೇಕಾದ ಕೃತಿಯಾಗಿದೆ. ಲಿಂಗಣ್ಣಯ್ಯನವರ ವರ್ಣಮಯ ವ್ಯಕ್ತಿತ್ವ, ಸಾಧನೆಗಳು, ಇತ್ಯಾದಿಗಳನ್ನು ಜನಮನ ಮೆಚ್ಚುವ ರೀತಿಯಲ್ಲಿ ಬಿಂಬಿಸಲಾಗಿರುವ ಈ ಪುಸ್ತಕ ಬೇಕೆನಿಸಿದವರು ವಿಚಾರಿಸಿ ಪಡೆಯಬಹುದಾಗಿದೆ. ಆಸಕ್ತರು ಕೆಳದಿಯ ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡಿ ಲಿಂಗಣ್ಣಯ್ಯನವರು ರಚಿಸಿದ ಕೆಲವು ಅಮೂಲ್ಯ ಚಿತ್ರಗಳನ್ನು ಕಣ್ಣು ತುಂಬಿಕೊಳ್ಳಬಹುದು.                         -ಸಂ.
- - - - - - - - - - - - - - - - - - - - - - - - - - - - - - - - - -
     ಕವಿ ಲಿಂಗಣ್ಣಯ್ಯನವರದು ಬಹುಮುಖ ಪ್ರತಿಭೆ. ಚಿಕ್ಕಂದಿನಿಂದಲೂ ಅವರಿಗೆ ಚಿತ್ರ ಕಲೆಯಲ್ಲಿ ವಿಶೇಷವಾದ ಆಸಕ್ತಿ.  ಚಿಕ್ಕವರಾಗಿದ್ದಾಗ ಅವರು ವಿವಿಧ ಹೂವಿನ ರಸದ ಬಣ್ಣಗಳಿಂದ ರಚಿಸಿದ ವಿನಾಯಕನ ಚಿತ್ರವನ್ನು ಈಗಲೂ ಕೆಳದಿ ಮ್ಯೂಜಿಯಂನಲ್ಲಿ ನೋಡಬಹುದಾಗಿದೆ.     ಬಣ್ಣಗಳ ಹೊಸತನ ಇಂದೂ ಕಾಣಬರುವುದು ಈ ಚಿತ್ರದ ವಿಶೇಷ. ಬೆಂಗಳೂರಿನಲ್ಲಿ ಅತೀ ಕಷ್ಟದಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿ, ತುಮಕೂರಿನಲ್ಲಿದ್ದ ಇವರ ಮಾವ ಹಾಗೂ ಅಮಲ್ದಾರ್ ಪ್ರಧಾನ ವೆಂಕಟಸುಬ್ಬಯ್ಯನವರ ನೆರವಿನಿಂದ ೧೮೯೮ ರಲ್ಲಿ ಮದರಾಸು ವಿಶ್ವವಿದ್ಯಾನಿಲಯದಿಂದ ಬಿ.ಎ.ಪದವಿ ಹೊಂದಿದರು. ಮುಂದೆ ಅವರು ಸಬ್-ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿ, ದಿವಾನ್ ಎಂ.ಕೆ.ಕಾಂತರಾಜಅರಸರ ಸಹಾಯದಿಂದ, ಬೆಂಗಳೂರಿನ ಅಠಾರಾ ಕಛೇರಿಯಲ್ಲಿ (ಇಂದಿನ ಹೈಕೋರ್ಟ್) ಸರ್ವೆ ಸೂಪರ‍್ವೈಸರ್ ಆಗಿ ಸೇವೆ ಸಲ್ಲಿಸಿದರು. ಇವರಿಗೆ ಚಿತ್ರಕಲೆ, ಮುದ್ತಣ ಕಲೆ ಮತ್ತು ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ದಿವಾನ್ ಕಾಂತರಾಜ ಅರಸುರವರು ಇವರ ಚಿತ್ರಕಲೆಯನ್ನು ಮೆಚ್ಚಿಕೊಂಡು ಲಂಡನ್ನಿನಿಂದ ಲಿಥೋ ಪ್ರೆಸ್ ಯಂತ್ರವನ್ನು ಆಮದು ಮಾಡಿಕೊಂಡು ಇವರಿಗೆ ಉದಾರವಾಗಿ ನೀಡಿದ್ದರು. ಈ ಮುದ್ತಣಾಲಯದಲ್ಲೇ ಕವಿ ಲಿಂಗಣ್ಣಯ್ಯನವರು ಶಾಲೆಗಳಿಗೆ ಬೇಕಾದ ವಿವಿಧ ರೀತಿಯ ಅಟ್ಲಾಸ್‌ಗಳನ್ನು ಅಂದರೆ, ಪ್ರಪಂಚದ ಅಟ್ಲಾಸ್, ಮೈಸೂರಿನ ಅಟ್ಲಾಸ್, ಭಾರತದ ಮ್ಯಾಪ್, ಭಾರತದ ಪ್ರವಾಸೀ ತಾಣಗಳ ಮ್ಯಾಪ್ ಮುಂತಾದ ಹಲವಾರು ಬಗೆಯ ನಮೂನೆಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದ್ದರು. ಈ ಮುದ್ರಣಾಲಯಕ್ಕೆ ಅನೇಕ ವಿದ್ವಾಂಸರುಗಳು, ದಿವಾನರು, ಹಿರಿಯ ಅಧಿಕಾರಿಗಳು ಮತ್ತು ಮಹಾರಾಜರುಗಳು ಭೇಟಿ ಕೊಟ್ಟಿದ್ದರು. ದಿ. ಎ.ಆರ್.ಕೃಷ್ಣಶಾಸ್ತ್ರಿಗಳು ಇಲ್ಲಿಗೆ ನಿಯಮಿತವಾಗಿ ಬರುತ್ತಿದ್ದರಂತೆ. ದಿವಂಗತ ನಿಟ್ಟೂರು ಶ್ರೀನಿವಾಸರೊಡನೆ ಕೂಡ ಲಿಂಗಣ್ಣಯ್ಯನವರು ನಿಕಟ ಸಂಪರ್ಕ ಹೊಂದಿದ್ದರು.
     ಕವಿ ಲಿಂಗಣ್ಣಯ್ಯನವರ ವಿಶೇಷ ಪ್ತತಿಭೆ ವ್ಯಕ್ತವಾಗುವುದು ಅವರು ರಚಿಸಿದ ವಾಯುಸ್ತುತಿ ಮಾರುತಿ, ಗೀತೋಪದೇಶ, ಲಲಿತಾ-ತ್ರಿಪುರ ಸುಂದರಿ, ವಸುದೇವ ಮತ್ತು ದೇವಕಿಯರನ್ನು ಹರಸುತ್ತಿರುವ ಶ್ರೀ ವಿಷ್ಣು, ಶ್ರೀ ರಾಮಪಟ್ಟಾಭಿಷೇಕ, ವಿಶ್ವರೂಪ ದರ್ಶನ, ನರಸಿಂಹಾವತಾರ, ಚಾಮುಂಡೇಶ್ವರಿ, ಸೂರ್ಯಮುಳುಗದ ಬ್ರಿಟಿಷ್ ಸಾಮ್ರಾಜ್ಯದ ವರ್ಣ ಚಿತ್ರ, ಚಿತ್ರ ರಾಮಾಯಣ, ಚಿತ್ರ ಭಾಗವತ, ಇತ್ಯಾದಿ.  ಮಾರುತಿಯ ಚಿತ್ರಗಳಲ್ಲಿ ವಾಯುಸ್ತುತಿಯನ್ನು ಕನ್ನಡ ಮತ್ತು ದೇವನಾಗರಿ ಲಿಪಿಗಳಲ್ಲಿ ಭೂತಕನ್ನಡಿಯ ಮೂಲಕ ಮಾತ್ರ ಓದಲು ಸಾಧ್ಯವಾದಷ್ಟು ಚಿಕ್ಕದಾಗಿ ರಚಿಸಿದ್ದಾರೆ. (ಮುಖಪುಟ ಗಮನಿಸಿ). ಚಿತ್ರ ಮತ್ತು ಬರವಣಿಗೆ ಅತ್ಯಂತ ಆಕರ್ಷಣೀಯವಾಗಿದ್ದು ಕರ್ನಾಟಕದ ಅನೇಕ ಮನೆಗಳಲ್ಲಿ ಈಗಲೂ ಇದನ್ನು ಸಂರಕ್ಷಿಸಿ, ಪೂಜಿಸುವುದನ್ನು ಗಮನಿಸಬಹುದಾಗಿದೆ. ಆದೇ ರೀತಿ, ಗೀತೋಪದೇಶ ಚಿತ್ರದಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು, ಲಲಿತ-ತ್ರಿಪುರ ಸುಂದರಿ ಚಿತ್ರದಲ್ಲಿ ಲಲಿತ ಸಹಸ್ತನಾಮವನ್ನು, ವಿಷ್ಣುವಿನ ಚಿತ್ರದಲ್ಲಿ ವಿಷ್ಣು ಸಹಸ್ರನಾಮವನ್ನೂ ಸಹ ಚಿಕ್ಕ ಅಕ್ಷರಗಳಲ್ಲಿ ಬರೆಯಲಾಗಿದೆ. ಕವಿ ಲಿಂಗಣ್ಣಯ್ಯವರ ತಾಳ್ಮೆ, ತನ್ಮಯತೆ ಹಾಗೂ ರಚನಾತ್ಮಕ ಮನೋಧರ್ಮಕ್ಕೆ ಈ ಚಿತ್ರಗಳು ಸಾಕ್ಷಿಯಾಗಿವೆ. ಇಡೀ ರಾಮಾಯಣವನ್ನು ೫ ಭಾಗಗಳಲ್ಲಿ (ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ ಮತ್ತು ಯುದ್ಧಕಾಂಡ) ತಾವೇ ಸ್ವತ: ಕಲ್ಪಿಸಿಕೊಂಡು ರಚಿಸಿದ ರಾಮಾಯಣದ ಸನ್ನಿವೇಶಗಳ ಚಿತ್ರಗಳೊಂದಿಗೆ ಸಂಕ್ಷಿಪ್ತ ವಿವರಣೆಗಳನ್ನೂ ನೀಡಿ ರಚಿಸಿರುವುದು ಒಂದು ದೊಡ್ಡ ಸಾಧನೆಯೇ ಸರಿ. ಆಗಿನ ಔಂಧ್ ಪ್ರಾಂತ್ಯದ (ಮಹಾರಾಷ್ಟ್ರದಲ್ಲಿದೆ) ಮಹಾರಾಜರು (ಅವರು ಸ್ವತ: ಚಿತ್ರಕಾರರು) ಇವರ ಚಿತ್ರ-ರಾಮಾಯಣವನ್ನು ಮೆಚ್ಚಿ, ಅವರನ್ನು ರಾಜ್ಯಾತಿಥಿಯನ್ನಾಗಿ ಆಹ್ವಾನಿಸಿ ಸತ್ಕರಿಸಿದ್ದರು. ಅದೇ ರೀತಿ, ಭಾಗವತದ ಚಿತ್ರ-ವಿವರಣೆ ಸಹಿತವಿರುವ ಸುಮಾರು ೬೪ ಚಿತ್ರಗಳೂ ಕೂಡ ಅತ್ಯಂತ ಸುಂದರವಾಗಿವೆ. ಆದರೆ ಈ ಚಿತ್ರ ಪುಸ್ತಕಗಳು ಅತ್ಯಂತ ಜೀರ್ಣವಾಗಿವೆ. ಕವಿ ಲಿಂಗಣ್ಣಯ್ಯನವರ ಮತ್ತೊಂದು ಅನುಪಮ ಕಲಾಕೃತಿಯೆಂದರೆ ಅವರು ರಚಿಸಿದ  ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ವರ್ಣ ಚಿತ್ರ (The Gaurdian Angel of the British Empire) ಇದೊಂದು ಇತಿಹಾಸವನ್ನು ಬಿಂಬಿಸುವ ಅಪೂರ್ವ ಕಲಾಕೃತಿಯಾಗಿದ್ದು ಅಂದು ಬ್ರಿಟಿಷ್ ಸಾಮ್ರಾಜ್ಯದ ವಶದಲ್ಲಿದ್ದ ರಾಷ್ಟ್ರಗಳ ಹೆಸರುಗಳು, ಸಾಗರದ ಮಧ್ಯೆ ವಿರಾಜಮಾನವಾಗಿರುವ , ಬ್ರಿಟನ್ನಿನ ರಾಣಿಯನ್ನು ಒಳಗೊಂಡ ಈ ಚಿತ್ರದ ಬಗ್ಗೆ “.....that your two original works of Art mentioned above exhibit very rare and high class talent, they are master-pieces fit for the Drawing Room of a king, and they should find their way in every hosue-hold throughout the world”   ಎಂದು ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಅಂದಿನ ಸದಸ್ಯರಾಗಿದ್ದ ಇ.ಜೆ.ಲೋಪೆಜ್ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
     ಚಿತ್ರಕಲೆಯೊಡನೆ ಸಾಹಿತ್ಯದಲ್ಲೂ ಸಾಕಷ್ಟು ಕೃಷಿ ಮಾಡಿದ ಕವಿ ಲಿಂಗಣ್ಣಯ್ಯನವರ ಇತರ ಪ್ರಕಟಣೆಗಳೆಂದರೆ, ಚಿತ್ರ ಪಠಗಳನ್ನು ಬರೆಯುವ ಕ್ರಮ, ನೀರಿನ ಬಣ್ಣಗಳಿಂದ ಭೂಚಿತ್ರ ಬರೆಯುವ ಕ್ರಮ, ನೀರಿನ ಬಣ್ಣಗಳಿಂದ ಭಾವ ಚಿತ್ರಗಳನ್ನು ಬರೆಯುವ ಕ್ರಮ, ಎಣ್ಣೆಯ ಬಣ್ಣಗಳನ್ನು ಉಪಯೋಗಿಸುವ ಕ್ರಮ, ತಸ್ಪೀರು ತೆಗೆಯುವ ಕ್ರಮ (ಫೋಟೋಗ್ರಫಿ), ವೀಣಾಭ್ಯಾಸ ಕ್ರಮ (ಬಾಲಪಾಠಗಳು ಇತ್ಯಾದಿ). ದುರದೃಷ್ಟವಶಾತ್, ಇವರು ರಚಿಸಿದ ಅನೇಕ ಪುಸ್ತಕಗಳು ಹಾಗೂ ಚಿತ್ರಗಳು ಬಹಳ ಜೀರ್ಣಾವಸ್ಥೆಯಲ್ಲಿವೆ. ಲಭ್ಯವಿರುವುದನ್ನು ಕೆಳದಿ ಲಿಂಗಣ್ಣಯ್ಯನವರ ಮಕ್ಕಳು ಮತ್ತು ಕೆಳದಿ ಗುಂಡಾಜೊಯಿಸರು ಕೆಳದಿ ಮ್ಯೂಜಿಯಂನಲ್ಲಿ ಸಂರಕ್ಷಿಸಿಟ್ಟಿದ್ಧರ ಫಲ ಸ್ವರೂಪವಾಗಿಯೇ ಈ ಮಾಹಿತಿಗಳನ್ನು ಸಂಗ್ರಹಿಸಲು ಅನುವಾಗಿದೆ. 
     ನಿಜ ಜೀವನದಲ್ಲಿ ಅತ್ಯಂತ ಶಿಸ್ತುಬಧ್ಧ ಕ್ರಮವನ್ನು ಅನುಸರಿಸುತ್ತಿದ್ದ ಕವಿ ಲಿಂಗಣ್ಣಯ್ಯವರು ಹೊರಗಡೆ ಎಂದೂ ಅನ್ನಾಹಾರ ಸೇವಿಸಿದವರಲ್ಲ; ಜೀವನ ಪರ್ಯಂತ ಆಸ್ಪತ್ರೆಯನ್ನು ಕಂಡವರಲ್ಲ. ಸಣ್ಣಪುಟ್ಟ ಖಾಯಿಲೆಗಳಿಗೆ ಸ್ವತ: ಅವರೇ ಚಿಕಿತ್ಸೆ ನೀಡುತ್ತಿದ್ದರಂತೆ. ಸಂಗೀತದಲ್ಲೂ ವಿಶೇಷ ಪರಿಣತಿ ಹೊಂದಿದ್ದ ಇವರ ಬಳಿ ಬಂಗಾಳದ ನಿಖಿಲನಾಥ ಮಿಶ್ರ ಎಂಬುವವರು ವೀಣೆಯನ್ನು ಕಲಿಯುತ್ತಿದ್ದು, ಆ ವೀಣಿ ಈಗಲೂ ಕವಿ ಲಿಂಗಣ್ಣಯ್ಯನವರ ಮೊಮ್ಮಕ್ಕಳ ಬಳಿ ಇದೆ. ಬೆಂಗಳೂರಿನ ಗಾಯನ ಸಮಾಜದ ಆಜೀವ ಸದಸ್ಯರಾಗಿದ್ದ ಲಿಂಗಣ್ಣಯ್ಯನವರು ನಿಯಮಿತವಾಗಿ ಎಲ್ಲಾ ಸಂಗೀತ ಕಛೇರಿಗಳಿಗೂ ಮಕ್ಕಳೊಂದಿಗೆ ಹೋಗುತ್ತಿದ್ದರಂತೆ. ಜ್ಯೋತಿಷ್ಯದಲ್ಲೂ ಸಾಕಷ್ಟು ತಿಳಿದವರಾದ ಇವರು ತಮ್ಮ ಸಾವಿನ ಸಮಯವನ್ನೇ ಮುಂಚೆಯೇ ತಿಳಿಸಿದ್ದರಂತೆ. ಸದಾ ರಾಮನ ಭಕ್ತರಾಗಿದ್ದ ಇವರ ಬಗ್ಗೆ ಬೆಂಗಳೂರಿನಲ್ಲಿರುವ ಇವರ ಕಿರಿಯ ಮಗ ಶ್ರೀ ಎಸ್.ಕೆ.ಕೃಷ್ಣಮೂರ್ತಿಯವರ ಮಾತುಗಳು ಬಹಳ ಅರ್ಥಪೂರ್ಣವಾಗಿವೆ:
     ಪರಮಾತ್ಮನಲ್ಲಿ ಸಂಪೂರ್ಣ ಭಕ್ತಿ ಇದ್ದ ಅವರಿಗೆ ರಾಮಾಯಣ, ಭಗವದ್ಗೀತೆ ಬಹಳ ಇಷ್ಟವಾದ ಗ್ರಂಥಗಳಾಗಿದ್ದವು. ಪ್ರತಿದಿನ ಅವುಗಳ ಪಾರಾಯಣವಿಲ್ಲದೆ ಅವರು ಊಟ ಮಾಡುತ್ತಿರಲಿಲ್ಲ. ಅವರ ಉದ್ದಿಶ್ಯ ತಮ್ಮ ಕೊನೆಕಾಲದಲ್ಲಿ ಭಗವಂತನ ಚಿಂತನೆಯಾಗಿತ್ತು. ಅದಕ್ಕಾಗಿ ಅವರು ನಿತ್ಯವೂ ರಾಮಾಯಣದ ಒಂದು ಶ್ಲೋಕವನ್ನು ಚಿಂತೆ ಮಾಡುತ್ತಾ ಚಿತ್ರೀಕರಿಸುತ್ತಿದ್ದರು. ತತ್ಫಲವೇ ಅವರ ಚಿತ್ರ ರಾಮಾಯಣ. ಅದು ಮುಗಿಯುವುದರೊಳಗೆ ಅಂತ್ಯ ಬರಬಹುದೆಂದು ಎಣಿಸಿದ್ದ ಅವರಿಗೆ ನಿರಾಶೆಯಾಯಿತು. ನಂತರ ಶ್ರೀ ಮದ್ಭಾಗವತವನ್ನು - ಅದರ ದಶಮ ಸ್ಕಂಧವನ್ನು ಷುರು ಮಾಡಿದರು. ಅದು ಅವರ ಜೀವಮಾನದಲ್ಲಿ ಮುಗಿಯಲಿಲ್ಲ. ಆದರೆ ಅವರ ಅಂತ್ಯದ ೩ ದಿನಗಳು ಅವರು ಜ್ಙಾನಹೀನರಾಗಿದ್ದರಿಂದ, ಭಗವಂತನ ಸ್ಮರಣೆ ಅಂತ್ಯದಲ್ಲಿ ಆಯಿತೋ ಇಲ್ಲವೋ ಗೊತ್ತಿಲ್ಲ. ಬಹಿರಂಗವಾಗಿ ಇಲ್ಲದಿದ್ದರೂ ಅಂತರಂಗದಲ್ಲಿ ಆಗಿರಲೂ ಸಾಧ್ಯ.
     ಕೆಳದಿ ಕವಿ ಮನೆತನದ ಹೆಸರನ್ನು ಎತ್ತಿ ಹಿಡಿಯುವಲ್ಲಿ ಇವರ ಪಾತ್ರ ಹಿರಿದಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಇವರ ನಂತರದವರೂ ಪರಂಪರೆಯನ್ನು ಎತ್ತಿ ಹಿಡಿಯುವ ಕಾರ್ಯ ಮುಂದುವರೆಸಿರುವುದು ಸಮಾಧಾನ ತರುವ ಸಂಗತಿ.

********************************

     ಹೇಗೆ ಜೇಡರಹುಳು ನೂಲುಗಳನ್ನು ತನ್ನಿಂದಲೇ ಹೊರಕ್ಕೆ ತಂದು ಪುನಃ ಒಳಕ್ಕೆ ತೆಗೆದುಕೊಳ್ಳುತ್ತದೆಯೋ, ಹೇಗೆ ಭೂಮಿಯಲ್ಲಿ ಸಸ್ಯಗಳು ಹುಟ್ಟುತ್ತವೆಯೋ, ಹೇಗೆ ಜೀವಂತನಾದ ಮನುಷ್ಯನಿಂದ ಕೇಶಲೋಮಗಳು ಬೆಳೆಯುತ್ತವೆಯೋ ಹಾಗೆಯೇ ಅಕ್ಷರದಿಂದ (ಬ್ರಹ್ಮದಿಂದ) ಿಲ್ಲಿ ಸಮಸ್ತ ಜಗತ್ತು ಉಂಟಾಗುತ್ತದೆ.
-ಮುಂಡಕೋಪನಿಷತ್.
*********************

 ಶ್ರದ್ಧಾಂಜಲಿ

     ಬೆಂಗಳೂರಿನ ದಿ. ಶ್ರೀ ಎಸ್.ಕೆ. ನಾರಾಯಣ ರಾಯರ ಮಗ ಅಡ್ವೋಕೇಟ್ ಆಗಿದ್ದ ಶ್ರೀ ಬಿ.ಎನ್. ಲಕ್ಷ್ಮಣರಾಯರು ದಿನಾಂಕ ೦೫-೦೧-೨೦೧೧ರಂದು ನಿಧನರಾಗಿದ್ದು ಕವಿಕಿರಣ ಬಳಗ ದಿವಂಗತರ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.

     ಶ್ರೀಮತಿ ಅನ್ನಪೂರ್ಣ ಶ್ರೀಧರರ ತಂದೆಯವರಾದ ನಿವೃತ್ತ ಉಪಾಧ್ಯಾಯರು, ಶಾಂತ, ಸರಳ, ಸಜ್ಜನ  ಶ್ರೀ ರಾಮರಾಯರು ಬೆಂಗಳೂರಿನಲ್ಲಿ ದಿನಾಂಕ ೦೧-೦೨-೨೦೧೧ರಂದು ವಿಧಿವಶರಾಗಿದ್ದು ಅವರ ಅಪಾರ ಬಂಧು-ಬಳಗ ಮತ್ತು ಕುಟುಂಬ ವರ್ಗದವರ ದುಃಖದಲ್ಲಿ ಕವಿಕಿರಣ ಬಳಗ ಸಹಭಾಗಿಯಾಗಿದೆ.     

     ದಿನಾಂಕ ೧೭-೦೪-೨೦೧೧ರಂದು ಬೀರೂರಿನ ಶ್ರೀಮತಿ ವಿಮಲಮ್ಮ ಶೇಷಗಿರಿರಾವ್‌ರವರು ಕೀರ್ತಿಶೇಷರಾದರೆಂದು ತಿಳಿಸಲು ವಿಷಾದಿಸಿದೆ. ಶ್ರೀಮತಿ ರೇಣುಕಾ ಕವಿಸುರೇಶರ ತಾಯಿಯಾದ ಇವರು ಪತಿ, ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದು ಕವಿಕಿರಣ ಬಳಗ ದುಃಖಭಾಗಿಯಾಗಿದೆ. 
     ಮೂರು ಕುಟುಂಬಗಳವರಿಗೂ ದುಃಖ ಸಹಿಸುವ ಶಕ್ತಿಗಾಗಿ ಪ್ರಾರ್ಥಿಸಲಾಗಿದೆ.
*********************

ಅಂತರ್ಜಾಲದಲ್ಲಿ ಕೆಳದಿ ಕವಿಮನೆತನ
      ಸಹೃದಯರು ಕೆಳಕಂಡ ಅಂತರ್ಜಾಲ ತಾಣಗಳಿಗೆ ಭೇಟಿ ನೀಡಿ ಪ್ರತಿಕ್ರಿಯಿಸಲು ಕೋರಿದೆ:
   ಕವಿಕುಟುಂಬಗಳವರು ಮತ್ತು ಬಂಧುಗಳು ಹೊಂದಿರುವ ವೈಯಕ್ತಿಕ ಅಂತರ್ಜಾಲ ತಾಣಗಳ ವಿವರ ಒದಗಿಸಿದಲ್ಲಿ ಪತ್ರಿಕೆಯಲ್ಲಿ ಪ್ರಕಟಪಡಿಸಲಾಗುವುದು.
*******
     ಅಜ್ಞಾನವೆಂಬ ಅಂಧಕಾರಕ್ಕಿಂತ ಆಚೆಗಿರುವ ಪ್ರಕಾಶ ಸ್ವರೂಪನಾದ, ಮಹಾನ್ ಆದ ಈ ಪುರುಷನನ್ನು ನಾನು ಅರಿತಿರುತ್ತೇನೆ. ಅವನನ್ನು ಅರಿತುಕೊಂಡ ಮನುಷ್ಯನು ಮೃತ್ಯವನ್ನು ದಾಟುತ್ತಾನೆ. ಪರಮಪದ ಪ್ರಾಪ್ತಿಗೆ ಇದಕ್ಕಿಂತ ಬೇರೆ ದಾರಿಯಿಲ್ಲ.
-ಶ್ವೇತಾಶ್ವತರೋಪನಿಷತ್.
***********************

ಆಯುರ್ಧಾರಾ
ಆಯುರ್ವೇದದ  ಪರಿಚಯಾತ್ಮಕ ಲೇಖನ ಮಾಲಿಕೆ - ೧                                            
 -ಡಾ|| ಬಿ.ಎಸ್.ಆರ್.ದೀಪಕ್, ಬಿ.ಎ.ಎಮ್.ಎಸ್.,    ಶಿವಮೊಗ್ಗ                                  


         ಆಯುರ್ವೇದವು  ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ವೈದ್ಯ ವಿಜ್ಞಾನ. ಇದು ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತವಾಗಿದೆ.
          ಆಯುರ್ವೇದ ಪದವು ಆಯುಃ ಮತ್ತು ವೇದ ಎಂಬ ಎರಡು ಪದಗಳ ಜೋಡಣೆಯಿಂದ ಉಂಟಾಗಿದೆ. ಮೊದಲು ಈ ಎರಡು ಪದಗಳ ಅರ್ಥಗಳನ್ನು ಗಮನಿಸೋಣ.
ಆಯುಃ- ಚರಕ ಸಂಹಿತೆಯಲ್ಲಿ ಆಯುಃ ಪದದ ವ್ಯಾಖ್ಯಾನ ಇಂತಿದೆ :
 ಶರೀರೇಂದ್ರಿಯ ಸತ್ವಾತ್ಮ ಸಂಯೋಗೋ ಧಾರಿ ಜೀವಿತಂ |
 ನಿತ್ಯಗಶ್ಚಾನುಬಂಧಶ್ಚ ಪರ್ಯಾಯೈಃ ಆಯುರುಚ್ಯತೆ ||         
ಚ.ಸಂ.ಸೂ. ೧/೪೨
          ಶರೀರ, ಇಂದ್ರಿಯಗಳು, ಸತ್ವ(ಮನಸ್ಸು) ಹಾಗೂ ಆತ್ಮ, ಇವುಗಳ ಸಂಯೋಗವನ್ನು ಆಯು ಎಂದು ಕರೆಯುತ್ತಾರೆ. ಆಯು ಪದವು ಧಾರಿ, ಜೀವಿತ, ನಿತ್ಯಗ, ಅನುಬಂಧ ಎಂಬ ಪರ್ಯಾಯಗಳನ್ನೂ ಹೊಂದಿದೆ. ಮೇಲಿನ ನಾಲ್ಕೂ ಅಂಶಗಳು ಸಂಯುಕ್ತವಾಗಿರುವವರೆಗೂ ಮಾತ್ರ ಜೀವಿತಾವಧಿಯು. ವೇದ- ವೇದ ಎಂದರೆ ಜ್ಞಾನ ಎಂದರ್ಥ. ಮೇಲೆ ವಿವರಿಸಿರುವ ಆಯು ಅಥವಾ ಜೀವಿತದ ಬಗೆಗಿನ ಜ್ಞಾನವೇ ಆಯುರ್ವೇದ. ಆಯುರ್ವೇದದ ಪರಿಭಾಷೆಯನ್ನು ಚರಕ ಸಂಹಿತೆಯಲ್ಲಿ ಹೀಗೆ ವಿವರಿಸಲಾಗಿದೆ:
ಹಿತಾಹಿತಂ ಸುಖಂ ದುಃಖಮಾಯುಸ್ತಸ್ಯ ಹಿತಾಹಿತಂ|
ಮಾನಂ ಚ ತಚ್ಚ ಯತ್ರೋಕ್ತಂ ಆಯುರ್ವೇದಃ ಸ ಉಚ್ಯತೆ||
ಚ.ಸಂ.ಸೂ. ೧/೪೧
         ಹಿತಾಯು, ಅಹಿತಾಯು, ಸುಖಾಯು, ದುಃಖಾಯು ಎಂಬ ನಾಲ್ಕು ವಿಧದ ಆಯುಗಳ ಬಗ್ಗೆ, ಅವುಗಳ ಹಿತಾಹಿತಗಳ ಬಗ್ಗೆ ಹಾಗೂ ಆಯುವಿನ ಪ್ರಮಾಣದ ಬಗ್ಗೆಯೂ ಎಲ್ಲಿ ವರ್ಣಿಸಲಾಗಿದೆಯೋ, ಆ ಶಾಸ್ತ್ರಕ್ಕೆ ಆಯುರ್ವೇದ ಎಂದು ಹೆಸರು. ಆಯುರ್ವೇದದ ಚಿಕಿತ್ಸಾಕ್ರಮವನ್ನು ೮ ಅಂಗಗಳಾಗಿ ವಿಂಗಡಿಸಲಾಗಿದೆ. ಅವು ಯಾವುವೆಂದರೆ :
೧. ಕಾಯ ಚಿಕಿತ್ಸಾ.
೨. ಬಾಲ ಚಿಕಿತ್ಸಾ / ಕೌಮಾರ ಭೃತ್ಯ.
೩. ಗ್ರಹ ಚಿಕಿತ್ಸಾ.
೪. ಊರ್ಧ್ವಾಂಗ ಚಿಕಿತ್ಸಾ / ಶಾಲಾಕ್ಯ ತಂತ.
೫. ಶಲ್ಯ ತಂತ್ರ.
೬. ದಂಷ್ಟ್ರಾ ಚಿಕಿತ್ಸಾ / ವಿಷ ಚಿಕಿತ್ಸಾ.
೭. ಜರಾ ಚಿಕಿತ್ಸಾ / ರಸಾಯನ ಚಿಕಿತ್ಸಾ.
೮. ವಾಜೀಕರಣ ಚಿಕಿತ್ಸಾ.
                                                .................ಮುಂದುವರೆಯುವುದು.
************************************************


ನಮ್ಮಮ್ಮ ಸುಬ್ಬಲಕ್ಷ್ಮಮ್ಮ
-ಬಿ.ಎಸ್.ಲಲಿತಾ

     ನಮ್ಮಮ್ಮ ಸುಬ್ಬಲಕ್ಷ್ಮಮ್ಮ ಓರಗೆಯವರಿಗೆ ನಮ್ಮ ಸುಬ್ಬಮ್ಮ, ನಮ್ಮ ಸುಬ್ಬಿ, ನಮ್ಮ ಅಕ್ಕ ಆಗಿದ್ದರೆ ಮಕ್ಕಳು, ಮೊಮ್ಮಕ್ಕಳಿಗೆ ಅಚ್ಚುಮೆಚ್ಚಿನ ಅಜ್ಜಿ, ಮುತ್ತಜ್ಜಿ ಆಗಿದ್ದಾರೆ. ೧೯-೦೮-೧೯೨೫ ರಲ್ಲಿ ಜನಿಸಿದ ಇವರು ಇವರ ತಂದೆ ಶ್ರೀ ಸಾ.ಕ. ಲಿಂಗಣ್ಣಯ್ಯನವರ 11 ಮಕ್ಕಳಲ್ಲಿ ಆರನೆಯವರು. ಒಬ್ಬ ಅಣ್ಣ (ಶ್ರೀ ಸಾ.ಕ. ನಾರಾಯಣರಾವ್), ನಾಲ್ವರು ಅಕ್ಕಂದಿರು (ಶ್ರೀಮತಿಯರಾದ ಮುತ್ತಮ್ಮ ಶ್ರೀನಿವಾಸರಾವ್, ಮೂಕಮ್ಮ ನಂಜುಂಡಜೋಯಿಸ್, ಜಾನಕಮ್ಮ ಶ್ರೀನಿವಾಸರಾವ್ ಮತ್ತು ಸರಸ್ವತಮ್ಮ ಗುಂಡೂರಾವ್) ಮತ್ತು ಒಬ್ಬಳು ತಂಗಿ (ಶ್ರೀಮತಿ ರತ್ನಮ್ಮ ಬ.ನ.ಸುಂದರರಾವ್) ವಿಧಿವಶರಾಗಿದ್ದು, ಪ್ರಸ್ತುತ ೮೬ ವರ್ಷಗಳಾಗಿರುವ ನಮ್ಮ ತಾಯಿಯವರೇ ಹಿರಿಯರು. ಇಬ್ಬರು ತಮ್ಮಂದಿರು ಮತ್ತು ಇಬ್ಬರು ತಂಗಿಯರಿಗೆ ಮಾತೃಸಮಾನರಾಗಿದ್ದಾರೆ. ಶರೀರಕ್ಕೆ ಮಾತ್ರ ವಯಸ್ಸಾಗಿದ್ದರೂ ಉತ್ಸಾಹದ ಚಿಲುಮೆಯಾಗಿರುವ ಇವರಿಗೆ ಸೋಮಾರಿತನವೆಂದರೆ ಏನೆಂದೇ ಗೊತ್ತಿಲ್ಲ.
- - - - - - - - - - - - - - - - - - - - - - - - - - - - - - - - - - - - - - - - - -
     ಲೇಖಕಿಯಾದ ಶ್ರೀಮತಿ ಬಿ.ಎಸ್. ಲಲಿತಾ, ಬಿ.ಎ. ಬಿ.ಎಡ್.ರವರು ಶ್ರೀಮತಿ ಸುಬ್ಬಲಕ್ಷ್ಮಮ್ಮನವರ ಮಗಳು.  ಕಳೆದ ೪೦ ವರ್ಷಗಳಿಂದ ಉಪಾಧ್ಯಾಯಿನಿಯಾಗಿ ಕಾರ್ಯ ಮಾಡುತ್ತಿದ್ದು ಪ್ರಸ್ತುತ ಪೇಜಾವರ ಮಠದ ಪೂರ್ಣ ಪ್ರಜ್ಞಾ  ವಿದ್ಯಾನಿಕೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.                          -ಸಂ.
- - - - - - - - -- - - - - - - - - - - - - - - - - - - - - - - - - - - - - - - - - -
     ಮೊದಲಿನಿಂದ ಹೊಲಿಗೆ ಕೆಲಸದಲ್ಲಿ ಆಸಕ್ತಿ ಇರುವ ಇವರು ಟೈಲರಿಂಗ್ ಕಲಿತು ಟೈಲರಿಂಗ್ ಟೀಚರ್ ಆಗಿದ್ದರು. ಬಟ್ಟೆ ಹೊಲೆದು ಹಣ ಸಂಪಾದಿಸಿ ಮಕ್ಕಳ ಓದಿನ ಖರ್ಚಿಗೆ ನೆರವಾಗಿದ್ದಲ್ಲದೆ ನಮ್ಮ ತಂದೆಗೆ ಸಂಸಾರ ನಿರ್ವಹಣೆಯಲ್ಲಿ ಹೆಗಲು ಕೊಟ್ಟವರು. ಈಗಲೂ ಅವರಿಗೆ ಬಟ್ಟೆ ಹೊಲೆಯುವುದು, ಎಂಬ್ರಾಯಿಡರಿ ಮಾಡುವುದು ಎಂದರೆ ಬಹಳ ಇಷ್ಟ. ನಮ್ಮ ಅಜ್ಜ ತಯಾರಿಸಿದ ಭೂಪಟಗಳನ್ನು ಆಧರಿಸಿ ಕಸೂತಿಯಲ್ಲಿ ಮೈಸೂರು ಭೂಪಟವನ್ನು ಹೊಲೆದು (ಡೆಮಿ ಸೈಜಿನಲ್ಲಿ) ಅದರಲ್ಲಿ ಮುಖ್ಯವಾದ ನಗರಗಳನ್ನು, ಊರು, ನದಿಗಳ ಹೆಸರುಗಳನ್ನೂ ಕಸೂತಿಯಲ್ಲೇ ಹೊಲೆದು ಮೈಸೂರಿನ ಎಗ್ಜಿಬಿಷನ್ನಿನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದನ್ನು ನಮ್ಮ ಸೋದರಮಾವ ಕೃಷ್ಣಮೂರ್ತಿಯವರು ಜ್ಞಾಪಿಸಿಕೊಳ್ಳುತ್ತಿರುತ್ತಾರೆ. 
     ೧೨ನೆಯ ವರ್ಷಕ್ಕೆ ಆಗಿನ ಲೋಯರ್ ಸೆಕೆಂಡರಿ ಪರೀಕ್ಷೆ ತೇರ್ಗಡೆಯಾದ ಇವರಿಗೆ ಮುಂದೆ ಓದಲು ಆಸೆಯಿದ್ದರೂ, ಆಗ ಕೋಟೆಯಲ್ಲಿರುವ ವಾಣಿವಿಲಾಸ ಹೈಸ್ಕೂಲು ಒಂದೇ ಹೆಣ್ಣು ಮಕ್ಕಳ ಶಾಲೆಯಾಗಿದ್ದು, ವಿಶ್ವೇಶ್ವರಪುರದ ಮನೆಯಿಂದ ಕೋಟೆಗೆ ಹೋಗುವ ದಾರಿಯಲ್ಲಿ ಮುಸಲ್ಮಾನರ ಮನೆಗಳೇ ಹೆಚ್ಚಾಗಿದ್ದರಿಂದ ಒಬ್ಬಳನ್ನೇ ಕಳಿಸಲು ತಂದೆ, ತಾಯಿ, ಅಜ್ಜಿ ಯಾರೂ ಒಪ್ಪದಿದ್ದರಿಂದ ವಿದ್ಯಾಭ್ಯಾಸ ಮೊಟಕುಗೊಂಡಿತು. ತಂದೆಯಿಂದ ಸಂಸ್ಕೃತ ಕಲಿತ ಇವರು ತಂದೆಯವರು ಬರೆದ ಬರಹಗಳನ್ನು ದುಂಡಾಗಿ ಬರೆದುಕೊಡುತ್ತಿದ್ದರು. ಇವರ ಓದುವ ಆಸೆ ಎಷ್ಟಿತ್ತೆಂದರೆ ಅಜ್ಜಿಯ ಪಟ್ಟ ದೊರೆತ ಮೇಲೆ ಅವರ ೪೫ನೆಯ ವಯಸ್ಸಿನಲ್ಲಿ ಭಾರತೀಯ ವಿದ್ಯಾಭವನದಲ್ಲಿ ಇಂಗ್ಲಿಷ್ ತರಗತಿಗೆ ಸೇರಿ ಇಂಗ್ಲಿಷ್ ಕಲಿತು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ವಿಶೇಷ. ರಾಮನಗರದಲ್ಲಿದ್ದಾಗ ಪತಿಯ ಸ್ನೇಹಿತರೊಬ್ಬರು ತಂದುಕೊಟ್ಟಿದ್ದ ಹಿಂದಿ ಸ್ವಬೋಧಿನಿ ಸಹಾಯದಿಂದ ಹಿಂದಿ ಕಲಿತರು. ಪತಿ ಸುಬ್ಬರಾಯರ ಅಜ್ಜ ವೀಣೆ ಗೋಪಾಲರಾಯರಿಂದ ವೀಣೆ ನುಡಿಸಲು ಕಲಿತರು. 
     ಸುಬ್ಬಲಕ್ಷ್ಮಮ್ಮನವರ ಪತಿ (ನಮ್ಮ ತಂದೆ) ಪ್ರಸಿದ್ಧ ಆಸ್ಥಾನ ವಿದ್ವಾನ್ ವೀಣೆ ಗೋಪಾಲರಾಯರ ಮೊಮ್ಮಗ ಕೆ. ಸುಬ್ಬರಾಯರು. ಕಂದಾಯ ಇಲಾಖೆ ನೌಕರರಾಗಿದ್ದು ಕಡೆಯಲ್ಲಿ ಶಿರಸ್ತೇದಾರರಾಗಿ ನಿವೃತ್ತಿಯಾಗಿದ್ದ ದಿ. ಸುಬ್ಬರಾಯರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ. ಹಾಸ್ಯ ಪ್ರಿಯರು. ಕಾರ್ಯನಿಮಿತ್ತ ಹೊನ್ನಾಳಿ, ರಾಮನಗರ, ಕನಕಪುರಗಳಲ್ಲಿ ಇದ್ದು ನಂತರ ಬೆಂಗಳೂರಿನಲ್ಲಿ ನೆಲೆಸಿದರು. ೧೨ನೆಯ ವರ್ಷಕ್ಕೇ ಅವರೊಂದಿಗೆ ವಿವಾಹವಾಗಿ ೧೬ನೆಯ ವಯಸ್ಸಿನಿಂದಲೇ ಸಂಸಾರ ನಿರ್ವಹಣೆಗೆ ಹೆಗಲು ಕೊಟ್ಟವರು ನಮ್ಮಮ್ಮ. 
     ನಮ್ಮ ತಂದೆ-ತಾಯಿಯರ ಆಶೀರ್ವಾದದ ಫಲವಾಗಿ ನಾವು ನಾಲ್ವರು ಅಕ್ಕ-ತಂಗಿಯರು ಮತ್ತು ಒಬ್ಬ ಸೋದರ ಇಂದು ಒಳ್ಳೆಯ ಸ್ಥಿತಿಯಲ್ಲಿದ್ದೇವೆ. ಮೊದಲ ಮಗಳು ಶ್ರೀಮತಿ ವಿಜಯಲಕ್ಷ್ಮಿ ಸುಬ್ಬರಾಮು. ಇವರ ಪತಿ ಸುಬ್ಬರಾಮುರವರು ವಿಧಿವಶರಾಗಿದ್ದು ಇವರಿಗೆ ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳಿದ್ದು ಎಲ್ಲರೂ ಸಂಸಾರಸ್ಥರಾಗಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ.  ಮಗ ಶ್ರಿ ನರಸಿಂಹಮೂರ್ತಿ ಹೆಚ್.ಎ.ಎಲ್.ನಲ್ಲಿ ಇಂಜನಿಯರ್ ಆಗಿದ್ದು ನಿವೃತ್ತಿ ಹೊಂದಿದ್ದಾರೆ. ಸಂಗೀತದಲ್ಲಿ ಆಸಕ್ತಿ ಹೊಂದಿರುವ ಇವರಿಗೆ ಹಿಂದೂಸ್ಥಾನಿ ಸಂಗೀತ ಅಚ್ಚುಮೆಚ್ಚು. ದೈವಭಕ್ತರಾದ ಇವರು ಸಿತಾರ್ ಮತ್ತು ವೀಣಾ ವಾದಕರೂ ಆಗಿದ್ದಾರೆ. ಇವರ ಪತ್ನಿ ಶ್ರೀಮತಿ ಶಾಂತಾ ಆಕ್ಸ್‌ಫರ್ಡ್ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿದ್ದು ನಿವೃತ್ತರಾದವರು.  ಮೂರನೆಯ ಶ್ರೀಮತಿ ಲಲಿತಾ (ಲೇಖಕಿ) ಬಿ.ಎ.,ಬಿ.ಎಡ್. ಓದಿ ೪೦ ವರ್ಷಗಳಿಂದ ಸ್ಟೆಲ್ಲಾ ಮಾರಿಸ್ ಕಾನ್ವೆಂಟ್, ಕಾರ್ಮೆಲ್ ಕಾನ್ವೆಂಟ್, ಅಪೋಲೋ ಕಾನ್ವೆಂಟ್ ಶಾಲೆಗಳಲ್ಲಿ ಉಪಾಧ್ಯಾಯಿನಿಯಾಗಿ ಕೆಲಸ ಮಾಡಿ ಪ್ರಸ್ತುತ ಪೂರ್ಣಪ್ರಜ್ಞಾ ವಿದ್ಯಾನಿಕೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತಿ ಶ್ರೀ ಬಿ.ಎನ್. ಸೂರ್ಯಪ್ರಕಾಶರವರು ಬಿಲ್ಡಿಂಗ್ ಮತ್ತು ಪೈಂಟಿಂಗ್ ಕಂಟ್ರಾಕ್ಟರ್ ಆಗಿದ್ದಾರೆ. ಹಿರಿಯ ಮಗ ನರೇಶ ಕರ್ಮನಿಯಲ್ಲಿ ಎಂ.ಎಸ್. ಮಾಡುತ್ತಿದ್ದು, ಕಿರಿಯ ಮಗ ಮಂಜುನಾಥ ಜರ್ನಲಿಸಮ್‌ನಲ್ಲಿ ಡಿಪ್ಲೋಮಾ ಮಾಡಿ ನೋಯಡಾದಲ್ಲಿ ಪ್ರೆಸ್ ರಿಪೋರ್ಟರ್ ಆಗಿದ್ದಾನೆ. ನಾಲ್ಕನೆಯ ಶ್ರೀಮತಿ ಭಾರತಿ ಶ್ರೀನಿವಾಸನ್ ಕೆನರಾ ಬ್ಯಾಂಕ್ ಉದ್ಯೋಗಿ. ಇವರ ಪತಿ ಶ್ರೀ ಬಿ.ಎ. ಶ್ರೀನಿವಾಸನ್ ವಿಜಯಾ ಬ್ಯಾಂಕ್ ಉದ್ಯೋಗಿ.  ಇವರ ಮಗ ವಿಜಯಕೌಶಿಕ್ ಇನ್ಪೋಸಿಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಕೊನೆಯ ಮಗಳು ಶ್ರೀಮತಿ ನಾಗವೇಣಿ ಎಂ.ಕಾಂ. ಪದವೀಧರೆಯಾಗಿದ್ದು ಐ.ಐ.ಪಿ.ಎಂ.ನಲ್ಲಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಹೊಂದಿದ್ದಾರೆ. ಇವರು ಚಿತ್ರಕಲಾವಿದರೂ ಆಗಿದ್ದು ಇವರು ಬರೆದ ಕೆಲವು ಚಿತ್ರಗಳು ಕೆಳದಿ ಮ್ಯೂಸಿಯಂ ನಲ್ಲೂ ಇವೆ. ಇವರು ಬಿಡಿಸಿದ ಇವರ ತಾತ ದಿ. ಎಸ್.ಕೆ. ಲಿಂಗಣ್ಣಯ್ಯನವರ ವರ್ಣಚಿತ್ರದ ಪ್ರತಿಯನ್ನು ಇದೇ ಸಂಚಿಕೆಯಲ್ಲಿರುವ ಲಿಂಗಣ್ಣಯ್ಯನವರ ಪರಿಚಯ ಲೇಖನದಲ್ಲಿ ಪ್ರಕಟಿಸಿದೆ. ಆಧ್ಯಾತ್ಮಿಕ ವಿಷಯಗಳಿಗೆ ಆಸಕ್ತಿ ಮತ್ತು ಮಹತ್ವ ನೀಡಿದವರು. 
     ತಂದೆ, ತಾಯಿ, ಅಜ್ಜಿ, ಅಕ್ಕಂದಿರು, ಅಣ್ಣನ ಬಗ್ಗೆ ಪೂಜ್ಯ ಭಾವನೆ ಹೊಂದಿರುವ ನಮ್ಮ ತಾಯಿ ತಮ್ಮ ಅಜ್ಜಿಯಂತೆ ಬೆಳಿಗ್ಗೆ ಶ್ಲೋಕಗಳು, ಸಹಸ್ರನಾಮ ಹೇಳಲು ಶುರು ಮಾಡಿದರೆ ರಾತ್ರಿಯವರೆಗೂ ಮುಗಿಯುವುದಿಲ್ಲ. ಅದ್ಭುತ ಸ್ಮರಣಶಕ್ತಿ ಇರುವ ಇವರಿಗೆ ಹೆಚ್ಚಿನ ಎಲ್ಲವೂ ಬಾಯಿಪಾಠವಾಗಿದೆ. ವಿದುಷಿ ಶ್ರೀಮತಿ ಸಾವಿತ್ರಿ ರಂಗನಾಥನ್ ರವರು ನಡೆಸುತ್ತಿದ್ದ ತರಗತಿಗಳಲ್ಲಿ ೧೫ ವರ್ಷ ಭಾಗವಹಿಸಿ ನಾರಾಯಣೀಯಮ್ ಮತ್ತು ಶ್ರೀ ಶಂಕರಾಚಾರ್ಯರ ಅನೇಕ ಕೃತಿಗಳು, ದೇವರನಾಮಗಳನ್ನು ಕಂಠಗತ ಮಾಡಿಕೊಂಡಿದ್ದಾರೆ. ಮಲ್ಲೇಶ್ವರದ ಲಲಿತಾ ಸೇವಾಸಂಘದ ಸದಸ್ಯರಾಗಿದ್ದಾರೆ. ಮನೆಯಲ್ಲಿ ನಡೆದುಬಂದ ಪೂಜೆ, ವ್ರತಗಳನ್ನು ತಪ್ಪದೇ ನಡೆಸಬೇಕೆಂಬುದು ಇವರ ಆಸೆ. ಮೈದುನಂದಿರು, ನಾದಿನಿಯರು ಮತ್ತು ಬಳಗದ ಎಲ್ಲರಲ್ಲೂ ವಿಶ್ವಾಸದ ನಡವಳಿಕೆಯಿಂದಿದ್ದು ಎಲ್ಲರಿಂದಲೂ ಒಳ್ಳೆಯ ಹೆಸರು ಪಡೆದಿದ್ದಾರೆ. ರುಚಿ ರುಚಿಯಾಗಿ ಅಡಿಗೆ ಮಾಡುತ್ತಿದ್ದ ಅವರು ಎಲ್ಲರ ಮೆಚ್ಚುಗೆ ಗಳಿಸಿದ್ದರು. ಪ್ರತಿ ಕೆಲಸದಲೂ ಅಚ್ಚುಕಟ್ಟುತನ ಅವರ ವೈಶಿಷ್ಟ್ಯ. 
     ತಮ್ಮ ತಂದೆಯ ಬಳುವಳಿಯಾಗಿ ಕಲಿತ ದೇವರನಾಮ, ಕೀರ್ತನೆಗಳನ್ನು ತಮ್ಮ ಕೃಷ್ಣಮೂರ್ತಿಯೊಂದಿಗೆ ೮ನೆಯ ವರ್ಷದಿಂದಲೇ ಹಾಡುತ್ತಿದ್ದುದನ್ನು ನೆನಪಿಸಿಕೊಂಡು ಈಗಲೂ ಹಾಡುತ್ತಾರೆ. ಶ್ರೀಮಾತೆ ಶಾರದಾದೇವಿ, ಶ್ರೀ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಗಳ ಅಧ್ಯಯನ ಮಾಡಿ ಮಂತ್ರದೀಕ್ಷೆ ಪಡೆದು ಮಂತ್ರ ಜಪ ಮಾಡುತ್ತಿದ್ದಾರೆ. ಜೊತೆಗೆ ಸದಾ ರಾಮನಾಮ, ಶಿವನಾಮಗಳನ್ನು ಬರೆಯುತ್ತಿರುತ್ತಾರೆ. ಆಕಾಶವಾಣಿಯ ಮಹಿಳಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕೆಲವು ಲೇಖನಗಳನ್ನೂ ಬರೆದಿದ್ದಾರೆ.
     ಅವರ ಮನಸ್ಥೈರ್ಯ ಮತ್ತು ಸಹನೆ ನಮಗೆಲ್ಲಾ ದಾರಿದೀಪವಾಗಿದೆ. ಯಾವುದೇ ಕಷ್ಟ ಬಂದರೂ ಹೆದರದೆ ಅಸಾಧ್ಯ ಎನ್ನುವುದನ್ನು ತಾಳ್ಮೆಯಿಂದ ಸಾಧಿಸಬಹುದು ಎಂಬುದು ಅವರು ಕಲಿಸಿದ ಪಾಠ. ಈ ಮಮತೆಯ ಸಾಕಾರ, ಸಹನಾಮೂರ್ತಿಯ ಆಶೀರ್ವಾದ ಸದಾ ಸಿಗುತ್ತಿರಲಿ ಎಂಬುದು ನಮ್ಮ ಆಶಯ.  
*******
     ಪ್ರಾಕೃತ ಬುದ್ಧಿಯುಳ್ಳ ಹೀನ ಮನುಷ್ಯನಿಂದ ಹೇಳಲ್ಪಟ್ಟರೆ ಈ ಆತ್ಮನನ್ನು ಚೆನ್ನಾಗಿ ಅರಿತುಕೊಳ್ಳಲು ಆಗುವುದಿಲ್ಲ. ಏಕೆಂದರೆ ಅನೇಕರು ಅನೇಕ ಪ್ರಕಾರವಾಗಿ ಇವನನ್ನು ಭಾವಿಸುತ್ತಾರೆ. ಅನನ್ಯವಾದ (ಆತ್ಮಹಾನಿಯಾದ) ಅಚಾರ್ಯನಿಂದ ಹೇಳಲ್ಪಟ್ಟರೆ ಆತ್ಮ ವಿಷಯದಲ್ಲಿ ಸಂದೇಹವಿರುವುದಿಲ್ಲ. ಏಕೆಂದರೆ ಆತ್ಮನು ಅಣುವಿಗಿಂತ ಸೂಕ್ಷ್ಮವಾಗಿರುವನು. ತರ್ಕದಿಂದ  ತಿಳಿಯಲಾಗದವನು.
     ಅವಿದ್ಯೆಯ ಮಧ್ಯದಲ್ಲಿ ಇರುವವರಾಗಿ, ತಾವೇ ಧೀರರು ಪಂಡಿತರು ಎಂದು ತಿಳಿದುಕೊಂಡು, ವಕ್ರಗತಿಯಲ್ಲಿ ನಡೆಯುತ್ತಾ, ಕುರುಡನು (ಮಾರ್ಗದರ್ಶನ ಮಾಡಲು) ಕರೆದುಕೊಂಡು ಹೋಗುತ್ತಿರುವ ಕುರುಡರು ಅನರ್ಥವನ್ನು ಹೊಂದುವಂತೆ ಮೂಢರು ಸುತ್ತುತ್ತಿರುವರು.
-ಕಠೋಪನಿಷತ್.
************************
ದಶಾವತಾರ ಗೋವಿಂದ
ರಾಗ: ತೋಡಿ

ತಮನ ಸಂಹರಿಸಿ ವೇದವ ತಂದೆ ಗೋವಿಂದ || (ಮತ್ಸ್ಯ)
ಅಮರರಿಗಮೃತ ಪಾನವನಿತ್ತೆ ಗೋವಿಂದ ||     (ಕೂರ್ಮ)
ಧರಣಿಯ ತಂದ ವರಾಹ ರೂಪ ಗೋವಿಂದ ||  (ವರಾಹ)
ಭ್ರಮಿಸಿ ಕಂಬದೊಳು ಉದ್ಭವಿಸಿದೆ ಗೋವಿಂದ || (ನರಸಿಂಹ)
ಕ್ಷಮೆಯನಾಳಿದ ಬ್ರಹ್ಮಚಾರಿಯೆ ಗೋವಿಂದ ||    (ವಾಮನ)
ಸಮರದೊಳು ಅಖಿಳ ರಾಜರ ಕೊಂದೆ ಗೋವಿಂದ || (ಪರಶುರಾಮ)
ಕಮಲಾಕ್ಷ ಕಡಲ ಕಟ್ಟಿದ ದಿಟ್ಟ ಗೋವಿಂದ ||     (ರಾಮ)
ಮಮತೆಯೊಳು ಎಳೆಯ ಗೋವ್ಗಳ ಕಾಯ್ದೆ ಗೋವಿಂದ|| (ಕೃಷ್ಣ)
ತ್ರಿಪುರರ ವ್ರತವ ಕೆಡಿಸಿದಂತ ಗೋವಿಂದ ||      (ಬುದ್ಧ)
ವಿಮಲ ತುರಗವನೇರಿದ ಕಲ್ಕಿ ಗೋವಿಂದ ||      (ಕಲ್ಕಿ)
ನಮಿಪರೊಳಿಹೆ ಗೋವಿಂದ ||
ನಿಂದಿಪರಿಗೆ ಶಮನನಂತಿಹೆ ಗೋವಿಂದ ||
ಎಲ್ಲರೊಳಿರ್ಪ ಅನಂತ ಮಹಿಮ ಗೋವಿಂದ ||
ಪಾಪಗಳೆಲ್ಲ ಶಮನಗೊಳಿಸು ಗೋವಿಂದ || 
ನಮೋ ಲಕ್ಷ್ಮೀರಮಣ ದಶಾವತಾರ ತಾಳ್ದ ಗೋವಿಂದ ||

(ಸುಬ್ಬಲಕ್ಷ್ಮಮ್ಮನವರು ಹೇಳಿಕೊಳ್ಳುತ್ತಿದ್ದುದು)
****************
ಓಂಕಾರವು ಧನಸ್ಸು, ಆತ್ಮನೇ ಬಾಣ, ಬ್ರಹ್ಮವು ಅದರ ಗುರಿ ಎಂದು ಹೇಳ್ಪಡುತ್ತದೆ. ಪ್ರಮತ್ತನಾಗದೆ ಹೊಡೆಯಬೇಕು. ಬಾಣದಂತೆ (ಗುರಿಯಲ್ಲಿ) ತನ್ಮಯನಾಗಬೇಕು.
-ಮುಂಡಕ.
****************

FORM – IV
“KAVIKIRANA”
STATEMENT about ownership and other particulars about periodical ‘KAVIKIRANA’, as required to be published under Section 19-D(b) of the Press and Registration of Books Act, read with Rule-8 of the Registration of Newspapers (Central) rules, 1956.

1. Place of Publication: Shimoga.
2. Periodicity of publication: Half yearly.
3 Printer: Sri K.V. Suresh, Citizen of India, Kavi Prakashana, ‘Sowparnika’, 3rd Cross, 3rd Main, Near Akkamahadevi Park, Basaveshwaranagar, Shimoga – 577204.
4. Publisher: Sri K.V. Suresh, Citizen of India, Kavi Prakashana, ‘Sowparnika’, 3rd Cross, 3rd Main, Near Akkamahadevi Park, Basaveshwaranagar, Shimoga – 577204.
5. Editor: Sri K.V. Nagaraj, Citizen of India, No. 2354, ‘Nagabharana’, 7th cross, 2nd Main, Shanthinagar, Hassan ;573201.
6. Owner: Sri K.V. Nagaraj, Citizen of India, No. 2354, ‘Nagabharana’, 7th cross, 2nd Main, Shanthinagar, Hassan ;573201.
  
  I, K.V. Suresh, hereby declare that the particulars given above are true to the best of my knowledge and belief.
                                                             Sd/-
Place: Shimoga                            (K.V. Suresh)
Date: 25-02-2011.                          Publisher.

ಕವಿ ಮನೆತನದ ಮಂಗಳನಿಧಿಗೆ ವಂತಿಕೆ ನೀಡಿದ ಮಹನೀಯರು
೨೦೧೦ನೆಯ ಸಾಲು 
ಶ್ರೀ/ ಶ್ರೀಮತಿಯರಾದ:
೧. ಕ.ವೆಂ. ನಾಗರಾಜ್, ಹಾಸನ ೫೦೦
೨. ಕವಿ ವೆಂ. ಸುರೇಶ, ಶಿವಮೊಗ್ಗ ೫೦೦
೩. ಗಿರಿಜಾಲಕ್ಷ್ಮೀಪತಿ, ಬೆಂಗಳೂರು           ೫೦೦
೪. ಗಿರಿಜಾಂಬಾಕುಮಾರಸ್ವಾಮಿ, ಹಾಸನ ೫೦೦
೫. ಹೆಚ್.ಎಸ್. ದಾಕ್ಷಾಯಿಣಿ, ಹಾಸನ        ೫೦೦
೬. ಕವಿ ವೆಂಕಟಸುಬ್ಬರಾಯರ ಮಕ್ಕಳು   
(ವಿಶೇಷ ಪೂರಕ ಸಂಚಿಕೆಗಾಗಿ) ೩೦೦೦
೭. ಎನ್.ಶ್ರೀನಿವಾಸ,ಬೆಂಗಳೂರು ೫೦೦೦
೮. ಸುಬ್ಬಲಕ್ಷ್ಮಮ್ಮಸುಬ್ಬರಾವ್,ಬೆಂಗಳೂರು ೨೦೦೦
೯. ಡಾ. ಕೆಳದಿ ಕೃಷ್ಣಾಜೋಯಿಸ್, ಬೆಂ. ೧೦೦೦
೧೦. ಕೆಳದಿ ಗುಂಡಾಜೋಯಿಸ್, ಕೆಳದಿ ೫೦೦
೧೧. ಖರ್ಚಾಗದ ಮೊಬಲಗು ಮರುಜಮೆ ೧೯೨೫
೧೨. ಕೆ. ಶ್ರೀಕಾಂತ್, ಬೆಂಗಳೂರು ೫೦೦
೧೩.ಹೆಚ್.ಕೆ.ಸತ್ಯನಾರಾಯಣ,  ಶಿಕಾರಿಪುರ ೬೦೦೦
೧೪. ಸಾ.ಕ. ಕೃಷ್ಣಮೂರ್ತಿ, ಬೆಂಗಳೂರು ೫೦೦
೧೫. ರಾಮಮೂರ್ತಿ, ಕೆಳದಿ ೫೦೦
ಒಟ್ಟು ೨೩೪೨೫

೨೦೧೧ನೆಯ ಸಾಲು (೩೦-೦೪-೨೦೧೧ರವರೆಗೆ)
ಶ್ರೀ/ ಶ್ರೀಮತಿಯರಾದ:
೧. ಕವಿ ವೆಂ. ಸುರೇಶ್, ಶಿವಮೊಗ್ಗ             ೫೦೦
೨. ಕ.ವೆಂ. ನಾಗರಾಜ, ಹಾಸನ                ೫೦೦
೩. ಸುಬ್ಬಲಕ್ಷ್ಮಮ್ಮಸುಬ್ಬರಾವ್,ಬೆಂಗಳೂರು ೨೦೦೦
ಒಟ್ಟು ೩೦೦೦

ವೆಚ್ಚದ ವಿವರ (೦೧-೧೧-೧೦ರಿಂದ ೩೦-೦೪-೧೧ರವರೆಗೆ)
೧. ಸಂಚಿಕೆ ಮುದ್ರಣ ವೆಚ್ಚ ೪೦೦೦
೨. ಸಮಾವೇಶಕ್ಕೆ ಪೂರಕ ವೆಚ್ಚ ೭೭೫
೩. ಅಂಚೆ ವೆಚ್ಚ, ಕೊರಿಯರ್ ವೆಚ್ಚ ೨೪೫
ಒಟ್ಟು   ೫೦೨೦

ಜಮಾ ಖರ್ಚು ಗೋಷ್ವಾರೆ 
(೧-೧೧-೧೦ರಿಂದ ೩೦-೦೪-೧೧ರವರೆಗೆ)
೦೧-೧೧-೧೦ರಲ್ಲಿದ್ದಂತೆ ಪ್ರಾರಂಭಶಿಲ್ಕು ರೂ.೨೫೮೭೦
ಸಂಗ್ರಹ(೦೧-೧೧-೧೦ರಿಂದ ೩೦-೦೪-೧೧) ೧೦೦೦೦
ಬಡ್ಡಿ ಮೊಬಲಗು ೪೬೭
ಒಟ್ಟು ೩೬೩೩೭
ವೆಚ್ಚ                                                          ೫೦೨೦
ಆಖೈರು ಶಿಲ್ಕು (೩೦-೦೪-೧೧ರಲ್ಲಿದ್ದಂತೆ)       ೩೧೩೧೭

*****************************

ಬದುಕುವ ಪರಿ
(ಕೆಳದಿ ವೆಂಕಣ್ಣಕವಿಯ ರಚನೆ)
ರಾಗ: ಪೂರ್ವಿ ಕಲ್ಯಾಣಿ : ತಾಳ : ಆದಿತಾಳ

ಮನವೆ ಸುಮ್ಮನೆ ಇರಬೇಡ | ಅರೆನಿಮಿಷವಾದರು
ಮನವೆ ಸುಮ್ಮನೆ ಇರಬೇಡ || || ಪಲ್ಲವಿ ||
ಕನಸಿನಂತಹ ಸಂಸಾರವ ನೆಚ್ಚಿ
ಘನತರ ಪಾಪಕೆ ಗುರಿಯಾಗಬೇಡ || || ಅ.ಪ. ||

ರೊಕ್ಕದಾಸೆಯ ಬಿಡಬೇಕು | ಸ್ತ್ರೀ ಮೋಹಕೆ
ಸಿಕ್ಕದೆ ನಡಕೊಳ್ಳಬೇಕು
ಅಕ್ಕರು ದೇಹದೊಳಿರದಿರಬೇಕು
ಶಕ್ತಿಯ ಮೀರಿ ಧರ್ಮವ ಮಾಡಬೇಕು
ಮುಕ್ಕಣ್ಣ ಹರನ ಪೂಜಿಸಬೇಕು
ಮುಕ್ತಿ ಮಾರ್ಗವ ಪಡಕೊಳಬೇಕು || ೧ ||

ಸರ್ವನಿಸ್ಪೃಹನಾಗಬೇಕು | ಸಂಸಾರದಿ
ಚರಿಸುತಲೂ ಇರಬೇಕು
ಗುರಿಹಿರಿಯರ ಕಂಡು ನಡೆಯಲು ಬೇಕು
ಪರರ ನಿಂದಿಸಿ ನುಡಿಯದೆ ಇರಬೇಕು
ಬರೆ ಸುಖದು:ಖವು ಸಮಗಾಣಬೇಕು
ಇರುಳು ಹಗಲು ಶಿವ ಶಿವ ಎನ್ನಬೇಕು || ೨ ||

ತನ್ನ ತಾನೇ ತಿಳಿಯಬೇಕು | ತೋರುವ ಲೋಕ-
(ವನ್ನು) ದೃಶ್ಯವೆಂದಿರಬೇಕು
ತನ್ನಂತೆ ಸಕಲರ ನೋಡಲು ಬೇಕು
ಮಾನ್ಯರ ಕಂಡರೆ ಮನ್ನಿಸಬೇಕು
ಅನ್ಯನಾದರು ಹಿತವನೆ ಮಾಡಬೇಕು
ಪ್ರಸನ್ನ ರಾಮೇಶ್ವರನ ನೆನಹಿರಬೇಕು || ೩ || 
*****
ಚಿಂತಿಸಿ     
      ಭಾರತದ ಜನಸಂಖ್ಯೆ ೧೧೦ ಕೋಟಿ. ಪ್ರತಿನಿತ್ಯದ ಸರಾಸರಿ ಅಂದಾಜು ಸಾವು ೬೨೩೮೯. ಸರಾಸರಿ ಅಂದಾಜು ಜನನ ೮೬೮೫೩. ಭಾರತದಲ್ಲಿನ ಅಂಧರ ಸಂಖ್ಯೆ ೬೮೨೪೯೭. ಸಾಯಲಿರುವ ಪ್ರತಿ ವ್ಯಕ್ತಿ ತನ್ನ ಕಣ್ಣುಗಳನ್ನು ದಾನ ಮಾಡಿದರೆ ಹತ್ತೇ ದಿನಗಳಲ್ಲಿ ಎಲ್ಲಾ ಅಂಧರಿಗೆ ಸಾಲುವಷ್ಟು ಕಣ್ಣುಗಳು ದೊರೆಯುತ್ತವೆ. ಭಾರತ ಸಾಧಿಸಬಹುದು. ಬೇರೆಯವರ ವಿಷಯ ಬೇಡ, ನಮ್ಮ ಕಣ್ಣುಗಳನ್ನು ದಾನ ಮಾಡಲು ನಾವು ನಿರ್ಧರಿಸಬಹುದಲ್ಲವೇ?
ನೇತ್ರದಾನ - ಮಹಾದಾನ.
************
ಮುತ್ತಿನಂತಹ ಮಾತುಗಳು

     ಯಶಸ್ವಿ ವ್ಯಕ್ತಿಯ ತುಟಿಯಲ್ಲಿ ಎರಡು ಸಂಗತಿಗಳಿರುತ್ತವೆ - ಮೌನ ಮತ್ತು ಮುಗುಳ್ನಗೆ. ಮೌನ ಸಮಸ್ಯೆಯಿಂದ ದೂರವಿರಲು ಮತ್ತು ಮುಗುಳ್ನಗೆ ಸಮಸ್ಯೆ ಪರಿಹರಿಸಲು.

     ಪ್ರತಿಯೊಬ್ಬರನ್ನೂ ಸಂತೋಷವಾಗಿಡಲು ಮತ್ತು ಪ್ರತಿಯೊಬ್ಬರನ್ನೂ ಸಮಭಾವದಿಂದ ನೋಡುವವರು ಸಾಮಾನ್ಯವಾಗಿ ಏಕಾಂಗಿಯಾಗುವರು. 

          ಪ್ರಪಂಚದ ಪ್ರತಿ ವ್ಯಕ್ತಿ ತನ್ನ ತಪ್ಪುಗಳ ಬಗ್ಗೆ ಕುರುಡನಾಗಿರುತ್ತಾನೆ. 

     ಸಾಮಾನ್ಯ ಒಂದು ಕೆಲಸ ಮಾಡಲು ಸಾವಿರ ಸಲ ಪ್ರಯತ್ನಿಸುವನು. ಸಾಧಕ. ಸಾಧಕ ಅದೇ ಕೆಲಸವನ್ನು ಸಾವಿರ ರೀತಿಯಲ್ಲಿ ಮಾಡಲು ಪ್ರಯತ್ನಿಸುವನು. 

     ಕಲ್ಪನೆ ಜ್ಞಾನಕ್ಕಿಂತ ದೊಡ್ಡದು. ಜ್ಞಾನಕ್ಕೆ ಮಿತಿಯಿದೆ. ಆದರೆ ಕಲ್ಪನೆಗೆ ಮಿತಿಯಿಲ್ಲ.

     ರಾತ್ರಿ ಮಲಗುವಾಗ ಬೆಳಿಗ್ಗೆ ಏಳುತ್ತೇವೆ ಎಂಬುದು ಖಚಿತವಿಲ್ಲ. ಆದರೂ ಉದ್ದಿನಬೇಳೆ ನೆನೆಸಿಡುತ್ತಾರೆ. ಉಪಯೋಗವಂತೂ ಇದೆ, ಎದ್ದರೆ ಇಡ್ಲಿ, ಇಲ್ಲದಿದ್ದರೆ ವಡೆ!

     ಅಭಿಪ್ರಾಯಕ್ಕಿಂತ ಭಾವನೆಗಳನ್ನು ಗೌರವಿಸಿ. ಅಭಿಪ್ರಾಯ ಔಪಚಾರಿಕವಾದರೆ ಭಾವನೆ ವಾಸ್ತವಿಕ.

     ಕಷ್ಟದಲ್ಲಿದ್ದಾಗ ಜೊತೆಯಲ್ಲಿ ಇರದವರು ಸುಖದಲ್ಲಿದ್ದಾಗ ಜೊತೆಯಲ್ಲಿರಲು ಇರಲು ಅರ್ಹರಲ್ಲ. 

     ಇತರರ ಬಗ್ಗೆ ದೂರದಿರಿ. ನಿಮಗೆ ನೆಮ್ಮದಿ ಬೇಕಾದರೆ ನೀವು ಬದಲಾಗಿರಿ. ನೆಲಕ್ಕೆಲ್ಲಾ ಚಾಪೆ ಹಾಸಿ ಪಾದ ರಕ್ಷಿಸಿಕೊಳ್ಳುವುದಕ್ಕಿಂತ ಪಾದರಕ್ಷೆ ಧರಿಸುವುದು ಒಳ್ಳೆಯದು. 

     ಸಹನೆ ಮತ್ತು ಮೌನ ಅದ್ಭುತ ಶಕ್ತಿಗಳು. ಸಹನೆ ಆಂತರಿಕ ಶಕ್ತಿ ವೃದ್ಧಿಸಿದರೆ ಮೌನ ಭಾವನಾತ್ಮಕ ಶಕ್ತಿ ವೃದ್ಧಿಸುತ್ತದೆ. 
***********************
ಪರಮೇಶ್ವರನನ್ನು ಅರಿತುಕೊಂಡಾಗ ಎಲ್ಲ ಪಾಶಗಳೂ ನಾಶವಾಗುತ್ತವೆ. ಅವಿದ್ಯಾದಿ ಕ್ಲೇಶಗಳು ಕ್ಷೀಣವಾಗುವುದರ ಮೂಲಕ ಜನನ ಮರಣಗಳ ನಾಶವು ಉಂಟಾಗುತ್ತದೆ. ಅವನ ಧ್ಯಾನದಿಂದ ಸರ್ವೈಶ್ವರ್ಯ ಲಕ್ಷಣವುಳ್ಳ ಮೂರನೆಯ ಅವಸ್ಥೆಯನ್ನು ಶರೀರತ್ಯಾಗವಾದ ಮೇಲೆ ಹೊಂದುತ್ತಾನೆ. ಆಪ್ತನಾಗುತ್ತಾನೆ.
-ಶ್ವೇತಾಶ್ವತರೋಪನಿಷತ್.
**********************
ಸುದ್ದಿ - ಕಿರಣ
ಮನೆ ಮನೆ ಕವಿಗೋಷ್ಠಿ: 
     ಹಾಸನದ ಮನೆ ಮನೆ ಕವಿಗೋಷ್ಠಿಯ ೧೭೧ನೆಯ ತಿಂಗಳ ಕವಿಗೋಷ್ಠಿ ಹಾಸನದ ಶ್ರೀ ಕ.ವೆಂ.ನಾಗರಾಜರ ನಿವಾಸದಲ್ಲಿ ಅವರ ಪ್ರಾಯೋಜಕತ್ವದಲ್ಲಿ ದಿನಾಂಕ ೦೯-೦೧-೨೦೧೧ರಂದು ನಡೆಯಿತು. 
ಆಯ್ಕೆ: 
     ಬೆಂಗಳೂರಿನ ಬನಶಂಕರಿ ೨ನೆಯ ಹಂತದಲ್ಲಿರುವ ದೇವಗಿರಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಟ್ರಸ್ಟಿನ ಉಪಾಧ್ಯಕ್ಷರಾಗಿ ಹಿರಿಯರಾದ ಶ್ರೀ ಸಾ.ಕ.ಕೃಷ್ಣಮೂರ್ತಿಯವರು ಆಯ್ಕೆಗೊಂಡಿದ್ದು ಅವರಿಗೆ ಅಭಿನಂದನೆಗಳು.
ವೇದಸುಧೆ ಅಂತರ್ಜಾಲ ತಾಣದ ವಾರ್ಷಿಕೋತ್ಸವ:
     ದಿನಾಂಕ ೩೧-೦೧-೨೦೧೧ ರಂದು ಹಾಸನದ ಶ್ರೀ ಶಂಕರಮಠದ ಆವರಣದಲ್ಲಿ ಶ್ರೀ ಹರಿಹರಪುರ ಶ್ರೀಧರ ಸಂಪಾದಕರೂ ಮತ್ತು ಶ್ರೀ ಕ.ವೆಂ. ನಾಗರಾಜರು ಗೌರವ ಸಂಪಾದಕರು ಹಾಗೂ ಲೇಖಕರಾಗಿರುವ ವೇದಸುಧೆ ಅಂತರ್ಜಾಲ ತಾಣದ ಪ್ರಥಮ ವಾರ್ಷಿಕೋತ್ಸವ ಅಪಾರ ಸಂಖ್ಯೆಯ ಸದಸ್ಯರ ಸಮ್ಮುಖದಲ್ಲಿ ಯಶಸ್ವಿಯಾಗಿ ಜರುಗಿತು. ಆರು ವಿದ್ವಾಂಸರು ಭಾಗವಹಿಸಿದ್ದ ಆರೋಗ್ಯಕರ ಬದುಕು ಮತ್ತು ವೇದ ಎಂಬ ವಿಷಯ ಕುರಿತು ವಿಚಾರ ಸಂಕಿರಣ, ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಸಮನ್ವಯ ಕಲಶಪ್ರಾಯವಾಗಿದ್ದರೆ, ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಕು. ಸಹನಾರ ದೀಪನೃತ್ಯ, ಕು. ಬಿ.ಎಸ್.ಆರ್. ಅಂಬಿಕಾರವರ ವಯಲಿನ್ ವಾದನ, ಶ್ರೀಮತಿ ಲಲಿತಾ ರಮೇಶ್, ಕು. ಸಹನಾ ಮತ್ತು ಕು. ಸ್ವಾತಿರವರ ಗಾಯನಗಳು ಸಹ ನೆರೆದಿದ್ದವರ ಮನಸೂರೆಗೊಂಡವು. ಹೆಚ್ಚಿನ ವಿವರಗಳನ್ನು ವೇದಸುಧೆ ಅಂತರ್ಜಾಲ ತಾಣದಲ್ಲಿ ನೋಡಬಹುದು.
ಮೂಢ ಉವಾಚ ಕೃತಿ ಬಿಡುಗಡೆ: 
     ದಿನಾಂಕ        ೩೧-೦೧-೨೦೧೧ ರಂದು ಹಾಸನದ ಶ್ರೀ ಶಂಕರಮಠದಲ್ಲಿ  ನಡೆದ ಹಾಸನದ ಮನೆ ಮನೆ ಕವಿಗೋಷ್ಠಿಯ ೧೭ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀ ಕ.ವೆಂ. ನಾಗರಾಜರ ಚಿಂತನಶೀಲ ಮುಕ್ತಕಗಳ ಸಂಗ್ರಹ ಮೂಢ ಉವಾಚ ಕೃತಿ ಬಿಡುಗಡೆಯಾಯಿತು.
ಗೃಹಪ್ರವೇಶ: 
     ಬೆಂಗಳೂರಿನ ಶ್ರೀಮತಿ ಮತ್ತು ಶ್ರೀ ಹೆಚ್. ಎಸ್. ಜಯಶಂಕರರವರ ಪುತ್ರ ಶ್ರೀ ಹೆಚ್.ಜೆ. ಸುಬ್ರಹ್ಮಣ್ಯ ಮತ್ತು ಶ್ರೀಮತಿ ಯಶಸ್ವಿನಿರವರು ದಿನಾಂಕ ೨೧-೦೨-೧೧ ರಂದು ಬೆಂಗಳೂರಿನ ವಿ.ಕೆ.ರೆಸಿಡೆನ್ಸಿ, ನಂ. ೩೦೨, ೧೫ನೆ ಮುಖ್ಯ ರಸ್ತೆ, ಬ್ಯಾಂಕ್ ಕಾಲೋನಿಯಲ್ಲಿ ಕಟ್ಟಿಸಿದ ನೂತನ ಗೃಹಪ್ರವೇಶ ಬಂಧು ಮಿತ್ರರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
     ಡಾ.ಅಶ್ವಿನಿ ಮತ್ತು ಡಾ.ವೆಂಕಟೇಶ್ ಇವರು ಹುಬ್ಬಳ್ಳಿಯ ದೇಶಪಾಂಡೆ ಲೇ ಔಟ್, ೨ನೆಯ ಹಂತದ ಫ್ಲಾಟ್ ೧೧ರಲ್ಲಿ ಕಟ್ಟಿಸಿದ ನೂತನ ಗೃಹ ನಂದನದ ಗೃಹಪ್ರವೇಶ ದಿ. ೦೬-೦೫-೧೧ರಂದು ಸಂಭ್ರಮದಿಂದ ನಡೆಯಿತು.  
     ಡಾ.ಶಾಲಿನಿ ಮತ್ತು ಡಾ.ಕಿರಣ್. ಇವರು ಬೆಂಗಳೂರಿನ ೩ಇಸಿ, ೪೧೩, ಕಸ್ತೂರಿನಗರ, ಬಿ.ಡಿ.ಎ. ಲೇ ಔಟ್, ರಾಮಮೂರ್ತಿನಗರದಲ್ಲ್ಲಿ ಕಟ್ಟಿಸಿದ ನೂತನ ಗೃಹ ಅನುಗ್ರಹದ ಗೃಹಪ್ರವೇಶ ದಿ. ೧೩-೦೫-೧೧ರಂದು ಸಂಭ್ರಮದಿಂದ ನಡೆಯಿತು.  
ತೇರ್ಗಡೆ:
ಬಿ.ಎಸ್.ಆರ್. ದೀಪಕ್
     ಶ್ರೀ ಕವಿ ಸುರೇಶ್ ಮತ್ತು ಶ್ರೀಮತಿ ರೇಣುಕಾರವರ ಪುತ್ರ ಬಿ.ಎಸ್.ಆರ್. ದೀಪಕ್, ಬಿ.ಎ.ಎಂ.ಎಸ್. ಪದವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೩ನೆಯ ರ‍್ಯಾಂಕ್ ಸಾಧನೆಯೊಂದಿಗೆ ತೇರ್ಗಡೆಯಾಗಿದ್ದಾರೆ.  ಅಭಿನಂದನೆಗಳು. ಪ್ರಸ್ತುತ ಕವಿಕುಟುಂಬಗಳ ಸದಸ್ಯರುಗಳ ಪೈಕಿ ಇವರೊಬ್ಬರೇ ವ್ಶೆದ್ಯರು.
     ಶ್ರೀಮತಿ ಸುಮನಾ ಮತ್ತು ಶ್ರೀ ವೆಂಕಟೇಶಜೋಯಿಸ್, ಸಾಗರ ಇವರ  ಪುತ್ರಿ ಕವನಾ ದ್ವಿ.ಪಿ.ಯು. ಪರೀಕ್ಷೆಯಲ್ಲಿ ಶೇ. ೮೦ ಅಂಕಗಳಿಸಿದ್ದಾಳೆ. ಅಭಿನಂದನೆಗಳು.
   
     ಶ್ರೀ ಶ್ರೀನಿವಾಸಮೂರ್ತಿ ಮತ್ತು ಶ್ರೀಮತಿ ನೀರಜಾ ರವರ ಪುತ್ರ ನಿರಂಜನ ದ್ವಿ.ಪಿ.ಯು. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತದಲ್ಲಿ ಪ್ರತಿ ವಿಷಯದಲ್ಲಿ ೧೦೦ಕ್ಕೆ ೯೯ ಅಂಕ ಗಳಿಸಿದ್ದಾನೆ. ಇವನ ತಂಗಿ ಮೇಘನಾ ಸಹ ಇದೇ ಪರೀಕ್ಷೆಯಲ್ಲಿ ಶೇ. ೮೦ ಅಂಕ ಗಳಿಸಿದ್ದಾಳೆ. ಇಬ್ಬರಿಗೂ ಅಭಿನಂದನೆಗಳು.
 ನಿರಂಜನ್   
  ಮೇಘನಾ
         ಶ್ರೀಮತಿ ಲಕ್ಷ್ಮಿ ಮತ್ತು ಶ್ರೀ ರಮೇಶ್, ಬೆಂಗಳೂರು ಇವರ ಪುತ್ರ ರೋಹಿತ ದ್ವಿ.ಪಿ.ಯು. ಪರೀಕ್ಷೆಯಲ್ಲಿ ಶೇ. ೭೮ ಅಂಕ ಗಳಿಸಿದ್ದಾನೆ. ಅಭಿನಂದನೆಗಳು.
ಶುಭ ವಿವಾಹ: 

     ಅರಸಿಕೆರೆ ತಾಲ್ಲೂಕು ಜಾವಗಲ್ಲಿನ ಶ್ರೀಮತಿ ಸತ್ಯವತಿ ಮತ್ತು ಶ್ರೀ ಹೆಚ್.ಎಸ್. ಪುಟ್ಟರಾಜುರವರ ಪುತ್ರ ಚಿ.ರಾ. ಹೆಚ್.ಪಿ. ರಾಘವೇಂದ್ರರ ವಿವಾಹ ಸಾಗರ ತಾ. ತ್ಯಾಗರ್ತಿಯ ಶ್ರೀಮತಿ ವತ್ಸಲ ಮತ್ತು ಶ್ರೀ ಟಿ.ವಿ. ಚಿದಂಬರಮೂರ್ತಿರವರ ಪುತ್ರಿ ಚಿ.ಸೌ. ಟಿ.ಸಿ. ಅನುಪಮರೊಂದಿಗೆ ದಿನಾಂಕ ೨೧-೦೪-೨೦೧೧ರಂದು ಅರಸಿಕೆರೆಯ ವಾಸವಿಮಹಲ್‌ನಲ್ಲಿ ವಿಜೃಂಭಣೆಯಿಂದ ನೆರವೇರಿತು.
ಸ್ಮರಣೀಯ ವಯೊಲಿನ್ ವಾದನ:
     ದಿನಾಂಕ ೧೩-೦೪-೨೦೧೧ರಂದು ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮೋತ್ಸವದ ಪ್ರಯುಕ್ತ ನಡೆದ ಡಾ. ಬಿ.ಎಸ್.ಆರ್. ದೀಪಕ್‌ರವರ ವಯೊಲಿನ್ ವಾದನ ನೆರೆದಿದ್ದ ಶ್ರೋತೃಗಳನ್ನು ರಂಜಿಸಿದ್ದಲ್ಲದೆ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಚೂಡಾಕರ್ಮ: 
     ಶ್ರೀಮತಿ ಸೌಮ್ಯ ಮತ್ತು ಶ್ರೀ ಕೆ.ಎನ್. ಶಿವಪ್ರಸಾದ್, ಉಪಸಂಪಾದಕರು, ಕಡಲವಾಣಿ, ಕಾರವಾರ ಇವರ ಪುತ್ರ ಚಿ. ಶ್ರೀನಿಧಿಯ(ಶ್ರೀರಾಮ್) ಚೂಡಾಕರ್ಮ ದಿನಾಂಕ ೨೯-೦೪-೨೦೧೧ರಂದು ಆಪ್ತೇಷ್ಟರ ಸಮಕ್ಷಮದಲ್ಲಿ ಶ್ರೀಕ್ಷೇತ್ರ ಕೊಲ್ಲೂರಿನಲ್ಲಿ ಸಂಭ್ರಮದಿಂದ ಜರುಗಿತು. 
ಸಹಸ್ರ ಚಂದ್ರದರ್ಶನ ಶಾಂತಿ:
    ಹಿರಿಯರೂ, ಇತಿಹಾಸ ಸಂಶೋಧಕರೂ,  ಕೆಳದಿ ಮ್ಯೂಸಿಯಂ ಸಂಸ್ಥಾಪಕರೂ ಆದ ಸಂಶೋಧನಾ ರತ್ನ ಶ್ರೀ ಗುಂಡಾಜೋಯಿಸರಿಗೆ ದಿ. ೦೫-೦೫-೨೦೧೧ ರಂದು ಸಾಗರದ ಶ್ರೀ ಭದ್ರಕಾಳಿ ಸಭಾಭವನದಲ್ಲಿ ಸಹಸ್ರ ಚಂದ್ರದರ್ಶನ ಶಾಂತಿ ಕಾರ್ಯಕ್ರಮ ಆಪ್ತೇಷ್ಟರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಬ್ರಹ್ಮೋಪದೇಶ:  
     ಶ್ರೀಮತಿ ಸುಮನಾ ಮತ್ತು ಶ್ರೀ ವೆಂಕಟೇಶಜೋಯಿಸ್, ಸಾಗರ ಇವರ ಪುತ್ರ ಚಿ. ರಾ. ಅನಘನ ಬ್ರಹ್ಮೋಪದೇಶ ಕಾರ್ಯಕ್ರಮ ಸಾಗರದ ಶ್ರೀ ಭದ್ರಕಾಳಿ ಸಭಾಭವನದಲ್ಲಿ ಆಪ್ತೇಷ್ಟರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
( ತಿಳಿದ ಮತ್ತು ತಿಳಿಸಲಾದ ಸುದ್ದಿಗಳನ್ನು ಪ್ರಕಟಿಸಿದೆ. -ಸಂ.)
*****************************************
ಕವಿಕಿರಣದ ಮುಂದಿನ ಸಂಚಿಕೆ ಡಿಸೆಂಬರ್, ೨೦೧೧ರಲ್ಲಿ ಪ್ರಕಟವಾಗಲಿದೆ. ಎಂದಿನಂತೆ ಎಲ್ಲರ ಪ್ರೋತ್ಸಾಹ, ಸಹಕಾರ ನಿರೀಕ್ಷಿಸಿದೆ.                                -ಸಂ.
*****************************************



*************
ಓದಿದ್ದಕ್ಕೆ ಧನ್ಯವಾದಗಳು.
*************